Advertisement

ವಿಜಯಪುರ ಬಾಲಕಿ ಅತ್ಯಾಚಾರ ಪ್ರಕರಣ ಖಂಡನೀಯ

02:33 PM Dec 24, 2017 | Team Udayavani |

ಚಾಮರಾಜನಗರ: ವಿಜಯಪುರ ಜಿಲ್ಲೆಯ ದರ್ಗಾಬೈಲ್‌ನ ಮಂಜುನಾಥನಗರದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮೇಲೆ 6 ರಿಂದ 7 ಮಂದಿ ಯುವಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಇದು ತೀವ್ರ ಖಂಡನೀಯ. ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು ಎಂದು ವಿಚಾರವಾದಿ ಕೃಷ್ಣಮೂರ್ತಿ ಚಮರಂ ಹೇಳಿದರು.

Advertisement

ನಗರದ ಜೆ.ಎಚ್‌.ಪಟೇಲ್‌ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕನಸಾದ ಪ್ರಬುದ್ದ ಭಾರತ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಹಾಗೂ ಯುವಕರು ಪಾತ್ರ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದುತ್ವದ ಹೆಸರಿನಲ್ಲಿ ಹಿಂಸೆ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು, ರಾಜಕೀಯ ಅಧಿಕಾರ ಹಿಡಿಯುವ ಕೆಲಸ ನಡೆಯುತ್ತಿದೆ. ಅಲ್ಲದೆ, ಬಾಬಾ ಸಾಹೇಬ್‌ ಅಂಬೇಡ್ಕರ್‌ರವರ ರಚಿಸಿಕೊಟ್ಟಿರುವ ಪವಿತ್ರವಾದ ಸಂವಿಧಾನವನ್ನು ನಾಶ ಮಾಡಿ ಮನುವಾದಿ ಸಂವಿಧಾನ ಹುಟ್ಟು ಹಾಕುವ ಕೆಲಸವನ್ನು ಮನುವಾದಿಗಳು ಮಾಡುತ್ತಿದ್ದಾರೆ. ಇದರ ಬಗ್ಗೆ ಅಂಬೇಡ್ಕರ್‌ವಾದಿಗಳು ಎಚ್ಚರವಹಿಸಬೇಕಿದೆ.

ಅಂಬೇಡ್ಕರ್‌ವಾದಿಗಳು ಬದುಕಿರುವ ತನಕ ಸಂವಿಧಾನ ಆಶಯಗಳನ್ನು ಸರ್ವನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿವರಿಸಿದರು. ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಬರವಣಿಗೆಗಳನ್ನು ವಿದ್ಯಾರ್ಥಿಗಳು ಹಾಗೂ ಯುವಕರು ಓದಬೇಕು ಎಂದು ಹೇಳಿದರು.
 
ಕಾರ್ಯಕ್ರಮ ಉದ್ಘಾಟಿಸಿದ ತಿ.ನರಸೀಪುರ ನಳಂದ ಬುದ್ಧ ವಿಹಾರದ ಬಂತೇ ಬೋಧಿರತ್ನ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಕೆಟ್ಟವರ ಸಂಖ್ಯೆಯ ಹೆಚ್ಚಾಗಿರುವ ಕಾರಣದಿಂದ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಇದು ನಿಲ್ಲಬೇಕಾದರೆ ಪ್ರತಿಯೊಬ್ಬರ ಬುದ್ಧ ದಮ್ಮ ಪಾಲನೆ ಮಾಡಿದರೆ ಕ್ರಾಂತಿಕಾರಿಕ ಬದಲಾವಣೆ ತರಬಹುದು ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ಕೆ.ಎಂ.ನಾಗರಾಜು ಮಾತನಾಡಿ, ಜಿಲ್ಲೆಯಲ್ಲಿ ದಲಿತರ ಮೇಲೆ ಅನೇಕ ದೌರ್ಜನ್ಯ ಪ್ರಕರಣಗಳು ನಡೆದಿದೆ. ಯಾವುದೇ ಪ್ರಕರಣಕ್ಕೂ ನ್ಯಾಯ ಸಿಕ್ಕಿಲ್ಲ. ಇತ್ತೀಚಿನ ದಿನಗಳಲ್ಲಿ ಸಂವಿಧಾನದಕ್ಕೆ ಅಪಪ್ರಚಾರ ಹೇಳಿಕೆಗಳನ್ನು ನೀಡುತ್ತಿದ್ದರು ಯಾರು ಪಶ್ನಿಸುತ್ತಿಲ್ಲ ಪ್ರತಿಭಟಿಸುತ್ತಿಲ್ಲ. ನಾವೆಲ್ಲರು ಸಂವಿಧಾನ ಉಳಿಸುವ ಕೆಲಸ ಮಾಡಬೇಕಿದೆ ಎಂದರು.

Advertisement

ಮೌನ ಆಚರಣೆ: ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಬಾಲಕಿ ಸ್ಮರಣಾರ್ಥ 2 ನಿಮಿಷಗಳ ಕಾಲ ಮೌನ ಆಚರಿಸಿ, ಗೌರವ ಸಲ್ಲಿಸಲಾಯಿತು.

ಕೆಲ ಕಾಲ ಧರಣಿ: ಕಾರ್ಯಕ್ರಮ ಮುಕ್ತಾಯಗೊಂಡ ನಂತರ ನಗರದ ಜಿಲ್ಲಾಡಳಿತ ಭವನದ ಎದುರುಗಡೆಯಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಮಾಲಾರ್ಪಣೆ ಮಾಡಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಧರಣಿ ನಡೆಸಿದರು.

ಜನಪದ ಗಾಯಕ ನರಸಿಂಹಮೂರ್ತಿ, ದಲಿತ ಮುಖಂಡರಾದ ಆಲೂರು ನಾಗೇಂದ್ರ, ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಯರಿಯೂರು, ಸಂಘಟನಾ ಕಾರ್ಯದರ್ಶಿಗಳಾದ ಗೋವಿಂದರಾಜು, ಕಂದಹಳ್ಳಿ ನಾರಾಯಣ್‌, ಶಿವಕುಮಾರ್‌, ದೊರೆ ಸ್ವಾಮಿ, ಶ್ರೀನಿವಾಸ, ಭೀಮವಾದ ಜಿಲ್ಲಾ ಸಂಚಾಲಕ ಸಿದ್ದರಾಜುದೊಡ್ಡಿ ಇಂದವಾಡಿ, ಕದಸಸಂ ಅಧ್ಯಕ್ಷ ಶಿವಣ್ಣ, ಮಾನವ ಬಂದುತ್ವ ವೇದಿಕೆ ಜಿಲ್ಲಾ ಸಂಯೋಜಕ ಸುಭಾಷ್‌
ಮಾಡ್ರಳ್ಳಿ ನಂಜುಂಡಸ್ವಾಮಿ, ಸ್ವಾಮಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next