Advertisement

ರೆಸಾರ್ಟ್‌ನಲ್ಲಿ ಮೈತ್ರಿ ಸರ್ಕಾರ

05:06 PM May 03, 2019 | Naveen |

ವಿಜಯಪುರ: ರಾಜ್ಯದಲ್ಲಿ ಭೀಕರ ಬರ ಆವರಿಸಿ ಕುಡಿಯುವ ನೀರೂ ಇಲ್ಲದೇ ಜನ ತತ್ತರಿಸುತ್ತಿದ್ದಾರೆ. ಸಿ.ಎಂ. ಕುಮಾರಸ್ವಾಮಿ ಅವರ ಸರ್ಕಾರ ವಿಧಾನಸೌಧದಲ್ಲಿ ಇರದೇ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದೆ. ಪರಿಣಾಮ ವಿಧಾನಸೌಧದಲ್ಲಿ ಜನರ ಸಮಸ್ಯೆ ಆಲಿಸಲು ಸರ್ಕಾರವೇ ಇಲ್ಲದ ದುಸ್ಥಿತಿ ನಿರ್ಮಾಣವಾಗಿದೆ. ಇದು ರಾಜ್ಯದ ಸಮ್ಮಿಶ್ರ ಸರ್ಕಾರ ಬೇಜವಾಬ್ದಾರಿಗೆ ಹಿಡಿದ ಕನ್ನಡಿ ಎಂದು ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಗೋವಿಂದ ಕಾರಜೋಳ ವಾಗ್ಧಾಳಿ ನಡೆಸಿದರು.

Advertisement

ಗುರುವಾರ ನಗರದ ಜಲನಗರದಲ್ಲಿರುವ ನೀಲೂರ ನಿಂಬೆಕ್ಕ ಮಂಗಲ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಭೀಕರ ಬರ, ಬಿಸಿಲು, ಕುಡಿಯುವ ನೀರಿನ ಸಮಸ್ಯೆ ನಡುವೆಯೂ ಬಿಜೆಪಿ ಕಾರ್ಯಕರ್ತರು ಹಾಗೂ ಜಿಲ್ಲೆ ಜನ ಕೆಲಸ ಮಾಡಿದ್ದಾರೆ. 2019ರ ಲೋಕಸಭೆ ಚುನಾವಣೆ ಐತಿಹಾಸಿಕ ಚುನಾವಣೆ. ದೇಶದ ರಕ್ಷಣೆ, ಸುರಕ್ಷತೆ, ಅಭಿವೃದ್ಧಿ ಕಾಳಜಿಯಿಂದ ಜನ ಈ ಚುನಾವಣೆಯಲ್ಲಿ ಭಾಗವಹಿಸಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಪ್ರಧಾನಿ ಮೋದಿ ಅಲೆ ಇತ್ತು. ದೇಶದ ಇತಿಹಾಸದಲ್ಲೇ ಇಂಥ ಅಲೆ ಇರಲಿಲ್ಲ. ದೇಶದ ಅಭಿವೃದ್ಧಿಗಾಗಿ ಜನ ಮೋದಿ ಪರ ಮತಚಲಾಯಿಸಿದ್ದಾರೆ. ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂಬ ಸಂಕಲ್ಪದೊಂದಿಗೆ ಜಾತಿ-ಮತ-ಪಂಥ ಮರೆತು ಬಿಜೆಪಿ ಬೆಂಬಲಿಸಿದ್ದಾರೆ ಎಂದರು.

ಹಣ ಮತ್ತು ದುಷ್ಟಶಕ್ತಿ ವಿರುದ್ಧ ಅಭಿವೃದ್ಧಿ ಪರವಾಗಿ ನಾವು ಎದುರಿಸಿರುವ ಚುನಾವಣೆಯಲ್ಲಿ ಗೆಲುವು ಸಾಧನೆ ಕಟ್ಟಿಟ್ಟ ಬುತ್ತಿ. ಯಾವುದೇ ಪಕ್ಷ ಬಲಿಷ್ಠವಾಗಲು ಸದೃಢ ಕಾರ್ಯಕರ್ತರ ಪಡೆ ಬೇಕು. ಅಂಥ ಕಾರ್ಯಕರ್ತರ ಶ್ರಮ ಪಕ್ಷದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ಹಣದ ಹೊಳೆ ಹರಿಸಿದರೂ ಮತದಾರರಿಗೆ ಯಾವ ಆಮಿಷ ಒಡ್ಡದೆ ಬಿಜೆಪಿ ಯಶಸ್ವಿ ಹೋರಾಟ ನಡೆಸಿರುವ ಕಾರಣ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಗೆಲುವು ನಿಶ್ಚಿತ ಎಂದರು.

ಮುಖಂಡ ವಿಜುಗೌಡ ಪಾಟೀಲ ಮಾತನಾಡಿ, ಕಾಂಗ್ರೆಸ್‌ ನವರು ಪ್ರತೀ ಗ್ರಾಮದಲ್ಲೂ ಹಣ ಹಂಚಿದ್ದರೂ ಬಿಜೆಪಿ ಗೆಲುವು ನಿಶ್ಚಿತ. ದೇಶದೆಲ್ಲೆಡೆ ಹರಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಬಿಜೆಪಿ ಮತ್ತೂಮ್ಮೆ ಕೇಂದ್ರದಲ್ಲಿ ಅಧಿಕಾರಿಕ್ಕೆ ಬರಲಿದೆ. ವಿಜಯಪುರ ಲೋಕಸಭೆ ವ್ಯಾಪ್ತಿಯ ಬಬಲೇಶ್ವರ ವಿಧಾನಸಭೆ ಕ್ಷೇತ್ರದಿಂದ ಈ ಬಾರಿ ಹೆಚ್ಚಿನ ಅಂತರದ ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಗೆಲುವು ನಿಶ್ಚಿತ ಎಂದರು. ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರು, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ, ಸಂಗರಾಜ ದೇಸಾಯಿ, ಆರ್‌.ಎಸ್‌. ಪಾಟೀಲ ಕೂಚಬಾಳ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಲ್ಲಮ್ಮ ಜೋಗೂರ, ವಿವೇಕಾಂದ ಡಬ್ಬಿ, ರವಿಕಾಂತ ಬಗಲಿ, ಗೂಳಪ್ಪ ಶಟಗಾರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next