Advertisement

ಹಲವೆಡೆ ಸಂಪೂರ್ಣಬಂದ್‌ಸ್ಥಿತಿ

01:34 PM Mar 15, 2020 | Naveen |

ವಿಜಯಪುರ: ಅಪಾಯಕಾರಿ ಹಾಗೂ ಸಾಂಕ್ರಾಮಿಕವಾಗಿರುವ ಕೋವಿಡ್‌-19 ಕೊರೊನಾ ವೈರಸ್‌ ಹರಡದಂತೆ ತುರ್ತು ಮುನ್ನೆಚ್ಚರಿಕೆಗಾಗಿ ಸರ್ಕಾರ ಮುಂದಿನ ಒಂದು ವಾರ ಕಾಲ ಎಲ್ಲ ಸಭೆ-ಸಮಾರಂಭ, ಉದ್ಯಮಗಳನ್ನು ಸ್ಥಗಿತಗೊಳಿಸಿ ಅದೇಶಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಮೊದಲ ದಿನ ಶನಿವಾರ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಹೊರತುಪಡಿಸಿ ಎಲ್ಲ ಪ್ರಮುಖ ಪಟ್ಟಣಗಳಲ್ಲಿ ಸಂಪೂರ್ಣ ಬಂದ್‌ ಚಿತ್ರಣ ಕಂಡು ಬಂತು. ಹೋಟೆಲ್‌, ಚಿತ್ರಮಂದಿರಗಳು, ವಿವಿಧ ವಾಣಿಜ್ಯ ಉದ್ಯಮಗಳು ಬಂದ್‌ ಆಗಿದ್ದವು. ಆದರೆ ಬಸ್‌ ಹಾಗೂ ನಗರ ಸಂಚಾರ ಎಂದಿನಂತಿದ್ದರೂ, ಎರಡನೇ ಶನಿವಾರ ಆಗಿದ್ದರಿಂದ ಸರ್ಕಾರಿ ಕಚೇರಿಗಳು ತೆರೆದಿರಲಿಲ್ಲ. ಆದರೆ ಅಲ್ಲಲ್ಲಿ ಕೊರೊನಾ ಕರ್ತವ್ಯಕ್ಕಾಗಿ ತೆರೆದಿದ್ದ ಕಚೇರಿಗಳಲ್ಲಿ ಸಾರ್ವಜನಿಕರ ಭೇಟಿ ವಿರಳವಾಗಿತ್ತು.

Advertisement

ಸರ್ಕಾರದ ಆದೇಶದ ಹೊರತಾಗಿಯೂ ಜಿಲ್ಲೆಯ ಹಲವೆಡೆ ಕೆಲವು ಶಾಲೆಗಳು 6ನೇ ತರಗತಿಗಿಂತ ಕೆಳಗಿನ ವರ್ಗಗಳ ಮಕ್ಕಳಿಗೆ ಪರೀಕ್ಷೆ ನಡೆಸಿದ್ದು ವರದಿಯಾಗಿವೆ. ಜಿಲ್ಲಾ ಕೇಂದ್ರವಾದ ವಿಜಯಪುರ ನಗರದಲ್ಲಿ ಬಸ್‌ ಸಂಚಾರ ಎಂದಿನಂತೆ ಕಂಡು ಬಂದಿದ್ದು, ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿನದಂತೆಯೇ ಇತ್ತು. ದೂರದ ಊರುಗಳಿಗೆ ಹೋಗುವವರ ಸಂಖ್ಯೆ ವಿರಳವಾಗಿದ್ದರೂ, ಜಿಲ್ಲೆಯ ವ್ಯಾಪ್ತಿಯ ಪ್ರಯಾಣದ ಓಡಾಟ ಸಾಮಾನ್ಯವಾಗಿತ್ತು.

ನಗರದಲ್ಲಿ ನಗರ ಸಾರಿಗೆ ಹಾಗೂ ಆಟೋಗಳ ಓಡಾಟವೂ ಸಾಮಾನ್ಯವಾಗಿದ್ದ ಕಾರಣ ಜನಜೀವನಕ್ಕೆ ಯಾವುದೇ ವ್ಯತ್ಯಯವಾಗದೇ ಸುಗಮವಾಗಿದ್ದು ಕಂಡು ಬಂತು. ಆದರೆ ನಗರದ ರೈಲು ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರ ಸಂಖ್ಯೆ ಕಂಡು ಬರಲಿಲ್ಲ. ನಿರ್ದಿಷ್ಟ ರೈಲುಗಳ ಪ್ರಯಾಣಕ್ಕೆ ಸಿದ್ಧವಾಗಿದ್ದ ಜನರು ಮಾತ್ರ ಕಂಡು ಬಂದರು. ಉಳಿದಂತೆ ರೈಲ್ವೆ ಪ್ಲಾಟ್‌ಫಾರ್ಮ್ ಗಳಲ್ಲಿ ಜನರ ಸಂಖ್ಯೆ ವಿರಳವಾಗಿತ್ತು.

ರೈಲ್ವೆ ನಿಲ್ದಾಣ ಹಾಗೂ ಸುತ್ತಲಿನ ಅಂಗಡಿಗಳು ಎಂದಿನಂತೆಯೇ ವಹಿವಾಟು ನಡೆಸಿದವು.ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮಾ. 14ರಿಂದ 1ರಿಂದ 6ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸದೆ ಮಕ್ಕಳನ್ನು ಪಾಸ್‌ ಮಾಡಿ, ಶಾಲೆಗಳಿಗೆ ರಜೆ ನೀಡಲು ಆದೇಶಿಸಿದ್ದರು. ಆದರೆ ಸದರಿ ಆದೇಶ ಶುಕ್ರವಾರ ತಡರಾತ್ರಿ ಹೊರಟ ಕಾರಣ ಕೆಲವು ಶಾಲೆಗಳಿಗೆ ಎಂದಿನಂತೆ ಎಲ್ಲ ವರ್ಗದ ಮಕ್ಕಳು ಆಗಮಿಸಿದ್ದರು. ಆದರೆ ಬಹುತೇಕ ಶಾಲೆಗಳು 6ನೇ ತರಗತಿಗಿಂತ ಕಡಿಮೆ ವರ್ಗದ ಮಕ್ಕಳನ್ನು ಪ್ರಾರ್ಥನೆ ಬಳಿಕ ಮರಳಿ ಮನೆಗೆ ಕಳಿಸಿದವು. ಆದರೆ ಕೆಲವು ಶಾಲೆಗಳ ಆಡಳಿತ ಮಂಡಳಿಗಳು ಸರ್ಕಾರದ ಆದೇಶ ಧಿಕ್ಕರಿಸಿ ಶನಿವಾರ ಬೆಳಗ್ಗೆ ಶಾಲಾ ವಾಹನಗಳನ್ನು ಕಳಿಸಿ, 1-6ನೇ ತರಗತಿಯೊಳಗಿನ ಮಕ್ಕಳನ್ನು ಶಾಲೆಗೆ ಕರೆಸಿ ಪರೀಕ್ಷೆ ನಡೆಸಿದ್ದೂ ಕಂಡು ಬಂತು.

ಇನ್ನು ನಗರದ ಬಹುತೇಕ ಎಲ್ಲ ಹೋಟೆಲ್‌ಗ‌ಳು ನಿತ್ಯದಂತೆಯೇ ವಹಿವಾಟು ನಡೆಸಿದರೂ ಗ್ರಾಹಕರ ಕೊರತೆ ಎದುರಿಸಿದವು. ಆದರೆ ಜಿಲ್ಲೆಯ ಬಸವನಬಾಗೇವಾಡಿ, ಇಂಡಿ, ಹೂವಿನಹಿಪ್ಪರಗಿ ಸೇರಿದಂತೆ ಬಹುತೇಕ ಎಲ್ಲ ಪಟ್ಟಣಗಳಲ್ಲಿ ಪೊಲೀಸರ ಸಹಾಯದಿಂದ ಸ್ಥಳೀಯ ಆಡಳಿತಗಳು ಹೋಟೆಲ್‌, ಖಾನಾವಳಿ, ಬೀದಿ ಬದಿ ತಿನಿಸು ಮಾರಾಟಗಾರರು, ಬೇಕರಿ ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ವಾಣಿಜ್ಯ ವಹಿವಾಟನ್ನು ಮುಚ್ಚಿಸಿದರು. ಆದರೆ ಮುದ್ದೇಬಿಹಾಳ, ಆಲಮೇಲ ಸೇರಿದಂತೆ ಇತರೆ ಕೆಲವು ಪಟ್ಟಣಗಳಲ್ಲಿ ಜನಜೀವನ ಎಂದಿನಂತೆ ಕಂಡು ಬಂತು. ಹೀಗಾಗಿ ಸರ್ಕಾರದ ಫ‌ರ್ಮಾನು ಯಾವುದೇ ರೀತಿಯಲ್ಲೂ ಜನರ ಮೇಲೆ ಪರಿಣಾಮ ಬೀರಲಿಲ್ಲ.

Advertisement

ಚಿತ್ರಮಂದಿರಗಳು, ಬಾರ್‌, ಸೂಪರ್‌ ಮಾರ್ಕೇಟ್‌ನಂತ ವಹಿವಾಟು ಸಂಪೂರ್ಣ ಸ್ಥಗಿತವಾಗಿತ್ತು. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಒಂದು ವಾರ ಪ್ರದರ್ಶನ ರದ್ದು ಮಾಡಿದ್ದಾಗಿ ಚಿತ್ರಮಂದಿಗಳು ಪ್ರವೇಶ ದ್ವಾರದಲ್ಲೇ ಫ‌ಲಕ ಅಳವಡಿಸಿ ಚಿತ್ರ ಅಭಿಮಾನಿಗಳಿಗೆ ಮಾಹಿತಿ ನೀಡುವ ಕೆಲಸ ಮಾಡಿದವು. ಎರಡನೇ ಶನಿವಾರ ರಜೆ ಇರುವ ಕಾರಣ ಬ್ಯಾಂಕ್‌ಗಳು ಬಾಗಿಲು ತೆರೆಯಲಿಲ್ಲ. ಪೆಟ್ರೋಲ್‌ ಬಂಕ್‌ಗಳು ನಿತ್ಯದಂತೆ ಗ್ರಾಹಕರಿಗೆ ಸೇವೆ ನೀಡಿದವು.

ವಿಜಯಪುರ ನಗರ ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿದ್ದು ಶನಿವಾರ ಪ್ರವೇಶ ಮುಕ್ತವಾಗಿದ್ದರೂ ಐತಿಹಾಸಿಕ ಜಾಗತಿಕ ಅಚ್ಚರಿಗಳಲ್ಲಿ ಒಂದೆನಿಸಿದ ಗೋಲಗುಮ್ಮಟ, ಇಬ್ರಾಹಿಂ ರೋಜಾದಂತ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರು ಇಲ್ಲದೇ ಭಣಗುಡುತ್ತಿತ್ತು. ಇನ್ನು ಐತಿಹಾಸಿಕ ಸ್ಮಾರಕಗಳಾದ ಗಗನಮಹಲ್‌, ಬಾರಾಕಮಾನ್‌, ಕಂದಕ ಪ್ರದೇಶ ಸೇರಿದಂತೆ ವಿವಿಧ ಉದ್ಯಾನವನದಲ್ಲಿ ನಿತ್ಯವೂ ಸಾವಿರಾರು ಜನರು ಆಹ್ಲಾದಕರ ವಾತಾರಣದಿಂದಾಗಿ ಹುಲ್ಲು ಹಾಸಿನ ಮೇಲೆ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಶನಿವಾರ ಐತಿಹಾಸಿಕ ಸ್ಮಾರಕಗಳ ಉದ್ಯಾನವನಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next