Advertisement

ಬಾಲ್ಯದಲ್ಲಿ ಕಂಡ ಕನಸು ನನಸಾಗಿಸಿಕೊಂಡ ರೈತನ ಮಗ!

10:20 AM Apr 08, 2019 | Naveen |

ವಿಜಯಪುರ: ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 307ನೇ ಸ್ಥಾನ ಪಡೆಯುವ ಮೂಲಕ ಬಸವನಾಡಿನ ರೈತನ ಮಗ ಗಿರೀಶ ಕಲಗೊಂಡ ಕರ್ನಾಟಕಕ್ಕೆ ಕೀರ್ತಿ ತಂದಿದ್ದು, ರಾಜ್ಯಾದ್ಯಂತ ಅಭಿನಂದನೆಯ
ಮಹಾಪೂರವೇ ಹರಿದು ಬಂದಿದೆ.

Advertisement

ತಾಲೂಕಿನ ನಾಗಠಾಣಾ ಗ್ರಾಮದ ಸಾಮಾನ್ಯ, ಮಧ್ಯಮ ವರ್ಗದ ರೈತ ಧರ್ಮರಾಜ ಹಾಗೂ ಕಸ್ತೂರಿ ಕಲಗೊಂಡ ಅವರ ಮಗ ಗಿರೀಶ ಮಾಡಿರುವ ಸಾಧನೆಗೆ ಬರದ ನಾಡಿಗೆ ಎಲ್ಲೆಡೆಯಿಂದ ಕೀರ್ತಿ ತಂದಿರುವುದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಹುಟ್ಟೂರು ನಾಗಠಾಣದ ಸ್ಥಳೀಯ ಸರ್ಕಾರಿ ಪ್ರಾಥಮಿಕ-ಪ್ರೌಢ ಶಿಕ್ಷಣ ಪಡೆದಿರುವ ಗಿರೀಶಗೆ ಐಎಎಸ್‌ ಅ ಧಿಕಾರಿ ಆಗಬೇಕು ಎಂಬುದು ಬಾಲ್ಯದ ಮಹದಾಸೆಯಾಗಿತ್ತು. ಕೇಂದ್ರ ಲೋಕಸೇವಾ
ಆಯೋಗ ನಡೆಸುವ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ, ಭಾರತೀಯ ಆಡಳತ ಸೇವೆಗೆ ಸೇರಬೇಕು ಎಂಬ ಹಂಬಲ ಹೊಂದಿದ್ದರು. ಇದಕ್ಕಾಗಿ ತಂದೆಯ ಅಲ್ಪಸ್ವಲ್ಪ ಕೃಷಿ ಜಮೀನಿಲ್ಲಿ ತಂದೆಯೊಂದಿಗೆ ಕೈ ಜೋಡಿಸುತ್ತಲೇ ಶಿಕ್ಷಣ ಪಡೆದಿದ್ದರು. ಭೀಕರ
ಬರಕ್ಕೆ ಹೆಸರಾದ ವಿಜಯಪುರ ಜಿಲ್ಲೆಯಲ್ಲಿ ಕೃಷಿ ಬದುಕು ದುಸ್ಥರವಾಗಿದ್ದು, ಕುಟುಂಬದ ಆರ್ಥಿಕ ಶಕ್ತಿಯೂ ಅಷ್ಟಕ್ಕಷ್ಟೇ ಇತ್ತು. ಆರ್ಥಿಕ ಸಂಕಷ್ಟಗಳನ್ನೆಲ್ಲ ಮೆಟ್ಟಿನಿಂತ ಪ್ರತಿಭಾವಂತ ಗಿರೀಶ ಸಾಲ ಮಾಡಿ ಶಿಕ್ಷಣ ಪಡೆದಿದ್ದರು.

ಕನ್ನಡ ಮಾಧ್ಯಮದಲ್ಲಿ ಹುಟ್ಟೂರಲ್ಲಿ ಎಸ್‌ಎಸ್‌ ಎಲ್‌ಸಿ ಮುಗಿಸಿ ವಿಜಯಪುರ ನಗರದಲ್ಲಿರುವ ಪಿಡಿಜೆ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ ಗಿರೀಶ, ನಂತರ ನಗರದ ಬಿಎಲ್‌ಡಿಇ ಸಂಸ್ಥೆಯ ಡಾ.ಫ.ಗು. ಹಳಕಟ್ಟಿ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ
ಬಿ.ಇ ಪದವಿ ಪೂರೈಸಿದ್ದರು. ನಾಲ್ಕು ವರ್ಷಗಳ ಹಿಂದೆಯೇ ಐಎಎಸ್‌ ಅಧಿಕಾರಿ ಆಗುವ ಕನಸು ಕಂಡಿದ್ದರೂ ಕುಟುಂಬದ
ಆರ್ಥಿಕ ಸ್ಥಿತಿ ಹಾಗೂ ಶಿಕ್ಷಣಕ್ಕೆ ಮಾಡಿಕೊಂಡಿರುವ ಸಾಲದಿಂದಾಗಿ ತಕ್ಷಣ ಅಂದುಕೊಂಡ ಕನಸು ನನಸು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಬಿ.ಇ ಶಿಕ್ಷಣ ಮುಗಿಯುತ್ತಲೇ ಶಿಕ್ಷಣ ಸಾಲ ತೀರಿಸುವುದಕ್ಕಾಗಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ ಸಾಲ ತೀರಿಸಿದರು.

ಆದರೆ ಛಲವಾದಿ ಗಿರೀಶ ಅಂದುಕೊಂಡ ಗುರಿ ಸಾಧನೆಗೆ ಸತತ ಪ್ರಯತ್ನ ನಡೆಸುತ್ತಲೇ ಇದ್ದ. ಶೈಕ್ಷಣಿಕ ಸಾಲ ತೀರುವ ಹಂತಕ್ಕೆ ಬರುತ್ತಲೇ ಮತ್ತೆ ತನ್ನ ಗುರಿ ಸಾಧನೆಯತ್ತ ಚಿತ್ತ ನೆಟ್ಟ ಗಿರೀಶ, 2015ರಿಂದ ನಿರಂತರ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸಿದರು. ಇದಕ್ಕಾಗಿ ಸತತ ಪರಿಶ್ರಮದಿಂದ ಅಧ್ಯಯನದಲ್ಲಿ ತೊಡಗಿದರು. ಪುಸ್ತಕಗಳು ಇವರ ಆಜೀವ ಸ್ನೇಹಿ ಎನಿಸಿದರು.

Advertisement

ಸತತ ಎರಡು ಬಾರಿ ಪರೀಕ್ಷೆ ಎದುರಿಸಿದರೂ ಯಶಸ್ಸು ಕಾಣಲಿಲ್ಲ. ಮೂರನೇ ಬಾರಿ ಸಂದರ್ಶನ ಹಂತಕ್ಕೆ ಬಂದರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಯಿತು. ಮೂರು ಸೋಲಿನ ನಂತರವೂ ದೃತಿಗೆಡದ ಗಿರೀಶ ಗುರಿ ಸಾಧನೆಗ ಮರಳಿ ಯತ್ನವ ಮಾಡು ಎಂಬಂತೆ ಓದಿನತ್ತ ಮುಖ ಮಾಡಿದರು. ಕೌಟುಂಬಿಕ ಸಮಸ್ಯೆ, ಸತತ ಪರಿಶ್ರಮವೂ ನಿರೀಕ್ಷಿತ ಯಶಸ್ಸು ತಂದುಕೊಡದಿದ್ದರೂ ಚಿಂತಿಸದೇ ಬದ್ಧತೆ, ಶ್ರದ್ಧೆ, ಸಮಚಿತ್ತತೆ, ಸಾ ಧಿಸುವ ಗುಣಗಳು ಗಿರೀಶ ಅವರನ್ನು ಯುಪಿಎಸ್‌ಸಿ ಪರೀಕ್ಷೆಯ ನಾಲ್ಕನೇ ಪ್ರಯತ್ನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ.

ಮಗನ ಸಾಧನೆಗೆ ಹೆತ್ತವರಾದ ಧರ್ಮರಾಜ ಕಲಗೊಂಡ, ತಾಯಿ ಕಸ್ತೂರಿ ಅವರಂತು ಮಗನ ಗುಣಗಾನ ಮಾಡುತ್ತಿದ್ದಾರೆ. ಊರವರು, ನೆರೆಯವರು, ಬಂಧುಗಳು, ಸ್ನೇಹಿತರು ಮನೆಗೆ
ಬಂದು ತಮ್ಮ ಮಗನ ಸಾಧನೆ ಹೊಗಳುವುದನ್ನು ಕಂಡು ಹೃದಯತುಂಬಿ ನಿಂತಿದ್ದಾರೆ.

ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಆದರೆ ಸಮಸ್ಯೆಗಳು ನಾವು ಅಂದುಕೊಂಡ ಗುರಿ ಸಾಧನೆಗೆ ತೊಡಕದಂತೆ ಪ್ರಯತ್ನ ಇರಬೇಕು. ಓದಿನಲ್ಲಿ ಚಮಚಿತ್ತ ಹಾಗೂ ಬದ್ಧತೆ ಇರಬೇಕು. ಪರಿಸರದಲ್ಲಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡಲ್ಲಿ ಯಾವ ಗುರಿ ಸಾಧನೆಯೂ ಅಸಾಧ್ಯವಲ್ಲ.
ಗಿರೀಶ ಧರ್ಮರಾಜ ಕಲಗೊಂಡ,
ಯಪಿಎಸ್‌ಸಿ 307 ರ್‍ಯಾಂಕ್‌ ವಿಜೇತ.

ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next