Advertisement

ಡಿಜಿಟಲ್‌ ವ್ಯವಸ್ಥೆಯಿಂದ ಹಳ್ಳಿ ಜನರಿಗೆ ಸಂಕಟ

11:14 PM Oct 14, 2019 | Team Udayavani |

ಬೈಂದೂರು: ಅಭಿವೃದ್ದಿಯ ಹಿತದೃಷ್ಟಿಯಿಂದ ಬದಲಾವಣೆ ಅತ್ಯಗತ್ಯ. ಹೊಸತನಕ್ಕೆ ಒಗ್ಗಿಕೊಳ್ಳುವ ಮೂಲಕ ವ್ಯವಸ್ಥೆಯನ್ನು ಸರಳೀಕರಿಸಿ ಪಾರದರ್ಶಕತೆ ಕಂಡುಕೊಳ್ಳುವುದು ಪೂರಕವಾದರೂ ಸಹ ಸಹಕಾರಿ ಸಂಸ್ಥೆಗಳು ಇಲಾಖೆ ನಿರ್ದೇಶನದಲ್ಲಿ ಗ್ರಾಮೀಣ ಭಾಗದಲ್ಲಿ ಮಾಡುತ್ತಿರುವ ಬದಲಾವಣೆಗಳು ನೂರಾರು ಜನರು ಪಡಿತರ ವ್ಯವಸ್ಥೆಯಿಂದ ವಂಚಿತರಾಗುವಂತೆ ಮಾಡಿದೆ.

Advertisement

ಏನಿದು ಬಯೋಮೆಟ್ರಿಕ್‌ ಸಮಸ್ಯೆ?
ಸರಕಾರ ಆಹಾರ ಇಲಾಖೆ ಮೂಲಕ ಪ್ರತಿಯೊಂದು ಕುಟುಂಬಗಳಿಗೂ ಪಡಿತರ ಚೀಟಿಗಳನ್ನು ನೀಡುತ್ತಿದೆ.ಆಯಾಯ ವಿಭಾಗಕ್ಕೆ ವರ್ಗೀಕರಿಸಿ ಬಡತನ ರೇಖೆಗಿಂತ ಕೆಳಗಿರುವವವರಿಗೆ ಹಾಗೂ ಇತರರಿಗೆ ಪ್ರತ್ಯೇಕ ಹಂತದಲ್ಲಿ ಪಡಿತರ ಸೌಲಭ್ಯವನ್ನು ಅಲ್ಲಿನ ವ್ಯಾಪ್ತಿಯ ಸಹಕಾರಿ ಸಂಘಗಳ ಮೂಲಕ ಪ್ರತಿ ತಿಂಗಳು ಅಕ್ಕಿ, ಗೋಧಿ, ಸೀಮೆಎಣ್ಣೆ, ಸಕ್ಕರೆ, ರಸಗೊಬ್ಬರಗಳನ್ನು ಪೂರೈಸುತ್ತದೆ.ಕಳೆದ ಹಲವಾರು ವರ್ಷಗಳಿಂದ ಈ ವ್ಯವಸ್ಥೆ ನಡೆದುಕೊಂಡು ಬರುತ್ತಿದೆ.ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಪಡಿತರ ಚೀಟಿ ಪರಿಷ್ಕರಣೆ ವಿಚಾರದಲ್ಲಿ ಒಂದಿಷ್ಟು ಗೊಂದಲಗಳಾದರು ಸಹ ಬಳಿಕ ಗ್ರಾ.ಪಂ.ಗಳ ಮುತುವರ್ಜಿಯಿಂದ ಒಂದಿಷ್ಟು ಸಮಾಧಾನ ದೊರೆತಿದೆ. ಆದರೆ ಈಗ ಆಹಾರ ಇಲಾಖೆ ಪಡಿತರ ಚೀಟಿಯಿಂದ ಸಾಮಗ್ರಿ ಪಡೆಯುತ್ತಿರುವವರು ಕಡ್ಡಾಯವಾಗಿ ಬಯೋಮೆಟ್ರಿಕ್‌ ಸಿಸ್ಟಮ್‌ ವ್ಯಾಪ್ತಿಗೆ ಒಳಪಟ್ಟು ಬೆರಳಚ್ಚು ನೀಡಿ ಪಡಿತರ ಪಡೆಯಬೇಕು ಎನ್ನುವ ನಿಯಮ ಸಹಕಾರಿ ಸಂಘಗಳಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಕಾರಣವೆಂದರೆ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಗಂಗನಾಡು,ತೂದಳ್ಳಿ ಮುಂತಾದ ಹಳ್ಳಿಯ ಜನರು ಸಮೀಪದ ಸೊಸೈಟಿಗಳಲ್ಲಿ ಪಡೆಯುತ್ತಿದ್ದರು. ಪ್ರಸ್ತುತ ಬಯೋಮೆಟ್ರಿಕ್‌ ಸಿಸ್ಟಮ್‌ ಅಳವಡಿಸಲು ಹಳ್ಳಿಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಯ ಜತೆಗೆ ತಾಂತ್ರಿಕ ಸಮಸ್ಯೆಗಳಿಂದ ಆಹಾರ ಸಾಮಗ್ರಿ ದೊರೆಯುತ್ತಿಲ್ಲ. ಇದರಿಂದಾಗಿ ಕೃಷಿಕರಿಗೆ ಹಾಗೂ ಹಳ್ಳಿಗಾಡು ಜನರಿಗೆ ಸಮಸ್ಯೆಯಾಗಿ ಕಾಡಿದೆ.

ಹಳ್ಳಿಗಳಲ್ಲೂ ನೆಟ್‌ವರ್ಕ್‌ ಇಲ್ಲ, ಏಳು ಕೆ.ಜಿ. ಅಕ್ಕಿಗೆ ಎರಡು ದಿನ ಕಾಯಬೇಕು: ಗ್ರಾಮೀಣ ಭಾಗದ ಜನರಿಗೆ ಕೃಷಿಯೇ ಜೀವನಾಧಾರವಾಗಿದೆ. ಮುಖ್ಯವಾಗಿ ಫಸಲು ಬರುವ ಸಮಯದಲ್ಲಿ ಕೃಷಿ ಬಿಟ್ಟು ಬೇರೆ ಕಡೆ ತೆರಳಲು ಸಾಧ್ಯವಿಲ್ಲದ ಸಂದಿಗ್ಧತೆ ಇದೆ. ತೂದಳ್ಳಿ, ಗಂಗನಾಡು ಮುಂತಾದ ಭಾಗದ ಜನರಿಗೆ ಅನುಕೂಲವಾಗಲು ಈಗಿರುವ ಸೊಸೈಟಗಳಲ್ಲಿ ಬಯೋಮೆಟ್ರಿಕ್‌ ಸಿಗ್ನಲ್‌ ಇರುವ ಡಿಶ್‌ಗಳನ್ನು ತಲಾ 20 ಸಾವಿರ ವೆಚ್ಚ ಮಾಡಿ ಅಳವಡಿಸಿದ್ದಾರೆ.ಆದರೆ ಸರಿಯಾಗಿ ಸಿಗ್ನಲ್‌ ದೊರೆಯದಿರುವುದರಿಂದ ರೇಷನ್‌ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲಿಯ ಜನರು ತಾತ್ಕಾಲಿಕ ವ್ಯವಸ್ಥೆಗಾಗಿ 10 ಕಿ.ಮೀ. ದೂರದ ಶಿರೂರಿಗೆ ಬರಬೇಕಾಗಿದೆ. ಶಿರೂರು ಶಾಖೆಯಲ್ಲಿ ಮೀನುಗಾರಿಕಾ ಸಬ್ಸಿಡಿ ಸೀಮೆಎಣ್ಣೆ, ಪಡಿತರ ಸದಸ್ಯರ ನಡುವೆ ಹೆಚ್ಚುವರಿ ಸೇರ್ಪಡೆಯಾದರೆ ಕ್ಲಪ್ಲ ಸಮಯದಲ್ಲಿ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಏಳು ಕೆ.ಜಿ. ಅಕ್ಕಿಗಾಗಿ ಎರಡೆರಡು ದಿನ ಕೆಲಸಬಿಟ್ಟು ಕಾಯಬೇಕಾಗಿದೆ. ಒಟ್ಟಾರೆಯಾಗಿ ಇಲಾಖೆಯ ಹೊಸ ನಿಯಮ ಗ್ರಾಹಕರಿಗೆ ಮತ್ತು ಸಿಬಂದಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ತೂದಳ್ಳಿ ಹೊಸೂರು ಭಾಗದಲ್ಲಿ ಸುಮಾರು 250 ಕುಟುಂಬಗಳು ಹಾಗೂ ಗಂಗನಾಡು ಮುಂತಾದ ಭಾಗದಲ್ಲಿ 2000ಕ್ಕೂ ಅಧಿಕ ಸೇರಿದಂತೆ ವಿವಿಧ ಸಹ‌ಕಾರಿ ಸಂಘಗಳ ವ್ಯಾಪ್ತಿಯ ಗ್ರಾಮೀಣ ಭಾಗದ ಸಾವಿರಾರು ಕುಟುಂಬಗಳಿಗೆ ಈ ಸಮಸ್ಯೆ ಕಾಡುತ್ತಿದೆ.

ವ್ಯವಸ್ಥೆ ಕಲ್ಪಿಸಲಾಗಿದೆ
ಕಳೆದ ಎರಡು ವರ್ಷದ ಹಿಂದೆ ಹೊಸ ವ್ಯವಸ್ಥೆ ಕಲ್ಪಿಸುವ ಇಲಾಖೆ ಈ ನಿಯಮ ಅಳವಡಿಸಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇದನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಬೈಂದೂರಿನ ಗಂಗನಾಡು ಹಾಗೂ ತೂದಳ್ಳಿ ಶಾಖೆಗಳಲ್ಲಿ ಬೂಸ್ಟರ್‌ ಅಳವಡಿಸಿದರು ಕೂಡ ನೆಟ್‌ವರ್ಕ್‌ ದೊರೆಯುತ್ತಿಲ್ಲ.ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಈ ತಿಂಗಳು ಹಿಂದಿನಂತೆ ಪಡಿತರ ಸಾಮಗ್ರಿ ವಿತರಿಸಲಾಗುವುದು.ಸಧ್ಯದಲ್ಲೆ ಈ ಸಮಸ್ಯೆ ಪರಿಹರಿಸಲು ಇಲಾಖೆಯ ನಿರ್ದೇಶನದಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.
-ಪ್ರಕಾಶ , ಆಹಾರ ನಿರೀಕ್ಷಕರು ಕುಂದಾಪುರ

ತಾತ್ಕಲಿಕವಾಗಿ ಮುಂದುವರೆಯಲಿ
ಗ್ರಾಮೀಣ ಭಾಗದಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಮೂಲಕ ಪಡಿತರ ಸಾಮಗ್ರಿ ನೀಡಬೇಕೆಂದು ಆಹಾರ ಇಲಾಖೆ ನಿರ್ದೇಶನ ನೀಡಿದೆ. ಈಗಾಗಲೇ ಅವಶ್ಯವಿರುವ ತಾಂತ್ರಿಕ ವ್ಯವಸ್ಥೆ ಕಲ್ಪಿಸಲು ಸಂಸ್ಥೆಯ ವತಿಯಿಂದ ವೆಚ್ಚ ಮಾಡಿದರೂ ಪ್ರಯೋಜನವಾಗಿಲ್ಲ. ಈ ಕುರಿತು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೆ ಬದಲಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಹೀಗಾಗಿ ನಮಗೆ ನೀಡುತ್ತಿರುವ ಪಡಿತರ ಸಾಮಗ್ರಿ ಇಲಾಖೆ ವಾಪಾಸ್ಸು ಪಡೆದರೆ ಉತ್ತಮ ಇಲ್ಲವಾದಲ್ಲಿ ಕಚೇರಿ ನಿರ್ವಹಣೆಯ ಜತೆಗೆ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುವುದು ಸಿಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಇಲಾಖೆ ಈ ಬಗ್ಗೆ ಸ್ಪಷ್ಟತೆ ನೀಡಿ ಗ್ರಾಮೀಣ ಜನರಿಗಾಗುವ ಸಮಸ್ಯೆ ಇತ್ಯರ್ಥಪಡಿಸಬೇಕಾಗಿದೆ ಮತ್ತು ತಾತ್ಕಾಲಿಕವಾಗಿ ಈಗಿರುವ ವ್ಯವಸ್ಥೆ ಮುಂದುವರಿಸಬೇಕು.
– ಶಾಂತಾನಂದ ಶೆಟ್ಟಿ, ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ

Advertisement

ಅರುಣ ಕುಮಾರ್‌, ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next