Advertisement

ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಪ್ರಧಾನಿ ಹಸಿರು ನಿಶಾನೆ ? ಫೆ.25ರೊಳಗೆ ಉದ್ಘಾಟನೆ ಸಾಧ್ಯತೆ

12:04 PM Jan 26, 2021 | Team Udayavani |

ಬೆಂಗಳೂರು: ಹಲವು ಗಡುವುಗಳನ್ನು ಮೀರಿರುವ ಬಹುನಿರೀಕ್ಷಿತ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ (ಬೈಯಪ್ಪನಹಳ್ಳಿ 3ನೇ ಕೋಚಿಂಗ್‌ ಟರ್ಮಿನಲ್‌) ಲೋಕಾರ್ಪಣೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಫೆ. 20ರಿಂದ 25ರ ಒಳಗೆ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಳಿಸಲು ನೈರುತ್ಯ ರೈಲ್ವೆ ಸಿದ್ಧತೆ ನಡೆಸಿದೆ.

Advertisement

ನಗರದ ಹೃದಯಭಾಗದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣದ
ಮೇಲಿನ ಒತ್ತಡವನ್ನು ತಗ್ಗಿಸುವ ಜತೆಗೆ ರೈಲುಗಳ ದಟ್ಟಣೆಯನ್ನು ವಿಕೇಂದ್ರೀಕರಣಗೊಳಿಸುವ ಉದ್ದೇಶದಿಂದ ಸುಮಾರು 192 ಕೋಟಿ ರೂ. ವೆಚ್ಚದಲ್ಲಿ ಬೈಯಪ್ಪನಹಳ್ಳಿಯಲ್ಲಿ ವಿಶ್ವೇಶ್ವರಯ್ಯ ಟರ್ಮಿನಲ್‌ ನಿರ್ಮಿಸಲಾಗಿದೆ. ಫೆಬ್ರವರಿ ಮೂರನೇ ವಾರದಲ್ಲಿ ಪ್ರಧಾನಮಂತ್ರಿಗಳು ಉದ್ಘಾಟಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೂರ್ಣವಾಗಿ ಸಜ್ಜುಗೊಳಿಸುವ ಕೆಲಸ ಭರದಿಂದ ಸಾಗಿದೆ.

“ರೈಲ್ವೆ ಮಂಡಳಿ ಅಧ್ಯಕ್ಷರು ಮತ್ತು ಸಿಇಒ ನೀಡಿದ ಸಲಹೆಯಂತೆ ಪ್ರಧಾನಮಂತ್ರಿಗಳು ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು (ಎಸ್‌ಎಂವಿಬಿ) ಅನ್ನು ಫೆ 20-25ರೊಳಗೆ ಉದ್ಘಾಟಿಸುವ ಸಾಧ್ಯತೆ ಇದೆ. ಅಷ್ಟರೊಳಗೆ ಬಾಕಿ ಇರುವ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಿ, ಲೋಕಾರ್ಪಣೆಗೆ ಅಣಿಗೊಳಿಸಬೇಕು’ ಎಂದು ಬೆಂಗಳೂರಿನ ಮುಖ್ಯ ಆಡಳಿತ ಅಧಿಕಾರಿ (ನಿರ್ಮಾಣ ವಿಭಾಗ) ಗಳಿಗೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್‌ ಅವರು ಲಿಖೀತವಾಗಿ ಸೂಚಿಸಿದ್ದಾರೆ ಎಂದು ರೈಲ್ವೆ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಇದನ್ನೂ ಓದಿ:ರೈತರ ಹೆಸರಿನಲ್ಲಿ ಕಾಂಗ್ರೆಸ್ ಡೋಂಗಿ ರಾಜಕಾರಣ ಮಾಡುತ್ತಿದೆ: ಶ್ರೀರಾಮುಲು

ಕಾಮಗಾರಿ ಬಹುತೇಕ ಪೂರ್ಣವಾಗಿದ್ದು, ಅಂತಿಮ ಸ್ಪರ್ಶ ನೀಡುವ ಕೆಲಸ ನಡೆದಿದೆ. ದೇಶದ ಅತಿದೊಡ್ಡ ಹವಾನಿಯಂತ್ರಿತ
ಕಾಂಕರ್ಸ್‌ ಒಳಗೊಂಡ ರೈಲ್ವೆ ಟರ್ಮಿನಲ್‌ ಇದಾಗಿದೆ. ಏಳು ಪ್ಲಾಟ್‌ ಫಾರಂಗಳು ಇದರಲ್ಲಿ ಬರಲಿದ್ದು, ಪ್ರತಿ ಪ್ಲಾಟ್‌ಫಾರಂ 15 ಮೀ. ಅಗಳ ಮತ್ತು 600 ಮೀ. ಉದ್ದ ಇವೆ. ಎರಡು ಸಬ್‌ವೇಗಳು ಮತ್ತು ಎತ್ತರಿಸಿದ ಪಾದಚಾರಿ ಮಾರ್ಗಗಳೂ ಇವೆ. ಡಿಜಿಟಲ್‌ ನಾಮಫ‌ಲಕಗಳು ಹಾಗೂ ಗರಿಷ್ಠ ಮೊಬೈಲ್‌ ಚಾರ್ಜಿಂಗ್‌ ಪಾಡ್‌ಗಳನ್ನು ಅಳವಡಿ ಸಲಾಗಿದೆ. ಟರ್ಮಿನಲ್‌ ಹೊರಗಿನ ವಿನ್ಯಾಸ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೋಲುವಂತಿದೆ. ಪಿಟ್‌ ಲೈನ್‌ ಮತ್ತು ಬೋಗಿಗಳ ನಿರ್ವಹಣೆಗೂ ವ್ಯವಸ್ಥೆ ಇಲ್ಲಿದೆ.

Advertisement

ಹಲವು ಬಾರಿ ಗಡುವು ಉಲ್ಲಂಘನೆ: 2015-16ರಲ್ಲಿ ಮಂಜೂರಾದ ಈ ಯೋಜನೆಯು ಈಗಾಗಲೇ ಹಲವು ಗಡುವುಗಳನ್ನು ಮೀರಿದೆ. 2019ರ ಆಗಸ್ಟ್‌ನಲ್ಲಿ ಖುದ್ದು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್‌ ಅಂಗಡಿ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ್ದರು. ಈ ವೇಳೆ 2020ರ ಮಾರ್ಚ್‌ ಗಡುವು ನೀಡಿದ್ದರು. ತದನಂತರ ದೀಪಾವಳಿಗೆ ಉದ್ಘಾಟಿಸಲು ಉದ್ದೇಶಿಸಲಾಗಿತ್ತು. ಆದರೆ, ಕೊರೊನಾ ಹಾವಳಿ ಸೇರಿದಂತೆ ಹಲವು ಕಾರಣಗಳಿಂದ ಮುಂದೂಡಲ್ಪಟ್ಟಿತು. ನಗರದ ಹೃದಯಭಾಗವಾಗಿದ್ದರೂ, ಎಲ್ಲ ರೈಲುಗಳು ಕಾರ್ಯಾಚರಣೆ ಆರಂಭಿಸುವುದು ಇದೇ ಬೈಯಪ್ಪನಹಳ್ಳಿಯಿಂದ. ಈ
ನಿಟ್ಟಿನಲ್ಲಿ 3ನೇ ಕೋಚಿಂಗ್‌ ಟರ್ಮಿನಲ್‌ ತುಂಬಾ ಮುಖ್ಯವಾಗಿದೆ.

ಅಂತಾರಾಜ್ಯ ಸಂಪರ್ಕ: ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಹೈದರಾಬಾದ್‌ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನಾನಾ ಭಾಗಗಳಿಗೆ ರೈಲುಗಳ ನಿರ್ಗಮನ ಮತ್ತು ಆಗಮನ ಆಗಲಿವೆ. ಪ್ರಸ್ತುತ ವ್ಯವಸ್ಥೆಯಲ್ಲಿ ಮೆಜೆಸ್ಟಿಕ್‌ನ ಕೆಎಸ್‌ಆರ್‌ (ಸಿಟಿ ರೈಲು ನಿಲ್ದಾಣ) ಅಥವಾ ಯಶವಂತಪುರದಿಂದ ಆಗಮನ-ನಿರ್ಗಮನ ಮಾಡುತ್ತಿವೆ. ಇದರಿಂದ ಪ್ಲಾಟ್‌ಫಾರಂಗಳ ಲಭ್ಯತೆ ಸಮರ್ಪಕವಾಗಿ ಇಲ್ಲದ್ದರಿಂದ ಸಮಸ್ಯೆ ಆಗುತ್ತಿತ್ತು. ಉಪನಗರ ರೈಲುಗಳು ಕಾರ್ಯಾಚರಣೆ ಜತೆಗೆ ಮೈಸೂರು, ಮಂಗಳೂರು ಮತ್ತಿತರ ಮಾರ್ಗಗಳಿಗೂ ಕಾರ್ಯಾಚರಣೆ ಮಾಡಲಿವೆ. ಆದರೆ, ಕರ್ನಾಟಕದ ವಿವಿಧ ಭಾಗಗಳಿಗೆ ಈ ಟರ್ಮಿನಲ್‌ನಿಂದ ರೈಲುಗಳ ಕಾರ್ಯಾಚರಣೆ ಮಾಡಲು ಆದ್ಯತೆ ನೀಡಬೇಕು ಎನ್ನುವುದು ಜನರ ಒತ್ತಾಯ.

ಮೇಲ್ಸೇತುವೆ ಇಲ್ಲದಿದ್ರೆ ಅಪೂರ್ಣ!
ಪ್ರಸ್ತುತ ಈ ಹೊಸ ಟರ್ಮಿನಲ್‌ ತಲುಪಲು ಕಸ್ತೂರಿನಗರ, ಕಲ್ಯಾಣನಗರ, ಬಾಣಸವಾಡಿ ಮೂಲಕ ಜನ ಹೋಗಬೇಕಾಗುತ್ತದೆ. ಇದರಿಂದ ಸಾಕಷ್ಟು ಸಮಸ್ಯೆ ಆಗಲಿದೆ. ಈ ಹಿನ್ನೆಲೆಯಲ್ಲಿ ಹಳೆಯ ಮದ್ರಾಸ್‌ ರಸ್ತೆಯಿಂದ ಟರ್ಮಿನಲ್‌ ನಡುವೆ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಈ ಕಾರ್ಯ ಪ್ರಗತಿಯಲ್ಲಿದ್ದು, ತ್ವರಿತ ಗತಿಯಲ್ಲಿ ಪೂರ್ಣಗೊಂಡರೆ ಅನುಕೂಲ ಆಗುತ್ತದೆ ಎಂದು ನಗರ ರೈಲು ತಜ್ಞ ಸಂಜೀವ ದ್ಯಾಮಣ್ಣವರ ತಿಳಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next