Advertisement

ಸುಪ್ರೀಂಕೋರ್ಟ್‌ ಅಯೋಧ್ಯೆ ತೀರ್ಪು: ಶಾಂತಿ ಕಾಪಾಡಲು ಮನವಿ

04:01 PM Nov 10, 2019 | Team Udayavani |

ವಿಜಯಪುರ: ರಾಮ ಜನ್ಮಭೂಮಿ ಅಯೋಧ್ಯೆ ವಿವಾದದ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಯಾರೂ ಉದ್ವೇಗಕ್ಕೆ ಒಳಗಾಗದೇ ಶಾಂತಿ, ಸೌಹಾರ್ದ ಕಾಯ್ದುಕೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಮನವಿ ಮಾಡಿದ್ದಾರೆ.

Advertisement

ಶನಿವಾರ ನಗರದಲ್ಲಿ ಪೊಲೀಸ್‌ ಇಲಾಖೆ ಚಿಂತನಾ ಹಾಲ್‌ನಲ್ಲಿ ಹಿಂದೂ ಸಮುದಾಯದ ಮುಖಂಡರು ಹಾಗೂ ಡಿವೈಎಸ್‌ಪಿ ಕಚೇರಿ ಸಭಾಂಗಣದಲ್ಲಿ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಪ್ರತ್ಯೇಕ ಶಾಂತಿಪಾಲನಾ ಸಭೆಗಳನ್ನು ನಡೆಸಿ ಅವರು ಮಾತನಾಡಿದರು.

ಅಯೋಧ್ಯೆ ವಿವಾದ ಸುಮಾರು 105 ವರ್ಷಗಳ ಹಳೆಯದಾಗಿದೆ. ಈ ವಿವಾದ ಪರಿಹರಿಸಲು ಸರ್ವೋತ್ಛ ನ್ಯಾಯಾಲಯದ ಅತ್ಯಂತ ಉತ್ಕೃಷ್ಟ ತೀರ್ಪಿಗೆ ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯದವರು ಗೌರವದಿಂದ ಸ್ವೀಕರಿಸುವ ಜೊತೆಗೆ ಯಾವುದೇ ರೀತಿಯ ಶಾಂತಿ ಕದಡುವಂತಹ ಚಟುವಟಿಕೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಶಾಂತಿ-ಸೌಹಾರ್ದಯುತವಾಗಿ ಇರುವಂತೆ ಮನವಿ ಮಾಡಿದ್ದಾರೆ.

ಇಂದಿನ ಸರ್ವೋತ್ಛ ನ್ಯಾಯಾಲಯದ ತೀರ್ಪಿಗೆ ವಿಶ್ವದ ಹಲವು ದೇಶಗಳು ಎದುರು ನೋಡುತ್ತಿದ್ದು, ಯಾವುದೇ ರೀತಿಯ ಶಾಂತಿ ಕದಡುವ ಚಟುವಟಿಕೆಗಳಿಂದ ಇತರೆ ನುಸುಳುಕೋರರಿಗೆ ಅವಕಾಶ ನೀಡಿದಂತಾಗುತ್ತದೆ. ಇದು ರಾಜಕೀಯ ತೀರ್ಪು ಅಲ್ಲ, ಸರ್ವೋಚ್ಛ ನ್ಯಾಯಾಲಯದ ಉತ್ಕೃಷ್ಟ ತೀರ್ಪು. ಹೀಗಾಗಿ ಯಾರೂ ವೈಯಕ್ತಿಕ ಹಾಗೂ ಮುಖಂಡರ ಲಾಭಕ್ಕಾಗಿ ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಇಂದಿನ ತೀರ್ಪಿಗೆ ಸಂಬಂಧಪಟ್ಟಂತೆ ಎಲ್ಲರೂ ಪ್ರಬುದ್ಧವಾಗಿ ನಡೆದುಕೊಳ್ಳಬೇಕು. ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಗಳು ಕೋಮು ಸೌಹಾರ್ದತೆಗೆ ಮತ್ತು ಶಾಂತಿ ಕಾಪಾಡಲು ಹಲವು ಕ್ರಮಗಳನ್ನು ಕೈಗೊಂಡಿದ್ದು, ವಿಶೇಷವಾಗಿ ಪೊಲೀಸ್‌ ಇಲಾಖೆ ಅತ್ಯಂತ ನಿಷ್ಠೆಯಿಂದ ಶಾಂತಿ ಸೌಹಾರ್ದ ಕಾಪಾಡುವಲ್ಲಿ ನಿರತವಾಗಿದೆ.

Advertisement

ಎಲ್ಲ ಸಮುದಾಯ ಯುವ ಜನಾಂಗಗಳು ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಉದ್ವೇಗಕ್ಕೆ ಒಳಗಾಗದೆ ಶಾಂತಿ ಕಾಪಾಡುವಂತೆ ಮನವರಿಕೆ ಮಾಡಲು ಎರಡೂ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿಕೊಂಡರು. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಇಂದಿನಿಂದ ಎರಡು ದಿನ ಪಟಾಕಿ ಮತ್ತು ವಿಜೃಂಭಣೆಯಂತಹ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.ಅದರಂತೆ ಜಿಲ್ಲೆಯಾದ್ಯಂತ 144ಕಲಂ ರನ್ವಯ ನಿಷೇಧಾಜ್ಞೆ ಕೂಡ ಜಾರಿಯಲ್ಲಿರಲಿದೆ. ಎಲ್ಲ ಸಮುದಾಯದವರು ಸೋಲು-ಗೆಲುವು ಎಂಬ ಭಾವನೆಗಳನ್ನು ತೊರೆದು, ನ್ಯಾಯಾಲಯದ ತೀರ್ಪಿಗೆ ಗೌರವಿಸಬೇಕು. ನ್ಯಾಯಾಲಯದ ತೀರ್ಪನ್ನು ಸ್ವೀಕರಿಸುವಂತೆ ಮನವಿ ಮಾಡಿದ ಅವರು, ಶಾಂತಿ ಭಂಗ ತರುವಂತಹವರ ಬಗ್ಗೆ ನಿಗಾ ಇಡುವಂತೆ ಸಲಹೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆಯಿಂದ ನಿರಂತರ ಪೆಟ್ರೋಲಿಂಗ್‌ ಕಾರ್ಯ ನಡೆಯಲಿದ್ದು, ಯುವ ಜನಾಂಗ ವಿಶೇಷವಾಗಿ ವ್ಯಾಟ್ಸ್‌ಆ್ಯಪ್‌ ಹಾಗೂ ಫೇಸ್‌ ಬುಕ್‌ಗಳಲ್ಲಿ ಈ ವಿವಾದಕ್ಕೆ ಸಂಬಂಧಪಟ್ಟಂತೆ ಸಮಾಜಕ್ಕೆ ತರವಲ್ಲದ ರೀತಿಯಲ್ಲಿ ಕಮೆಂಟ್‌ ಹಾಕದಂತೆ ಮುನ್ನೆಚ್ಚರಿಕೆ ವಹಿಸಬೇಕು.

ಸಮಾಜದ ಮುಖಂಡರು ಸಹ ಯುವ ಜನಾಂಗರಲ್ಲಿ ಮನವರಿಕೆ ಮಾಡಬೇಕು ಎಂದು ಮನವಿ ಮಾಡಿದರು. ಇದಲ್ಲದೇ ಈದ್‌-ಮಿಲಾದ್‌ ಹಬ್ಬದ ಪ್ರಯುಕ್ತ ಆಸಾರ್‌ ಮಹಲ್‌ ವರೆಗೆ ಮೆರವಣಿಗೆ ಹಾಗೂ ನ. 10ರಂದು ಈದ್‌-ಮಿಲಾದ್‌ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಬೇಕು ಎಂದು ಮನವಿ ಮಾಡಿದರು.

ಈ ಎರಡೂ ಸಭೆಗಳಲ್ಲಿ ಹಿಂದೂ-ಮುಸ್ಲಿಂ ಸಮಾಜದ ಮುಖಂಡರು ಪಾಲ್ಗೊಂಡಿದ್ದು ಶಾಂತಿ ಹಾಗೂ ಸೌಹಾರ್ದ ಕಾಪಾಡಿಕೊಳ್ಳುವುದಾಗಿ ಜಿಲ್ಲಾಡಳಿತ-ಪೊಲೀಸ್‌ ಇಲಾಖೆಗೆ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next