Advertisement

ಬಸವನಾಡಿಗೆ ಶ್ರೀಗಳ ನಂಟು

03:18 PM Dec 30, 2019 | Naveen |

ವಿಜಯಪುರ: ಉಡುಪಿ ಅಷ್ಟ ಮಠಗಳಲ್ಲಿ ಪ್ರಧಾನ ಮಠ ಎನಿಸಿರುವ ಪೇಜಾವರ ಮಠದ ಪೀಠಾಧೀಶ ವಿಶ್ವೇಶತೀರ್ಥರಿಗೂ ಬಸವನಾಡಿಗೂ ಅರ್ಧ ಶತಮಾನಕ್ಕಿಂತ ಹೆಚ್ಚಿನ ನಂಟಿದೆ. ಧರ್ಮ ಪ್ರಚಾರ ಮಾತ್ರವಲ್ಲ ಸಾಮಾಜಿಕ ಕಾಳಜಿಯೊಂದಿಗೆ ಹಲವು ರೀತಿಯ ಸಮಾಜಮುಖೀ ಕಾರ್ಯಗಳ ಮೂಲಕ ಪೇಜಾವರ ಯತಿಗಳು ಈ ನೆಲದೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದರು.

Advertisement

ಅದು ಅರವತ್ತರ ದಶಕ. ಪೇಜಾವರ ಶ್ರೀಗಳು ಅಖೀಲ ಭಾರತ ಮಾಧ್ವ ಮಹಾ ಮಂಡಳ ಅಧ್ಯಕ್ಷರಾಗಿದ್ದು, ವಿಜಯಪುರ ಜಿಲ್ಲೆಯ ವಿ.ಬಿ. ನಾಯಕ ಉಪಾಧ್ಯಕ್ಷರಾಗಿದ್ದರು. ಶ್ರೀಗಳು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹೈದ್ರಾಬಾದ್‌ನಲ್ಲಿ ಮಾಧ್ವ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಶ್ರೀಗಳನ್ನು ವಿ.ಬಿ. ನಾಯಕ ವಿಜಯಪುರ ಜಿಲ್ಲೆಗೆ ಬರುವಂತೆ ಆಹ್ವಾನ ನೀಡಿದ್ದರು. ಸ್ಥಳೀಯ ಮಾಧ್ವ ಸಮಾಜದ ಪ್ರಮುಖರ ಕೋರಿಕೆ ಮೇರೆಗೆ 1964ರಲ್ಲಿ ಮೊದಲ ಬಾರಿಗೆ ಗುಮ್ಮಟನಗರಿ ಪುರ ಪ್ರವೇಶ ಮಾಡಿದ್ದರು. ಅಲ್ಲಿಂದ ಬಸವನಾಡಿನೊಂದಿಗೆ ಆರಂಭಗೊಂಡ ಶ್ರೀಗಳ ನಂಟು ಈವರೆಗೂ ಮುಂದುವರಿದಿತ್ತು.

ವಿಪ್ರರ ಮಕ್ಕಳಿಗೆ ಹಾಸ್ಟೆಲ್‌: 1964ರಲ್ಲಿ ನಗರಕ್ಕೆ ಭೇಟಿ ನೀಡಿದ ವೇಳೆ ವಿಪ್ರ ಸಮುದಾಯದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದೇ ಶ್ರೀಮಂತರ ಮನೆಗಳಲ್ಲಿ ವಾಸವಿದ್ದು ಅಕ್ಷರ ಪಡೆಯುವ ಪರಿಸ್ಥಿತಿ ಮನಗಂಡರು. ಅಂದೇ ನಿರ್ಣಯ ಪ್ರಕಟಿಸಿದ ಶ್ರೀಗಳು ನಗರದಲ್ಲಿ ವಿಪ್ರರ ಮಕ್ಕಳಿಗೆ ಅಖೀಲ ಭಾರತ ಮಾಧ್ವ ಮಹಾ ಮಂಡಳದಿಂದ ವಿದ್ಯಾರ್ಥಿ ನಿಲಯ ಆರಂಭಿಸುವ ಸಂಕಲ್ಪ ಮಾಡಿದರು.

ನಂತರ ಒಂದು ದಶಕದಲ್ಲಿ ನಗರದಲ್ಲಿ ಮಾಧ್ವ ಸಮಾಜದ 50 ಮಕ್ಕಳಿಗೆ ವಿದ್ಯಾರ್ಥಿ ನಿಲಯ ಆರಂಭಿಸಿದರು. ಅಲ್ಲಿಂದ ಆರಂಭಗೊಂಡಿರುವ ಈ ಹಾಸ್ಟೆಲ್‌ ಈಗಲೂ ಮುಂದುವರಿದಿದೆ. ಭೀಕರ ಬರದಲ್ಲಿ ಗಂಜಿಕೇಂದ್ರ: 1971ರಲ್ಲಿ ಭೀಕರ ಬರ ಆವರಿಸಿದಾಗ ಕೂಡಲೇ ವಿಜಯಪುರ ಜಿಲ್ಲೆಗೆ ಆಗಮಿಸಿದ ಪೇಜಾವರ ಮಠಾಧೀಶರು ಸಿಂದಗಿ ಪಟ್ಟಣದಲ್ಲಿ ಬಾಧಿತರಿಗೆ ಗಂಜಿ ಕೇಂದ್ರ ತೆರೆದು ಮಾನವೀಯತೆ ಮೆರೆದರು. ಹಲವು ತಿಂಗಳ ಕಾಲ ಈ ಪರಿಹಾರ ಕೇಂದ್ರದಲ್ಲಿ ಜನರಿಗೆ ಆಶ್ರಯ ಕೊಟ್ಟಿದ್ದರು.

ಸೂರು ನಿರ್ಮಿಸಿದ್ದರು: 1994ರಲ್ಲಿ ಮಹಾರಾಷ್ಟ್ರ ಲಾತೂರ ಬಳಿ ಸಂಭವಿಸಿದ ಭೀಕರ ಭೂಕಂಪ ದುರಂತದ ಕಾವು ವಿಜಯಪುರ ಜಿಲ್ಲೆಗೂ ಬಾಧಿಸಿತ್ತು. ಜಿಲ್ಲೆಯ ಇಂಡಿ ತಾಲೂಕಿನ ಧೂಳಖೇಡ ಸುತ್ತಲೂ ಭೂಕಂಪ ಹಲವರನ್ನು ಬೀದಿಗೆ ನಿಲ್ಲಿಸಿತ್ತು. ಇದನ್ನರಿತ ಪೇಜಾವರ ಶ್ರೀಗಳು ಗೋವಿಂದಪುರ ಗ್ರಾಮದಲ್ಲಿ ಶ್ರೀಮಠದಿಂದ ಸುಮಾರು 50 ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ಶ್ರೀಮಠದ ಸಾಮಾಜಿಕ ಬದ್ಧತೆ ಸಾಬೀತುಪಡಿಸಿದ್ದರು. ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಪಂಚನದಿಗಳು ಆಗಾಗ ಸೃಷ್ಟಿಸುತ್ತಿದ್ದ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿದ ಉದಾಹರಣೆಗಳೂ ಇವೆ.

Advertisement

ಶ್ರೀಕೃಷ್ಣ ಮಠ ನಿರ್ಮಾಣ : 1994ರಲ್ಲಿ ವಿಶ್ವೇಶ ತೀರ್ಥರು ಪೇಜಾವರ ಮಠಕ್ಕೆ ಪೀಠಾಧೀಶರಾಗಿ 60 ವಸಂತ ವರ್ಷ ಪೂರ್ಣಗೊಂಡ ಸ್ಮರಣೆಗೆ ನಗರದಲ್ಲಿ ಪೀಠಾರೋಹಣದ 60ನೇ ವರ್ಷಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಗ ವಿಜಯಪುರ ನಗರ ಶಾಸಕರಾಗಿದ್ದ ಬಸನಗೌಡ ಪಾಟೀಲರು ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಾರ್ಯಕ್ರಮವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಇದಲ್ಲದೇ ಈ ಕಾರ್ಯಕ್ರಮಕ್ಕೆ ಭಕ್ತರು, ಸಾರ್ವಜನಿಕರು ನೀಡಿದ್ದ ದೇಣಿಗೆ ಹಣದಲ್ಲಿ ಸುಮಾರು 5 ಲಕ್ಷ ರೂ. ಉಳಿದಿತ್ತು. ಈ ಹಣವನ್ನು ಸ್ವಾಗತ ಸಮಿತಿ ಶ್ರೀಗಳಿಗೆ ಸಮರ್ಪಿಸಲು ಮುಂದಾದಾಗ ಅದನ್ನು ಪಡೆಯದ ಶ್ರೀಗಳು ಠೇವಣಿ ಇರಿಸಿ ನಗರದಲ್ಲಿ ಕೃಷ್ಣ ಮಠ ನಿರ್ಮಾಣಕ್ಕೆ ನೀಡುವುದಾಗಿ ಘೋಷಿಸಿದ್ದರು.

ನಂತರ ಶಾಸಕ ಯತ್ನಾಳ ಅವರು ಹಾಸ್ಟೆಲ್‌ ನಿರ್ಮಾಣಕ್ಕೆ 10 ಲಕ್ಷ ರೂ. ನೀಡಲು ಮುಂದಾದಾಗ ಭಕ್ತರ ಕೋರಿಕೆ ಮೇರೆಗೆ ಸದರಿ ಹಣವನ್ನು ಕೃಷ್ಣ ಮಠ ನಿರ್ಮಾಣಕ್ಕೆ ಬಳಸಲು ಮುಂದಾದರು. ಆಗ ಶ್ರೀಗಳು ತಮ್ಮ ಬಳಿ ಅದಾಗಲೇ ಇದ್ದ 5 ಲಕ್ಷ ರೂ. ಹಾಗೂ ಭಕ್ತರಿಂದ ದೇಣಿಗೆ ಸಂಗ್ರಹಿಸಿ ಸುಮಾರು 25 ಲಕ್ಷ ರೂ. ಹಣ ನೀಡುವ ಮೂಲಕ ಗುಮ್ಮಟ ನಗರದಲ್ಲೂ 2007ರಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಕಾರಣವಾಯಿತು.

ನಗರದಲ್ಲಿ 75ನೇ ಚಾತುರ್ಮಾಸ: ಶ್ರೀಗಳು ತಮ್ಮ 75ನೇ ವರ್ಷದ ಚಾತುರ್ಮಾಸವನ್ನು ವಿಜಯಪುರ ನಗರದಲ್ಲೇ ಆಚರಿಸಿಕೊಳ್ಳುವ ಮೂಲಕ ಈ ನೆಲದೊಂದಿಗೆ ತಾವು ಹೊಂದಿದ್ದ ಅವಿನಾಭಾವ
ಬಾಂಧವ್ಯವನ್ನು ಸ್ಮರಣೀಯವಾಗಿಸಿದ್ದರು. ಚಾತುರ್ಮಾಸ ಸಂದರ್ಭದಲ್ಲಿ 48 ದಿನಗಳ ಕಾಲ ನಗರದಲ್ಲಿ ಧರ್ಮ ಪ್ರಸಾರ, ಸಾಮಾಜಿಕ ಕಾರ್ಯಗಳನ್ನು ಮಾಡಿದ್ದರು.

ಕಳೆದ ವರ್ಷ ಜಿಲ್ಲೆಯ ಕಗ್ಗೊàಡ ಗ್ರಾಮದಲ್ಲಿ ಜರುಗಿದ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ
ಪೇಜಾವರ ಮಠಾಧೀಶ ವಿಶ್ವೇಶ್ವರ ಶ್ರೀಗಳು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯ ಜನರ ವಿಶ್ವಾಸ ಗಳಿಸುವ ಹಾಗೂ ಇದೇ ಸಂಕಲ್ಪದೊಂದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಘೋಷಣೆ ಮಾಡಿದ್ದರು. ಬಹುತೇಕ ಇದೇ ಭೇಟಿ ಶ್ರೀಗಳು ಜಿಲ್ಲೆಗೆ ನೀಡಿದ ಕೊನೆಯ ಭೇಟಿಯಾಗಿತ್ತು.

ಗಣ್ಯರೊಂದಿಗೆ ಅವಿನಾಭಾವ ನಂಟು: ಜಿಲ್ಲೆಯಲ್ಲಿ ಕೇವಲ ವಿಪ್ರ ಸಮುದಾಯದೊಂದಿಗೆ ಮಾತ್ರವಲ್ಲ ಇತರೆ ಸಮುದಾಯದ ಜನರೊಂದಿಗೆ ಪೇಜಾವರ ಮಠಾಧೀಶರು ಆಪ್ತ ಬಾಂಧವ್ಯ ಇರಿಸಿಕೊಂಡಿದ್ದರು. ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದರು. ಈ ಕಾರಣಕ್ಕಾಗಿಯೇ ನಂದಿ ಸಕ್ಕರೆ ಕಾರ್ಖಾನೆ 25ನೇ ವರ್ಷದ ಸಮಾರಂಭದಲ್ಲಿ ಪಾಲ್ಗೊಳ್ಳುವ ವಿಷಯದಲ್ಲಿ ದಿನಾಂಕ ಹೊಂದಾಣಿಕೆ ಆಗದಿದ್ದಾಗ ಸಂಘಟಕರು ಗೊಂದಲಕ್ಕೀಡಾಗಿದ್ದರು.

ಆಗ ಪೇಜಾವರ ಶ್ರೀಗಳೇ ಸಿದ್ದೇಶ್ವರ ಶ್ರೀಗಳೊಂದಿಗೆ ಮಾತನಾಡಿದಾಗ, ನಾನು ನನ್ನ ಎಲ್ಲ ಕಾರ್ಯಕ್ರಮಗಳನ್ನು ಬದಿಗಿರಿಸಿ, ನೀವು ಪಾಲ್ಗೊಳ್ಳುವ ದಿನದಂದೇ ಪಾಲ್ಗೊಳ್ಳುವುದಾಗಿ ಹೇಳಿ ಸ್ನೇಹಕ್ಕೆ ಸಾಕ್ಷಿಯಾಗಿದ್ದರು. ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕ, ಹಾಲಿ ಸಂಸದ ರಮೇಶ ಜಿಗಜಿಣಗಿ, ನಗರ ಶಾಸಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ, ಉದ್ಯಮಿ ಬಾಬುಗೌಡ ಬಿರಾದಾರ ಸೇರಿದಂತೆ ಹಲವು ಗಣ್ಯರೊಂದಿಗೆ ವಿಶೇಷ ಆಪ್ತತೆ ಹೊಂದಿದ್ದರು.

ಅಷ್ಟರ ಮಟ್ಟಿಗೆ ಅರ್ಧ ಶತಮಾನಕ್ಕಿಂತ ಹಿಂದಿನಿಂದಲೂ ಆರಂಭಗೊಂಡಿದ್ದ ಪೇಜಾವರ ಮಠಾಧೀಶ ವಿಶ್ವೇಶ್ವರ ಶ್ರೀಗಳ ನಂಟು, ಕಳೆದ ವರ್ಷದವರೆಗೂ ನಿರಂತರವಾಗಿತ್ತು. ಶ್ರೀಗಳು
ಕೇವಲ ಧರ್ಮ ಕಾರ್ಯಕ್ರಮಗಳಲ್ಲದೇ ಸಮಾಜಮುಖೀ ಕೆಲಸಗಳೊಂದಿಗೂ ಸರ್ವ ಸಮುದಾಯದ ಜನರ ಪ್ರೀತಿ ಗಳಿಸಿ, ಮನೆ-ಮನಗಳಲ್ಲಿ ಚಿರಸ್ಥಾಯಿಯಾಗಿದ್ದರು.

„ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next