Advertisement

ಕಾವೇರಿದ ಕುಡಿಯುವ ನೀರು ಚರ್ಚೆ

10:46 AM Jun 14, 2019 | Naveen |

ವಿಜಯಪುರ: ನಗರದಲ್ಲಿ 24X7 ಕುಡಿಯುವ ನೀರಿನ ಕಾಮಗಾರಿ ವಿಳಂಬದಿಂದಾಗಿ ನಗರದ ಜನರು ಕುಡಿಯುವ ನೀರಿಗೆ ಪರಿತಪಿಸುತ್ತಿರುವ ವಿಷಯ ಮಹಾನಗರ ಪಾಲಿಕೆಯ ಹಾಲಿ ಆಡಳಿತ ಮಂಡಳಿಯ ಕೊನೆ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಯಿತು.

Advertisement

ಜಲನಗರದಲ್ಲಿರುವ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮೇಯರ್‌ ಶ್ರೀದೇವಿ ಲೋಗಾಂವಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಕುಡಿಯುವ ನೀರಿಗಾಗಿ ನಗರದಲ್ಲಿ ಕಂಡು ಬಂದಿರುವ ಹಾಹಾಕಾರದ ಕುರಿತು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಹಲವು ಬಡಾವಣೆಗಳಲ್ಲು ಕುಡಿಯಲು ಹನಿ ನೀರೂ ಸಿಗುತ್ತಿಲ್ಲ. ಮತ್ತೆ ಕೆಲ ವಾರ್ಡ್‌ಗಳಲ್ಲಿ ಸ್ನಾನಕ್ಕೂ ನೀರಿಲ್ಲದ ದುಸ್ಥಿತಿ ಎದುರಾಗಿದೆ. ಹೀಗಾಗಿ ಮಹಾನಗರ ಪಾಲಿಕೆ ಕೂಡಲೇ ನಗರದಲ್ಲಿ ಟ್ಯಾಂಕರ್‌ ನೀರಿನ ಸೌಲಭ್ಯಕ್ಕಾಗಿ ಟ್ಯಾಂಕರ್‌ಗಳನ್ನು ಖರೀದಿಸಿ ಜನರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದಾಗ, ನಗರಕ್ಕೆ ನೀರು ಪೂರೈಸುವ ಮುಖ್ಯ ಪೈಪ್‌ಲೈನ್‌ ಒಡೆದು ಹೋಗಿದೆ. ಮತ್ತೂಂದೆಡೆ ವಿದ್ಯುತ್‌ ವ್ಯತ್ಯಯವೂ ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಹೀಗೆ ಬೇರೆ ಬೇರೆ ತಾಂತ್ರಿಕ ದೋಷಗಳಿಂದಾಗಿ ನೀರಿನ ಸಮಸ್ಯೆ ಎದುರಾಗಿದೆ ಎಂದು ಜಲ ಮಂಡಳಿ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದರು.

24X7 ಕುಡಿಯುವ ಕಾಮಗಾರಿ ಗುತ್ತಿಗೆ ಪಡೆದಿರುವ ಜೈನ್‌ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಪಾಲಿಕೆಯ ಈ ಹಿಂದಿನ ಸಭೆಯಲ್ಲಿ ನಿರ್ಣಯಿಸಿದರೂ ಕ್ರಮ ಜರುಗಿಸಿಲ್ಲ. ಬದಲಾಗಿ ಸುಮಾರು 100 ಕೋಟಿ ರೂ. ಬಿಲ್ ಪಾವತಿಸಿದ್ದು, ಭ್ರಷ್ಟಾಚಾರದ ಅನುಮಾನ ಮೂಡುತ್ತಿದೆ ಎಂದು ಸದಸ್ಯ ಪ್ರಕಾಶ ಮಿರ್ಜಿ ಆಕ್ಷೇಪ ವ್ಯಕ್ತಪಡಿಸಿದಾಗ, ಮೈನುದ್ದೀನ್‌ ಬೀಳಗಿ, ಉಮೇಶ ವಂದಾಲ, ಲಕ್ಷ್ತ್ರೀ ಕನ್ನೊಳ್ಳಿ, ಅಬ್ದುಲ್ ರಜಾಕ ಹೊರ್ತಿ ಧ್ವನಿಗೂಡಿಸಿದರು.

ಜೈನ್‌ ಕಂಪನಿಗೆ ಬ್ಲ್ಯಾಕ್‌ ಲಿಸ್ಟ್‌ಗೆ ಹಾಕುವ ಧೈರ್ಯ ಯಾರಿಗೂ ಇಲ್ಲ. ಆ ಕಂಪನಿ ಮುಖ್ಯಮಂತ್ರಿಗಳ ಮಟ್ಟದಲ್ಲೂ ಪ್ರಭಾವ ಹೊಂದಿದ್ದಾರೆ. ಚೀಪ್‌ ಮಿನಿಸ್ಟರ್‌ ನನ್ನ ಕಡೆ ಇದ್ದಾರೆ ಎಂಬಂತೆ ಜೈನ್‌ ಕಂಪನಿ ವರ್ತನೆ ಮಾಡುತ್ತಿದೆ ಎಂದು ರಾಜಶೇಖರ ಮಗಿಮಠ ದೂರಿದರು.

Advertisement

ರವೀಂದ್ರ ಲೋಣಿ ಮಾತನಾಡಿ, ಜಲಮಂಡಳಿ ಅಧಿಕಾರಿಗಳು ಸಭೆಗೆ ಸುಳ್ಳು ಮಾಹಿತಿ ನೀಡಿರುವುದು ಹಕ್ಕುಚ್ಯುತಿ ಆಗಲಿರುವ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾಮಾನ್ಯ ಸಭೆಗೆ ಬದಲಾಗಿ ನಗರದ ಕುಡಿಯುವ ನೀರಿನ ಸಮಸ್ಯೆ ಚರ್ಚೆಗಾಗಿಯೇ ಪ್ರತ್ಯೇಕವಾಗಿ ವಿಶೇಷ ಸಭೆ ನಡೆಸಿ ಎಂದು ರಾಜೇಶ ದೇವಗಿರಿ ಆಗ್ರಹಿಸಿದರು.

ಈ ಕುರಿತು ಸ್ಪಷ್ಟೀಕರಣ ನೀಡಿದ ಜಲಮಂಡಳಿ ಕಾರ್ಯಪಾಲಕ ಅಭಿಯಂತರ ವಸ್ತ್ರದ, ಅಮೃತ ಯೋಜನೆ ಅಡಿಯಲ್ಲಿ 174 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಜೈನ್‌ ಕಂಪನಿಗೆ ವಹಿಸಿದ್ದು, 101 ಕೋಟಿ ರೂ. ಪಾವತಿದ್ದು, ಇನ್ನೂ 9.5 ಕೋಟಿ ರೂ. ಪಾವತಿ ಬಾಕಿ ಇದೆ. ಕಳೆದ 5 ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಈ ಕುರಿತು ಜಲಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಜೈನ್‌ ಕಂಪನಿಗೆ ಒತ್ತಡ ಹೇರಿದ್ದು, ಒಂದು ವಾರದಲ್ಲಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.

ಸಭೆಯಲ್ಲಿ ಚರ್ಚಿಸುವ ವಿಷಯಗಳನ್ನು ತೆಗೆದು ಹಾಕುವ, ಸೇರಿಸುವ ಪರಮಾಧಿಕಾರ ಮೇಯರ್‌ ಅವರ ವಿವೇಚನಾಧಿಕಾರಕ್ಕೆ ಬಿಟ್ಟಿರುತ್ತದೆ ಎಂದು ಆಯುಕ್ತ ಡಾ| ಔದ್ರಾಮ ಸ್ಪಷ್ಟೀಕರಿಸಲು ಮುಂದಾಗ ಸದಸ್ಯರಾದ ಗೂಳಪ್ಪ ಶೆಟಗಾರ, ರಾಜು ಮಗಿಮಠ ಇತರರು ಅಜೆಂಡಾದಲ್ಲಿರುವ ಯಾವುದೇ ವಿಷಯ ತೆಗೆದು ಹಾಕುವ ಅಧಿಕಾರ ಮೇಯರ್‌ಗೆ ಇಲ್ಲ. ಇದೇ ಎಂದಾದರೆ ಲಿಖೀತವಾಗಿ ಬರೆದುಕೊಡಿ ಎಂದು ಆಗ್ರಹಿಸಿದರು. ನಗರದಲ್ಲಿ ಗಂಭೀರ ಸ್ವರೂಪದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಚರ್ಚೆಗೆ ಆದ್ಯತೆ ನೀಡೋಣ ಎಂದು ರಾಜೇಶ ದೇವಗಿರಿ ಸಲಹೆ ನೀಡಿದ್ದರಿಂದ ಸದಸ್ಯರು ಸುಮ್ಮನಾದರು.

ನಗರದಲ್ಲಿ ಹೋಟೆಲ್, ಅಂಗಡಿ ಸೇರಿದಂತೆ ಉದ್ಯಮ ಪರವಾನಗಿ ಲೈಸನ್ಸ್‌ ಶುಲ್ಕ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಶುಲ್ಕವನ್ನು ಮೀರುವಂತಿದೆ ಎಂದು ಪ್ರಕಾಶ ಮಿರ್ಜಿ ಆಕ್ಷೇಪಿಸಿದಾಗ, ಆಯುಕ್ತ ಡಾ| ಔದ್ರಾಮ ಸಣ್ಣ ಪುಟ್ಟ ಅಂಗಡಿ, ಹೋಟೆಲ್ಗಳಿಗೆ ಯಾವುದೇ ರೀತಿ ಶುಲ್ಕ ಏರಿಸಿಲ್ಲ. ಆದರೆ ಸರ್ಕಾರದ ನಿರ್ದೇಶದನ್ವಯ ಭಾರೀ ಉದ್ಯಮಗಳಿಗೆ ಮಾತ್ರ ಶುಲ್ಕ ಏರಿಕೆ ಮಾಡಲಾಗಿದೆ. ಹೋಟೆಲ್, ಹತ್ತಿ, ಕಿರಾಣಿ ಸೇರಿದಂತೆ ಇತರೆ ಉದ್ಯಮಗಳಿಗೆ ಬೇರೆ-ಬೇರೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಸ್ಪಷ್ಟೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next