Advertisement

ಕುಡಿಯುವ ನೀರಿನ ತೊಟ್ಟಿಗೆ ಚರಂಡಿ ನೀರು!

11:27 AM Oct 13, 2019 | Naveen |

ವಿಜಯಪುರ: ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಅವಾಂತರದಿಂದ ನಗರ ನಿವಾಸಿಗಳು ಕಂಗೆಟ್ಟಿದ್ದಾರೆ. ಇದರ ಮಧ್ಯೆ ನಗರದ ಪಡಗಾನೂರ ಕಾಲೋನಿಯ ಮನೆಗಳ ಕುಡಿಯುವ ನೀರಿನ ನೀರು ಸಂಗ್ರಹ ತೊಟ್ಟಿಗೆ ಪಾಲಿಕೆ ನಿರ್ಮಿಸಿರುವ ವೆಟ್‌ ವೆಲ್‌ನಿಂದ ಚರಂಡಿ ನೀರು ಸೋರಿಕೆಯಾಗಿ ಜನರು ಸಾಂಕ್ರಾಮಿಕ ರೋಗದಿಂದ ಬಳಲುವಂತಾಗಿದೆ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳಿದ್ದರೂ ಜನರಿಗೆ ಮಾತ್ರ ಈ ನರಕದಿಂದ ಮುಕ್ತಿ ಸಿಕ್ಕಿಲ್ಲ.

Advertisement

ನಗರದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮನೆಗಳ ಸುತ್ತಲೂ ಸ್ವತ್ಛತೆ ಪರಿಸರ ನಿರ್ಮಿಸಿಕೊಳ್ಳುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಸಾರ್ವಜನಿಕರಿಗೆ ಜಾಗ್ರತೆಯ ಪಾಠ ಮಾಡುತ್ತಾರೆ. ಆದರೆ ಮಹಾನಗರ ಪಾಲಿಕೆ ಅಧಿಕಾರಿಗಳು ತನ್ನದೇ ಕಚೇರಿಯಿಂದ ಆಗಬೇಕಿರುವ ಚರಂಡಿ ನೀರಿನ ಸೋರಿಕೆ ತಡೆಯುವಲ್ಲಿ ವಿಫ‌ಲವಾಗಿದ್ದಾರೆ ಎಂದು ಸ್ಥಳೀಯರು ಕಿಡಿ ಕಾರುತ್ತಿದ್ದಾರೆ. ನಗರದ ಅಥಣಿ ರಸ್ತೆಯಲ್ಲಿರುವ ಪಡಗಾನೂರ ಕಾಲೋನಿಯಲ್ಲಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಒಳಚರಂಡಿ ನೀರಿನ ಬಾಧೆ ಇದೆ.

ಇದನ್ನು ತಪ್ಪಿಸಲೆಂದೇ ಸರ್ಕಾರ ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆಯಿಂದ ವೆಟ್‌ವೆಲ್‌ ನಿರ್ಮಿಸಿ, ಪಾಲಿಕೆಗೆ ಹಸ್ತಾಂತರಿಸಿದೆ. ಈ ವೆಟ್‌ವೆಲ್‌ನಿಂದ ಪಂಪ್‌ ಅಳವಡಿಸಿ ಚರಂಡಿ ನೀರನ್ನು ಎತ್ತರದ ಪ್ರದೇಶದಲ್ಲಿನ ಚರಂಡಿಗೆ ಸಾಗ ಹಾಕಲಾಗುತ್ತದೆ.

ದಿನದ 24 ಗಂಟೆ ಈ ಕಾರ್ಯ ನಿರಂತರ ನಡೆಯಲಿದ್ದು, ಮೂರು ಪಾಳೆಯಂತೆ ಮೂವರು ಸಿಬ್ಬಂದಿ ಕೂಡ ಇಲ್ಲಿ ಕೆಲಸ ಮಾಡುತ್ತಾರೆ. ಆದರೆ, ಸದರಿ ಪ್ರದೇಶದಲ್ಲಿ ಪದೇ-ಪದೇ ವಿದ್ಯುತ್‌ ಸಮಸ್ಯೆ ಇರುವ ಕಾರಣ ವಿದ್ಯುತ್‌ ಇಲ್ಲದ ಸಂದರ್ಭದಲ್ಲಿ ವೆಟ್‌ವೆಲ್‌ನಲ್ಲಿ ಸಂಗ್ರಹವಾಗುವ ನೀರು ಪಕ್ಕದಲ್ಲಿ ತಗ್ಗು ಪ್ರದೇಶದಲ್ಲಿರುವ ಮನೆಗಳ ಸುತ್ತಲೂ ಸಂಗ್ರಹವಾಗಿ ಚರಂಡಿ ನೀರಿನಿಂದ ಸೊಳ್ಳೆ ಸೇರಿದಂತೆ ಕೀಟಗಳ ಹಾವಳಿ ಹೆಚ್ಚಿದೆ.

ಎಲ್ಲಕ್ಕಿಂತಹೆಚ್ಚಾಗಿ ಮನೆಗಳ ಸುತ್ತಲೂ ಸಂಗ್ರಹವಾಗುವ ಚರಂಡಿ ನೀರು ಭೂಮಿಯಲ್ಲಿ ಇಂಗುತ್ತಿದ್ದು, ಮನೆಗಳಲ್ಲಿ ನೀರು ಸಂಗ್ರಹಕ್ಕೆ ನಿರ್ಮಿಸಿರುವ ತೊಟ್ಟಿಗಳಿಗೆ ಹಾಗೂ ಕೊಳವೆ ಬಾವಿಗಳಿಗೆ ಸೇರತೊಡಗಿದೆ. ಇದರಿಂದ ಜನರು ಮಲೀನ ನೀರು ಸೇವನೆ ಅನಿವಾರ್ಯವಾಗಿದ್ದು, ಜನರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವಂತಾಗಿದೆ.

Advertisement

ಮತ್ತೂಂದೆಡೆ ಚರಂಡಿ ನೀರು ಸಂಗ್ರಹವಾಗುತ್ತಿರುವ ಮನೆಗಳ ಸುತ್ತಲೂ ಮುಳ್ಳುಕಂಟಿಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ವಿಷ ಜಂತುಗಳ ಹಾವಳಿಯೂ ಹೆಚ್ಚಾಗಿದೆ. ರಾತ್ರಿ ವೇಳೆ ಈ ಭಾಗದ ರಸ್ತೆಗಳಲ್ಲಿ ಸಂಚರಿಸಲು ಭಯವಾಗುತ್ತಿದೆ. ಬೀದಿ ದೀಪಗಳ ವ್ಯವಸ್ಥೆಯೂ ಸೂಕ್ತವಾಗಿ ನಿರ್ವಹಣೆ ಇಲ್ಲದೇ ಕತ್ತಲಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ಇಷ್ಟಿದ್ದರೂ ಯಾರೋಬ್ಬರೂ ನಮ್ಮ ಕಾಲೋನಿ ಕಡೆ ತಲೆ ಹಾಕುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.

ವೆಟ್‌ವೆಲ್‌ ಚರಂಡಿ ನೀರಿನ ನಿರ್ವಹಣೆಯಲ್ಲಿನ ಲೋಪದಿಂದಾಗಿ ಆಗುತ್ತಿರುವ ಸಮಸ್ಯೆ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕಿದ್ದರೂ ತ್ವರಿತ ಕ್ರಮ ಕೈಗೊಂಡಿಲ್ಲ. ಹಲವು ಅಧಿಕಾರಿಗಳು
ಸ್ಥಳಕ್ಕೆ ಭೇಟಿ ನೀಡಿ ಹೋಗಿದ್ದು ಬಿಟ್ಟರೆ ಪಡಗಾನೂರ ಕಾಲೋನಿಗಳ ಮನೆಗಳ ಸುತ್ತಲೂ ಆವರಿಸಿರುವ ಚರಂಡಿ ನೀರು ಸ್ವತ್ಛಗೊಳಿಸುವಲ್ಲಿ ಗಂಭೀರ ಕ್ರಮ ಕೈಗೊಂಡಿಲ್ಲ. ವಿದ್ಯುತ್‌ ಇಲ್ಲದ ಸಂದರ್ಭದಲ್ಲಿ ವೆಟ್‌ವೆಲ್‌ನಲ್ಲಿ ಪಂಪ್‌ ಕೆಲಸ ಮಾಡದ ಕಾರಣ ಸಂಗ್ರಹವಾಗುವ ಚರಂಡಿ ನೀರು ನಿರಂತರ ಸೋರಿಕೆಯಾಗಿ ರಸ್ತೆಗಳಲ್ಲಿ ಹಾಗೂ ಪಕ್ಕದಲ್ಲಿನ ಮನೆಗಳನ್ನು ಸುತ್ತುವರಿದಿದೆ. ವೆಟ್‌ವೆಲ್‌ ಪಂಪ್‌ ನಿರಂತರ ಕೆಲಸ ನಿರ್ವಹಿಸಲು ವಿದ್ಯುತ್‌ ಸಂಪರ್ಕ ಕಡಿತವಾದ ಸಂದರ್ಭದಲ್ಲಿ ಜನರೇಟರ್‌ ಮೂಲಕ ಪಂಪ್‌ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಮಹಾನಗರ ಪಾಲಿಕೆ ಆಧಿಕಾರಿಗಳನ್ನು ಸಂಪರ್ಕಿಸಿದರೆ ವೆಟ್‌ವೆಲ್‌ ಸೋರಿಕೆ ಕುರಿತು ತಮ್ಮ ಗಮನಕ್ಕಿದೆ. ವಿದ್ಯುತ್‌ ಸಮಸ್ಯೆ ಇರುವ ಕಾರಣ ವೆಟ್‌ವೆಲ್‌ ಪಂಪ್‌ ಕೆಲಸ ಮಾಡಲಾಗದೇ ಸುತ್ತಲಿನ ಮನೆಗಳಿಗೆ ಹಾಗೂ ಜಲ ಮೂಲಗಳಿಗೆ ನುಗ್ಗುತ್ತಿರುವುದನ್ನು ಅವಲೋಕಿಸಿದೆ. ಹೀಗಾಗಿ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next