Advertisement

ಭಾರತೀಯರಿಗೆ ಯುಗಾದಿ ಹಬ್ಬಗಳ ರಾಜ: ಡಾ|ಸೋಮಶೇಖರ

03:29 PM Apr 10, 2019 | Naveen |

ವಿಜಯಪುರ: ಹಬ್ಬಗಳ ತವರು ಎನಿಸಿರುವ ಭಾರತ ದೇಶದಲ್ಲಿ ಚೈತ್ರ ಮಾಸದ ಯುಗಾದಿ ಹಬ್ಬಗಳ ರಾಜ ನಿಸಿಕೊಂಡಿದೆ. ನಮ್ಮ ಹಿರಿಯರು ಆಚರಿಸುತ್ತ ಬಂದಿರುವ ಪ್ರತಿಯೊಂದು ಹಬ್ಬಕ್ಕೂ ಒಂದೊಂದು ವೈಜ್ಞಾನಿಕ ಹಿನ್ನೆಲೆ ಇದೆ. ಇದರ ಮಹತ್ವ ನಮ್ಮ
ಜಾನಪದರು ಸಂಪೂರ್ಣ ಅರಿತಿದ್ದರು ಎಂದು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ವಿಶ್ರಾಂತ ಸಹಾಯಕ ನಿರ್ದೇಶಕ ಡಾ| ಸೋಮಶೇಖರ ವಾಲಿ ಬಣ್ಣಿಸಿದರು.

Advertisement

ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಹಮ್ಮಿಕೊಂಡಿದ್ದ ಯುಗಾದಿ ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜೀವನದಲ್ಲಿ ಬರುವ ಸುಖ-ದುಃಖ ಸಮಾನವಾಗಿ ಸ್ವೀಕರಿಸಿ ಜೀವನ
ಸಾರ್ಥಕತೆ ಪಡೆಯುವುದನ್ನು ಬೇವು-ಬೆಲ್ಲವನ್ನು ಯುಗಾದಿ ಹಬ್ಬ ಸಾಂಕೇತಿಕರಿಸುತ್ತದೆ ಎಂದು ವಿವರಿಸಿದರು.

ಯುಗಾಗಿ ಸಂದರ್ಭದಲ್ಲಿ ಪ್ರಕೃತಿಯು ಹೊಚ್ಚ ಹೊಸ ಉಡುಗೆ ತೊಟ್ಟಂತೆ ಹಸಿರಿನಿಂದ ಹೂ, ಹಣ್ಣುಗಳಿಂದ ತುಂಬಿ ಸಂಭ್ರಮಿಸುತ್ತದೆ. ಋತುಮಾನ ಬದಲಾಗಿ ಪ್ರಕೃತಿಯಲ್ಲಿ ಹೊಸ ಚೈತನ್ಯ ತುಂಬಿ ಕೋಗಿಲೆ ಹಾಡಿನಿಂದ ಹೊಸ ಕಳೆ ಕಟ್ಟುವಂತೆ
ಈ ಕವಿಗೋಷ್ಠಿಯಲ್ಲಿ ಕವಿ ಕೋಗಿಲೆಗಳು ತಮ್ಮ ಕವಿತೆ ವಾಚನ ಮಾಡುವುದು ಹೊಸ ಮನ್ವಂಥರಕ್ಕೆ ಆಹ್ವಾನವಿತ್ತಂತೆ ಎಂದು ವಿಶ್ಲೇಷಿಸಿದರು.

ಡಾ| ಅಮೀರುದ್ದಿನ್‌ ಖಾಜಿ ಮಾತನಾಡಿ, ಕುತೂಹಲ, ನಿಗೂಢತೆ, ವಿಚಾರಗಳೆಲ್ಲವು ಕಾವ್ಯಕ್ಕೆ ಸ್ಥಾಯಿಯಾಗಿ ನಿಂತು ಸತ್ಯವನ್ನು
ಅನಾವರಣಗೊಳಿಸುತ್ತವೆ. ಹಳೆಗನ್ನಡದಿಂದ ಈವರೆಗೆ ಕವಿಗಳು ಸಮಾಜದ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ. ಕಾವ್ಯಕ್ಕಿರುವ ಸತ್ಯದ ಸೌಂದರ್ಯವನ್ನು ಓದುಗರು ಆಸ್ವಾದಿಸಬೇಕು. ನಿರಂತರ ಓದು, ಪ್ರಯತ್ನ, ಆತ್ಮಾವಲೋಕನ ಮಾಡಬೇಕು. ಕಾವ್ಯ ಓದುಗರ
ಹೃದಯ ತಟ್ಟಿ ಮನಮುಟ್ಟಬೇಕು. ಮೌನದಲ್ಲಿ ಗಳಿಸಿದ್ದನ್ನು ಮಾತಿನಲ್ಲಿ ಕಟ್ಟಿಕೊಡುವವನೆ ಕವಿ ಎಂದರು.

ಹೇಮಲತಾ ವಸ್ತ್ರದ ಮಾತನಾಡಿ, ಕಾವ್ಯ ಎನ್ನುವುದು ಬದುಕಿನ ಪ್ರತಿಬಿಂಬ. ಕಾವ್ಯದ ವಿಷಯ ಬದುಕಿನ ಒಂದು ಆಂತರಿಕ ಭಾವವಾಗಿ ಹೃದಯಕ್ಕೆ ಮುಟ್ಟುವಂತಿರಬೇಕು. ನಮ್ಮ ಶರಣರ ವಚನಗಳು, ಸರ್ವಜ್ಞರ ತ್ರಿಪದಿಗಳು ಉತ್ತುಂಗಕ್ಕೆರಲು ಹಾಗೂ
ಜಾನಪದರು ಅನುಭವಿಸಿದ ಅನುಭಾವವನ್ನು ಕಾವ್ಯದಲ್ಲಿ ಕಟ್ಟಿಕೊಟ್ಟು ಸಾಹಿತ್ಯದ ರಸದೌತಣ ಉಣಬಡಿಸಿದರು. ಇದಕ್ಕೆ ಪೂರಕ ಎನ್ನುವಂತೆ ಕವನಗಳು ಮೂಡಿಬರಬೇಕು. ಹೆಚ್ಚು ಹೆಚ್ಚು
ಕುವೆಂಪು, ಅಡಿಗ, ಕಾರಂತರ ಸಾಹಿತ್ಯ ಓದಬೇಕು ಆಗ ಕಾವ್ಯಕ್ಕೆ ಧ್ವನಿಶಕ್ತಿ ಬರಲು ಸಾಧ್ಯ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿ ಫ.ಗು. ಸಿದ್ದಾಪುರ ಮಾತನಾಡಿ, ಕವಿಗಳು ತಾವು ಬರೆದಿರುವ ಕವನ, ಕವಿತೆ ಪ್ರಕಟಿಸುವ ಅತುರತೆಗಿಂತ ಅದರ ಪಕ್ವತೆಗಾಗಿ ಕಾಯಬೇಕು. ಕವಿ ಪರಕಾಯ ಪ್ರವೇಶ ಮಾಡಿದಾಗ ಅಂತರಾಳದ ಧ್ವನಿ ಪ್ರಕಟವಾಗಲು ಸಾಧ್ಯ.
ಅಂತಹ ಪ್ರಯತ್ನದಲ್ಲಿ ಯುವ ಬರಹಗಾರರು ತೊಡಗಬೇಕು. ಅಲಸಂಗಿಯ ಮಧುರಚನ್ನರು ಆಗಿನ ಕಾಲದ ಯುವ ಕವಿಗಳಿಗೆ ಬೆನ್ನುತಟ್ಟಿ, ಹರಸಿ ಹಾರೈಸುತ್ತಿದ್ದರು. ಸತತ ಅಧ್ಯಯನವೇ ಉತ್ತಮ ಕಾವ್ಯ ರಚನೆಗೆ ಮಾರ್ಗ ಎಂದರು. ಸಂಗಮೇಶ ಬದಾಮಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಕಾರ್ಯದರ್ಶಿ ಬಸವರಾಜ ಕುಂಬಾರ ವೇದಿಕೆ
ಮೇಲಿದ್ದರು.

ಕವಿಗೊಷ್ಠಿಯಲ್ಲಿ ಅಥಣಿ, ಚಡಚಣ, ಬಸವನಬಾಗೇವಾಡಿ, ಇಂಗಳೇಶ್ವರ, ಸಿಂದಗಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ 30ಕ್ಕೂ ಹೆಚ್ಚು ಕವಿಗಳು ತಮ್ಮ ಕವನ ವಾಚಿಸಿದರು. ಭಾರತಿ ಟಂಕಸಾಲಿ, ವಿದ್ಯಾವತಿ ಅಂಕಲಗಿ, ಚಂದ್ರಕಾಂತ ಬಿಜ್ಜರಗಿ, ಎಸ್‌.ಎಸ್‌.ಖಾದ್ರಿ ಇನಾಮದಾರ, ಯು.ಎನ್‌.ಕುಂಟೋಜಿ, ಸುಭಾಸ
ಕನ್ನೂರ, ಲಕ್ಷ್ಮೀ ದೇಸಾಯಿ, ಮಹಾದೇವಿ ಪಾಟೀಲ, ಪುಷ್ಪಾ ಮಹಾಂತಮಠ, ಸಿ.ಬಿ. ಮಸಿಯವರ, ಮಯೂರ ತಿಳಗೂಳಕರ,
ಅಂಬರೀಷ ಪೂಜಾರಿ, ರಂಗನಾಥ ಅಕ್ಕಲಕೋಟ, ಎಸ್‌.ಡಿ. ಮಾದನಶೆಟ್ಟಿ, ಎಸ್‌.ವಐ.ನಡುವಿನಕೇರಿ, ಶಿವಲಿಂಗ ಕಿಣಗಿ, ಭರತೇಶ ಕಲಗೊಂಡ, ಉಮೇಶ ಕಲಗೊಂಡ, ಬಿ.ಎಸ್‌.ಸಜ್ಜನ, ಶರಣಗೌಡ ಪಾಟೀಲ, ಎಂ.ಆರ್‌. ಕಬಾಡೆ, ಅಯ್ಯತ ರೋಜಿನದಾರ, ರಾಜೇಂದ್ರಕುಮಾರ ಬಿರಾದಾರ, ದಾಕ್ಷಾಯಣಿ
ಬಿರಾದಾರ, ರವಿ ಕಿತ್ತೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next