Advertisement

ವಿಜಯಪುರ: ಸೈನಿಕ ಶಾಲೆ ಹಳೆ ವಿದ್ಯಾರ್ಥಿ ದಾನಮ್ಮವರ್ ಈಗ ವಿಜಯಪುರ ಡಿಸಿ

06:35 PM Apr 22, 2022 | Vishnudas Patil |

ವಿಜಯಪುರ: ವಿಜಯಪುರ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿ ವಿಜಯಮಹಾಂತೇಶ ದಾನಮ್ಮವರ್ ತಾವು ಶಿಕ್ಷಣ ಪಡೆದ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ವರ್ಗವಾಗಿದ್ದಾರೆ. ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಶುಕ್ರವಾರ ನಿರ್ಗಮಿತ ಜಿಲ್ಲಾಧಿಕಾರಿ ಸುನಿಲಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು.

Advertisement

ನಿರ್ಗಮಿತ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಹುಗೂಚ್ಛ ನೀಡುವ ಮೂಲಕ ವಿಜಯಮಹಾಂತೇಶ ಅವರಿಗೆ ಅಧಿಕಾರ ಹಸ್ತಾಂತರಿಸಿ, ಬರಮಾಡಿಕೊಂಡರು.

ವಿಜಯ ಮಹಾಂತೇಶ ದಾನಮ್ಮನವರ್ ಅವರು ತಮ್ಮ ಪತ್ನಿ ಶ್ವೇತಾ ಮತ್ತು ಮಕ್ಕಳಾದ ತನ್ವಿ ಹಾಗೂ ವಿಹಾನ್ ಅವರೊಂದಿಗೆ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಅವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದ್ದು ವಿಶೇಷವಾಗಿತ್ತು. ಇತ್ತೀಚೆಗಷ್ಟೇ ನಡೆದ ಕಾರು ಪಲ್ಟಿ ಅವಘಡದಲ್ಲಿ ಪಾರಾಗಿ ಬಂದ ವಿಜಯ ಮಹಾಂತೇಶ ಅವರು, ಚಿಕಿತ್ಸೆ ಪಡೆದುಕೊಂಡು, ವಿಜಯಪುರಕ್ಕೆ ಆಗಮಿಸಿ ಜಿಲ್ಲಾಧಿಕಾರಿಯವರ ಆಸನದಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಅವರ ಪತ್ನಿ ಮತ್ತು ಮಕ್ಕಳ ಮೊಗದಲ್ಲಿ ಸಂಭ್ರಮದ ಕ್ಷಣಗಳನ್ನು ಅನುಭವಿಸಿದರು.

ವಿಜಯಪುರ ಸೈನಿಕ ಶಾಲೆ ವಿದ್ಯಾರ್ಥಿ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದಾನಮ್ಮನವರ, 1989 ರಲ್ಲಿ ವಿಜಯಪುರ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಸೈನಿಕ ಶಾಲೆಯ ಶಿಕ್ಷಣ ಪಡೆದ ಹಳೆಯ ವಿದ್ಯಾರ್ಥಿಯೊಬ್ಬರು ಕಳೆದ ಒಂದು ದಶಕದಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಇದು ಎರಡನೇ ಬಾರಿ. 10 ವರ್ಷಗಳ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಶಿವಯೋಗಿ ಕಳಸದ ಅವರು ಕೂಡ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದರು.

Advertisement

ಬೀದರ್ ಪಶು, ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಬಳಿಕ ಕೇಂದ್ರ ಸರ್ಕಾರದ ಮಾಹಿತಿ-ಪ್ರಸಾರ ಇಲಾಖೆಯಲ್ಲಿ 10 ತಿಂಗಳ ಸೇವೆ ಸಲ್ಲಿಸಿದ್ದರು. ಬಳಿಕ 2004 ರಲ್ಲಿ ಕರ್ನಾಟಕ ಆಡಳಿತ ಸೇವೆಗೆ ಆಯ್ಕೆಯಾಗಿ, 2013ನೇ ಬ್ಯಾಚಿನ ಐಎಎಸ್ ಅಧಿಕಾರಿಯಾದವರು.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ವಿಜಯಮಹಾಂತೇಶ, ದಾವಣಗೆರೆ ಜಿ.ಪಂ. ಸಿಇಒ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಕಾರವಾರ, ಬಾಗಲಕೋಟ, ಬಳ್ಳಾರಿ ಜಿಲ್ಲೆಗಳಲ್ಲಿ ಅಪರ ಜಿಲ್ಲಾಧಿಕಾರಿಯಾಗಿ, ಬೆಳಗಾವಿ ಜಿಲ್ಲೆಯಲ್ಲಿ ಸಹಾಯಕ ಆಯುಕ್ತರಾಗಿ, ಹೆಸ್ಕಾಂ ಜನರಲ್ ಮ್ಯಾನೇಜರ್ ಆಗಿ, ರಾಜ್ಯ ಶಿಷ್ಟಾಚಾರ ಇಲಾಖೆಯ ಉಪ ಕಾರ್ಯದರ್ಶಿ ಸೇರಿದಂತೆ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಉತ್ತಮ ಸೇವೆಗೆ ಯತ್ನ
ಅಧಿಕಾರ ಸ್ವೀಕಾರದ ಬಳಿಕ ಜಿಲ್ಲೆಯ ಪತ್ರಕರ್ತರೊಂದಿಗೆ ತುರ್ತು ಪತ್ರಿಕಾಗೋಷ್ಠಿ ನಡೆಸಿದ ನೂತನ ಜಿಲ್ಲಾಧಿಕಾರಿ ವಿಜಯಮಹಾಂತೇಶ, ವಿಜಯಪುರ ನಾನು ಶಿಕ್ಷಣ ಪಡೆದ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದು ಸಂತಸವಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಬೇಕೆಂಬ ನನ್ನ ಕನಸು ವಿಜಯಪುರ ಜಿಲ್ಲೆಯಿಂದಲೇ ಆರಂಭಗೊಂಡಿರುವುದು ನನ್ನ ಸಂತಸ ತಂದಿದೆ ಎಂದರು.

ಜಿಲ್ಲೆಯ ಶಿಕ್ಷಣ ಹಾಗೂ ಆರೋಗ್ಯ ಸೇವೆಗೆ ಆದ್ಯತೆ ನೀಡುತ್ತೇನೆ. ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸುನಿಲ್ ಕುಮಾರ ಸೇರಿದಂತೆ ಜಿಲ್ಲೆಯಲ್ಲಿ ಈ ಹಿಂದೆ ಅಧಿಕಾರ ನಡೆಸಿದ ಜಿಲ್ಲಾಧಿಕಾರಿಗಳು ಅತ್ಯುತ್ತಮ ಆಡಳಿತ ನೀಡಿದ್ದು, ನಾನು ಇತರೆ ಜಿಲ್ಲೆಗಳಲ್ಲಿ ಇದ್ದಾಗ ಈ ಜಿಲ್ಲೆಯ ಆಡಳಿತದ ಸಾಧನೆಗಳು ಅನುಕರಣೀಯವಾಗಿದ್ದವು. ಹಿಂದಿನ ಅಧಿಕಾರಿಗಳು ಜಿಲ್ಲೆಯಲ್ಲಿ ಮೂಡಿಸಿರುವ ಅಭಿವೃದ್ಧಿ ಪರ ಉತ್ತಮ ಕಾಯಕ್ರಮಗಳನ್ನು ನಾನು ಮುಂದುವರೆಸುವ ಜೊತೆಗೆ ಜನರ ಭಾವನೆಗಳಿಗೆ ಸ್ಪಂದಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next