Advertisement

ಗ್ರಾಮ ಒನ್‌ ಕೇಂದ್ರಗಳಿಗೆ ಗೃಹಜ್ಯೋತಿ ಬಿಲ್‌ ಶಾಕ್‌!

03:18 PM Aug 03, 2023 | Team Udayavani |

ರಾಮನಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಸೌಲಭ್ಯ ಇಂದಿನಿಂದ ಗ್ರಾಹಕರಿಗೆ ತಲುಪಲಿದೆ. ಶೂನ್ಯ ಬಿಲ್‌ ಬರುತ್ತದೆ ಎಂದು ನೋಂದಣಿ ಮಾಡಿಸಿದ ಗ್ರಾಹಕರು ಖುಷಿಯಿಂದ ಕಾಯುತ್ತಿದ್ದರೆ, ಇತ್ತ ಈ ಯೋಜನೆಗೆ ಗ್ರಾಹಕರ ನೋಂದಣಿ ಮಾಡಿಸಿದ ಗ್ರಾಮ ಒನ್‌ ಪ್ರಾಂಚೈಸಿಗಳು ಸೇವಾಸಿಂಧೂ ಪೋರ್ಟಲ್‌ನಿಂದ ತಮಗೆ ಬಂದಿರುವ ಬಿಲ್‌ ಮೊತ್ತವನ್ನು ನೋಡಿ ಹೌಹಾರಿಯುತ್ತಿದ್ದಾರೆ.

Advertisement

ಹೌದು.., ಡಿಸಿಎಂ ಡಿ.ಕೆ.ಶಿವಕುಮಾರ್‌ ತವರು ಜಿಲ್ಲೆಯಾಗಿರುವ ರಾಮನಗರ ಜಿಲ್ಲೆಯಲ್ಲಿ ಗೃಹ ಜ್ಯೋತಿ ನೋಂದಣಿ ಕಾರ್ಯ ಬಿರುಸಿನಿಂದ ನಡೆದಿ ದ್ದು, ಗ್ರಾಮಾಂತರ ಭಾಗದಲ್ಲಿ ಗ್ರಾಮಒನ್‌ ಕೇಂದ್ರಗಳ ಮೂಲ ಕ ಉಚಿತ ವಿದ್ಯುತ್‌ಗೆ ನೋಂದಣಿ ಮಾಡಿಸಿ ರುವ ಜನರ ಸಂಖ್ಯೆ ಹೆಚ್ಚಿದೆ. ನೋಂದಣಿಗೆ ಗ್ರಾಮ ಒನ್‌, ಗ್ರಾಪಂ ಕಚೇರಿ ಬಾಪೂಜಿ ಸೇವಾಕೇಂದ್ರ, ಬೆಸ್ಕಾಂ ಕಚೇರಿ, ಗ್ರಾಹಕ ಸೇವಾ ಕೇಂದ್ರ ಹಾಗೂ ಮೊಬೈಲ್‌ ಮೂಲಕ ನೋಂದಣಿಗೆ ಅವಕಾಶ ನೀಡಲಾಗಿತ್ತು. ಆದರೆ, ಗ್ರಾಮೀಣ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವುದು ಗ್ರಾಮಒನ್‌ ಕೇಂದ್ರಗಳಲ್ಲಿ. ಜಿಲ್ಲಾದ್ಯಂತ 3.49 ಲಕ್ಷದಷ್ಟು ಗ್ರಾಹಕರು ಗೃಹ ಬಳಕೆಯ ವಿದ್ಯುತ್‌ ಸಂಪರ್ಕ ಪಡೆದಿದ್ದಾರೆ ಎಂಬ ಅಂದಾಜಿದ್ದು, ಇದರಲ್ಲಿ 2.52 ಲಕ್ಷ ಮಂದಿ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 71 ಸಾವಿರ ಗ್ರಾಹಕರು ಜಿಲ್ಲೆಯ 138 ಗ್ರಾಮಒನ್‌ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

ಗೃಹಜ್ಯೋತಿಗೆ ನೋಂದಣಿ ಮಾಡಿರುವ ಗ್ರಾಮಒನ್‌ ಕೇಂದ್ರಗಳು ಪ್ರತಿ ಗ್ರಾಹಕರಿಗೆ 20 ರೂ.ನಂತೆ ನೋಂದಣಿ ಮಾಡಿರುವ ಶುಲ್ಕವನ್ನು ಸೇವಾಸಿಂಧು ಪೋರ್ಟಲ್‌ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸುವಂತೆ ಇದೀಗ ಗ್ರಾಮಒನ್‌ ಕೇಂದ್ರಗಳಿಗೆ ಬಿಲ್‌ ಕಳುಹಿಸಿದ್ದು, 138 ಗ್ರಾಮ ಒನ್‌ಗಳಿಂದ 14.18 ಲಕ್ಷ ರೂ. ಬಾಕಿ ಹಣ ಕಟ್ಟುವಂತೆ ತಿಳಿಸಲಾಗಿದೆ. ಗ್ರಾಮ ಒನ್‌ ಪ್ರಾಂಚೈಸಿ ಪಡೆದವರು ಬಿಲ್‌ ನೋಡಿ ಬೆಚ್ಚಿ ಬಿದಿದ್ದಾರೆ.

40 ಸಾವಿರ ರೂ.ವರೆಗೆ ಬಿಲ್‌: ಜಿಲ್ಲೆಯ 138 ಗ್ರಾಮ ಒನ್‌ ಕೇಂದ್ರಗಳ ಪ್ರಾಂಚೈಸಿ ಪಡೆದವರಿಗೆ ಈಗಾಗಲೇ ಬಿಲ್‌ ಕಳುಹಿಸಿರುವ ಗ್ರಾಮಒನ್‌ ಸಂ ಯೋಜಕರು ತಮ್ಮ ಗ್ರಾಮಒನ್‌ ಕೇಂದ್ರಗಳಲ್ಲಿ ನೋಂ ದಣಿ ಮಾಡಿರುವ ಸಂಖ್ಯೆಗನುಗುಣವಾಗಿ ಬಿಲ್‌ಪಾವತಿ ಮಾಡುವಂತೆ ಸೂಚನೆ ನೀಡಿದ್ದು, ಈ ಬಿಲ್‌ ಮೊತ್ತವನ್ನು ನೋಡಿ ಬೆಚ್ಚಿ ಬಿದಿದ್ದಾರೆ. ಕೆಲ ಗ್ರಾಮ ಒನ್‌ ಕೇಂದ್ರಗಳ ಬಾಕಿ ಮೊತ್ತ 40 ಸಾವಿರ ರೂ.ಗಳಿಗೂ ಹೆಚ್ಚಿದ್ದು, ಈಗಾಗಲೇ ಗ್ರಾಹಕರಿಗೆ ಉಚಿತ ನೋಂದಣಿ ಮಾಡಿಕೊಟ್ಟಿ ದ್ದೇವೆ. ನಾವು ಎಲ್ಲಿಂದ ಹಣ ತಂದು ಕಟ್ಟುವುದು ಎಂದು ಗ್ರಾಮ ಒನ್‌ ಸಿಬ್ಬಂದಿ ಪ್ರಶ್ನಿಸುತ್ತಿದ್ದಾರೆ.

ಅಧೀಕಾರಿಗಳು ಹೇಳುವುದೇನು?: ನಾವು ಎಲ್ಲೂ ಗೃಹಜ್ಯೋತಿಗೆ ಉಚಿತ ನೋಂದಣಿ ಎಂದು ಹೇಳಿಲ್ಲ. ಆರಂಭದಲ್ಲಿ ಸರ್ವರ್‌ ಸಮಸ್ಯೆಯಾದ ಕಾರಣ ನಾವು ನೋಂದಣಿಯಾದ ತಕ್ಷಣವೇ ಹಣ ಪಾವತಿಸುವುದು ಬೇಡ. ನಿಮ್ಮ ಬಳಿ ಸಂಗ್ರಹಿಸಿ ಇಟ್ಟುಕೊಂಡಿರಿ. ಬಳಿಕ ಹಣ ಕಟ್ಟಿ ಎಂದು ಹೇಳಿದ್ದೆವು. ಇದೀಗ ಉಚಿತ ಎಂದು ಗ್ರಾಮ ಒನ್‌ ಸಿಬ್ಬಂದಿ ತಪ್ಪು ತಿಳಿದುಕೊಂಡಿದ್ದಾರೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸುತ್ತಿದ್ದಾರೆ.

Advertisement

ಕಾರ್ಯ ನಿರ್ವಹಿಸುವುದೇ ಕಷ್ಟ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಗ್ರಾಮಒನ್‌ ಸಿಬ್ಬಂದಿಗಳು, ನಮಗೆ ತಪ್ಪು ಮಾಹಿತಿ ನೀಡಿದ್ದಾರೆ. ಸಚಿವರು ಹೇಳಿದ ಬಳಿಕವೂ ನಾವು ಹಣ ಪಡೆದರೆ ಸಾರ್ವಜನಿಕರು ಗಲಾಟೆ ಮಾಡುತ್ತಿದ್ದರು. ನಾವು ಉಚಿತವಾಗಿ ಮಾಡಿದ್ದು, ಇದೀಗ ದುಬಾರಿ ಬಿಲ್‌ ಕಳುಹಿಸಿ ಗೊಂದಲ ಮೂಡಿಸಿದ್ದಾರೆ. ಇನ್ನು ಗ್ರಾಮ ಒನ್‌ನಲ್ಲಿ ನೋಂದಣಿ ಮಾಡಿಸಿದರೆ ಮಾತ್ರ ಶುಲ್ಕ ಎನ್ನುವವರು ಮೊಬೈಲ್‌, ಗ್ರಾಪಂ, ಬೆಸ್ಕಾಂ ಮೂಲಕ ನೋಂದಣಿ ಮಾಡಿಸಿದವರಿಗೆ ಉಚಿತ ನೀಡಿರು ವು ದು ಯಾಕೆ, ಇದೇ ರೀತಿ ಪರಿಸ್ಥಿತಿ ಆದರೆ ಗ್ರಾಮ ಒನ್‌ ಕೇಂದ್ರಗಳು ಕಾರ್ಯ ನಿರ್ವಹಿಸು ವುದೇ ಕಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಗೊಂದಲ ಆಗಿದ್ದು ಎಲ್ಲಿ?: ಗೃಹಜ್ಯೋತಿಗೆ ಗ್ರಾಮ ಒನ್‌ ಕೇಂದ್ರಗಳಲ್ಲಿ ನೋಂದಣಿ ಮಾಡುವಾಗ ಆರಂಭದಲ್ಲಿ ಪ್ರತಿ ಗ್ರಾಹಕರಿಂದ 20 ರೂ. ಶುಲ್ಕವನ್ನು ಸ್ವೀಕರಿಸಲಾಗುತಿತ್ತು. ಗ್ರಾಮಒನ್‌ ಪ್ರಾಂಚೈಸಿಗಳು ಈಗಾಗಲೇ ಸೇವಾ ಸಿಂಧೂ ವೆಬ್‌ ಪೋರ್ಟಲ್‌ ಖಾತೆಯಲ್ಲಿ ಹಣವನ್ನು ಪ್ರೀ ಪೇಯ್ಡ ವಿಧಾನದ ಮೂಲಕ ತುಂಬಿಸಿದ್ದು, ಈ ಹಣದಲ್ಲಿ ಇವರು ಸೇವೆ ನೀಡಿದಂತೆ ಹಣ ಕಡಿತವಾಗುತಿತ್ತು. ಹಣ ಖಾಲಿಯಾಗುತ್ತಿದ್ದಂತೆ ಆನ್‌ಲೈನ್‌ನಲ್ಲಿ ರೀಚಾರ್ಜ್‌ ಮಾಡಿಸಬೇಕಿತ್ತು. ಆದರೆ, ಗೃಹಜ್ಯೋತಿ ನೋಂದಣಿ ಆರಂಭಗೊಳ್ಳುತ್ತಿದ್ದಂತೆ ಮಾಧ್ಯಮಗಳ ಮೂಲಕ ಉಪಮುಖ್ಯ ಮಂತ್ರಿ ಹಾಗೂ ಇಂಧನ ಸಚಿವರು ಉಚಿತ ಎಂದು ಹೇಳಿಕೆ ನೀಡಿದ ಹಿನ್ನೆಲೆ ಹಣ ಪಡೆಯುವುದನ್ನು ನಿಲ್ಲಿಸಲಾಗಿತ್ತು. ಕೆಲ ಗ್ರಾಮಒನ್‌ಗಳು ಹಣ ಪಡೆದಿದ್ದರೆ, ಮತ್ತೆ ಕೆಲ ಗ್ರಾಮಒನ್‌ಗಳಲ್ಲಿ ಉಚಿತವಾಗಿ ನೋಂದಣಿ ಮಾಡಲಾಗಿದೆ. ಇದೀಗ ಬಿಲ್‌ ಕಟ್ಟಿ ಎಂದು ಹೇಳುತ್ತಿರುವುದು ಪ್ರಾಂಚೈಸಿಗಳು ಬೆಚ್ಚಿ ಬೀಳುವಂತೆ ಮಾಡಿದೆ.

ಗೃಹಜ್ಯೋತಿಗೆ ಉಚಿತ ನೋಂದಣಿ ಎಂದು ಎಲ್ಲಿಯೂ ಹೇಳಿಲ್ಲ. ಹಣ ಸಂಗ್ರಹಿಸಿ ಇಟ್ಟುಕೊಳ್ಳುವಂತೆ ತಿಳಿಸಿದ್ದೇವು. ಇದೀಗ ಬಿಲ್‌ ಕಳುಹಿಸಿದ್ದೇವೆ. ಗೃಹಲಕ್ಷ್ಮೀ ನೋಂದಣಿಗೆ ಮಾತ್ರ ಉಚಿತವಾಗಿ ಮಾಡುವಂತೆ ತಿಳಿಸಲಾಗಿದೆ. ● ವೇಣು, ಜಿಲ್ಲಾ ಸಂಯೋಜಕ, ಗ್ರಾಮಒನ್‌ ಕೇಂದ್ರ

ಈಗಾಗಲೇ ಆಯುಷ್ಮಾನ್‌ ಕಾರ್ಡ್‌ ಮಾಡಿಸಿ ನಮಗೆ ಇನ್ನೂ ಹಣ ನೀಡಿಲ್ಲ. ಗೃಹಜ್ಯೋತಿ ಉಚಿತ ಎಂದು ಇದೀಗ ಹಣಕಟ್ಟಿ ಎನ್ನುತ್ತಿದ್ದಾರೆ. ಗೃಹಲಕ್ಷ್ಮೀ ಬಗ್ಗೆಯೂ ಬಾಯಿ ಮಾತಿನಲ್ಲಿ ಹೇಳುತ್ತಿದ್ದಾರೆ. ಮುಂದೆ ಇದೇ ರೀತಿ ಮಾಡಿದರೆ ಏನು ಮಾಡುವುದು. ಇದೇ ರೀತಿ ಆದರೆ ನಾವು ಗ್ರಾಮಒನ್‌ ಕೇಂದ್ರ ನಿರ್ವಹಿಸಲು ಸಮಸ್ಯೆಯಾಗುತ್ತದೆ. ಬೀಗ ಹಾಕಿ ಮನೆಗೆ ಹೋಗಬೇಕಾಗುತ್ತದೆ. ● ಹೆಸರೇಳಲಿಚ್ಚಿಸದ, ಗ್ರಾಮಒನ್‌ ಪ್ರಾಂಚೈಸಿ

– ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next