Advertisement

ಸಿಬ್ಬಂದಿ ಕೊರತೆ-ಒಬ್ಬ ಅಧಿಕಾರಿಗೆ 3 ಹೊಣೆ

10:35 AM Aug 03, 2019 | Team Udayavani |

ಜಿ.ಎಸ್‌. ಕಮತರ
ವಿಜಯಪುರ
: ಕೇಂದ್ರ ಸರ್ಕಾರ ದೇಶದ ಪ್ರಮುಖ ಐತಿಹಾಸಿಕ ಸ್ಮಾರಕ ಇರುವ ಪ್ರವಾಸಿ ತಾಣಗಳ ವೀಕ್ಷಣೆಗೆ ರಾತ್ರಿ 9ರವರೆಗೆ ಸಮಯ ವಿಸ್ತರಿಸಲು ನಿರ್ಧರಿಸಿದ್ದು, ಸಾರ್ವಜನಿಕ ವಲಯದಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಆದರೆ ದೇಶದ ಸ್ಮಾರಕಗಳ ಸಂರಕ್ಷಣೆಗೆಂದೇ ಇರುವ ಭಾರತೀಯ ಪುರಾತತ್ವ ಇಲಾಖೆಯಲ್ಲಿ ತಾಂಡವವಾಡುತ್ತಿರುವ ಅಧಿಕಾರಿಗಳು-ಸಿಬ್ಬಂದಿ ಕೊರತೆ ನೀಗಲು ಆದ್ಯತೆ ನೀಡಿಲ್ಲ. ಹೀಗಾಗಿ ಕೆಲಸದ ಒತ್ತಡದಿಂದ ಬಳಲುತ್ತಿರುವ ಇಲಾಖೆ ಸರ್ಕಾರದ ನೀತಿಳಿಂದ ಕಂಗೆಟ್ಟಿದೆ.

Advertisement

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಪ್ರಸಕ್ತ ವರ್ಷದಲ್ಲಿ ದೇಶದ ಪ್ರವಾಸೋದ್ಯಮ ಇಲಾಖೆಯನ್ನು ಬಲಪಡಿಸಲು ಉದ್ದೇಶಿಸಿದೆ. ಇದರ ಭಾಗವಾಗಿ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಈ ಹಿಂದೆ ಇದ್ದ ಪ್ರವೇಶದ ಸಮಯವನ್ನು ಬದಲಿಸಿ ರಾತ್ರಿ 10ರವರೆಗೆ ವಿಸ್ತರಿಸಲು ಮುಂದಾಗಿದ್ದಾರೆ. ಆದರೆ ಸರ್ಕಾರ ಈ ನಿರ್ಧಾರಕ್ಕೆ ಬರುವ ಮುನ್ನ ತನ್ನ ಸ್ವಾಧೀನದಲ್ಲಿರುವ ಭಾರತೀಯ ಪುರಾತತ್ವ ಇಲಾಖೆಯ ಕುಂದು-ಕೊರತೆಗಳೇನು ಎಂಬುದನ್ನು ಆಲಿಸಲು ಮುಂದಾಗಿಲ್ಲ. ಪರಿಣಾಮ ಸಿಬ್ಬಂದಿ ಕೊರತೆ ಇರುವ ಸಿಬ್ಬಂದಿ ಮೇಲೆ ಹೆಚ್ಚಿನ ಒತ್ತಡ ಬೀಳುವಂತೆ ಮಾಡಿದೆ. ಇಂತ ಸ್ಥಿತಿಯಲ್ಲೇ ಹೆಚ್ಚಿನ ಮಾನವ ಸಂಪನ್ಮೂಲ ಬಯಸುವ ನಿರ್ಧಾರಗಳನ್ನು ಕ್ಯೆಗೊಳ್ಳಲು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಐತಿಹಾಸಿಕ ಸ್ಮಾರಕಗಳ ವಿಷಯಕ್ಕೆ ಬಂದರೆ ವಿಶ್ವದ ಪ್ರಮುಖ ಸ್ಮಾರಕಗಳಲ್ಲಿ ಅಪರೂಪದೆಂಬ ಸ್ಥಾನ ಪಡೆದಿರುವ ಇತಿಹಾಸ ಪ್ರಸಿದ್ದ ಗೋಲಗುಮ್ಮಟ ಇರುವ ವಿಜಯಪುರ ಒಂದರಲ್ಲೇ ನೂರಾರು ಸ್ಮಾರಕಗಳಿದ್ದು, ರಕ್ಷಣೆ ಇಲ್ಲದೇ ಬಳಲುತ್ತಿವೆ.

ವಿಜಯಪುರ ನಗರವನ್ನು ರಾಜಧಾನಿಯಾಗಿ ಮಾಡಿಕೊಂಡು ಆದಿಲ್ ಶಾಹಿ ದೊರೆಗಳು ಆಳಿದ್ದು, ನಗರ ಪ್ರದೇಶ ಒಂದರಲ್ಲೇ ಕೇಂದ್ರ ಸರ್ಕಾರಿ ಸ್ವಾಮ್ಯದ ಪುರಾತತ್ವ ಇಲಾಖೆಗೆ ಸೇರಿದ ಅಧಿಕೃತ 78 ಸ್ಮಾರಕಗಳಿವೆ. ಇಷ್ಟೊಂದು ಪ್ರಮಾಣದಲ್ಲಿ ಸ್ಮಾರಕಗಳಿರುವ ಕಾರಣಕ್ಕೆ ವಿಜಯಪುರ ನಗರದಲ್ಲೇ ಪುರಾತತ್ವ ಇಲಾಖೆ ಪೂರ್ವ ಹಾಗೂ ಪಶ್ಚಿಮ ಎಂಬ 2 ಉಪ ವೃತ್ತಗಳನ್ನು ಮಾಡಿದ್ದು, ಸಹಾಯಕ ಸಂರಕ್ಷಣಾಧಿಕಾರಿ ದರ್ಜೆ ಅಧಿಕಾರಿಗಳ ಕಚೇರಿಗಳನ್ನು ತೆರೆದಿದೆ. ಒಂದು ಕಚೇರಿ ಗೋಲಗುಮ್ಮಟ ಆವರಣದಲ್ಲಿದ್ದು, ಮತ್ತೂಂದು ಕಚೆೇರಿ ಜೋಡುಗುಮ್ಮಟ ಆವರಣದಲ್ಲಿದೆ. ಜೋಡುಗುಮ್ಮಟ ಆವರಣದಲ್ಲಿರುವ ಪೂರ್ವ ಉಪ ವೃತ್ತದಲ್ಲಿನ ಕಚೇರಿಗೆ ಹಲವು ವರ್ಷಗಳಿಂದ ಅಧಿಕಾರಿಗಳನ್ನೇ ನೇಮಿಸಿಲ್ಲ. ಪರಿಣಾಮ ಗೋಲಗುಮ್ಮಟ ಆವರಣದಲ್ಲಿರುವ ಪೂರ್ವ ವಲಯದ ಕಚೇರಿ ಸಹಾಯಕ ಸಂರಕ್ಷಣಾಧಿಕಾರಿಯೇ ಎರಡೂ ಕಚೇರಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಇನ್ನು ಪೂರ್ವ ವೃತ್ತದಲ್ಲಿ ಗೋಲಗುಮ್ಮಟ ಸೇರಿದಂತೆ 26 ಸ್ಮಾರಕಗಳಿದ್ದು, ಪಶ್ಚಿಮ ವೃತ್ತದಲ್ಲಿ ಇಬ್ರಾಹಿಂ ರೋಜಾ ಸೇರಿದಂತೆ 52 ಸ್ಮಾರಕಳಿವೆ. ಇದರಲ್ಲಿ ಗೋಲಗುಮ್ಮಟ, ಇಬ್ರಾಹಿಂ ರೋಜಾ, ಬಾರಾಕಮಾನ್‌ ಗಗನಮಹಲ್ ಸೇರಿದಂತೆ ಹಲವು ಅಪರೂಪದ ಸ್ಮಾರಕಗಳಿಗೆ ಹೆಚ್ಚಿನ ಸಿಬ್ಬಂದಿ ಬೇಕು. ಆದರೆ ಪೂರ್ವ ಹಾಗೂ ಪಶ್ಚಿಮ ಉಪ ವೃತ್ತಗಳಿಗೆ ತಲಾ 16ರಂತೆ 32 ಸಿಬ್ಬಂದಿ ಮಾತ್ರ ಇದ್ದು, ಈ ಸಿಬ್ಬಂದಿಯಲ್ಲಿ ವಾರದ ರಜೆ, ಸರ್ಕಾರಿ ರಜೆ, ಸಿಬ್ಬಂದಿ ಖಾಸಗಿ ರಜೆ ಆಂತೆಲ್ಲ ಇರುವ ಸಿಬ್ಬಂದಿಯೇ ಎಲ್ಲವನ್ನೂ ನಿಭಾಯಿಸುವ ಒತ್ತಡದಲ್ಲಿದೆ. ಇದರ ಮಧ್ಯೆ ವಿಜಯಪುರ ಪೂರ್ವ ಉಪ ವೃತ್ತದ ಸಹಾಯಕ ಸಂರಕ್ಷಣಾಧಿಕಾರಿಗೆ 275 ಕಿ.ಮೀ. ದೂರದ ಬೀದರ ಜಿಲ್ಲೆಯ ಉಸ್ತುವಾರಿ ಹೊಣೆಯನ್ನೂ ನೀಡಲಾಗಿದೆ. ಒಬ್ಬನೇ ಅಧಿಕಾರಿಗೆ ಅಸಂಜತೆ ಎಂಬಂತೆ ಹೊಣೆಗಾರಿಕೆ ನೀಡಿ ಒತ್ತಡ ಹೇರುತ್ತಿರುವ ಕೇಂದ್ರ ಸರ್ಕಾರ, ಪುರಾತತ್ವ ಇಲಾಖೆ ಬಲಪಡಿಸುವಲ್ಲಿ ಆದ್ಯತೆ ನೀಡದೇ ನಿರ್ಲಕ್ಷಿಸುತ್ತಿದೆ ಎಂಬುದಕ್ಕೆ ಇದು ಸಾಕ್ಷಿ.

Advertisement

ಇನ್ನು ವಿಜಯಪುರ ನಗರ ಒಂದರಲ್ಲೇ ಸುಮಾರು ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯ ಒಡೆತನದಲ್ಲಿರುವ 78 ಸ್ಮಾರಕಗಳಲ್ಲಿ ಗೋಲಗುಂಮ್ಮಟ, ಬಾರಾಕಮಾನ್‌, ಇಬ್ರಾಹಿಂ ರೋಜಾ ಸೇರಿದಂತೆ ಕೆಲ ಸ್ಮಾರಕಗಳನ್ನು ಹೊರತುಪಡಿದರೆ, ಬಹುತೇಕ ಸ್ಮಾರಕಗಳ ಭದ್ರತೆ ನೋಡಿಕೊಳ್ಳಲು ಸಿಬ್ಬಂದಿಯೇ ಇಲ್ಲ. ಪ್ರಮುಖ ಕನಿಷ್ಠ ಒಂದೊಂದು ಸ್ಮಾರಕಕ್ಕೆ ದಿನದ 24 ಗಂಟೆಯಂತೆ ಒಬ್ಬೊಬ್ಬ ಸಿಬ್ಬಂದಿಯಂತೆ ಲೆಕ್ಕ ಹಾಕಿದರೂ 78 ಸಿಬ್ಬಂದಿ ಬೇಕು. ಆದರೆ ಕೇವಲ 32 ಸಿಬ್ಬಂದಿಯನ್ನೇ ಇರಿಸಿಕೊಂಡು ಇಲಾಖೆ ಅಧಿಕಾರಿಗಳು ಸಂರಕ್ಷಣೆ ಮಾಡುವ ಮಾತನಾಡುತ್ತಿರುವುದು ನಿಜಕ್ಕೂ ಸೋಜಿಗ ಎನಿಸುತ್ತಿದೆ ಎಂದು ಸಾರ್ವಜನಿಕರು ವ್ಯಂಗ್ಯವಾಡಲು ಅವಕಾಶ ನೀಡಿದೆ.

ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸ್ಮಾರಕಗಳನ್ನು ಹೊಂದಿರುವ ವಿಜಯಪುರ ಜಿಲ್ಲೆಯ ಗೋಲಗುಮ್ಮಟವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸುವಂತೆ ದಶಕಗಳಿಂದ ಒಕ್ಕೋರಲ ಧ್ವನಿ ಕೇಳಿ ಬರುತ್ತಿದೆ. ಜಿಲ್ಲೆಯವರೇ ಆಗಿರುವ ರಮೇಶ ಜಿಗಜಿಣಗಿ ಅವರು ಮೋದಿ ಅವರ ಮೊದಲ ಸರ್ಕಾರದಲ್ಲಿ ಕೇಂದ್ರದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಈ ಕುರಿತು ಭರವಸೆ ನೀಡಿದ್ದು ಕೂಡ ಹುಸಿಯಾಗಿದೆ.

ಐತಿಹಾಸಿಕವಾಗಿ ಗೋಲಗುಮ್ಮಟ ಸೇರಿದಂತೆ ನೂರಾರು ಸ್ಮಾರಕಗಳನ್ನು ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಪುರಾತತ್ವ ಇಲಾಖೆಯ ವೃತ್ತ ಕಚೇರಿ ಸ್ಥಾಪಿಸುವ ಬೇಡಿಕೆ ಕೂಡ ಹಳೆಯದು. ಪುರಾತತ್ವ ಇಲಾಖೆಯ ವಲಯ ಕಚೇರಿ ಒಂದೆರಡು ಸ್ಮಾರಕಗಳಿರುವ ಧಾರವಾಡ ಜಿಲ್ಲೆಯಲ್ಲಿದ. ನೂರಾರು ಸ್ಮಾರಕಗಳಿರುವ ವಿಜಯಪುಕ್ಕೆ ಸ್ಥಳಾಂತರಿಸಿ, ಇಲ್ಲವೇ ವಿಜಯಪುರಕ್ಕೆ ಪ್ರತ್ಯೇಕ ವಲಯ ಕಚೇರಿ ಮಂಜೂರಿ ಮಾಡಬೇಕು ಎಂಬ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸದಿರುವುದಕ್ಕೆ ಜಿಲ್ಲೆಯ ಜನರು ಆಸಮಾಧಾನ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next