Advertisement

ತಾಪಮಾನ ತಗ್ಗಿಸಲು ಸಸಿ ಬೆಳೆಸಿ

02:36 PM Jun 14, 2019 | Naveen |

ವಿಜಯಪುರ: ಪ್ರಸಕ್ತ ಸಂದರ್ಭದಲ್ಲಿ ಪರಿಸರ ನಾಶದಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗುತ್ತ್ತಿದೆ. ಪ್ರಾಣಿ-ಪಕ್ಷಿ ಸಹಿತ ಜೀವ ಸಂಕುಲದ ಸಂರಕ್ಷಣೆಗಾಗಿ ಹಾಗೂ ಈ ತಾಪಮಾನ ತಗ್ಗಿಸಲು ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಬೆಳೆಸಲು ಮುಂದಾಗಬೇಕು ಎಂದು ಜಿಪಂ ಸದಸ್ಯ ಉಮೇಶ ಕೋಳಕೂರ ಸಲಹೆ ನೀಡಿದರು.

Advertisement

ಬಲೇಶ್ವರ ತಾಲೂಕಿನ ನಿಡೋಣಿ ಗ್ರಾಪಂ ಕಚೇರಿ ಆವರಣದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಲಾಮೃತ ಯೋಜನೆ ಮತ್ತು ವಿಶ್ವ ಪರಿಸರ ದಿನಾಚರಣೆ ಸಮಾರಂಭಕ್ಕೆ ಸಸಿ ನೆಟ್ಟು ಚಾಲನೆ ನೀಡಿದ ಅವರು, ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದರಿಂದ ಭವಿಷ್ಯದ ಪೀಳಿಗೆಗೆ ಪರಿಸರ ಕಾಳಜಿ ಮೂಡಲು ಸಾಧ್ಯ. ಮಕ್ಕಳು ನಿತ್ಯವೂ ತಮ್ಮ ಶಾಲಾ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಂಡು, ಪರಿಸರ ದಿನಾಚರಣೆ ನಿತ್ಯನೂತನ ಎಂಬಂತೆ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಕವಿಮಾತು ಹೇಳಿದರು.

ನಿಡೋಣಿ ವಿರಕ್ತ ಮಠದ ಸಿದ್ದಲಿಂಗ ಶ್ರೀಗಳು ಆಶೀರ್ವಚನ ನೀಡಿ, ನಿಸರ್ಗವನ್ನು ಜೋಪಾನವಾಗಿ ಇರಿಸಿಕೊಳ್ಳಲು ಸಸಿ ನೆಟ್ಟವರು ಸ್ವರ್ಗ ಕಾಣುತ್ತೇವೆ. ಆದ್ದರಿಂದ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಸಸಿ-ಮರಗಳ ನಾಶ ಮಹಾಪಾಪ ಎನಿಸಿರುವ ಶಿಶುಹತ್ಯೆಗೆಸಮಾನ. ಹೀಗಾಗಿ ಮರಗಳನ್ನು ಕಡಿಯದೇ ಸಸಿ ನೆಟ್ಟು ಕಾಡು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ಆಮ್ಲಜನಕ ಪಡೆದು, ನೆಮ್ಮದಿಯ ಜೀವನ ನಡೆಸಲು ಸಹಕಾರಿ ಆಗಲಿದೆ ಎಂದರು.

ಪಿಡಿಒ ಬಿ.ಎಚ್. ಧಮುಜಾವರ ಮಾತನಾಡಿ, ವಿಶ್ವ ಪರಿಸರ ದಿನಾಚರಣೆಯ ಕಾರಣಕ್ಕೆ ಜೂನ್‌ ತಿಂಗಳೆಂದರೆ ಅದಕ್ಕೆ ಒಂದು ವಿಶೇಷತೆ ಇದೆ. ನಮ್ಮ ಪರಿಸರದ ಬಗ್ಗೆ ತಿಳಿಯುವ, ಅದರ ಮಹತ್ವ ಅರಿಯುವ ಹಾಗೂ ಇಂದು ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆಯೂ ಆಲೋಚಿಸಬೇಕಾದ ಮಹತ್ತರವಾದ ದಿನ. ಮಾನವ ಪರಿಸರದ ಶಿಶು, ಪರಿಸರವಿಲ್ಲದ ಮಾನವನ ಅಸ್ತಿತ್ವಕ್ಕೆ ಯಾವ ಬೆಲೆಯೂ ಇಲ್ಲ. 1972ರಲ್ಲಿ ವಿಶ್ವಸಂಸ್ಥೆ ಘೋಷಣೆಯ ನಂತರ, 1973 ಜೂನ್‌ 5ರಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಗ್ರಾಪಂ ಅಧ್ಯಕ್ಷೆ ರೂಪಾ ಗವಾರಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಲಕ್ಷಣ ಗುಣದಾಳ, ಗ್ರಾಪಂ ಉಪಾಧ್ಯಕ್ಷ ಶಿವಗೊಂಡ ಅಥಣಿ, ಕೆ.ಎಂ.ಎಫ್‌. ನಿರ್ದೇಶಕ ಶ್ರೀಶೈಲಗೌಡ ಪಾಟೀಲ, ವಲಯ ಅರಣ್ಯ ಅಧಿಕಾರಿ ಪಿ.ವೈ. ಕೊಸಿ, ಬಿ.ಎಸ್‌. ರಾಠೊಡ, ಎಸ್‌.ಆರ್‌. ಕಟ್ಟಿ, ಮಹಾವೀರ ಮಾಯಪ್ಪಗೋಳ, ಸಾಬು ತೇರದಾಳ, ಎಸ್‌.ಎಲ್. ಇಜೇರಿ, ವೈ.ಡಿ. ವಾಲಿಕಾರ, ಜಿ.ಎಂ ಪತ್ತಾರ, ಶಿವಾನಂದ ಹರನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next