Advertisement

ಅಮೃತ ಯೋಜನೆಯಡಿ ಕೊಡಿ ನೀರು

02:57 PM Jul 05, 2019 | Naveen |

ವಿಜಯಪುರ: ವಿಜಯಪುರ ಮಹಾನಗರ ಜನರಿಗೆ ನೀರು ಕೊಡಲು ಅಮೃತ ಯೋಜನೆ¿ಲ್ಲಿ ಬಾಕಿ ಇರುವ 11 ವಲಯಗಳಲ್ಲಿ ಆಗಸ್ಟ್‌ದಿಂದ 24/7 ನೀರು ಪೂರೈಕೆಯ ಪ್ರಾಯೋಗಿಕ ಪರೀಕ್ಷೆ ನಡೆಸಬೇಕು. ಪ್ರಾಯೋಗಿ ಪರೀಕ್ಷೆಯಲ್ಲಿ ಕಂಡು ಬರುವ ಲೋಪಗಳನ್ನೆಲ್ಲ ತ್ವರಿತವಾಗಿ ಮುಗಿಸಿಕೊಂಡು ಮುಂಬರುವ ಜನೇವರಿ ತಿಂಗಳಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಸಬೇಕು ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

Advertisement

ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ನಡೆದ ವಿಜಯಪುರ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಜಿಲ್ಲೆಯಲ್ಲಿ ನೀರಿನ ಕೊರತೆ ಇಲ್ಲ. ಆದರೆ ಯೋಜನೆಯ ವ್ಯವಸ್ಥಿತ ನಿರ್ವಹಣೆಯ ಕೊರತೆಯಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ನೀರಿನ ಕೊರತೆ ನೀಗಿಸಿ ಜನರಿಗೆ ಕುಡಿಯುವ ನೀರು ಪೂರೈಸುವಂತೆ ಸೂಚನೆ ನೀಡಿದರು.

ಈಗಾಗಲೇ 24/7 ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿರುವ ಪ್ರದೇಶಗಳಲ್ಲಿ ಬಳಕೆ ಮಾಡಿದ ನೀರಿನ ಪ್ರಮಾಣಕ್ಕಿಂತ ಹೆಚ್ಚಿನ ಬಿಲ್ ಪಡೆಯಲಾಗುತ್ತಿದೆ ಎಂಬ ದೂರುಗಳಿವೆ. ಹೀಗಾಗಿ ಅವುಗಳನ್ನು ತಡೆ ಹಿಡಿದು ನಿಗದಿತ ಮೊತ್ತ 175 ರೂ. ಮಾತ್ರ ಕರ ವಸೂಲಿ ಮಾಡಬೇಕು. ಬರುವ ಆಗಸ್ಟ್‌ದಿಂದ ಬಳಕೆ ಮಾಡಿದ ಪ್ರಮಾಣಕ್ಕೆ ಬಿಲ್ ಒದಗಿಸಬೇಕು. ಎರಡು ಹಂತದಲ್ಲಿ ಜಾರಿಗೊಂಡಿರುವ ಅಮೃತ ಯೋಜನೆಯಡಿ 24/7 ನೀರನ್ನು ಬರುವ ಜನೇವರಿ ತಿಂಗಳಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಸಬೇಕು. ಈ ವಿಷಯದಲ್ಲಿ ಅಧಿಕಾರಿಗಳು ಅತ್ಯಂತ ಕಟ್ಟುನಿಟ್ಟಾಗಿ ಕಾರ್ಯ ಪ್ರವೃತ್ತರಾಗಬೇಕು ಎಂದು ಸೂಚಿಸಿದರು.

ಪಾಲಿಕೆಯಲ್ಲಿನ ಆದಾಯವನ್ನು ನಗರದ ಅಭಿವೃದ್ಧಿ ಕಾಮಗಾರಿಗಳಿಗೆ, ಘನತ್ಯಾಜ್ಯ ನಿರ್ವಹಣೆಯಂತಹ ಕಾರ್ಯಗಳಿಗೆ ಬಳಸಬೇಕು. 24/7 ಕಾಮಗಾರಿ ಪೂರ್ಣಗೊಳ್ಳುವ ತನಕ ಜನಸಂಖ್ಯೆ ಹೆಚ್ಚಿರುವ ವಾರ್ಡ್‌ಗಳಲ್ಲಿ 24/7 ನೀರು ಹಾಗೂ ಜಾಮೀಯಾ ಮಸೀದಿ ವಾರ್ಡ್‌ ದಲ್ಲಿನ ಓವರ್‌ ಹೆಡ್‌ ಟ್ಯಾಂಕ್‌ ಮೂಲಕ ನೀರು ಪೂರೈಕೆ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ನಗರದ 63 ಸಾವಿರ ಮನೆಗಳಿಗೆ 24/7 ನೀರು ಸರಬರಾಜುಗೆ ಕ್ರಿಯಾ ಯೋಜನೆ ಸಿದ್ಧವಾಗಿದ್ದು, ಈ ಯೋಜನೆ ಪೂರ್ಣಗೊಂಡ ನಂತರ ಇದಕ್ಕೆ ಸಂಬಂಧಿಸಿದಂತೆ ವಾರ್ಡ್‌ವಾರು ಇಂಜಿನಿಯರ್‌, ಪಾಲಿಕೆ ಸದಸ್ಯರು, ಸಂಬಂಧಪಟ್ಟ ಅಧಿಕಾರಿಗಳ ಹೆಸರು ದೂರವಾಣಿ ಸಂಖ್ಯೆ ಒಳಗೊಂಡ ವಿವರವಾದ ಮಾಹಿತಿವುಳ್ಳ ಭಿತ್ತಿಪತ್ರವನ್ನು ಮುದ್ರಿಸಿ ಪ್ರತಿ ಮನೆ-ಮನೆಗೆ ಅಂಟಿಸುವಂತೆ ತಿಳಿಸಿದ ಅವರು, ಇದರಿಂದ ಸಾರ್ವಜನಿಕರಿಗೆ ನೀರಿನ ಸಮಸ್ಯೆ, ದೂರು ಸಲ್ಲಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ, ಶಿಕ್ಷಣ ಇಲಾಖೆ ಸಿ.ಎಂ. ಸಂಸದೀಯ ಕಾರ್ಯದರ್ಶಿ ಶಾಸಕ ದೇವಾನಂದ ಚವ್ಹಾಣ, ಮೇಲ್ಮನೆ ಸದಸ್ಯ ಅರುಣ ಶಹಾಪುರ, ಮಹಾನಗರ ಪಾಲಿಕೆ ಮಹಾಪೌರ ಶ್ರೀದೇವಿ ಲೋಗಾಂವಿ, ಉಪಮೇಯರ್‌ ಗೋಪಾಲ ಘಟಕಾಂಬಳೆ, ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಿದ್ದನಕೊಳ್ಳ, ಮಹಾನಗರ ಪಾಲಿಕೆ ಆಯುಕ್ತ ಡಾ| ಔದ್ರಾಮ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವೀರೇಶಕುಮಾರ ಸೇರಿದಂತೆ ಪಾಲಿಕೆ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next