Advertisement

ಪ್ರವಾಸೋದ್ಯಮ ಡಿ.ಡಿ. ಕಚೇರಿ ಮುಂದುವರಿಕೆ

12:59 PM Dec 09, 2019 | Naveen |

„ಜಿ.ಎಸ್‌. ಕಮತರ
ವಿಜಯಪುರ:
ಐತಿಹಾಸಿಕ ಸ್ಮಾರಕಗಳ ದೊಡ್ಡ ಗಣಿಯನ್ನೇ ಹೊಂದಿರುವ ಪಾರಂಪರಿಕ ಪ್ರವಾಸೋದ್ಯಮಕ್ಕೆ ವಿಫ‌ುಲ ಅವಕಾಶಗಳಿರುವ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಕಚೇರಿ ಯನ್ನು ಕೆಳದರ್ಜೆಗೆ ಇಳಿಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದೆ. ಬಸವನಾಡಿನ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಕಚೇರಿಯನ್ನು ಸಹಾಯಕ ನಿರ್ದೇಶಕ ಕಚೇರಿಯಾಗಿ ಕೆಳದರ್ಜೆಗೆ ಇಳಿಸಿ ಹೊರಡಿಸಿದ್ದ ಆದೇಶ ಹಿಂಪಡೆದು ತಿದ್ದುಪಡಿ ಆದೇಶ ಹೊರಡಿಸಿದೆ.

Advertisement

ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಇರುವ ವಿಜಯಪುರ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸರ್ಕಾರ ಅಭಿವೃದ್ಧಿ ಮಾಡಿಲ್ಲ. ಪ್ರವಾಸೋದ್ಯಮ ಬಲಪಡಿಸುವ ಕುರಿತು ರೂಪಿಸಿರುವ ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಅಭಿವೃದ್ಧಿಗೆ ಬಂದಿರುವ ಹತ್ತಾರು ಕೋಟಿ ರೂ. ಬಳಕೆ ಮಾಡಲು ಇಲಾಖೆಗೆ ಅಧಿಕಾರಿಯೇ ಇರಲಿಲ್ಲ. ಇಂಥ ಸ್ಥಿತಿಯಲ್ಲಿ ಸರ್ಕಾರ ಮತ್ತೂಂದು ಆಘಾತ ನೀಡಲು ಮುಂದಾಗಿತ್ತು.

ಪ್ರವಾಸೋದ್ಯಮ ಇಲಾಖೆ ವಿಜಯಪುರ ಜಿಲ್ಲೆಯ ಉಪ ನಿರ್ದೇಶಕರ ಹುದ್ದೆಯನ್ನು ಸಹಾಯಕ ನಿರ್ದೇಶಕರ ಕೆಳದರ್ಜೆಗೆ ಕುಗ್ಗಿಸಿ ಅಕ್ಟೋಬರ್‌ 15ರಂದು ಆದೇಶ ಹೊರಡಿಸಿತ್ತು. ಈ ಆದೇಶ ಹೊರ ಬಿದ್ದು ತಿಂಗಳಾದರೂ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯೂ ಈ ಕುರಿತು ಚಕಾರ ಎತ್ತಿರಲಿಲ್ಲ. ಅಲ್ಲದೇ ಜಿಲ್ಲೆಯ ಜನಪ್ರತಿನಿಧಿಗಳಿಗೆ ಮಾಹಿತಿಯನ್ನೂ ನೀಡದೇ ಪ್ರವಾಸೋದ್ಯಮ ಕಚೇರಿಯನ್ನು ಕೆಳದರ್ಜೆಗೆ ಇಳಿಸಿ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದರು.

ಸರ್ಕಾರ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಇಂಥ ನಿರ್ಧಾರದಿಂದ ಪ್ರಾದೇಶಿಕ ಅಸಮಾನತೆಗೆ ಸದ್ದಿಲ್ಲದೇ ಕಿಚ್ಚಿಗೆ ತುಪ್ಪ ಸುರಿಯುವ ಕೆಲಸ ನಡೆಯುತ್ತಿತ್ತು. ಈ ಕುರಿತು ಉದಯವಾಣಿ ಪತ್ರಿಕೆ ಪ್ರವಾಸೋದ್ಯಮ ಕಥೆ-ವ್ಯಥೆ ಅಭಿಯಾನದ ಮುಂದುವರಿದ ಭಾಗದಲ್ಲಿ ನ. 30ರಂದು ವಿಶೇಷ ವರದಿ ಪ್ರಕಟಿಸಿತ್ತು. ಪ್ರಾದೇಶಿಕ ಅಸಮಾನತೆ ಕಿಚ್ಚಿಗೆ ತುಪ್ಪ ಸುರಿದ ಸರ್ಕಾರ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು.

ನ. 30ರಂದು ಉದಯವಾಣಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಎಚ್ಚೆತ್ತಿರುವ ಸರ್ಕಾರ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಹುದ್ದೆಯನ್ನು ಸಹಾಯಕ ನಿರ್ದೇಶಕರ ಹಂತದ ಕೆಳದರ್ಜೆಗೆ ಇಳಿಸಿದ್ದ ಆದೇಶಕ್ಕೆ ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ. ಡಿ. 3ರಂದು ತಿದ್ದುಪಡಿ ಆದೇಶ ಹೊರಡಿಸಿರುವ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು, ಈಗಾಗಲೇ ಉಪ ನಿರ್ದೇಶಕ ಹುದ್ದೆಯಲ್ಲಿರುವ ಸಹಾಯಕ ನಿರ್ದೇಶಕ ದರ್ಜೆಯ ಅಧಿಕಾರಿ ಮಲ್ಲಿಕಾರ್ಜುನ ಭಜಂತ್ರಿ ಅವರನ್ನು ಉಪ ನಿರ್ದೇಶಕರ ಹುದ್ದೆಯಲ್ಲೇ ಮುಂದುವರಿಸಲು ತಿದ್ದುಪಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಜಿಲ್ಲೆಗೆ ಸಿಕ್ಕಿದ್ದ ಉನ್ನತ ದರ್ಜೆಯ ಅಧಿಕಾರದ ಕಚೇರಿಯನ್ನು ಕೆಳದರ್ಜೆಗೆ ಇಳಿಸುವ ಹುನ್ನಾರಕ್ಕೆ ಕಡಿವಾಣ ಬಿದ್ದಿದೆ.

Advertisement

ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಕಳೆದ 16 ವರ್ಷದಿಂದ ಇಲಾಖೆಯ ಮೂಲ ಅಧಿಕಾರಿಯೇ ಇಲ್ಲದ ಕುರಿತು ಆಗಸ್ಟ್‌ 15ರಂದು ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಸರ್ಕಾರ ಸರ್ಕಾರ ಧಾರವಾಡ ಕಚೇರಿಯಲ್ಲಿದ್ದ ಸಹಾಯಕ ನಿರ್ದೇಶಕ ದರ್ಜೆ ಅಧಿಕಾರಿ ಮಲ್ಲಿಕಾರ್ಜುನ ಭಜಂತ್ರಿ ಅವರನ್ನು ಉಪ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಿದ್ದು, ಅಕ್ಟೋಬರ್‌ 28ರಂದು ಅವರು ಅಧಿಕಾರ ಸ್ವೀಕರಿಸಿದ್ದರು. ಸರ್ಕಾರ ಇಲಾಖೆಗೆ ಅಧಿಕಾರಿಯನ್ನು ನೇಮಿಸಿದ ಖುಷಿಯಲ್ಲಿದ್ದ ಜಿಲ್ಲೆಯ ಜನರಿಗೆ ಇದರ ಬೆನ್ನಲ್ಲೇ ಕಚೇರಿಯನ್ನು ಕೆಳದರ್ಜೆಗೆ ಇಳಿಸುವ ಹುನ್ನಾರ ನಡೆಸಿತ್ತು. ಹೀಗಾಗಿ ಉದಯವಾಣಿ ಪತ್ರಿಕೆ ಈ ಕುರಿತು ನ. 30 ರಂದು ವಿಶೇಷ ವರದಿ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿತ್ತು.

ಪರಿಣಾಮ ಉಪ ನಿರ್ದೇಶಕರ ದರ್ಜೆಯಿಂದ ಸಹಾಯಕ ನಿರ್ದೇಶಕರ ಹುದ್ದೆಗೆ ಕುಸಿದಿದ್ದ ಪ್ರವಾಸೋದ್ಯಮ ಕಚೇರಿಯ ಹುದ್ದೆ ಮತ್ತೆ ಉಪ ನಿರ್ದೇಶಕರ ಕಚೇರಿ ದರ್ಜೆಯಲ್ಲೇ ಮುಂದುವರಿಯುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next