Advertisement

ಇಂಡಿಯಿಂದ ಜಲಶಕ್ತಿ ಅಭಿಯಾನಕ್ಕೆ ಚಾಲನೆ

10:55 AM Jul 18, 2019 | Naveen |

ವಿಜಯಪುರ: ಹನಿ ನೀರಿನ ಸದ್ಬಳಕೆ, ಮಳೆ ಕೊಯ್ಲು ಪ್ರೋತ್ಸಾಹ ಸೇರಿದಂತೆ ವಿವಿಧೋದ್ದೇಶದಿಂದ ಕೇಂದ್ರ ಸರ್ಕಾರ ಜಲಶಕ್ತಿ ಅಭಿಯಾನ ಅನುಷ್ಠಾನಕ್ಕೆ ಮುಂದಾಗಿದೆ. ಜಲ ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕಿದೆ. ನಿರಂತರ ಬರ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕಾರಣ ಸದರಿ ಯೋಜನೆ ಆನುಷ್ಠಾನಕ್ಕೆ ವಿಜಯಪುರ ಜಿಲ್ಲೆಯನ್ನೂ ಆಯ್ಕೆ ಮಾಡಿಕೊಂಡಿದೆ ಎಂದು ಜಲಶಕ್ತಿ ಅಭಿಯಾನದ ಕೇಂದ್ರ ಸರ್ಕಾರದ ಸಮನ್ವಯಾಧಿಕಾರಿ ಅಜಯ ಶ್ರೀವಾತ್ಸವ ತಿಳಿಸಿದರು.

Advertisement

ನಗರದಲ್ಲಿ ಜಲಶಕ್ತಿ ಅಭಿಯಾನದ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು, ಹನಿ ನೀರು ಸಹ ರೈತನಿಗೆ ಉಪಯೋಗ ಆಗಬೇಕು. ಈ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಶಕ್ತಿ ಅಭಿಯಾನ ರೂಪಿಸಿದ್ದು, ಸರ್ಕಾರದ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿ, ನೀರಾವರಿ ವಿಷಯದಲ್ಲಿ ತಾಂತ್ರಿಕ ಪರಿಣಿತಿ ಹೊಂದಿದ ಓರ್ವ ಸದಸ್ಯನನ್ನು ಒಳಗೊಂಡ 250ಕ್ಕೂ ಹೆಚ್ಚು ತಂಡಗಳನ್ನು ಕೇಂದ್ರ ಸರ್ಕಾರ ಈ ಯೋಜನೆ ಅಧ್ಯಯನ ಕಾರ್ಯಕ್ಕೆ ನಿಯೋಜಿಸಿದೆ ಎಂದರು.

ಹನಿ ನೀರಿನ ಸದ್ಬಳಕೆಗಾಗಿ ಜಲ ಸಾಕ್ಷರತೆ ಅಭಿಯಾನ, ಮಳೆ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಣೆ ಮಾಡಿ ಮಳೆ ಕೊಯ್ಲು ಪ್ರೋತ್ಸಾಹ, ವಾಟರ್‌ ಶೆಡ್‌ ನಿರ್ಮಾಣಕ್ಕೆ ಆದ್ಯತೆ ನೀಡುವುದು, ಕೊಳವೆ ಬಾವಿ ಮರು ಪೂರಣಕ್ಕೆ ಪ್ರೋತ್ಸಾಹ, ಸಾಂಪ್ರದಾಯಿಕ ಜಲಮೂಲಗಳ ರಕ್ಷಣೆ ಹೀಗೆ ಐದು ಉದ್ದೇಶಗಳನ್ನು ಇರಿಸಿಕೊಂಡು ಈ ಅಭಿಯಾನ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.

ಜಿಲ್ಲೆಯ ಜಲಮೂಲಗಳು ಹಾಗೂ ಜಲಬಳಕೆ, ಸಂರಕ್ಷಣೆಗೆ ಕುರಿತು ಮಾಹಿತಿ ಪಡೆದ ಶ್ರೀವಾತ್ಸವ, ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಕೆಲ ಜಲ ಸಂರಕ್ಷಣಾ ಕ್ರಮಗಳು ಜಾರಿಯಲ್ಲಿವೆ. ಇದು ಅನುಕರಣೀಯ. ರಾಜಸ್ತಾನ ಮಾದರಿಯಲ್ಲಿ ನೀರಿನ ಸದ್ಬಳಕೆಗಾಗಿ ಇನ್ನೂ ಪರಿಣಾಮಕಾರಿ ಜಲ ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕು. ಪ್ರಥಮ ಹಂತದಲ್ಲಿ ಇಂಡಿ ಭಾಗದಲ್ಲಿ ಈ ಯೋಜನೆ ಆರಂಭಕ್ಕೆ ಆದ್ಯತೆ ನೀಡಲಾಗಿದೆ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯ ಸ್ಥಿತಿಗತಿ ವಿವರಿಸಿದ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ವಿಜಯಪುರ ಜಿಲ್ಲೆ ಉತ್ಕೃಷ್ಣ ತೋಟಗಾರಿಕೆ ಬೆಳೆಗೆ ಹೆಸರುವಾಸಿಯಾಗಿದ್ದು, ಲಿಂಬೆ, ದ್ರಾಕ್ಷಿ ಬೆಳೆಯಲಾಗುತ್ತಿದೆ. ಹನಿ ನೀರಾವರಿ ಯೋಜನೆಗಳ ಅಡಿಯಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಾಗುತ್ತಿದೆ. ಆದರೆ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ. ವಿಜಯಪುರ ಜಿಲ್ಲೆ ಕಳೆದ 12 ವರ್ಷಗಳಲ್ಲಿ 8 ಬರ ಕಂಡಿದೆ. ಜಿಲ್ಲೆಯಲ್ಲೇ ಇಂಡಿ ತಾಲೂಕಿನಲ್ಲಿ ಅತ್ಯಂತ ಭೀಕರ ಪರಿಸ್ಥಿತಿ ಇದೆ, ನೀರಿನ ಸಮಸ್ಯೆ ತೀವ್ರವಾಗಿದೆ. ಇಂಡಿ ತಾಲೂಕಿನಲ್ಲಿ ಕೇವಲ 22 ಮಿ.ಮೀ. ಮಳೆಯಾಗಿದ್ದು, ತಾಲೂಕಿನ ಪಕ್ಕದಲ್ಲೇ ಭೀಮಾ ನದಿ ಹರಿದರೂ ಬೊಗಸೆ ನೀರಿನ ಹರಿವಿಲ್ಲ ಎಂದು ವಿವರಿಸಿದರು.

Advertisement

2017ರಲ್ಲಿ 4 ತಾಲೂಕಿನಲ್ಲಿ ತೀವ್ರ ಬರ ಎದುರಾಗಿತ್ತು. ಇಂಡಿ ತಾಲೂಕಿನಲ್ಲಿ ಭೀಮಾನದಿ, ಡೋಣಿ ನೀರು ಬಳಕೆಯಾಗುತ್ತಿಲ್ಲ, ಬಹುಹಳ್ಳಿ ಕುಡಿಯುವ ನೀರು ಯೋಜನೆಗೂ ಸಹ ಭೀಮಾ ನದಿಯಿಂದ ನೀರು ಲಭಿಸುತ್ತಿಲ್ಲ, ಅದರಂತೆ ಇಂಡಿ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರ ಹೊರತಾಗಿಯೂ ಜಿಲ್ಲೆಯಲ್ಲಿ ಕೆರೆ ತುಂಬುವ ಯೋಜನೆ ಪರಿಣಾಮಕಾರಿ ಅನುಷ್ಠಾನದಿಂದ ಅಂತರ್ಜಲ ಮಟ್ಟ ಹೆಚ್ಚಿದೆ. ಇದು ರೈತನಿಗೆ ಕೊಂಚ ನೆಮ್ಮದಿಯನ್ನು ನೀಡಿದೆ. ತಿಕೋಟಾ, ಬಬಲೇಶ್ವರ ತಾಲೂಕಿನ ಗ್ರಾಮಗಳಿಗೆ ಈ ಯೋಜನೆ ವರದಾನವಾಗಿದೆ ಎಂದು ವಿವರಿಸಿದರು.

ಇಂಡಿ ತಾಲೂಕಿನಲ್ಲಿ ನೀರಿನ ಕೊರತೆಯಿಂದಾಗಿ ಕೃಷಿ ಹೊಂಡ, ಹನಿ ನೀರಾವರಿಗೆ ಆದ್ಯತೆ ನೀಡಲಾಗಿದೆ. ಜಲಾನಯನ ಚಟುವಟಿಕೆಗೆ ಜಿಲ್ಲೆ ಪೂರಕವಾಗಿದೆ. ಇಂಡಿ ತಾಲೂಕಿನಲ್ಲಿ 783 ದೊಡ್ಡ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಈಗಲೂ ಬೇಡಿಕೆ ಇದೆ. 2019ರಲ್ಲಿ 310 ಕೃಷಿ ಹೊಂಡಗಳ ಬೇಡಿಕೆ ಇದೆ ಎಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಭೆ ಗಮನಕ್ಕೆ ತಂದರು.

ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಮದಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ| ಶಿವಕುಮಾರ, ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ, ಪಾಲಿಕೆ ಆಯುಕ್ತ ಡಾ| ಔದ್ರಾಮ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next