Advertisement

ಇತಿ ವಿರೂಪಾಪೂರಗಡ್ಡಿ !

03:58 PM Mar 03, 2020 | Suhan S |

ಗಂಗಾವತಿ: ದೇಶ ವಿದೇಶಿಗರ ನೆಚ್ಚಿನ ಪ್ರವಾಸಿ ತಾಣವಾಗಿದ್ದ ತಾಲೂಕಿನ ವಿರೂಪಾಪೂರಗಡ್ಡಿ ಅಕ್ರಮ ರೆಸಾರ್ಟ್‌ಗಳ ಮಹಾಪತನ ಕೊನೆಗೂ ಖಚಿತವಾದಂತಾಗಿದೆ.

Advertisement

ಹಂಪಿ ಸುತ್ತಲಿರುವ ಪುರಾತನ ಸ್ಮಾರಕ ಸಂರಕ್ಷಣೆಗೆ ಸುಪ್ರೀಂಕೋರ್ಟ್‌ ಫೆ.11ರಂದು ನೀಡಿದ್ದ ಆದೇಶದಂತೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ವಿರೂಪಾಪೂರಗಡ್ಡಿಯಲ್ಲಿರುವ ಅಕ್ರಮ ರೆಸಾರ್ಟ್‌ಗಳನ್ನು ತೆರವು ಮಾಡಲು ಬಳ್ಳಾರಿ-ಕೊಪ್ಪಳ ಜಿಲ್ಲಾಡಳಿತಗಳಿಗೆ ಸೂಕ್ತ ಪೊಲೀಸ್‌ ಭದ್ರತೆ ನೀಡುವಂತೆ ಮನವಿ ಮಾಡಿದೆ.

ಹಂಪಿ ವಿಶ್ವ ಪರಂಪರಾ ವ್ಯಾಪ್ತಿಯಲ್ಲಿ ಅಕ್ರಮ ರೆಸಾರ್ಟ್‌ ವ್ಯವಹಾರ ನಡೆದಿರುವುದರಿಂದ ಹಂಪಿ ಅಭಿವೃದ್ಧಿ ಪ್ರಾಧಿ ಕಾರ ರೆಸಾರ್ಟ್‌ ಮಾಲೀಕರಿಗೆ ತೆರವುಗೊಳಿಸುವ ಕುರಿತು 2011ರಲ್ಲಿ ನೋಟಿಸ್‌ ನೀಡಿತ್ತು. ಇದಕ್ಕೆ ಹೈಕೋರ್ಟ್‌ ಧಾರವಾಡ ಪೀಠ ತಡೆಯಾಜ್ಞೆ ನೀಡಿತ್ತು. ಪ್ರಾಧಿಕಾರ ಅಗತ್ಯ ದಾಖಲಾತಿಗಳನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದರಿಂದ ತಡೆಯಾಜ್ಞೆ ತೆರವುಗೊಳಿಸಿತು. ರೆಸಾರ್ಟ್‌ ಮಾಲೀಕರು ಪುನಃ ಇದನ್ನು ಬೆಂಗಳೂರು ಹೈಕೋರ್ಟ್‌ ನಲ್ಲಿ ಪ್ರಶ್ನಿಸಿದ್ದರು. ರೆಸಾರ್ಟ್‌ ಮಾಲೀಕರಿಗೆ ಸೋಲಾಯಿತು. ಸುಪ್ರೀಂಕೋರ್ಟ್‌ ನಲ್ಲಿ ಕಳೆದ 2015ರಿಂದ ಹಂಪಿ ಪ್ರಾಧಿಕಾರ ವಿರುದ್ಧ ನ್ಯಾಯಾಂಗ ಹೋರಾಟ ನಡೆಸಿದ ರೆಸಾರ್ಟ್‌ ಮಾಲೀಕರ ಯತ್ನ ವಿಫಲವಾಗಿ 2020 ಫೆ.11ರಂದು ರೆಸಾರ್ಟ್‌ಗಳನ್ನು ತೆರವು ಮಾಡುವಂತೆ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯಪೀಠ “ಒಂದು ತಿಂಗಳೊಳಗೆ ರೆಸಾರ್ಟ್‌ ಹೋಟೆಲ್‌ ತೆರವುಗೊಳಿಸಲು ಆದೇಶ ಹೊರಡಿಸಿದೆ.

ಈ ಮಧ್ಯೆ ರೆಸಾರ್ಟ್‌ ಮಾಲೀಕರು ರಾಜ್ಯ ಪುರಾತತ್ವ ಇಲಾಖೆ ಅಧಿನಿಯಮ 1961 ಮತ್ತು 1988ರ ಅನ್ವಯ ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಇದರ ನಿಯಮಗಳನ್ನು ಪ್ರಶ್ನಿಸಿ 2011ರಲ್ಲಿ ಬೆಂಗಳೂರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬಾಕಿ ಇದ್ದ ಪ್ರಯುಕ್ತ ಹೈಕೋರ್ಟ್‌ ಫೆ.26ರವರೆಗೆ ಸುಪ್ರೀಂ ಕೋರ್ಟ್‌ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಪರ-ವಿರೋಧ ವಾದ ಆಲಿಸಿದ ಹೈಕೋರ್ಟ್‌ ರೆಸಾರ್ಟ್‌ ಮಾಲೀಕರ ಅರ್ಜಿ ವಜಾಗೊಳಿಸಿತು. ಇದರಿಂದ ಹಂಪಿ ಪ್ರಾಧಿಕಾರ ಮಾ.2 ರಂದು ಕೊಪ್ಪಳ-ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವಿರೂಪಾಪೂರಗಡ್ಡಿ ರೆಸಾರ್ಟ್‌ ತೆರವು ಕಾರ್ಯಾಚರಣೆಗೆ ಬಿಗಿ ಪೊಲೀಸ್‌ ಬಂದೋಬಸ್ತ್ ನೀಡುವ ಜತೆ ತಾವೂ ಉಪಸ್ಥಿತರಿರುವಂತೆ ಕೋರಿದೆ.

ಇಂದು ತೆರವು: ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಮಾ.3ರಂದು ಬೆಳಗಿನ ಜಾವ ತಾಲೂಕಿನ ವಿರೂಪಾಪೂರಗಡ್ಡಿ ರೆಸಾರ್ಟ್‌ ಹಾಗೂ ಅನಧಿಕೃತ ವಾಣಿಜ್ಯ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ ತಹಸೀಲ್ದಾರ್‌ ಎಲ್‌.ಡಿ. ಚಂದ್ರಕಾಂತ ತಿಳಿಸಿದ್ದಾರೆ. ಇದಕ್ಕಾಗಿ 8 ತಂಡಗಳನ್ನು ರಚಿಸಲಾಗಿದ್ದು, ಸೂಕ್ತ ಪೊಲೀಸ್‌ ಬಂದೋಬಸ್ತ್ಗಾಗಿ ಪೊಲೀಸ್‌ ಇಲಾಖೆಗೆ ಪತ್ರ ಬರೆಯಲಾಗಿದೆ. ಸುಮಾರು 10 ಜೆಸಿಬಿ, ಟ್ರ್ಯಾಕ್ಟರ್‌ ಸೇರಿ ಜಿಲ್ಲೆಯ ಎಲ್ಲ ತಾಲೂಕಿನ ತಹಶೀಲ್ದಾರ್‌ಗಳು, ತಾಪಂ ಇಒ, ಆರೋಗ್ಯ, ಅಗ್ನಿಶಾಮಕ, ಅರಣ್ಯ, ಜೆಸ್ಕಾಂ, ಸಾಣಾಪೂರ, ಆನೆಗೊಂದಿ, ಮಲ್ಲಾಪೂರ ಮತ್ತು ಸಂಗಾಪೂರ ಗ್ರಾಪಂ ಪಿಡಿಒ ಹಾಗೂ ಸಿಬ್ಬಂದಿ ಮತ್ತು ಅಧಿಕಾರಿಗಳು ಬೆಳಗ್ಗೆ 4:30ಕ್ಕೆ ವಿರೂಪಾಪೂರಗಡ್ಡಿಯಲ್ಲಿ ವರದಿ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಸುಪ್ರೀಂ ಆದೇಶದಂತೆ ರೆಸಾರ್ಟ್‌, ಅನ ಧಿಕೃತ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement

ಧರೆಗುರುಳಿದ ರೆಸಾರ್ಟ್‌ಗಳ ವೈಭವ : ಹಂಪಿ-ಕಿಷ್ಕಿಂದಾ ಆನೆಗೊಂದಿ ಅಂಜನಾದ್ರಿ ಬೆಟ್ಟ ವೀಕ್ಷಣೆಗೆ ಆಗಮಿಸುತ್ತಿದ್ದ ದೇಶ ವಿದೇಶದ ಪ್ರವಾಸಿಗರು ವಿರೂಪಾಪೂರಗಡ್ಡಿಯಲ್ಲಿದ್ದ ರೆಸಾರ್ಟ್‌ಗಳಲ್ಲಿ ಉಳಿದುಕೊಂಡು ವಿಶ್ರಾಂತಿ ಪಡೆಯುತ್ತಿದ್ದರು. ಮೊದಲಿಗೆ ಬೆರಳೆಣಿಕೆಯಷ್ಟಿದ್ದ ರೆಸಾರ್ಟ್‌ಗಳು ವರ್ಷದಿಂದ ವರ್ಷಕ್ಕೆ ನೂರಾರು ಸಂಖ್ಯೆಯಲ್ಲಿ ಹೆಚ್ಚಾಗಿ ಗಡ್ಡಿಯ ರೆಸಾರ್ಟ್‌ಗಳ ವ್ಯವಹಾರ ವಾರ್ಷಿಕ ಕೋಟ್ಯಂತರ ದಾಟಿತು. ಮದ್ಯ, ಮಾಂಸ, ತರಕಾರಿ, ಹಾಲು, ತಂಪು ಪಾನೀಯ, ಬೈಕ್‌ಗಳ ಬಾಡಿಗೆ ವ್ಯವಹಾರ ಜತೆ ಕೆಲ ರೆಸಾರ್ಟ್‌ಗಳಲ್ಲಿ ಅಕ್ರಮ ಚಟುವಟಿಕೆಗಳು ನಿರಂತರವಾಗಿ ನಡೆದವು. ಯುನೆಸ್ಕೋ ಪ್ರತಿನಿಧಿಗಳು ವೇಷ ಬದಲಿಸಿ ವಿರೂಪಾಪೂರಗಡ್ಡಿ ರೆಸಾರ್ಟ್‌ ಒಂದಕ್ಕೆ ತೆರಳಿದ ವೇಳೆ “ಮದ್ಯ ಸೇರಿ ಕೆಲವು ಮತ್ತು ಬರಿಸುವ ವಸ್ತುಗಳು ಬೇಕಾ’ ಎಂದು ಕೇಳಿದ ವಿಷಯವನ್ನು ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಯುನೆಸ್ಕೋ ಪ್ರತಿನಿಧಿಗಳು ಬಹಿರಂಗಗೊಳಿಸಿದ್ದರು. ಅಂದಿನಿಂದ ಹಂಪಿ ಅಭಿವೃದ್ಧಿ ಪ್ರಾಧಿ ಕಾರ ಇಲ್ಲಿಯ ರೆಸಾರ್ಟ್ ಗಳನ್ನು ತೆರವು ಮಾಡಲು ಯತ್ನಿಸಿತ್ತು. ರಾಜಕೀಯ ಒತ್ತಡಗಳ ಮಧ್ಯೆ ಅನೇಕ ಬಾರಿ ತೆರವುಗೊಳಿಸದೆ ಪ್ರಾಧಿ ಕಾರ ಅಧಿಕಾರಿಗಳು ವಾಪಸ್‌ ಹೋಗಿದ್ದರು. ಇದೀಗ ಸುಪ್ರೀಂ ಮತ್ತು ಹೈಕೋರ್ಟ್‌ಗಳು ರೆಸಾರ್ಟ್‌ಗಳ ತೆರವಿಗೆ ಆದೇಶ ಮಾಡಿರುವುದು ಪ್ರಾಧಿಕಾರ ಅಧಿಕಾರಿಗಳಿಗೆ ಆನೆಬಲ ಬಂದಂತಾಗಿದೆ.

ಕಳೆಗುಂದಿದ ಪ್ರವಾಸೋದ್ಯಮ :  ಹಂಪಿ-ಕಿಷ್ಕಿಂದಾ ಆನೆಗೊಂದಿ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರು ಉಳಿದುಕೊಳ್ಳಲು ಆಯ್ಕೆ ಮಾಡುತ್ತಿದ್ದ ಜಾಗ ವಿರೂಪಾಪೂರಗಡ್ಡಿಯಾಗಿತ್ತು. ಇಲ್ಲಿಯ ಪ್ರಕೃತಿ ಸೌಂದರ್ಯದ ಮಧ್ಯೆ ಸದಾ ಹಸಿರು ಗದ್ದೆಗಳ ಮಧ್ಯೆಭಾಗದಲ್ಲಿ ನಿರ್ಮಿಸಿದ್ದ ಗುಡಿಸಲು, ಗಿಡಮರಗಳಿಂದ ಬಹುತೇಕ ಪ್ರವಾಸಿಗರನ್ನು ರೆಸಾರ್ಟ್‌ಗಳು ಆಕರ್ಷಿಸಿದ್ದವು. ಸುತ್ತಲೂ ಬೆಟ್ಟ, ತುಂಗಭದ್ರಾ ನದಿ ಹರಿಯುತ್ತಿರುವುದರಿಂದ ಪ್ರವಾಸಿಗರು ಆಕರ್ಷಿತರಾಗುತ್ತಿದ್ದರು. ಹಂಪಿ ಅಭಿವೃದ್ಧಿ ಪ್ರಾಧಿಕಾರದ ಹೆದರಿಕೆಯ ಮಧ್ಯೆ ನೂರಾರು ರೆಸಾರ್ಟ್‌ಗಳು ತಲೆ ಎತ್ತಿದ್ದವು. ವಿರೂಪಾಪೂರಗಡ್ಡಿ ಸೇರಿ ಸುತ್ತಲಿನ ಸಾಣಾಪೂರ, ಹನುಮನಹಳ್ಳಿ, ಆನೆಗೊಂದಿ, ಜಂಗ್ಲಿ, ಹಂಪಿ ಭಾಗದ ನೂರಾರು ಜನರಿಗೆ ನೇರವಾಗಿ-ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗಿತ್ತು. ಸುಪ್ರೀಂಕೋರ್ಟ್‌ ರೆಸಾರ್ಟ್‌ಗಳ ತೆರವು ಆದೇಶದಿಂದ ಇಡೀ ಆನೆಗೊಂದಿ-ವಿರೂಪಾಪೂರಗಡ್ಡಿ ಪ್ರದೇಶ ಕಳೆಗುಂದಿದೆ ವ್ಯಾಪಾರ-ವಹಿವಾಟು ಸ್ತಬ್ಧವಾಗಿದೆ.ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಆಗಾಧ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಅಕ್ರಮ ಚಟುವಟಿಕೆಗಳಿಗೆ ಬ್ರೇಕ್‌ ;ವಿರೂಪಾಪೂರಗಡ್ಡಿ ಪ್ರದೇಶದಲ್ಲಿ ರೆಸಾರ್ಟ್‌ಗಳ ಸಂಖ್ಯೆ ಹೆಚ್ಚಾದಂತೆ ಇಲ್ಲಿ ಗಾಂಜಾ, ಆಫೀಮು, ಸಮುದ್ರ ಬಾಳೆ ಎಲಿ ಬೀಜ ಮಾರಾಟದಂತಹ ಅಕ್ರಮ ಚಟುವಟಿಕೆಗಳು ಕೆಲ ರೆಸಾರ್ಟ್‌ ಮತ್ತು ಕೆಲ ಪ್ರದೇಶಗಳಲ್ಲಿ ಹೆಚ್ಚಾಗಿದ್ದರಿಂದ ಇಲ್ಲಿಗೆ ಅಧಿಕ ಪ್ರಮಾಣದಲ್ಲಿ ವೀಕ್‌ ಎಂಡ್‌ ನೆಪದಲ್ಲಿ ಅನೈತಿಕ ಕೃತ್ಯದಲ್ಲಿ ತೊಡಗಲು ಟೆಕ್ಕಿಗಳು ಆಗಮಿಸುತ್ತಿದ್ದರು ಎನ್ನಲಾಗುತ್ತಿದೆ. ರೆಸಾರ್ಟ್‌ಗಳು ತೆರವುಗೊಳ್ಳಲು ಇದು ಪ್ರಮುಖ ಕಾರಣವಾಗಿದೆ. ತುಂಗಭದ್ರಾ ನದಿಗೆ ಅಧಿಕ ಪ್ರಮಾಣದ ನೆರೆ ಪ್ರವಾಹ ಬಂದರೂ ಗಡ್ಡಿಯಲ್ಲಿ 600ಕ್ಕೂ ಅಧಿಕ ಪ್ರವಾಸಿಗರಿದ್ದರು. ಇವರನ್ನು ತುಂಬಿದ ನದಿ ದಾಟಿಸುವ ಸಂದರ್ಭದಲ್ಲಿ ರಕ್ಷಣಾ ಪಡೆಯವರು ಕೊಚ್ಚಿಕೊಂಡು ಹೋಗಿದ್ದರು. ನಂತರ ಅವರನ್ನು ರಕ್ಷಣೆ ಮಾಡಿದ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದರಿಂದಲೇ ಅಕ್ರಮ ರೆಸಾರ್ಟ್‌ಗಳ ತೆರವಿಗೆ ಪ್ರಮುಖ ಕಾರಣವಾಗಿದೆ.

 

-ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next