Advertisement

ಪ್ರವಾಸಿ ಮೇಳದಲ್ಲಿ ವಿಜಯಪುರಕ್ಕೆ ಸ್ಥಾನ

10:42 AM Aug 31, 2019 | Naveen |

•ಜಿ.ಎಸ್‌. ಕಮತರ
ವಿಜಯಪುರ:
ಪ್ರವಾಸೋದ್ಯಮ ವಿಷಯದಲ್ಲಿ ನಿರಂತರ ಶೋಷಣೆ ಅನುಭವಿಸುತ್ತಿದ್ದ ವಿಜಯಪುರ ಜಿಲ್ಲೆಗೆ ಕೊನೆಗೂ ಆದ್ಯತೆ ಸಿಗತೊಡಗಿದೆ. ಅಂತಾರಾಷ್ಟ್ರೀಯ ಪ್ರವಾಸಿ ಮೇಳದ ಅಂಗವಾಗಿ ವಿಶ್ವದ ಪ್ರವಾಸಿಗರನ್ನು ಕರ್ನಾಟಕದತ್ತ ಆಕರ್ಷಿಸಿ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ವಿದೇಶಿ ಪ್ರವಾಸಿಗರನ್ನು ಕರೆ ತರುವ ಗುಮ್ಮಟ ನಗರಿಗೂ ಕರೆ ತರುವ ಪಟ್ಟಿಯಲ್ಲಿ ವಿಜಯಪುರಕ್ಕೆ ಸ್ಥಾನ ಸಿಕ್ಕಿದೆ.

Advertisement

ಆ. 25ರಿಂದ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಪ್ರವಾಸಿ ಮೇಳಕ್ಕೆ ಚಾಲನೆ ದೊರೆತಿದ್ದು, ವಿದೇಶಿಗರನ್ನು ರಾಜ್ಯದ ಪ್ರವಾಸಿ ತಾಣಗಳ ವೀಕ್ಷಣೆಗೆ ಕರೆ ತರುವ ವಿಶಿಷ್ಟ ಯೋಜನೆಯಲ್ಲಿ ವಿಜಯಪುರ ಜಿಲ್ಲೆಯನ್ನು ಸೇರಿಸಲಾಗಿದೆ. ಈ ವರೆಗೆ ರಾಜ್ಯದ ದೇಶ-ವಿದೇಶಿ ಪ್ರವಾಸಿಗರ ಯಾವುದೇ ಪ್ಯಾಕೇಜ್‌ ಅಥವಾ ಯೋಜನೆಯಲ್ಲಿ ವಿಶ್ವವಿಖ್ಯಾತ ಗೋಲಗುಮ್ಮಟ ಸೇರಿದಂತೆ ಐತಿಹಾಸಿಕ ನೂರಾರು ಅಪರೂಪದ ಹಾಗೂ ವಿಶಿಷ್ಟ ವಾಸ್ತು ಶೈಲಿಯ ಸ್ಮಾರಕಗಳ ವೀಕ್ಷಣೆ ಪಟ್ಟಿಯಲ್ಲಿ ವಿಜಯಪುರ ಜಿಲ್ಲೆಯನ್ನು ಸೇರಿಸುತ್ತಲೇ ಇರಲಿಲ್ಲ.

ಆದರೆ ಕಳೆದ ಒಂದು ತಿಂಗಳಿಂದ ಉದಯವಾಣಿ ಪತ್ರಿಕೆ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಕಥೆ-ವ್ಯಥೆ ಸರಣಿ ಮಾಲಿಕೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ ದುಸ್ಥಿತಿಯ ಮೇಲೆ ಬೆಳಕು ಚಲ್ಲಲು ಮುಂದಾಗಿದೆ. ಸರಣಿ ವರದಿಗಳು ಪ್ರಕಟವಾಗುತ್ತಲೇ ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಂಡಿದೆ. ಪರಿಣಾಮ ಕಳೆದ ಹಲವು ದಶಕಗಳಿಂದ ಸರ್ಕಾರದ ಯಾವುದೇ ಪ್ರವಾಸಿ ಯೋಜನೆಯಲ್ಲಿ ಸ್ಥಾನ ಪಡೆಯದಿದ್ದ ವಿಜಯಪುರ ಜಿಲ್ಲೆಗೆ ಈಗ ಅವಕಾಶ ಸಿಕ್ಕಿದೆ. ಅಂತಾರಾಷ್ಟ್ರೀಯ ಪ್ರವಾಸಿ ಮೇಳದ ಅಂಗವಾಗಿ ಕರ್ನಾಕದ ಪ್ರವಾಸಿ ಸಿರಿಯ ದರ್ಶನ ಮಾಡಿಸುವ ವಿಶ್ವದ ವಿವಿಧ ದೇಶದ ಪ್ರವಾಸಿಗರ ರಾಜ್ಯದ 4 ಪ್ಯಾಕೇಜ್‌ಗಳ ಒಂದರಲ್ಲಿ ಗುಮ್ಮಟ ನಗರಿಗೆ ಸ್ಥಾನ ದಕ್ಕಿದೆ.

ಪರಿಣಾಮ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಜಾಗತಿಕ ಮಟ್ಟದಲ್ಲಿ ಕರ್ನಾಟಕ ಪ್ರವಾಸಿ ಉನ್ನತೀಕರಣ ಹಾಗೂ ವ್ಯಾಪಕ ಪ್ರಚಾರಕ್ಕಾಗಿ ವಿದೇಶಿ ಪ್ರವಾಸಿ ಟ್ರಾವೆಲ್ ಏಜೆನ್ಸಿಗಳ ವಿಶೇಷ ಪ್ಯಾಕೇಜ್‌ ಅಧ್ಯಯನಕ್ಕೆ ತಜ್ಞರ ತಂಡವನ್ನು ಕರೆಸಿ, ಅಧ್ಯಯನ ಮಾಡಿಸುತ್ತಿದೆ. ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷೆ ಯೋಜನೆಯ ವಿಜಯಪುರ ಪ್ಯಾಕೇಜ್‌ನಲ್ಲಿ ಆಮೆರಿಕ-5, ಸ್ಪೇನ್‌-2 ಹಾಗೂ ಆಮೆರಿಕಾ, ಸ್ಪೇನ್‌,ನ್ಯೂಜಿಲೆಂಡ್‌, ರಸಿಯಾ, ಫ್ರಾನ್ಸ್‌, ನೆದರಲ್ಯಾಂಡ್‌, ಇಂಗ್ಲೆಂಡ್‌, ಫಿಲಿಫ್ಯೆನ್ಸ್‌, ದಕ್ಷಿಣ ಆಫ್ರೀಕಾ, ಮೆಕ್ಸಿಕೋ, ಆಸ್ಟ್ರೇಲಿಯಾ, ಬೆಲ್ಜೀಯಂ, ಪೋಲ್ಯಾಂಡ್‌ ದೇಶದ ತಲಾ ಒಬ್ಬರು ಸೇರಿದಂತೆ 13 ದೇಶಗಳ 18 ವಿದೇಶಿ ಪ್ರವಾಸಿಗರ ತಂಡ ವಿಜಯಪುರಕ್ಕೆ ಆಗಮಿಸಿದೆ.

ಈ ತಂಡದಲ್ಲಿ ವಿದೇಶಿ ಪ್ರವಾಸಿ ಟ್ರಾವೆಲ್ ಏಜೆನ್ಸಿ ತಜ್ಞರು, ಪ್ರವಾಸಿ ತಾಣಗಳ ಕಿರುಚಿತ್ರ ನಿರ್ಮಾಪಕರು, ವಾಸ್ತು ತಜ್ಷರು, ಸ್ಥಿರ ಹಾಗೂ ಚಲನಚಿತ್ರ ಛಾಯಾಗ್ರಾಹಕರು, ಜಾಗತಿಕ ಕಾರ್ಯಕ್ರಮ ನಿವಾರ್ಹಕರು ಸೇರಿದಂತೆ ವಿವಿಧ ವಿಷಯಗಳಲ್ಲಿ ನುರಿತಿರುವ ಹಾಗೂ ವಿಶ್ವ ಪ್ರವಾಸೋದ್ಯಮ ಅಭಿವೃದ್ಧಿ ಷಯದಲ್ಲಿ ಜಾಗತಿಕ ಮಟ್ಟದಲ್ಲಿ ವಿದೇಶಿ ಪ್ರವಾಸಿ ತಾಣಗಳು ಹಾಗೂ ಅಲ್ಲೆಲ್ಲ ಇರುವ ಸೌಲಭ್ಯಗಳ ಕುರಿತು ಅಧ್ಯಯನ ನಡೆಸಲಿರುವ ಈ ವಿದೇಶಿಗರ ವಿಶೇಷ ತಂಡ ಅಂತಾರಾಷ್ಟ್ರೀಯ ಮಟ್ಟದ ತಮ್ಮ ಟ್ರಾವೆಲ್ ಏಜೆನ್ಸಿಗಳಲ್ಲಿ ಪ್ರಚಾರ ಮಾಡಲಿದೆ.

Advertisement

ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ 18 ಆಸನಗಳ ಪ್ರತ್ಯೇಕ ಬಸ್‌ನಲ್ಲಿ ವಿಜಯಪುರ ನಗರದ ಗೋಲಗುಮ್ಮಟ ಆವರಣಕ್ಕೆ ಶುಕ್ರವಾರ ಸಂಜೆ ಬಂದಿಳಿದ ವಿದೇಶಿ ಪ್ರವಾಸಿ ತಜ್ಞರನ್ನು ಪ್ರವಾಸೋದ್ಯಮ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಸೋಮಲಿಂಗ ಗೆಣ್ಣೂರ ಹೂಗುಚ್ಚ ನೀಡಿ ಸ್ವಾಗತಿಸಿದರು. ಪ್ರವಾಸಿ ಜಿಲ್ಲಾ ಸಮಾಲೋಚಕ ಮಿಥುನ ರೆಡ್ಡಿ ಹಾಗೂ ಸಿಬ್ಬಂದಿ ಹಾಗೂ ಪ್ರವಾಸೋದ್ಯಮ ನಿಗಮದ ಸಿಬ್ಬಂದಿ ಕೈ ಮುಗಿದು, ಹೂಗುಚ್ಚ ನೀಡಿ ಸ್ವಾಗತ ನೀಡಿದರು. ತಂಡದಲ್ಲಿ ವೃದ್ಧರು ಹಾಗೂ ಮಹಿಳೆಯರು ಇದ್ದು, ಬಸ್‌ನಿಂದ ಇಳಿಯುವಾಗ ಕೈಚಾಚಿ ಸಹಾಯ ಮಾಡಿದ್ದು ಗನಮನ ಸೆಳೆಯಿತು. ನಂತರ ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಗುಮ್ಮಟ ನಗರಿಗೆ ಬರ ಮಾಡಿಕೊಂಡಿತು.

ಇದಾದ ಬಳಿಕ ಬಂಜಾರಾ ಬುಡಕಟ್ಟು ಸಮುದಾಯದ ಮಹಿಳೆಯರು ಹಣೆಗೆ ತಿಲಕ ಇಟ್ಟು, ಆರತಿ ಬೆಳಗಿ ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿದರು. ನಂತರ ಸ್ಮಾರಕ ವೀಕ್ಷಣೆಗೆ ತೆರಳಿದ ವಿದೇಶಿ ಪ್ರವಾಸಿಗರ ತಂಡವನ್ನು ಬಂಜಾರಾ ಪಾರಂಪರಿಕ ನೃತ್ಯದ ಮೂಲಕ ಮನರಂಜಿಸಿತು.

ವಿಶ್ವದ ಅಚ್ಚರಿ ಎನಿಸಿರುವ ಅಪರೂಪದ ವಾಸ್ತುವಿನ್ಯಾಸ-ಶೈಲಿಯನ್ನು ಹೊಂದಿರುವ ಗೋಲಗುಮ್ಮಟಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ತಂಡ, ಆದಿಲ್ ಶಹಾ ಎಂಬ ರಾಜ ಈ ಸ್ಮಾರಕ ಕಟ್ಟುವಲ್ಲಿ ತೋರಿದ ಆಸಕ್ತಿ ಹಾಗೂ ಅದರಿಂದ ಹೊರ ಹೊಮ್ಮುವ ಸಪ್ತ ಪ್ರತಿಧ್ವನಿಯ ತಂತ್ರಜ್ಞಾನ ಕೇಳಿ ಬೆರಗು ತೋರಿತು. ರಾಜ್ಯವನ್ನು ಸುತ್ತಲು ಬಂದಿರುವ ವಿದೇಶಿ ಪ್ರವಾಸಿಗರ ತಂಡಕ್ಕೆ ಪ್ರವಾಸಿ ತಾಣಗಳ ಕುರಿತು ಪ್ರವಾಸೋದ್ಯಮ ನಿಗಮದ ಗೈಡ್‌ ಉಮೇಶ ರಾಠೊಡ ಮಾರ್ಗದರ್ಶನ ನೀಡುತ್ತಿದ್ದಾರೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಆಂತಾರಾಷ್ಟ್ರೀಯ ಪ್ರವಾಸಿ ಮೇಳ-2019 ಆಯೋಜಿಸಿದೆ. ವಿದೇಶದಲ್ಲಿ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ಉನ್ನತೀಕರಣ ಹಾಗೂ ಹೊಟೇಲ್ ಉದ್ಯಮ ಉನ್ನತೀಕರಣಕ್ಕಾಗಿ ಆಕರ್ಷಿಸಲು ವಿದೇಶಿ ಪ್ರವಾಸಿ ಟ್ರಾವೆಲ್ ಏಜೆನ್ಸಿಗಳ ತಂಡವನ್ನು ರಾಜ್ಯದ ಪ್ರವಾಸಿ ತಾಣಗಳ ವೀಕ್ಷಣೆ ಮಾಡಿಸಲು ಮುಂದಾಗಿದೆ.

ರಾಜ್ಯ ಸರ್ಕಾರ ಪ್ರವಾಸೋದ್ಯಮ ಬಲ ಪರಿಸುವ ಮಹತ್ವಾಕಾಂಕ್ಷೆಯ ಈ ವಿಶೇಷ ಪ್ರವಾಸಿ ಪ್ಯಾಕೇಜ್‌ಗೆ ಬೆಂಗಳೂರಿನಲ್ಲಿ ಆ. 28ರಂದು ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. 4 ತಂಡಗಳಲ್ಲಿ ರಾಜ್ಯದ ವಿವಿಧ ಭಾಗಗಳಿಗೆ 30, 14 ಹಾಗೂ 18 ಬೆಂಗಳೂರಿನಿಂದ ಪ್ರಯಾಣ ಆರಂಭಿಸಿರುವ ವಿದೇಶಿ ಪ್ರವಾಸಿಗರ ತಂಡ ರಾಜ್ಯದ ಮೈಸೂರು, ಬಂಡಿಪುರ, ಹಾಸನ ಜಿಲ್ಲೆಯ ಪ್ರವಾಸಿ ಪ್ಯಾಕೇಜ್‌ಗಳಲ್ಲಿ ತೆರಳಿದೆ.

ವಿಜಯಪುರ ತಂಡ ಹಂಪಿ ತಾಣದಿಂದ ಪ್ರವಾಸ ಆರಂಭಿಸಿದ್ದು, ಹಂಪಿ-ಕಮಲಾಪುರ ಭೇಟಿ ನೀಡಿ ಸುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಿದೆ. ಇದೀಗ ವಿಜಯಪುರ ನಗರಕ್ಕೆ ಆಗಮಿಸಿದ್ದು, ಗೋಲಗುಮ್ಮಟ ಹಾಗೂ ಇಬ್ರಾಹಿಂ ರೋಜಾ ಐತಿಹಾಸಿಕ ಪ್ರವಾಸಿ ತಾಣಗಳ ವೀಕ್ಷಣೆ ಮಾಡುತ್ತಿದೆ. ವಿದೇಶಿ ಪ್ರವಾಸಿ ತಜ್ಞರಿಗೆ ವಿಜಯಪುರ ಜಿಲ್ಲೆಯ ಐತಿಹಾಸಿಕ ಮಹತ್ವ, ಇಲ್ಲಿನ ಪರಿಸರ, ಪರಂಪರೆಗಳ ಕುರಿತು ಅಮೀನುದ್ದೀನ್‌ ಹುಲ್ಲೂರು ಹಾಗೂ ರಾಜಶೇಖರ ಮಠಪತಿ ಸ್ಥಾನಿಕ ಮಹತ್ವಗಳ ಕುರಿತು ಮಾರ್ಗದರ್ಶನ ಮಾಡಿದರು.

ಸಪ್ತ ಪ್ರತಿಧ್ವನಿಗಳ ವಿಶಿಷ್ಟ ಹಾಗೂ ಅಪರೂಪದ ವಿಶ್ವದ ಆಚ್ಚರಿಯ ಸ್ಮಾರಕ ಗೋಲಗುಮ್ಮಟ ಹಾಗೂ ಇಬ್ರಾಹೀಂ ರೋಜಾ ಸೇರಿದಂತೆ ಪಾರಂಪರಿಕ ವಿಜಯಪುರ ಜಿಲ್ಲೆಯಲ್ಲಿರುವ ಅಂತಾರಾಷ್ಟ್ರೀಯ ದರ್ಜೆಯ ಸ್ಮಾರಕಗಳ ಕುರಿತು ವಿದೇಶಿ ಪ್ರವಾಸಿ ತಜ್ಞರ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ.

ಶನಿವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿಗೆ ತೆರಳಲಿರುವ ವಿದೇಶಿ ಪ್ರವಾಸಿ ತಜ್ಞರ ತಂಡ, ಐಹೊಳೆ ಹಾಗೂ ಪಟ್ಟದಕಲ್ಲ ಸ್ಮಾರಕ ವೀಕ್ಷಿಸಿ ಬಾದಾಮಿ ಪಟ್ಟಣದಲ್ಲಿ ತಂಗಲಿದೆ. ರವಿವಾರ ಬಾದಾಮಿ ಗುಹಾಂತರ ದೇವಾಲಯಗಳ ವೀಕ್ಷಣೆ ಮಾಡಲಿದೆ. ಸಂಜೆ ಹೊಸಪೇಟೆಗೆ ಪ್ರಯಾಣ ಬೆಳೆಸಿ ತಂಗಲಿದ್ದು, ಸೋಮವಾರ ಬೆಂಗಳೂರಿಗೆ ಪ್ರಯಾಣಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next