Advertisement

ಬಾಹ್ಯಾಕಾಶದಲ್ಲಿ ಭಾರತದ ಸಾಧನೆ ಅಪಾರ

01:33 PM Feb 15, 2020 | Naveen |

ವಿಜಯಪುರ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನಿಗಳ ಕಾರ್ಯವೈಖರಿ ಹಾಗೂ ವಿಜ್ಞಾನಿಗಳ ಪ್ರತಿಭೆಯಿಂದಾಗಿ ವಿಶ್ವದಲ್ಲಿ ಭಾರತೀಯರು ಖ್ಯಾತಿ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಹೇಳಿದರು.

Advertisement

ಬಾಹ್ಯಾಕಾಶ ಪಿತಾಮಹ ವಿಕ್ರಮ ಸಾರಾಬಾಯಿ ಜನ್ಮ ಶತಮಾನೋತ್ಸವ ನಿಮಿತ್ತ ನಗರದ ಬಿಎಲ್‌ ಡಿಇ ಸಂಸ್ಥೆಯ ಫ.ಗು. ಹಳಕಟ್ಟಿ ಎಂಜಿನಿಯರಿಂಗ್‌ ಕಾಲೇಜ್‌ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಅಭಿಮಾನ ಪಡುವ ರೀತಿಯಲ್ಲಿ ಇಸ್ರೋ ಸಂಸ್ಥೆ ತನ್ನದೆಯಾದ ಮಹತ್ವದ ಕೊಡುಗೆ ನೀಡುತ್ತಿದೆ. ಈ ಸಂಸ್ಥೆಯ ವಿಜ್ಞಾನಿಗಳ ಪ್ರತಿಭೆ ಮತ್ತು ಕಾರ್ಯ ವೈಖರಿಯಿಂದ ನಾವು ವಿಶ್ವ ವಿಖ್ಯಾತಿಯನ್ನು ಪಡೆದಿದ್ದು ಅಂತಹ ವಿಜ್ಞಾನಿಗಳೆ ಇಂದು ಶಾಲಾ ಮಕ್ಕಳಿಗೆ ಪ್ರೋತ್ಸಾಹ ನೀಡಲು ಬಂದಿರುವುದು ನಮ್ಮೆಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಾಧನೆಗಳನ್ನು ಗ್ರಾಮಾಂತರ ಪ್ರದೇಶದ ಮಕ್ಕಳಿಗೂ ತಿಳಿಯಬೇಕು ಮತ್ತು ವಿಜ್ಞಾನಿಗಳ ಪ್ರತಿಭೆ ತಿಳಿಹೇಳಿ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಇಂತಹ ಕಾರ್ಯಕ್ರಮ ರೂಪಿಸಿದೆ. ಮಕ್ಕಳು ಕೂಡಾ ಇಂತಹ ಕಾರ್ಯಕ್ರಮಗಳ ಮೂಲಕ ವಿಜ್ಞಾನಿಯಾಗಬೇಕು, ಭಾರತೀಯರು ತಾಂತ್ರಿಕತೆಯಲ್ಲಿ ತಮ್ಮದೆಯಾದ ಸ್ವಂತಿಕೆ ಹೊಂದಬೇಕು ಮತ್ತು ದೇಶದ ಸಂರಕ್ಷಣೆಗೂ ನೆರವಾಗಬೇಕೆಂಬ ಉದ್ದೇಶದೊಂದಿಗೆ ಇಸ್ರೋವಿಜ್ಞಾನಿಗಳು ನಿರಂತರ ಶ್ರಮ ಮತ್ತು ಪ್ರಯತ್ನ ಪಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಇಸ್ರೋ ಸಂಸ್ಥೆ ವಿಜ್ಞಾನಿಗಳೇ ನಗರಕ್ಕೆ ಬಂದು ಮಕ್ಕಳ ಮನೆ ಬಾಗಿಲಿಗೆ ಬಾಹ್ಯಾಕಾಶ ವಿಜ್ಞಾನದ ಮಾಹಿತಿ ನೀಡುತ್ತಿರುವುದು ಮಕ್ಕಳ ಜೀವನದ ಗುರಿಯನ್ನೆ ಬದಸಬಹುದು. ಈ ನಿಟ್ಟಿನಲ್ಲಿ ವಿಕ್ರಮ ಸಾರಾಬಾಯಿ ಅವರು ಭವಿಷ್ಯದ 100 ವರ್ಷಗಳಲ್ಲಿ ಭಾರತ ಹೇಗಿರಬೇಕು ಎಂದು ಕನಸು ಕಂಡು ಅನೇಕ ವಿಜ್ಞಾನಿಗಳ ಸೃಷ್ಟಿಗೆ ಕಾರಣರಾದರು. ಭಾರತದಲ್ಲಿ ಹೋಮಿ ಜಹಾಂಗಿರ್‌ ಬಾಬಾ, ಸಿ.ವಿ. ರಾಮನ್‌ ಖ್ಯಾತಿ ಪಡೆದಿದ್ದಾರೆ. ಎಪಿಜೆ ಅಬ್ದುಲ್‌ ಕಲಾಂ ಅವರಂತಹ ಖ್ಯಾತ ವಿಜ್ಞಾನಿಗಳನ್ನು ಸಹ ವಿಕ್ರಮ್‌ ಸಾರಾಭಾಯಿ ಗುರುತಿಸಿದ್ದರು. ಭಾರತವು ಈಗ ಸಾಧಿ ಸುತ್ತಿರುವ ಸಾಧನೆಗಳಿಂದಾಗಿ ಈ ಹಿಂದೆ ಘೋಷವಾಕ್ಯವಿದ್ದ ಜೈ ಜವಾನ್‌ ಜೈ ಕಿಸಾನ್‌ಗೆ ಜೈ ವಿಜ್ಞಾನ ಕೂಡಾ ಸೇರ್ಪಡೆಗೊಂಡಿದೆ. ಇಂತಹ ವಿಜ್ಞಾನಿಗಳ ನೆರವಿನಿಂದಾಗಿ ಯೋಧರು ಮತ್ತು ಕೃಷಿಗೂ ತಾಂತ್ರಿಕ ನೆರವು ದೊರೆಯುತ್ತಿದೆ ಎಂದು ಹೇಳಿದರು.

ಇಸ್ರೋ ಸಂಸ್ಥೆ ವಿಜ್ಞಾನಿ ಶ್ರೀಧರ ಮಾತನಾಡಿ, ಇಸ್ರೋಸಂಸ್ಥೆಯ ಬಾಹ್ಯಾಕಾಶ ಸಂಶೋಧನೆ, ಸಾಧನೆ ಬಗ್ಗೆ ಮಕ್ಕಳಿಗೆ ತಿಳಿಹೇಳುವ ಮತ್ತು ವೈಜ್ಞಾನಿಕ ವಿಷಯಗಳಲ್ಲಿ ಇರುವಂತಹ ಸಮಸ್ಯೆಗಳ ಪರಿಹಾರಕ್ಕೆ ಇಂತಹ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿದ್ದು ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದರು.

Advertisement

ಎಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಅತುಲ್‌ ಆಯಾರೆ ಮಾತನಾಡಿ, 20 ವಿಜ್ಞಾನಿಗಳು ಇಲ್ಲಿಗೆ ಆಗಮಿಸಿ ತಮ್ಮ ಕಾಲೇಜಿನ ಸಹಕಾರದೊಂದಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಿದಕ್ಕೆ ಅಭಿನಂದನೆ ಸಲ್ಲಿಸಿದರು. ಇಸ್ರೋದಿಂದ ಸಾವಿರಕ್ಕೂ ಹೆಚ್ಚು ಉಪಗ್ರಹಗಳು ಬಾಹ್ಯಾಕಾಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇಂತಹ ಸಂಸ್ಥೆಯ ಉಪ ಕೇಂದ್ರವನ್ನು ಈ ಸಂಸ್ಥೆಯ ಆವರಣದಲ್ಲಿ ಸ್ಥಾಪನೆಗೆ ಮನವಿ ಮಾಡಿದ ಅವರು ಎಲ್ಲ ರೀತಿಯ ಮೂಲಸೌಕರ್ಯ ಸಹ ಒದಗಿಸುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಮಾತನಾಡಿ, ಇಸ್ರೋಸಂಸ್ಥೆ ದೇಶದ ಹೆಮ್ಮೆಯ ಸಂಶೋಧನಾ ಕೇಂದ್ರವಾಗಿದೆ. ಈ ಸಂಸ್ಥೆಯಿಂದ ನಡೆಯುತ್ತಿರುವ ಸಂಶೋಧನೆಗಳ ಮೇಲೆ ಪ್ರಧಾನಮಂತ್ರಿಗಳು ಕೂಡಾ ನಿಗಾ ಇಡುವ ಜೊತೆಗೆ ಆಸಕ್ತಿಯಿಂದ ವೀಕ್ಷಣೆ ಮಾಡುತ್ತಿರುವುದು ಹೆಮ್ಮೆ ವಿಷಯವಾಗಿದೆ. ವಿಕ್ರಮ ಸಾರಾಬಾಯಿ ಜನ್ಮ ಶತಮಾನೋತ್ಸವ ಅಂಗವಾಗಿ ವಿವಿಧ ಜಿಲ್ಲೆ ಮತ್ತು ಹಳ್ಳಿಗಳಲ್ಲಿ ವಿಶೇಷವಾಗಿ ವಿಜಯಪುರದಲ್ಲಿ ಹಮ್ಮಿಕೊಂಡಿರುವುದು ಸಂತಸದ ವಿಷಯವಾಗಿದೆ. ಪ್ರತಿಭೆ ಯಾವುದೇ ಜಾತಿ ಅಂತಸ್ತಿಗೆ ಸೀಮಿತವಾಗಿಲ್ಲ, ಎಪಿಜೆ ಅಬೂªಲ್‌ ಕಲಾಂ ಅವರಂತಹ ಖ್ಯಾತ ವಿಜ್ಞಾನಿಗಳು ದೇಶದ ಗೌರವ ಕಾಪಾಡಿದ ಉದಾಹರಣೆಗಳಿವೆ. ಭವಿಷ್ಯದ ದೇಶದ ಸಂರಕ್ಷಣೆಯ ಹಿತದೃಷ್ಟಿಯಿಂದ ಇಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಸಂಶೋಧನಾ ಕ್ಷೇತ್ರದಲ್ಲಿ ವಿಶ್ವ ಖ್ಯಾತಿ ಪಡೆದಿರುವ ಶಕ್ತಿಯುತ ರಾಷ್ಟ್ರಗಳಾದ ಅಮೆರಿಕ ಮತ್ತು ರಷ್ಯಾಗಳೊಂದಿಗೆ ಪ್ರತಿಸ್ಪರ್ಧಿಯಾಗಿ ಭಾರತದಲ್ಲಿಯೂ ಕೂಡಾ ಇಸ್ರೋವಿಜ್ಞಾನಿಗಳು ಅಪಾರ ಕೊಡುಗೆ ನೀಡುತ್ತಿದ್ದು, ದೇಶದ ಸಂರಕ್ಷಣೆಗೂ ನೆರವಾಗಿದೆ. ಇಂತಹ ವಿಜ್ಞಾನಿಗಳು ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಮತ್ತು ಪ್ರೋತ್ಸಾಹ ನೀಡಲು ಬಂದಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿಗಳಾದ ಆರ್‌. ಆರ್‌. ನವಲಗುಂದ, ಆಲೋಕ ಶ್ರೀವಾಸ್ತವ, ವಿಲಾಸ ರಾಠೊಡ, ಜಿಪಂ ಸಿಇಒ ಗೋವಿಂದ ರೆಡ್ಡಿ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಜೆ.ಎಸ್‌. ಪೂಜಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಎಂ.ಎಸ್‌. ಬ್ಯಾಹಟ್ಟಿ, ಕಾಂತಾ ನಾಯಿಕ ಇದ್ದರು. ಇದಕ್ಕೂ ಮುನ್ನ ಬೆಳಿಗ್ಗೆ ಇಸ್ರೋ ಸಂಸ್ಥೆಯ ವಸ್ತು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ| ಅತುಲ್‌ ಆಯಾರೆ, ವಿಜ್ಞಾನಿ ಶ್ರೀಧರ ಉದ್ಘಾಟಿಸಿದರು. ಪ್ರಾತ್ಯಕ್ಷಿಕೆಯಲ್ಲಿ ಚಂದ್ರಯಾನ, ಮಂಗಲಯಾನ, ಭಾರತೀಯ ನೌಕಾಯಾನ, ಬಾಹ್ಯಾಕಾಶ ವ್ಯವಸ್ಥೆ, ಭಾರತೀಯ ಬಾಹ್ಯಾಕಾಶ ಮತ್ತು ಭಾರತೀಯ ಉಪಗ್ರಹ ಸಂವಹನ ಹಾಗೂ ಶ್ರೀಹರಿಕೋಟಾ, ಸತೀಶ ಧವನ ಬಾಹ್ಯಾಕಾಶ ಕೇಂದ್ರಗಳ ಪ್ರಾತ್ಯಕ್ಷಿಕೆಗಳು ವಿದ್ಯಾರ್ಥಿಗಳನ್ನು ಆಕರ್ಷಿಸಿದವು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸ್ಪರ್ಧೆಯಲ್ಲಿ ಭಾಗಿಯಾಗಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next