Advertisement

ಜಲಾಭಿಮುಖ ಯೋಜನೆಯಲ್ಲಿ ನಿಯಮ ಉಲ್ಲಂಘನೆ ದೂರು; ಜಂಟಿ ಸಮಿತಿಯಿಂದ ಸ್ಥಳ ಪರಿಶೀಲನೆ

11:47 PM Jun 11, 2024 | Team Udayavani |

ಮಂಗಳೂರು: ಮಂಗಳೂರು ಸ್ಮಾರ್ಟ್‌ಸಿಟಿ ಪ್ರವರ್ತಿತ ಜಲಾಭಿಮುಖ ಯೋಜನೆಯಲ್ಲಿ ಸಿಆರ್‌ಝಡ್‌ ನಿಯಮಾವಳಿಯನ್ನು ಉಲ್ಲಂಘಿಸಿರುವ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸುರು ನ್ಯಾಯಮಂಡಳಿ(ಎನ್‌ಜಿಟಿ)ಯಿಂದ ರಚನೆಯಾದ ಜಂಟಿ ಸಮಿತಿ ಮಂಗಳವಾರ ಯೋಜನೆ ಪ್ರಗತಿಯಲ್ಲಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ., ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ವಿಜ್ಞಾನಿ ಆರ್‌. ಶ್ರೀಧರ್‌, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಂಗಳೂರು ಪ್ರಾದೇಶಿಕ ನಿರ್ದೇಶನಾಲಯದ ವಿಜ್ಞಾನಿ ಟಿ. ಮಹಿಮಾ ಮತ್ತು ಚೆನ್ನೈಯ ನ್ಯಾಶನಲ್‌ ಸೆಂಟರ್‌ ಫಾರ್‌ ಕೋಸ್ಟಲ್‌ ರಿಸರ್ಚ್‌ ಸತ್ಯಕಿರಣ್‌ ರಾಜು ಅವರನ್ನೊಳಗೊಂಡ ಜಂಟಿ ಸಮಿತಿ ಸ್ಥಳಕ್ಕೆ ಭೇಟಿ ನೀಡಿತು.

ಮೊದಲಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಸವಿತಿ ಸದಸ್ಯರು ಬಳಿಕ ಯೋಜನೆ ಪ್ರಗತಿಯಲ್ಲಿರುವ ನೇತ್ರಾವತಿ ಸೇತುವೆ, ಮಂಗಳೂರು ಕ್ಲಬ್‌, ಮುಳಿಹಿತ್ಲು ಮತ್ತು ಬೋಳಾರ ಸೀ ಫೇಸ್‌ ಏರಿಯಾಕ್ಕೆ ಭೇಟಿ ನೀಡಿದರು. ಮಂಗಳೂರು ಸ್ಮಾರ್ಟ್‌ ಸಿಟಿ ಜನರಲ್‌ ಮ್ಯಾನೇಜರ್‌ ಕೆ.ಎಸ್‌.ಅರುಣ್‌ ಪ್ರಭಾ ಯೋಜನೆಯ ಕುರಿತು ವಿವರಣೆ ನೀಡಿದರು. ಸ್ಮಾರ್ಟ್‌ ಸಿಟಯಿಂದ ಸಿಆರ್‌ಝಡ್‌ ನಿಯಮಾವಳಿಯ ಉಲ್ಲಂಘನೆಯಾಗಿಲ್ಲ ಎಂದು ಸಮಿತಿ ಮುಂದೆ ಸ್ಪಷ್ಟ ಪಡಿಸಿದರು.

ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟದ ಪ್ರತಿನಿಧಿಗಳು ಸ್ಮಾರ್ಟ್‌ ಸಿಟಿ ಸಿಆರ್‌ಝಡ್‌ ನಿಯಮಾವಳಿಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು. ಕೆಲವು ಖಾಸಗಿ ವ್ಯಕ್ತಿಗಳು ನದಿಯ ಬದಿಗೆ ಮಣ್ಣು ಹಾಕಿ ವಾಣಿಜ್ಯ ವಹಿವಾಟು ನಡೆಸುತ್ತಿರುವ ಬಗ್ಗೆಯೂ ಸಮಿತಿ ಸದಸ್ಯರಿಗೆ ದೂರಿದರು. ಸ್ಮಾರ್ಟ್‌ಸಿಟಿ ಯೋಜನೆ ನದಿ ಒತ್ತುವರಿ ಮಾಡಿಲ್ಲ ಬದಲಾಗಿ, ತಡೆಗೋಡೆಯ ಮೂಲಕ ನದಿ ದಡವನ್ನು ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next