Advertisement

ವಿಶ್ವೇಶ್ವರಯ್ಯ ಜಯಂತಿ ಆಚರಣೆ

03:21 PM Sep 16, 2018 | |

ಯಾದಗಿರಿ: ಉತ್ತರ ಆರೋಗ್ಯಕಾಪಾಡುವುದಕ್ಕೆ ವೈದ್ಯರ ಪಾತ್ರದಂತೆ ಬಲಿಷ್ಠ ದೇಶದ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಸರ್‌ ಎಂ. ವಿಶ್ವೇಶ್ವರಯ್ಯನವರ 158ನೇ ಜನ್ಮ ದಿನಾಚರಣೆ ಅಂಗವಾಗಿ ಸಿವಿಲ್‌ ಇಂಜಿನಿಯರ್ ಅಸೋಸಿಯೇಶನ್‌ ಮತ್ತು ಶ್ರೀಲಕ್ಷ್ಮೀ ಟ್ರೇಡರ್ ವತಿಯಿಂದ ಆಯೋಜಿಸಲಾಗಿದ್ದ ಇಂಜಿನಿಯರ್ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ವಿಶ್ವೇಶ್ವರಯ್ಯನವರ ಕೊಡುಗೆ ಅವಿಸ್ಮರಣೀಯವಾಗಿದೆ. ಅವರು ಯಾವತ್ತು ಹಣ, ಆಸ್ತಿ ಸಂಪಾದಿಸಬೇಕು ಎಂದು ಕನಸೂ ಕಂಡವರಲ್ಲ ಎಂಬುದನ್ನು ಇತಿಹಾಸ ಮೆಲುಕು ಹಾಕಿದಾಗ ಗೊತ್ತಾಗುತ್ತದೆ. ಅವರ ಸೇವೆಗೆ ಸಾಕಷ್ಟು ಪ್ರಶಸ್ತಿಗಳು ಅವರ ಬೆನ್ನತ್ತಿ ಬಂದಿವೆ. ಅಗ್ರಗಣ್ಯವಾದ ಭಾರತ ರತ್ನ ಪ್ರಶಸ್ತಿ ವಿಶ್ವೇಶ್ವರಯ್ಯ ಪಡೆದಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಅಸೋಸೊಯೇಶನ್‌ ಅಧ್ಯಕ್ಷ ಭೀಮನಗೌಡ ಕ್ಯಾತನಾಳ ಮಾತನಾಡಿ, ಇಂಜಿನಿಯರ್‌ಗಳ ಸೇವೆ ಅಮೋಘವಾಗಿದೆ. ಸರ್‌ ಎಂ.ವಿ. ಅವರು ಮಹಾನ್‌ ಸಾಧಕರು ಎಂದು ವರ್ಣಿಸಿದರು. ಒಬ್ಬ ಇಂಜಿನಿಯರ್‌ ತಪ್ಪು ಮಾಡಿದರೆ ಸಾಕಷ್ಟು
ಅವಾಂತರಗಳು ಸೃಷ್ಟಿಯಾಗುತ್ತದೆ. ಹಾಗಾಗಿ ಸಾಕಷ್ಟು ಒತ್ತಡಗಳಲ್ಲೂ ಜವಾಬ್ದಾರಿಯಿಂದ ಕಾರ್ಯ ಯೋಜನೆ ರೂಪಿಸಬೇಕಾಗುತ್ತದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಇಂಜಿನಿಯರ್‌ ಗಳಿಗಾಗಿ ಭವನ ನಿರ್ಮಾಣಕ್ಕೆ ನಿವೇಶನ
ಒದಗಿಸಿ ಅನುಕೂಲ ಮಾಡಿಕೊಡುವಂತೆ ಶಾಸಕರಿಗೆ ಬೇಡಿಕೆ ಸಲ್ಲಿಸಲಾಯಿತು.

ರೋಟರಿ ಕ್ಲಬ್‌ ಅಧ್ಯಕ್ಷ ಭಾವರಿಲಾಲ್‌ ಧೋಖಾ, ಲೋಕೋಪಯೋಗಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಚನ್ನಬಸ್ಸಪ್ಪ ಮೆಕಾಲೆ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಇಂದುಧರ ಸಿನ್ನೂರ್‌, ಜಿಪಂ ಸದಸ್ಯ ಭೀಮನಗೌಡ ಕೂಡ್ಮೂರ ಇದ್ದರು. ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ದೇವಜೀ, ಮಲ್ಲಿಕಾರ್ಜುನ ಪಾಂಚಾಳ ಸೇರಿದಂತೆ ಇಂಜಿನಿಯರ್‌ಗಳು ಭಾಗವಹಿಸಿದ್ದರು

Advertisement

ಎಂವಿ ಸಮಾಜ ಸೇವೆ ಜಗತ್ತಿಗೆ ಮಾದರಿ: ಮೇಸಿ 
ಸೈದಾಪುರ: ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸರ್‌ ಮೋಕ್ಷಗೊಂಡಂ ವಿಶ್ವೇಶ್ವರಯ್ಯನವರು ತಮ್ಮ ಬುದ್ದಿಶಕ್ತಿ, ಶಿಸ್ತು, ಸಮಾಜ ಸೇವೆಯಿಂದಾಗಿ ಇಡೀ ಜಗತ್ತೇ ಮೆಚ್ಚುವಂತಹ ಸಾಧನೆ ಮಾಡಿದ್ದಾರೆ. ಅಂತಹ ಮಹಾನ್‌ ವ್ಯಕ್ತಿಯ ಜೀವನ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಸರ್‌. ಎಂ.ವಿ. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಲ್ಲಪ್ಪ ಮೇಸ್ತ್ರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮಾಧ್ವಾರ ಗ್ರಾಮದ ಸರ್‌ ಎಂ. ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಇಂಜಿನಿಯರ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದ ಮುದ್ದೇನಹಳ್ಳಿ ಎಂಬ ಗ್ರಾಮದಲ್ಲಿ
ಜನಿಸಿದ ಸರ್‌ ಎಂ.ವಿ. ಆರಂಭದಲ್ಲಿ ಬಿಎ ಪದವಿ ಪಡೆದು ನಂತರ ಪುಣೆ ವಿಜ್ಞಾನ ಕಾಲೇಜಿನಿಂದ ಇಂಜಿನಿಯರ್‌ ಪದವಿ ಪಡೆದರು. ಮೈಸೂರು ಸಂಸ್ಥಾನದ ದಿವಾನರಾಗಿ ಕಾರ್ಯನಿರ್ವಹಿಸಿ ಕಾವೇರಿ ನದಿಗೆ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಿಸುವ ಮೂಲಕ ಅಲ್ಲಿನ ಜನರಿಗೆ ನೀರಾವರಿ ಸೌಲಭ್ಯ ಒದಗಿಸಿಕೊಟ್ಟರು. ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಅವರ ಹಲವು ಸಾಧನೆ ಮಾಡಿದ್ದಾರೆ. ಅವರ ಬುದ್ದಿವಂತಿಕೆಗೆ ಮೆಚ್ಚಿದ ಬ್ರಿಟನ್‌ ಸರಕಾರ ಅವರಿಗೆ ಸರ್‌ ಎಂಬ ಗೌರವ ನೀಡಿತು.

1955ರಲ್ಲಿ ಭಾರತ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಪ್ರಶಸ್ತಿ ನೀಡಿತು. ನಾವೆಲ್ಲರೂ ಸರ್‌ ಎಂ.ವಿ. ಆದರ್ಶಗಳನ್ನು ಪಾಲಿಸಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು. ಮುಖ್ಯಶಿಕ್ಷಕ ಶ್ರೀನಿವಾಸ ಕಲಾಲ, ಶಿಕ್ಷಕರಾದ ಶಶಿಕಲಾ, ಚನ್ನಪ್ಪ, ಉಷಾದೇವಿ, ದೇವಪ್ಪ, ಶಾಂತರಾಜ, ಜಾನುಕುಮಾರ, ಅಂಬಿಕಾ, ರೇಣುಕಾ, ಅಶ್ವಿ‌ನಿ, ರಾಚಮ್ಮ
ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next