Advertisement

ಒಂದಾಗಿದ್ದವು ಶರಣರ ನಡೆ-ನುಡಿ

12:01 PM Feb 02, 2020 | Naveen |

ವಿಜಯಪುರ: ಕಾಯಕ ತತ್ವಕ್ಕೆ ಅದ್ಯತೆ ನೀಡಿ ಬದ್ಧತೆ ಬದುಕು ನಿರ್ವಹಿಸಿದ 12ನೇ ಶತಮಾನದ ಶರಣರ ನಡೆ-ನುಡಿ ಒಂದಾಗಿದ್ದವು. ಈ ಕಾರಣಕ್ಕೆ 12ನೇ ಶತಮಾನ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಶತಮಾನ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅಭಿಪ್ರಾಯಪಟ್ಟರು.

Advertisement

ಶನಿವಾರ ನಗರದ ಕಂದಗಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭವಿಷ್ಯದ ಪೀಳಿಗೆಯನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಮಡಿವಾಳ ಮಾಚಿದೇವರು ಹಾಗೂ ಇವರೊಂದಿಗಿದ್ದ ಶರಣರ ವಚನ ಸಂದೇಶಗಳು ಮಾರ್ಗದರ್ಶಿ ಹಾಗೂ ಮಾದರಿಯಾಗಿವೆ. ಶರಣರ ಸಂದೇಶಗಳನ್ನು ಸಮಾಜಕ್ಕೆ ಬಿತ್ತಲೆಂದೇ ಮಹಾತ್ಮರ ಜಯಂತಿ ಆಚರಿಸಲಾಗುತ್ತದೆ ಎಂದು ವಿವರಿಸಿದರು.

ಜಾತಿ, ಮತ, ಪಂಥ, ಮೇಲು-ಕೀಳು ಎನ್ನದೆ ಕಾಯಕ ಮಾಡಿದವರು. ಇಂತಹ ಶರಣರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕು. ಎನಗಿಂತ ಕಿರಿಯರಿಲ್ಲ ಶಿವ ಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ಮೂಲಕ ಬಸವಾದಿ ಶರಣರು ವಿಶ್ವಕ್ಕೆ ಹೊಸ ಸಂದೇಶ ನೀಡಿದರು. ಮಡಿವಾಳ ಮಾಚಿದೇವ ಶರಣರು ಕಾಯಕದಲ್ಲಿ ಕೈಲಾಸ ಕಂಡವರು, ಅದರೆ ಪ್ರಸ್ತುತ ಸಂದರ್ಭದಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಪರಿಶ್ರಮ ಇಲ್ಲದ ಜೀವನ ರೂಪಿಸಿಕೊಳ್ಳುವ ಮಾರ್ಗದರ್ಶನ ನೀಡುತ್ತಿದ್ದು, ಆಲಸಿತನ ರೂಢಿಸಿಕೊಳ್ಳುವ ಮೈಗಳ್ಳರನ್ನಾಗಿ ಮಾಡಬಾರದು. ಬದಲಾಗಿ ಬೆವರಿನ ಪರಿಶ್ರಮ ಕಾಯಕ ಮಾಡುವ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ಮಡಿವಾಳ ಮಾಚಿದೇವರ ಕುರಿತು ವಿಶೇಷ ಉಪನ್ಯಾಸ ನೀಡಿದ ಉದಯವಾಣಿ ಹಿರಿಯ ವರದಿಗಾರ ಜಿ.ಎಸ್‌. ಕಮತರ, ಜಾತಿ ವ್ಯವಸ್ಥೆ, ಅಂಧಾನುಕರಣೆ, ಅಸಮಾನತೆ ವಿರುದ್ಧ ಹೋರಾಟ ಮಾಡಿ ಕಲ್ಯಾಣ ಕ್ರಾಂತಿಗೆ ಕಾರಣರಾದ ಬಹುತೇಕ ಶರಣರಿಗೆ ಜನ್ಮ ನೀಡಿರುವ ನಾಡು ಅದು ಅಖಂಡ ವಿಜಯಪುರ ಜಿಲ್ಲೆ. ಜಾತಿ ವ್ಯವಸ್ಥೆ ನಿರ್ಮೂಲನೆಗಾಗಿ ಶೂದ್ರ ಸಮುದಾದಯ ಹರಳಯ್ಯ ಹಾಗೂ ಮೇಲ್ವರ್ಗದ ಮಧುವಯ್ಯ ಶರಣರ ಮಕ್ಕಳ ಅಂತರ್ಜಾತಿ ಮಾಡಿಸಿದ್ದೇ ಕಲ್ಯಾಣ ಕ್ರಾಂತಿಗೆ ಕಾರಣವಾಗಿ, ಬಿಜ್ಜಳ ದೊರೆ ಈ ಎರಡೂ ಕುಟುಂಬಗಳನ್ನು ಆನೆಗಳ ಎಳೆಹೂಟೆ ಶಿಕ್ಷೆ ನೀಡಿ ಕೊಲ್ಲಿಸಲಾಯಿತು ಎಂದರು.

Advertisement

ಇದಲ್ಲದೇ ಶಾಂತಿ ಪ್ರತಿಪಾದಕರಾಗಿದ್ದ ಶರಣರನ್ನು ಬಿಜ್ಜಳನ ಸೈನ್ಯ ಹತ್ಯೆಗೆ ಮುಂದಾಯಿತು. ಅದರೆ ವಚನಗಳ ಸಂರಕ್ಷಣೆಗಾಗಿ ಶರಣರು ವಚನಗಳ ಕಟ್ಟುಗಳನ್ನು ಹೊತ್ತು ಓಡಿ ಹೋಗುವಾಗ ಬಿಜ್ಜಳನ ಸೈನ್ಯದ ವಿರುದ್ಧ ಮೊದಲು ಖಡ್ಗ ಹಿರಿದು, ಶರಣರಲ್ಲಿದ್ದ ಕೆಚ್ಚೆದೆಯನ್ನು ತೋರಿದ ಮೊದಲ ಶರಣ ಮಡಿವಾಳ ಮಾಚಿದೇವರು ಎಂದು ಬಣ್ಣಿಸಿದರು.

ಒಂದೊಮ್ಮೆ ಮಡಿವಾಳ ಮಾಚಿದೇವರು ಖಡ್ಗ ಹಿಡಿದು ಹೋರಾಡದಿದಲ್ಲಿ ಚನ್ನಬಸವಣ್ಣನ ನೇತೃತ್ವದಲ್ಲಿ ಶರಣರು ವಚನಗಳ ಕಟ್ಟುಗಳನ್ನು ಹೊತ್ತು ಉಳುವಿ ಮುಟ್ಟುತ್ತಿರಲಿಲ್ಲ, ಮರಿಶಂಕರ ದ್ಯಾವರು, ಡಾ| ಫ.ಗು. ಹಳಕಟ್ಟಿ ಅವರಂಥ ಪುಣ್ಯಪುರುಷರು ವಚನ ಸಂಗ್ರಹಿಸಿ ನಮಗೆ ಉಪಕಾರದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ವಿಶ್ಲೇಷಿಸಿದರು.ಧೀರ ಮಾತ್ರವಲ್ಲ ಅತ್ಯಂತ ಜ್ಞಾನಿಯೂ ಆಗಿದ್ದ ಮಡಿವಾಳ ಮಾಚಿದೇವರು ಅನುಭವ ಮಂಟಪದ ಕಠೊರ ವಿಮರ್ಶಕರೂ ಆಗಿದ್ದರು.

ಬೇಡುವವರಿಲ್ಲದೇ ಬಡವನಾದೆ ಎಂದ ಬಸವಣ್ಣನವರ ನಡೆಯನ್ನು, ಬಿದ್ದುಹೋದ ಲಿಂಗವನ್ನು ಮರಳಿ ಧರಿಸಲು ನಿರಾಕರಿಸಿದ ನುಲಿಯ ಚಂದಯ್ಯ ಶರಣರ ಮರಳಿ ಲಿಂಗ ಧರಣೆ ಮಾಡಿಕೊಳ್ಳುವಂತೆ ಮಾಡಿದ ಪ್ರಸಂಗಳನ್ನು ವಿವರಿಸಿದರು.

ಮಾಚಿದೇವರು ಕಲಿದೇವರದೇವ ಅಂಕಿತದಲ್ಲಿ ಬರೆದ 364 ವಚನಗಳು ಮಾತ್ರ ಲಭ್ಯವಾಗಿದ್ದು ಅದರಲ್ಲಿ ಸುಮಾರು 70 ವಚನಗಳಲ್ಲಿ ಬಸವಣ್ಣನವರನ್ನು ನೆನೆದಿದ್ದಾರೆ ಎಂದು ವಿವರಿಸಿದರು. ಹಿರಿಯ ಸಾಹಿತಿ ಬಿ.ಸಿ. ನಾಗಠಾಣ ಮಾತನಾಡಿ, ವೀರಭದ್ರನ ಅವತಾರಿ ಎಂದೇ ಬಣ್ಣಿಸಲಾಗುವ ಮಡಿವಾಳ ಮಾಚಿದೇವರನ್ನು ಪುರವಂತರು ಎಂದು ಕರೆಯುವ ವೀರಗಾಸೆ ಪ್ರದರ್ಶನ ಸಂದರ್ಭದಲ್ಲಿ ಮಾಚಿದೇವರ ವಚನಗಳನ್ನು ಹೇಳುವುದೇ ಸಾಕ್ಷಿ ಎಂದರು.

ವೂಡಾ ಅಧ್ಯಕ್ಷ ಶ್ರೀಹರಿ ಗೋಳಸಂಗಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ದೈಹಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಶಟ್ಟಿ, ಮಡಿವಾಳ ಸಮಾಜದ ಬಾಬು ಬಳ್ಳಾರಿ, ಪರಶುರಾಮ ಆಗಸರ, ಪ್ರಭು ಮಡಿವಾಳರ, ಸಾಯಬಣ್ಣ ಮಡಿವಾಳರ, ಸುಮಂಗಲಾ ಕೋಟಿ, ಎಸ್‌.ವಿ. ಕನ್ನೂಳ್ಳಿ, ರಂಗಪ್ಪ ಬಾಗಲಕೋಟ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಸ್ವಾಗತಿಸಿದರು. ಎಚ್‌.ಎ. ಮಮದಾಪುರ ನಿರೂಪಿಸಿದರು. ವರ್ಷಿಣಿ, ಮಾನಸಾ, ಸಾನ್ವಿಕಾ ಹಾಗೂ ನಿವೇದಿತಾ ಇವರು ವಚನಗಳಿಗೆ ಭರತನಾಟ್ಯ ಪ್ರದರ್ಶಿಸಿದರು. ದೇವರಹಿಪ್ಪರಗಿಯ ಸಿದ್ದು ಮೇಲಿನಮನಿ ವಚನ ಸಂಗೀತ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next