Advertisement

ತೊಗರಿ ಖರೀದಿ ಕೇಂದ್ರ ತೆರೆಯಲು ಡಿಸಿ ಸೂಚನೆ

06:18 PM Dec 26, 2019 | Naveen |

ವಿಜಯಪುರ: ತೊಗರಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹ ಧನದೊಂದಿಗೆ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು. ಜಿಲ್ಲೆಯಲ್ಲಿ 94 ಖರೀದಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದ್ದು, ಸರ್ಕಾರದ ಆದೇಶದಂತೆ ಡಿ.26ರಿಂದ ರೈತರ ನೋಂದಣಿ ಆರಂಭಿಸಲು ತಕ್ಷಣೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಕೃಷಿ ಮಾರಾಟ ಇಲಾಖೆ ಬೆಂಬಲ ಬೆಲೆ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಬೆಂಬಲ ಬೆಲೆ ಕಾರ್ಯ ನಿರ್ವಹಣೆ ಕುರಿತು ಅವರು ಈ ಸೂಚನೆ ನೀಡಿದರು. ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಘೋಷಿಸಿದೆ. ಇದರಲ್ಲಿ ಗುಣಮಟ್ಟದ ತೊಗರಿ ಉತ್ಪನ್ನಗಳ ಪ್ರತಿ ಕ್ವಿಂಟಲ್‌ಗೆ 5800 ರೂ. ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹ
ಧನ 300 ರೂ. ಸೇರಿ 6100 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ತೊಗರಿ ಖರೀದಿಸಲು ಕೇಂದ್ರ-ರಾಜ್ಯ ಸರ್ಕಾರದ ಬೆಂಬಲ ಬೆಲೆ ಯೋಜನೆ ಮಾರ್ಗಸೂಚಿಗಳನ್ವಯ ಪೂರ್ವ ಸಿದ್ಧತೆ ಮತ್ತು 20 ದಿನಗಳ ವರೆಗೆ ರೈತರ ನೋಂದಣಿ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು.

ವಿಜಯಪುರ ಜಿಲ್ಲಾ ಸಹಾಕಾರಿ ಸಂಘಗಳ ಉಪನಿಬಂಧಕರು ಹಾಗೂ ಶಾಖಾ ವ್ಯವಸ್ಥಾಪಕರು, ಮಾರ್ಕೆಟಿಂಗ್‌ ಫೆಡರೇಶನ್‌ ಅಧಿಕಾರಿಗಳ ಸಲಹೆ ಮೇರೆಗೆ ಖರೀದಿ ಕೇಂದ್ರಗಳೆಂದು ಪರಿಗಣಿಸಿರುವ ಕೃಷಿ ಪತ್ತಿನ ಸಹಕಾರಿ ಸಂಘ ಸಂಸ್ಥೆಗಳಲ್ಲಿ ರೈತರ ನೋಂದಣಿ ಪ್ರಾರಂಭಿಸಬೇಕು. ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳು ತೊಗರಿ ಬೆಳೆ ಬಿತ್ತನೆ ಕುರಿತು ಸಮಗ್ರ ವರದಿಯೊಂದಿಗೆ ಇತರ ಅವಶ್ಯಕ ಮಾಹಿತಿ ನೀಡಿದರು.

ಬೆಂಬಲ ಬೆಲೆಯಲ್ಲಿ ಖರೀದಿಸುವ ತೊಗರಿ ಬೆಳೆ ದಾಸ್ತಾನು ಮಾಡಲು ಬಸವನ ಬಾಗೇವಾಡಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ 1500 ಮೆ.ಟ. ಮತ್ತು ಆಲಮೇಲ ಉಪಮಾರುಕಟ್ಟೆಯಲ್ಲಿ 500 ಮೆ.ಟ. ಸಾಮರ್ಥ್ಯದ ಸಮಿತಿ ಒಡೆತನದ ಗೋದಾಮುಗಳು ಖಾಲಿ ಇವೆ. ಈ ಗೋದಾಮುಗಳನ್ನು ಸಂಬಂಧಿಸಿದ ಉಗ್ರಾಣ ವ್ಯವಸ್ಥಾಪಕರು ಹಸ್ತಾಂತರ ಮಾಡಿಕೊಂಡು ಸುಸ್ಥಿತಿಯಲ್ಲಿ ಇರಿಸಿಕೊಳ್ಳುವಂತೆ ಸೂಚಿಸಿದರು.

ಎಪಿಎಂಸಿ ಸಹಾಯಕ ನಿರ್ದೇಶಕ ಚಬನೂರ ಮಾತನಾಡಿ, ಸರ್ಕಾರದ ನಿರ್ದೇಶನಗಳ ಕುರಿತು ಮಾಹಿತಿ ನೀಡುತ್ತ, ಪ್ರತಿ ಎಕರೆಗೆ 5 ಕ್ವಿಂಟಲ್‌ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 10
ಕ್ವಿಂಟಲ್‌ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ. ಖರೀದಿ ಕೇಂದ್ರಗಳಲ್ಲಿ ತೊಗರಿ ಉತ್ಪನ್ನ ಖರೀದಿಸುವ ಪೂರ್ವದಲ್ಲಿ ರೈತರು ವಿವರವನ್ನು ನ್ಯಾಫೆಡ್‌ ಸಂಸ್ಥೆಯ ತಂತ್ರಾಂಶದೊಂದಿಗೆ ಭೂಮಿ, ಯುಐಡಿಎಐ ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ಪರಿಶೀಲಿಸಲಾಗುತ್ತದೆ. ರೈತರು ನೀಡಿದ ದಾಖಲೆಗಳಿಗೆ ತಂತ್ರಾಂಶ ಹೊಂದಾಣಿಕೆಯಾದರೆ ಹೆಸರು ನೋಂದಣಿ ಮಾಡಿಕೊಳ್ಳಲಾಗುತ್ತದೆ.

Advertisement

ಖರೀದಿಸಿದ ತೊಗರಿಗೆ ಆಧಾರ ಎನೇಬಲ್‌ ಸಿಸ್ಟಮ್‌ (ಅಉಕಖ) ಮೂಲಕ ನೇರವಾಗಿ ರೈತರ ಖಾತೆಗೆ ಜಮೆ ಆಗುವಂತೆ ಪಾವತಿ ಮಾಡಬೇಕಾಗಿದೆ. ಖರೀದಿ ಕೇಂದ್ರಕ್ಕೆ ಬರುವ ತೊಗರಿ ಬೆಳೆಗಾರರು ತಮ್ಮ ಹೆಸರಿನ ಆಧಾರ್‌ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್‌ ಖಾತೆಗೆ ಮಾತ್ರ ನೀಡುವಂತೆ ಜಾಗೃತಿ ಮೂಡಿಸಬೇಕು ಎಂದು
ಮನವಿ ಮಾಡಿದರು.

ತೊಗರಿ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ತೊಗರಿ ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳ ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸತಕ್ಕದ್ದು. ಪ್ರಸ್ತುತ ಖರೀದಿಸಿದ ಉತ್ಪನ್ನವನ್ನು ದಾಸ್ತಾನು ಜಿಲ್ಲೆಯಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಪಕ್ಕದ ಜಿಲ್ಲೆಯ ಉಗ್ರಾಣಗಳಲ್ಲಿ ದಾಸ್ತಾನು ಮಾಡಬೇಕಾಗಿರುವುದರಿಂದ ಕನಿಷ್ಟ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ 50 ಕಿ ಮೀ ವ್ಯಾಪ್ತಿಯಲ್ಲಿ ಮಾತ್ರ ಸಾಗಾಣಿಕೆ ಮಾಡಲು ಅವಕಾಶವಿದ್ದು, ಪ್ರಸ್ತುತ ದಾಸ್ತಾನು ಮಾಡಲು ಉದ್ದೇಶಿಸಿದ ಉಗ್ರಾಣಗಳು 200 ಕಿ.ಮೀ ಕ್ಕಿಂತ ಹೆಚ್ಚಿನ ಅಂತರದಲ್ಲಿರುತ್ತವೆ ಎಂದರು.

ಕೃಷಿ ಜಂಟಿ ನಿರ್ದೇಶಕರು ಹಾಗೂ ಆಯಾ ತಾಲೂಕುಗಳ ಎಪಿಎಂಸಿ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳಾಗಿ ನೇಮಿಸಲಾಗಿದೆ. ಖರೀದಿ ಕೇಂದ್ರಗಳ ನೋಂದಣಿ ಮೇಲ್ವಿಚಾರಣೆಗೆ
ಸಹಕಾರಿ ಸಂಘಗಳ ಉಪ ನಿಬಂಧಕರು ಹಾಗೂ ಮಾರ್ಕೆಟಿಂಗ್‌ ಫೆಡರೇಶನ್‌ ಶಾಖಾ ವ್ಯವಸ್ಥಾಪಕರನ್ನು ನೇಮಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಸನ್ನ, ಕೃಷಿ ಜಂಟಿ ನಿರ್ದೇಶಕ ಶಿವುಕುಮಾರ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next