Advertisement

ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಭೇಟಿ: ದಾಖಲೆ ಪರಿಶೀಲನೆ

03:39 PM Apr 09, 2018 | Team Udayavani |

ಯಾದಗಿರಿ: ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೆ. ಮಂಜುನಾಥ ರವಿವಾರ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಗರದ ಹೊರವಲಯದ ಹತ್ತಿಕುಣಿ ಕ್ರಾಸ್‌ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ, ಲಾಗ್‌ ಪುಸ್ತಕ ಪರಿಶೀಲಿಸಿದ ಅವರು, ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಬೇಕು. ಅಕ್ರಮ ಹಣ ಸಾಗಾಣೆ ಮೇಲೆ ನಿಗಾವಹಿಸುವಂತೆ ಸೂಚಿಸಿದರು.

Advertisement

ಜಿಲ್ಲೆಯಲ್ಲಿ 21 ಚೆಕ್‌ಪೋಸ್ಟ್‌ ತೆರೆಯಲಾಗಿದ್ದು (ಸ್ಥಾಯಿ ಕಣ್ಗಾವಲು ತಂಡ), ಈ ಪೈಕಿ ಮೂರು ಅಂತಾರಾಜ್ಯ ( ತೆಲಂಗಾಣ) ಚೆಕ್‌ಪೋಸ್ಟ್‌ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಚೆಕ್‌ಪೋಸ್ಟ್‌ ಇವೆ ಎಂದು ಅವರು ತಿಳಿಸಿದರು. ಈ ತಂಡ ದಲ್ಲಿ ಪಿಡಿಒ,ಗ್ರಾಮ ಲೆಕ್ಕಿಗ, ಪೊಲೀಸ್‌ ಸಿಬ್ಬಂದಿ ಹಾಗೂ ಕ್ಯಾಮರಾಮನ್‌ ಇರಲಿದ್ದಾರೆ. ವಾಹನಗಳ ತಪಾಸಣೆ ಮಾಡಿ, ದಾಖಲೆ ಇಲ್ಲದ 50 ಸಾವಿರಕ್ಕಿಂತ ಹೆಚ್ಚು ಹಣವಿದ್ದರೆ ಜಪ್ತೀ ಮಾಡಲಿದ್ದಾರೆ ಎಂದು ತಿಳಿಸಿದರು.

ಇದುವರೆಗೆ 300 ಲೀಟರ್‌ ಮದ್ಯ ವಶಪಡಿಸಿಕೊಂಡು 8 ವಾಹನ ಜಪ್ತಿ ಮಾಡಿ, 10 ಪ್ರಕರಣ ದಾಖಲಿಸಿ 8 ಜನರನ್ನು ಬಂಧಿಸಲಾಗಿದೆ. ಹಾಗೆಯೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1,96,000 ರೂಪಾಯಿ ಜಫ್ತೀ ಮಾಡಲಾಗಿದೆ ಎಂದು ಅವರು ತಿಳಿಸಿದರು. ನಂತರ ಯರಗೋಳದಲ್ಲಿ ಸ್ಥಾಪಿಸಿರುವ ಚೆಕ್‌ ಪೋಸ್ಟ್‌ಗೆ ತೆರಳಿದ ಜಿಲ್ಲಾಧಿಕಾರಿ, ಅಲ್ಲಿನ ಲಾಗ್‌ ಪುಸ್ತಕ ಪರಿಶೀಲಿಸಿದರು. ವಾಹನ ತಪಾಸಣೆ ಕುರಿತು ಅಲ್ಲಿನ ಸಿಬ್ಬಂದಿಗಳಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಜಿಲ್ಲಾ ನೀತಿ ಸಂಹಿತೆ ನೋಡಲ್‌ ಅಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ|ಅವಿನಾಶ್‌ ಮೆನನ್‌ ರಾಜೇಂದ್ರನ್‌, ಇವಿಎಂ ಮತ್ತು ವಿವಿ ಪ್ಯಾಟ್‌ ನೋಡಲ್‌ ಅಧಿಕಾರಿ ಹಾಗೂ ಯಾದಗಿರಿ ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ, ತಹಶೀಲ್ದಾರ್‌ ಮಲ್ಲೇಶ್‌ ತಂಗಾ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next