Advertisement

Vitla: ಟ್ರಾಫಿಕ್‌ ಜಾಮ್‌ ವಿಟ್ಲ ಪೇಟೆಯಲ್ಲಿ ನಿತ್ಯ ಸಂಕಟ

01:31 PM Sep 25, 2024 | Team Udayavani |

ವಿಟ್ಲ: ಅತ್ಯಂತ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ವಿಟ್ಲ ಪೇಟೆಯಲ್ಲಿ ಟ್ರಾಫಿಕ್‌ ಜಾಮ್‌ ನಿತ್ಯ ಸಂಕಷ್ಟಕ್ಕೆ ಕಾರಣವಾಗಿದೆ. ಇಕ್ಕಟ್ಟಾದ ರಸ್ತೆಗಳು, ಎಲ್ಲೆಂದರಲ್ಲಿ ಪಾರ್ಕ್‌ ಮಾಡಿರುವ ವಾಹನಗಳು, ಬಸ್‌ಗಳ ಕಟ್ಟೆಪೂಜೆ ಸೇರಿದಂತೆ ನಾನಾ ಕಾರಣಗಳಿಂದ ವಿಟ್ಲ ಪಟ್ಟಣಕ್ಕೆ ಪ್ರವೇಶ ಮಾಡಿದ ವಾಹನಗಳು ಇಕ್ಕಟ್ಟಿನಲ್ಲಿ ಸಿಲುಕುತ್ತವೆ. ಒಮ್ಮೆ ಈ ಜಾಮ್‌ನಲ್ಲಿ ಸಿಕ್ಕಿಕೊಂಡರೆ ಮುಂದಕ್ಕೂ ಹೋಗುವಂತಿಲ್ಲ, ಹಿಂದಕ್ಕೂ ಬರುವಂತಿಲ್ಲ!

Advertisement

ಬೆಳಗ್ಗೆ ಮತ್ತು ಸಂಜೆಯ ಪೀಕ್‌ ಅವರ್‌ ಮಾತ್ರವಲ್ಲ, ದಿನಕ್ಕೆ ಹಲವು ಬಾರಿ ಪದೇಪದೆ ಟ್ರಾಫಿಕ್‌ ಜಾಮ್‌ ಆಗುತ್ತಿದೆ. ಹೀಗಾಗಿ ವಾಹನ ಚಾಲಕ, ಮಾಲಕರು, ಪ್ರಯಾಣಿಕರು ರಸ್ತೆಯಲ್ಲೇ ಪರದಾಡುತ್ತಾರೆ. ಆಮೆಗತಿಯಲ್ಲಿ ಸಂಚರಿಸುತ್ತ ನರಕಯಾತನೆ ಪಡುತ್ತಿದ್ದಾರೆ. ಪಾದಚಾರಿಗಳೂ ಕೂಡಾ ನಡೆದಾಡಲು ಸಾಧ್ಯವಾಗದೇ ವಾಹನಗಳು ಮೈಮೇಲೆರಗುವ ಭಯ ಎದುರಿಸುತ್ತಾರೆ.

ಸಂತೆ ದಿನ ತೀವ್ರ ತೊಂದರೆ
ವಿಟ್ಲ-ಪುತ್ತೂರು ರಸ್ತೆಯಲ್ಲಿ ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ, ಪೊಲೀಸ್‌ ವಸತಿಗೃಹಕ್ಕೆ ತೆರಳುವ ರಸ್ತೆಯಲ್ಲಿ ಮಂಗಳವಾರ ವಾರದ ಸಂತೆ ನಡೆಯುತ್ತದೆ. ಈ ಸಂದರ್ಭ ಮುಖ್ಯ ರಸ್ತೆಯ ಬದಿಯಲ್ಲಿ ವ್ಯಾಪಾರ ನಡೆಯುತ್ತದೆ. ಅಡ್ಡದಬೀದಿ ರಸ್ತೆ ಮುಂಭಾಗದಲ್ಲಿ ಕೂಡಾ ಸಂತೆ ವ್ಯಾಪಾರ ನಡೆಯುತ್ತದೆ. ಮುಖ್ಯ ರಸ್ತೆಯಲ್ಲೇ ಸಂಚಾರ ಕಷ್ಟ. ಇದರ ಜತೆಗೆ ಚಂದ್ರನಾಥ ಸ್ವಾಮಿ ಬಸದಿಯ ಬಳಿಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿದಾಗ ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ಸಂತೆಯನ್ನು ಸ್ಥಳಾಂತರ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ಕಾರ್ಯರೂಪಕ್ಕೆ ಬಂದಿಲ್ಲ.

ಎರಡು ವರ್ಷ 8 ತಿಂಗಳ ಬಳಿಕ ವಿಟ್ಲ ಪಟ್ಟಣ ಪಂಚಾಯತ್‌ ಆಡಳಿತ ಜನಪ್ರತಿನಿಧಿಗಳಿಗೆ ಲಭ್ಯವಾಗಿದೆ. ವಿಟ್ಲದಲ್ಲಿ ಹಲವು ಸಮಸ್ಯೆಗಳಿವೆ. ಅವುಗಳಿಗೆ ವಿಶೇಷ ಅನುದಾನ ಬೇಕಾಗಿದೆ. ವಿಟ್ಲದ ವಾಹನ ಜಂಜಾಟ ಆಡಳಿತಕ್ಕೆ ಬೃಹತ್‌ ಸವಾಲು. ಸೂಕ್ತ ಕ್ರಮಕೈಗೊಂಡು, ಈ ಸವಾಲನ್ನು ಪರಿಹರಿಸಿ, ನಿತ್ಯ ಸಂಚಾರಿಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

Advertisement

ಬೇರೆ ದಾರಿಯೇ ಇಲ್ಲ!
ವಿಟ್ಲ-ಮಂಗಳೂರು ರಸ್ತೆ, ಸಾಲೆತ್ತೂರು ರಸ್ತೆ, ಅರಮನೆ ರಸ್ತೆ ಮತ್ತು ವಿಟ್ಲ-ಪುತ್ತೂರು ರಸ್ತೆಗಳು ಸದಾ ಬಿಸಿಯಾಗಿಯೇ ಇರುತ್ತದೆ. ಸುತ್ತಮುತ್ತಲೂ ವಿಶೇಷ ಕಾರ್ಯಕ್ರಮಗಳು ಹೆಚ್ಚಿದ್ದಾಗ ಈ ವಾಹನ ಜಂಜಾಟ ಜಾಸ್ತಿಯಾಗುತ್ತದೆ. ನಾಲ್ಕೂ ರಸ್ತೆಗಳಲ್ಲಿ ಮೈಲುದ್ದದ ಸರದಿ ಸಾಲಿನಲ್ಲಿ ಸಂಚರಿಸಲಾಗುವುದಿಲ್ಲ. ಅಗಲ ಕಿರಿದಾದ ರಸ್ತೆಯಲ್ಲಿ ಎರಡೂ ಕಡೆ ಹೋಗಬೇಕಾಗುತ್ತದೆ.

ಅಡ್ಡದಬೀದಿ ರಸ್ತೆಯನ್ನು ಬಿಟ್ಟರೆ ಬೇರೆ ಬೈಪಾಸ್‌ ರಸ್ತೆಯೂ ಇಲ್ಲಿಲ್ಲ. ವಿಟ್ಲ ಪೇಟೆ ಪ್ರವೇಶಿಸಿದ ಬಳಿಕ ಪುತ್ತೂರು, ಮಂಗಳೂರು, ಸಾಲೆತ್ತೂರು, ಪೆರ್ಲ ಕಡೆಗಳಿಗೆ ಸಂಚರಿಸಲು ಬೇರೆ ಮಾರ್ಗಗಳಿಲ್ಲ. ಪರಿಣಾಮವಾಗಿ ಎಲ್ಲೆಡೆ ವಾಹನ ದಟ್ಟಣೆ ಹೆಚ್ಚುತ್ತದೆ.

ಟ್ರಾಫಿಕ್‌ ಜಾಮ್‌ಗೆ ಪ್ರಮುಖ ಕಾರಣಗಳು

ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಬಸ್‌ ಸ್ಟಾಪ್‌
ವಿಟ್ಲದ ನಾಲ್ಕು ಮಾರ್ಗ ಸೇರುವ ಜಂಕ್ಷನ್‌ನಲ್ಲಿ ಮಂಗಳೂರಿಗೆ ತೆರಳುವ ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಿಲುಗಡೆ ಮಾಡಿ ಸಂಚಾರಕ್ಕೆ ತಡೆಯೊಡ್ಡುತ್ತವೆ. ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತ ಕೆಲವು ನಿಮಿಷ ಇಲ್ಲೇ ನಿಲ್ಲುವುದು ಸಮಸ್ಯೆಗೆ ಕಾರಣ. 150 ಮೀಟರ್‌ ದೂರದಲ್ಲೇ ತಂಗುದಾಣವಿದ್ದರೂ ಅಲ್ಲಿ ಬಸ್‌ ನಿಲ್ಲಿಸುವುದಿಲ್ಲ, ಪರಿಣಾಮವಾಗಿ ಪ್ರಯಾಣಿಕರು ಆ ತಂಗುದಾಣದಲ್ಲಿ ತಂಗುತ್ತಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಈ ಸಮಸ್ಯೆ ಪರಿಹಾರವಾಗಿಲ್ಲ.

ಎಲ್ಲೆಂದರಲ್ಲಿ ಪಾರ್ಕಿಂಗ್‌
ವಿಟ್ಲದಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡಲಾಗುತ್ತದೆ. ಜಿಲ್ಲಾಧಿಕಾರಿ ನಿರ್ದಿಷ್ಟವಾದ ಜಾಗವನ್ನು ನಿಗದಿಪಡಿಸಿದ್ದರೂ ಅದು ಅನುಷ್ಠಾನಕ್ಕೆ ಬಂದಿಲ್ಲ. ಮುಖ್ಯ ರಸ್ತೆಯ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ, ತೆರಳುತ್ತಾರೆ. ದ್ವಿಚಕ್ರ ವಾಹನ ಮಾತ್ರವಲ್ಲ, ಕೆಲವೆಡೆ ನಾಲ್ಕು ಚಕ್ರಗಳ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗುತ್ತದೆ.

ಸಾರಿಗೆ ಇಲಾಖೆ ನಿರ್ಲಕ್ಷ್ಯ
ಸಾರಿಗೆ ಇಲಾಖೆ ತೀವ್ರ ನಿರ್ಲಕ್ಷé ವಹಿಸಿದ್ದರಿಂದ ವಿಟ್ಲ ಪೇಟೆಯ ಸಂಚಾರ ವ್ಯವಸ್ಥೆ ಸರಿಪಡಿಸಲಾಗಿಲ್ಲ. ಗೃಹರಕ್ಷಕದಳದ ಸಿಬಂದಿ ಸಾಮಾನ್ಯ ದಿನಗಳಲ್ಲಿ ನಿಯಂತ್ರಿಸಲು ಹರಸಾಹಸ ಪಡುತ್ತಾರೆ. ಅತ್ಯಂತ ಹೆಚ್ಚು ವಾಹನ ಸಂಚಾರವಿದ್ದರೆ ಪೊಲೀಸರಿಗೂ ನಿಯಂತ್ರಿಸಲಾಗುತ್ತಿಲ್ಲ.

-ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next