Advertisement

ನೀರಾವರಿ ಇಲಾಖೆಯಲ್ಲಿ ಇತಿಹಾಸ ಸೃಷ್ಟಿ

12:51 PM May 09, 2019 | Naveen |

ವಿಜಯಪುರ: ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ 3,600 ಕೋಟಿ ರೂ. ವೆಚ್ಚದಲ್ಲಿ 6.5 ಟಿಎಂಸಿ ಬಳಸಿ 1.33 ಲಕ್ಷ ಎಕರೆ ಪ್ರದೇಶಕ್ಕೆ ನೀರೊದಗಿಸಲು ಅಣಿಯಾಗಿದೆ. ನೀರಾವರಿ ಇಲಾಖೆ ಇತಿಹಾಸದಲ್ಲಿಯೇ ಹೊಸ ಅಧ್ಯಾಯ ಸೃಷ್ಟಿಸಲಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದರು.

Advertisement

ಬಬಲೇಶ್ವರ ತಾಲೂಕಿನ ಶೇಗುಣಶಿ ಗ್ರಾಮದಲ್ಲಿ ಮಳಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನ ನೂತನ ಕಟ್ಟಡ ಉದ್ಘಾಟಿಸಿ, ಕಳಸಾರೋಹಣ ನೇರವೇರಿಸಿ ಮಾತನಾಡಿದ ಅವರು, ಶಾಶ್ವತ ಬರ ‌ಪೀಡಿತ ವಿಜಯಪುರ ಜಿಲ್ಲೆಯನ್ನು ನನಗೆ ನೀರಾವರಿ ಇಲಾಖೆ ಸಚಿವನಾಗಿ ದೊರೆತ ಅವಕಾಶ ಸದ್ಭಳಕೆ ಮಾಡಿಕೊಂಡಿದ್ದೇನೆ. ವಿವಿಧ ಯೋಜನೆಗಳಿಂದ ಜಿಲ್ಲೆಯ 16 ಲಕ್ಷ ಎಕರೆ ಪ್ರದೇಶ ನೀರಾವರಿಗೆ ಒಳಪಡಿಸಿದ್ದಲ್ಲದೇ, 212 ಕೆರೆಗಳನ್ನು ತುಂಬಿಸುವ ನನ್ನ ಕನಸು ಸಾರ್ಥಕಗೊಳಿಸಿದ್ದೇನೆ ಎಂದರು.

ಜಿಲ್ಲೆಯ ಅತ್ಯಂತ ಎತ್ತರದ ಪ್ರದೇಶವಾಗಿದ್ದ ಕಾರಣಕ್ಕೆ ತಿಕೋಟಾ ಹೋಬಳಿ ಶಾಶ್ವತವಾಗಿ ನೀರಾವರಿ ಯೋಜನೆಗಳಿಂದ ವಂಚಿತವಾಗಿತ್ತು. ತುಬಚಿ-ಬಬಲೇಶ್ವರ ಯೋಜನೆ ರೂಪಿಸಿ, 3600 ಕೋಟಿ ರೂ.ದಷ್ಟು ಬೃಹತ್‌ ಅನುದಾನ ಒದಗಿಸಿ 6.5 ಟಿಎಂಸಿ ನೀರು ಹಂಚಿಕೆ ಮಾಡಿದ್ದು, 20 ವರ್ಷಗಳಲ್ಲಿ ಆಗಬಹುದಾಗಿದ್ದ ಕಾರ್ಯವನ್ನು 3 ವರ್ಷಗಳಲ್ಲಿ ಪೂರ್ಣಗೊಳಿಸಿದ್ದು, ಮುಂದಿನ 3 ತಿಂಗಳಿನಲ್ಲಿ ರೈತರ ಜಮೀನಿಗೆ ನೀರು ಹರಿಯಲಿದೆ. ಇದು ರಾಜ್ಯದ, ರಾಷ್ಟ್ರದ ನೀರಾವರಿ ಇಲಾಖೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ ಎಂದರು.

ನೀರಾವರಿ ಮಾಡಿದರೆ, ಅಭಿವೃದ್ಧಿ ಕೆಲಸ ಮಾಡಿದರೇ ಯಾರಾದರೂ ಓಟು ಹಾಕುತ್ತಾರೆಯೇ ಎಂದು ಹಲವರು ಪ್ರಶ್ನಿಸುತ್ತಿದ್ದರು. ಆದರೆ ನನ್ನ ಬಬಲೇಶ್ವರ ಕ್ಷೇತ್ರದ ಜನ ನಾವು ಅಭಿವೃದ್ಧಿ ಪರವಾಗಿದ್ದೇವೆ ಎಂಬುದನ್ನು ಭಾರಿ ಬಹುಮತ ನೀಡುವ ಮೂಲಕ ಬೆಂಬಲಿಸಿದ್ದಾರೆ ಎಂದರು.

ಬಬಲೇಶ್ವರ ಕ್ಷೇತ್ರದಲ್ಲಿ ನಾನು ಮಾಡಿದ ನೀರಾವರಿ ಯೋಜನೆಗಳಿಂದ ಪ್ರತಿ 4-5 ಹಳ್ಳಿಗೆ 5 ಸಾವಿರ ಟನ್‌ ಕಬ್ಬು ನುರಿಸುವ ಸಕ್ಕರೆ ಕಾರ್ಖಾನೆ ಆರಂಭಿಸುವಷ್ಟು ಕಬ್ಬು ಬೆಳೆಯುತ್ತಿದೆ. ಕೈಗಾರಿಕೆಗಳಿಗೆ ವಿಫುಲ ಅವಕಾಶ ಸೃಷ್ಟಿಯಾಗಿದೆ. ಬಬಲೇಶ್ವರ-ಗಲಗಲಿ ರಸ್ತೆಯಿಂದ ವಿಜಯಪುರ-ಹುಬ್ಬಳ್ಳಿ ಎನ್‌.ಎಚ್-218 ರವರೆಗೆ, ಶೇಗುಣಶಿ- ಮಮದಾಪುರ-ದುಡಿಹಾಳ ಮಾರ್ಗವಾಗಿ ರಸ್ತೆಯನ್ನು ಹೆದ್ದಾರಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ.

Advertisement

ಶೇಗುಣಶಿಯಿಂದ ದುಡಿಹಾಳವರೆಗೆ 16 ಕಿ.ಮೀ. ರಸ್ತೆಯನ್ನು 17.30 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ. ದುಡಿಹಾಳದಿಂದ 218 ರಾಷ್ಟ್ರೀಯ ಹೆದ್ದಾರಿಯವರೆಗೆ 5 ಕಿ.ಮೀ. ರಸ್ತೆಯನ್ನು 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದ್ದು, ಒಟ್ಟು 21 ಕಿ.ಮೀ. ಈ ರಸ್ತೆಯನ್ನು ವಿಜಯಪುರ-ಗಲಗಲಿ ರಸ್ತೆಯಂತೆ ಹೆದ್ದಾರಿ ಮಾದರಿಯಲ್ಲಿ ನಿರ್ಮಿಸಲಾಗುವದು ಎಂದರು.

ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಶ್ರೀಗಳು, ಸಂಗಾಪುರ ಕಮರಿಮಠ ಸಿದ್ದಲಿಂಗ ಸ್ವಾಮಿಗಳು, ಖಾದಿ ಗ್ರಾಮೋದ್ಯೋಗ ಅಧ್ಯಕ್ಷ ಬಾಪುಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಡಾ| ಕೆ.ಎಚ್. ಮುಂಬಾರೆಡ್ಡಿ, ಕೃಷ್ಣಪ್ಪ ದೇಸಾಯಿ ಅರ್ಜುಣಗಿ, ಕೆಎಂಎಫ್‌ ನಿರ್ದೇಶಕ ಶ್ರೀಶೈಲಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಸಂಗವ್ವ ಹೊಸಮನಿ, ಎಪಿಎಂಸಿ ನಿರ್ದೇಶಕಿ ಸಾರವ್ವ ಪೂಜಾರಿ, ಭೀಮಪ್ಪ ಶಿವಗೊಂಡ, ಭೀಮಣ್ಣ ಬಡಿಗೇರ, ಮಲ್ಲಪ್ಪ ಪೂಜಾರಿ, ಮುತ್ತಪ್ಪ ವಾಲೀಕಾರ, ಸಾಬು ಪೂಜಾರಿ, ಕಾಶೆಪ್ಪ ಪೂಜಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next