Advertisement

ವೃಂದಾವನ ಧ್ವಂಸ-ವಿಪ್ರರಿಂದ ಪ್ರತಿಭಟನೆ

10:18 AM Jul 21, 2019 | Team Udayavani |

ವಿಜಯಪುರ: ಕೊಪ್ಪಳ ಜಿಲ್ಲೆಯ ಆನೆಗೊಂದಿ ಬಳಿ ತುಂಗಭದ್ರಾ ನವ ವೃಂದಾವನ ನಡುಗಡ್ಡೆಯಲ್ಲಿನ ವ್ಯಾಸರಾಜ ತೀರ್ಥರ ಮೂಲ ವೃಂದಾವನ ಧ್ವಂಸ ಕೃತ್ಯದ ದುಷ್ಕರ್ಮಿಗಳನ್ನು ಕೂಡಲೇ ಬಂಸಿ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಬ್ರಾಹ್ಮಣ ಸಂಘಟನೆಗಳ ಒಕ್ಕೂಟಗಳು ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆದವು.

Advertisement

ನಗರದ ಲಕ್ಷ್ಮೀ ದೇವಾಲಯದಿಂದ ಆರಂಭಗೊಂಡ ರ್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸರ್ವಜ್ಞ ವಿದ್ಯಾವಿಹಾರ ಪೀಠದ ಕುಲಪತಿ ಪಂ| ಮಧ್ವಾಚಾರ್ಯ ಮೊಕಾಶಿ, 800 ವರ್ಷಗಳಷ್ಟು ಹಳೆಯದಾದ ವ್ಯಾಸರಾಜ ತೀರ್ಥರ ಪವಿತ್ರ ವೃಂದಾವನದ ಧ್ವಂಸ ಮಾಡಿರುವ ಕ್ರಮ ಖಂಡನಾರ್ಹ. ಸದರಿ ಕೃತ್ಯದಿಂದ ಸಮಸ್ತ ಬ್ರಾಹ್ಮಣ ಸಮಾಜದವರ ಧಾರ್ಮಿಕ ಭಾವನೆಗಳಿಗೆ ಅತ್ಯಂತ ನೋವುಂಟು ಮಾಡಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು, ಮುಂದೆ ಈ ರೀತಿ ಘಟನೆಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವೃಂದಾವನ ಧ್ವಂಸಗೊಳಿಸಿರುವುದು ಒಂದು ಕರಾಳ ದಿನ. ವ್ಯಾಸ ರಾಜತೀರ್ಥರು ಅಗಾಧವಾದ ಪಾಂಡಿತ್ಯವುಳ್ಳವರಾಗಿದ್ದರು. ದಾಸ ಸಾಹಿತ್ಯದ ಕೀರ್ತನೆ ರಚನೆ ಮಾಡಿದವರು, ಅದರಂತೆ ಪುರಂದರದಾಸರು ಹಾಗೂ ಕನಕದಾಸರ ಗುರುಗಳಾಗಿ ಕನ್ನಡ ದಾಸ ಸಾಹಿತ್ಯವನ್ನು ಉಣಬಡಿಸಿದ ಮಹಾನ್‌ ವೈರಾಗ್ಯ ಶಿಖಾಮಣಿ ವ್ಯಾಸರಾಜ ತೀರ್ಥರು. ಇಂತಹ ಪುಣ್ಯ ಪುರುಷನ ವೃಂದಾವನವನ್ನು ನಿಧಿ ಆಸೆಗಾಗಿ ಹಾಳು ಮಾಡಿರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಮಹಾಪುಣ್ಯ ಕ್ಷೇತ್ರವಾದ ನವ ವೃಂದಾವನದಲ್ಲಿ ಒಟ್ಟು ಒಂಭತ್ತು ಮಹಾನ್‌ ಯತಿಗಳ ವೃಂದಾವನಗಳಿವೆ. ಈ ಯತಿವರೇಣ್ಯರ ವೃಂದಾವನಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಮುಂಜಾಗೃತಾ ಕ್ರಮ ಕೈಗೊಂಡು ಸುರಕ್ಷತಾ ಕ್ರಮ ಕೈಗೊಳ್ಳಬೇಕು, ನವ ವೃಂದಾವನದ ಆಸ್ತಿಯ ಮಾಲೀಕತ್ವ ಹೊಂದಿದವರಿಗೆ ಸಮಸ್ತ ವೃಂದಾವನಗಳನ್ನು ರಕ್ಷಣೆ ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲು ಅಗತ್ಯ ನಿರ್ದೇಶನ ನೀಡಬೇಕು ಎಂದು ಬ್ರಾಹ್ಮಣ ಸಮಾಜ ಒತ್ತಾಯಿಸಿತು.

Advertisement

ಪಂ| ಸಂಜೀವಾಚಾರ್ಯ ಮದಭಾವಿ, ಪಂ| ಪ್ರದ್ಯುಮ್ನಾಚಾರ್ಯ ಪೂಜಾರ, ಬ್ರಾಹ್ಮಣ ಸಮಾಜದ ಮುಖಂಡರಾದ ಆನಂದ ಜೋಶಿ, ಪ್ರಕಾಶ ಅಕ್ಕಲಕೋಟ, ಶ್ರೀನಿವಾಸ ಬೇಟಗೇರಿ, ಗೋವಿಂದರಾವ್‌ ದೇಶಪಾಂಡೆ, ಶ್ರೀಹರಿ ಗೊಳಸಂಗಿ, ವಿಜಯ ಜೋಶಿ, ಕೃಷ್ಣಾ ಗುನ್ನಾಳಕರ, ವಿವೇಕ ತಾವರಗೇರಿ, ರವೀಂದ್ರ ಕುಲಕರ್ಣಿ, ಕೆ.ಜಿ. ಕುಲಕರ್ಣಿ, ಅನುಪಮ ಕೊರ್ತಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next