Advertisement

ಮೋಸದ ಮಾತಿಗೆ ಮರುಳಾಗಬೇಡಿ: ದೇವೇಗೌಡ

01:13 PM Apr 20, 2019 | Team Udayavani |

ವಿಜಯಪುರ: ಪ್ರಧಾನಿ ಮೋದಿ ಸರ್ವಾಧಿ ಕಾರಿ ಮನೋಭಾವದ ವ್ಯಕ್ತಿ. ಇವರ ವರ್ತನೆಯಿಂದ ಬಿಜೆಪಿ ಕಟ್ಟುವಲ್ಲಿ ಶ್ರಮಿಸಿದ ಅಡ್ವಾಣಿ ಅವರೇ ಅತ್ಯಂತ ಅವಮಾನಕರ ರೀತಿಯಲ್ಲಿ ರಾಜಕೀಯ ನಿವೃತ್ತಿ ಪಡೆಯುವಂತಾಯಿತು.

Advertisement

ಹೀಗಾಗಿ ಇವರ ಮೋಸದ ಮಾತಿಗೆ ಯಾರೂ ಮರುಳಾಗಬಾರದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ಶುಕ್ರವಾರ ರಾತ್ರಿ ನಗರದ ದರಬಾರ್‌ ಹೈಸ್ಕೂಲ್‌ ಮೈದಾನದಲ್ಲಿ ಜೆಡಿಎಸ್‌ ಅಭ್ಯರ್ಥಿ ಡಾ| ಸುನೀತಾ ಚವ್ಹಾಣ ಪರ ಪ್ರಚಾರಕ್ಕಾಗಿ ಹಮ್ಮಿಕೊಂಡಿದ್ದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಪಕ್ಷಗಳ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಅಡ್ವಾಣಿ ಇಲ್ಲದಿದ್ದರೆ ಮೋದಿ ಅವರು ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ. ಗೋದ್ರಾ ಘಟನೆಗೆ ಸಂಬಂ ಧಿಸಿದಂತೆ ರಾಜಧರ್ಮ ಪಾಲನೆ ಮಾಡಿಲ್ಲ ಎಂದು ಮೋದಿ ಅವರ ಕಾರ್ಯವೈಖರಿಯನ್ನು ಅಟಲ್‌ಬಿಹಾರಿ ವಾಜಪೇಯಿ ಅವರೇ ಖಂಡಿಸಿದ್ದರು. ಆದರೂ ಸಹ ಮೋದಿ ಅವರ ಬೆನ್ನಿಗೆ ನಿಂತು ಅವರನ್ನು ಮುಂದೆ ಕರೆದುಕೊಂಡು ಹೊಗಿದ್ದು ಅಡ್ವಾಣಿ. ಆದರೆ ಈಗ ಅದೇ ಮೋದಿ ಅಡ್ವಾಣಿ ಅವರನ್ನು ಮೂಲೆಗೆ ಕಳುಹಿಸಿದ್ದಾರೆ ಎಂದರು.

ಯುವಕರು, ಬುದ್ಧಿವಂತರು, ಮೋದಿ ಮಾತುಗಳಿಗೆ ತಕ್ಷಣ ಮೋಸ
ಹೋಗುತ್ತಾರೆ. ಹೀಗಾಗಿ ಇನ್ನಾದರೂ ಮೋದಿ ಬಣ್ಣದ ಮಾತುಗಳಿಂದ ಮರುಳಾಗಬೇಡಿ. ಸರ್ವಾಧಿ ಕಾರಿ ಮನೋಭಾವದ ನಡೆಯಲ್ಲಿ ಏಕ ಚಕ್ರಾಧಿಪತಿಯಂತೆ ವರ್ತಿಸುತ್ತಿರುವ ಮೋದಿ ನಡೆ ದೇಶದ ಹಿತದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಎಂದು
ಎಚ್ಚರಿಸಿದರು.

Advertisement

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಕಾಂಗ್ರೆಸ್‌ ವರಿಷ್ಠರು ಪ್ರಸ್ತಾಪ ಮಾಡಿದರು. ಆದರೆ ನಾನು ರಾಜ್ಯದಲ್ಲಿ ಸರ್ಕಾರ ರಚನೆ ಸಂದರ್ಭದಲ್ಲಿ ನಮ್ಮ ಪಕ್ಷದಿಂದ 37 ಜನ ಶಾಸಕರು ಆಯ್ಕೆಯಾಗಿದ್ದೇವೆ, ನೀವು ಹೆಚ್ಚಿನ ಸ್ಥಾನ ಗೆದ್ದೀದ್ದಿರಿ. ಕುಮಾರಸ್ವಾಮಿ ಅವರಿಗೆ ಸಿಎಂ ಸ್ಥಾನ ಬೇಡ ಎಂದೆ. ಆದರೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂ ಧಿ ಹಾಗೂ ಸೋನಿಯಾ ಗಾಂಧಿ  ಅವರು ದೂರದೃಷ್ಟಿಯಿಂದ ಕುಮಾರಸ್ವಾಮಿ ಅವರೇ ಸಿಎಂ ಆಗಲಿ ಎಂದು ಆಶಯ ಹೊಂದಿದ್ದರಿಂದ ನಾವು ಆದನ್ನು ಒಪ್ಪಿದ್ದೇವೆ.

ಜಾತ್ಯತೀತ ಮನೋಭಾವದ ಎಲ್ಲ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದರು. ಒಂದು ರಾಜಕೀಯ ವ್ಯವಸ್ಥೆ ಕರ್ನಾಟಕದಲ್ಲಿಯೇ ಮತ್ತೂಂದು ಸಾರಿ ಆರಂಭಗೊಂಡಿತು. ಸಿದ್ದರಾಮಯ್ಯ ಸಿಎಂ ಆಗಿ ಮಾಡಿರುವ ಎಲ್ಲ ಜನಪರ ಕಾರ್ಯಕ್ರಮಗಳನ್ನು ಸಮ್ಮಿಶ್ರ ಸರ್ಕಾರ ಮುಂದುವರಿಸಲಿದೆ ಎಂದರು.

ನಾನು ಕೂಡ ಹಳೆಯ ಕಾಂಗ್ರೆಸ್ಸಿಗ ಎಂದು ತಮ್ಮ ರಾಜಕೀಯ ಹಿನ್ನೆಲೆಯನ್ನು ಸ್ಮರಿಸಿದ ದೇವೇಗೌಡರು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್‌ ಪಕ್ಷವನ್ನೇ ಕಾಂಗ್ರೆಸ್‌ ಮುಕ್ತ ಭಾರತ ಮಾಡುತ್ತೇನೆ ಎಂಬ ಮೋದಿ ದುರಂಹಕಾರದ ಮಾತನಾಡುತ್ತಿದ್ದಾರೆ. ದೇಶದ ಜನರು ಇದೀಗ ಮೋದಿ ದುರಂಹಕಾರದ ಮಾತಿಗೆ ಉತ್ತರ ಕೊಡುವ ಕಾಲ ಬಂದಿದೆ ಎಂದರು.

ಮೈತ್ರಿ ಅಭ್ಯರ್ಥಿ ಡಾ| ಸುನೀತಾ ಚವ್ಹಾಣ ಧೈರ್ಯವಂತ ಹೆಣ್ಣು ಮಗಳು. ಈ ಬಾರಿ ಮಹಿಳೆಗೆ ಆಶೀರ್ವದಿಸಿ, ಅವರ ಗೆಲುವಿನ ಜವಾಬ್ದಾರಿ ನಿಮ್ಮದು ಎಂದು ದೇವೇಗೌಡ ಮತಯಾಚಿಸಿದರು.
ಗೃಹ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಕೇಂದ್ರ ಸಚಿವರಾಗಿ ರಮೇಶ ಜಿಗಜಿಣಗಿ ಅವರು ಬಹಳಷ್ಟು ಕೆಲಸ ಮಾಡಬಹುದಾಗಿತ್ತು. ನಾನೇನಾದರೂ ಕೇಂದ್ರ ಸಚಿವನಾಗಿದ್ದರೆ ಕುಡಿಯುವ ನೀರಿಗೆ ಸಂಬಂ ಧಿಸಿದಂತೆ 2 ಸಾವಿರ ಕೋಟಿ ರೂ.ಗಳ ಪೈಲಟ್‌ ಪ್ರಾಜೆಕ್ಟ್ನ್ನಾದರೂ ವಿಜಯಪುರಕ್ಕೆ ತರುತ್ತಿದೆ. ಕೈಯಲ್ಲಿ ಅ ಧಿಕಾರ ಇದ್ದರೂ ಜಿಗಜಿಣಗಿ ಅವರು ಏನೂ ಮಾಡಲಿಲ್ಲ.

ಈಗ ಅವರು ಭೂತನಾಳ ಕೆರೆ ಸೌಂದರ್ಯ ಸವಿಯುತ್ತ ಮೊಮ್ಮಕ್ಕಳೊಡನೆ ಆಟವಾಡುತ್ತಾ ಕುಳಿತುಕೊಳ್ಳಲಿ ಎಂದರು. ಆರೋಗ್ಯ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಆಲಮಟ್ಟಿಗೆ 80 ಟಿಎಂಸಿ ನೀರು ಬರಬೇಕಾದರೆ ಅದರ ಶ್ರೇಯಸ್ಸು ಎಚ್‌.ಡಿ. ದೇವೇಗೌಡರಿಗೆ ಸಲ್ಲಬೇಕು. ದೇವೇಗೌಡರು ವಿಜಯಪುರ ಜಿಲ್ಲೆಗೆ ನೀಡಿದ ಕೊಡುಗೆಯನ್ನು ಯಾರೂ ಮರೆಯಬಾರದು ಎಂದರು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ಶಿಕ್ಷಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ದೇವಾನಂದ ಚವ್ಹಾಣ, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಮೇಲ್ಮನೆ ಸದಸ್ಯರಾದ ಸುನೀಲಗೌಡ ಪಾಟೀಲ, ಪ್ರಕಾಶ ರಾಠೊಡ, ಮಾಜಿ ಶಾಸಕ ರಾಜು ಆಲಗೂರ, ಬಿ.ಜಿ. ಪಾಟೀಲ ಹಲಸಂಗಿ, ವಿಠ್ಠಲ ಕಟಕಧೊಂಡ, ಮೈತ್ರಿ ಪಕ್ಷದ ಜೆಡಿಎಸ್‌ ಅಭ್ಯರ್ಥಿ ಡಾ| ಸುನೀತಾ ಚವ್ಹಾಣ, ಮಹಾದೇವಿ ಗೋಕಾಕ, ಅಬ್ದುಲ್‌ ಹಮೀದ್‌ ಮುಶ್ರೀಫ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next