Advertisement

Vijayapura; ಕಳಪೆ ಗುಣಮಟ್ಟದ ಸ್ಪಿಂಕ್ಲರ್ ಪೈಪ್ ವಿತರಣೆ ಆರೋಪ: ರೈತರ ಪ್ರತಿಭಟನೆ

03:11 PM Jan 16, 2024 | keerthan |

ವಿಜಯಪುರ: ಸರ್ಕಾರದಿಂದ ಕೃಷಿ, ತೋಟಗಾರಿಕೆ ಇಲಾಖೆ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸುವ ಸ್ಪಿಂಕ್ಲರ್ ಪೈಪ್ ಕಳಪೆ ಗುಣಮಟ್ಟದಿಂದ ಕೂಡಿದೆ. ರೈತರನ್ನು ವಂಚಿಸಿ, ಸರ್ಕಾರಕ್ಕೆ ಮೋಸ ಮಾಡುತ್ತಿರುವ ಅವ್ಯವಹಾರದ ಸಮಗ್ರ ತನಿಖೆ ನಡೆಸುವಂತೆ ರೈತರು ಆಗ್ರಹಿಸಿದ್ದಾರೆ.

Advertisement

ಮಂಗಳವಾರ ನಗರದಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಳಪೆ ಗುಣಮಟ್ಟದ ಸ್ಪಿಂಕ್ಲರ್ ಪೈಪ್ ಪ್ರದರ್ಶಿಸಿದ ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ವಿಠ್ಠಲ ಬಿರಾದಾರ, ಸರ್ಕಾರದ ಇಲಾಖೆ ಮೂಲಕವೇ ರೈತರಿಗೆ ಕಳಪೆ ಗುಣಮಟ್ಟದ ಸ್ಪ್ರಿಂಕ್ಲರ್ ಪೈಪ್‍ ವಿತರಿಸಿದ್ದಾರೆ. ಇದರ ವಿರುದ್ಧ 2023 ಜುಲೈ ತಿಂಗಳಲ್ಲಿ ಹೋರಾಟ ನಡೆಸಿ, ತನಿಖೆಗೆ ಆಗ್ರಹಿಸಿದರೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ದೂರು ನೀಡಿದರೂ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ರೈತರಿಗೆ ಪೂರೈಸಿದ ತುಂತುರು ಹನಿ ನೀರಾವರಿ (ಸ್ಪ್ರಿಂಕ್ಲರ್ ಪೈಪ್‍ಗಳು) ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ.  ಸ್ಪ್ರಿಂಕ್ಲರ್ ಪೈಪ್ ತಯಾರಿಸಿ, ಪೂರೈಸಿದ ಕಂಪನಿಯ ನೋಂದಣಿ ರದ್ದು ಮಾಡುವ, ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ಕಿಡಿ ಕಾರಿದರು.

ಕೇಂದ್ರ-ರಾಜ್ಯ ಸರ್ಕಾರಗಳ ಶೇ. 90 ರಿಯಾಯಿತಿ ದರದ ಅನುದಾನದಲ್ಲಿ ರೈತರಿಗೆ  ಸ್ಪ್ರಿಂಕ್ಲರ್ ಪೈಪ್ ವಿತರಿಸಲಾಗಿದೆ. ಆದರೆ ಪೂರೈಸಿದ ಸ್ಪ್ರಿಂಕ್ಲರ್ ಪೈಪ್‍ಗಳು ಸಂಪೂರ್ಣ ಕಳಪೆ ಮಟ್ಟದ ಕಚ್ಚಾ ವಸ್ತು ಬಳಸಿ ತಯಾರಿಸಲಾಗಿದೆ. ಈ ಅವ್ಯವಹಾರದ ತನಿಖೆಗೆ ಆಗ್ರಹಿಸಿ ದಿ.7-7-2023 ರಂದು ಜಿಲ್ಲಾಡಳಿತದ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಸಮಗ್ರ ತನಿಖೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೂ ತನಿಖೆ ನಡೆಸಿಲ್ಲ ಎಂದು ದೂರಿದರು.

ಸರ್ಕಾರದ ಹಣ ಪಡೆದು ರೈತರಿಗೆ ಕಳಪೆ ಗುಣಮಟ್ಟದ ಸಾಮಗ್ರಿ ಪೂರೈಸಿರುವ ಕಂಪನಿ ವಿರುದ್ಧ ಕ್ತಮ ಕೈಗೊಳ್ಳದ ಸರ್ಕಾರದ ಧೋರಣೆ ಅವ್ಯವಹಾರ ನಡೆಸಿದ ಕಂಪನಿ ಕೊತೆ ಶ್ಯಾಮೀಲಾಗಿದೆ ಎಂಬ ಅನುಮಾನ ಮೂಡಿಸುತ್ತಿದೆ ಎಂದು ಆರೋಪಿಸಿದರು.

Advertisement

ಈ‌ ಕುರಿತು ದಾಖಲೆ ಸಮೇತ ಲೋಕಾಯುಕ್ತರಿಗೂ ದೂರು ನೀಡಲಾಗಿದ್ದು, ತನಿಖೆ ಆರಂಭಗೊಂಡಿಲ್ಲ ಎಂದರು.

ಸರ್ಕಾರದ ಯೋಜನೆ ಅನುಷ್ಠಾನದಲ್ಲಿ ರೈತರಿಗೆ ಮೋಸ ಮಾಡಿರುವ ನೋಂದಾಯಿತ ಕಂಪನಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ಕಾಗದದ ದಾಖಲೆಗಳಿಗಿಂತ ಕಳಪೆ ಗುಣಮಟ್ಟದ ಸ್ಪ್ರಿಂಕ್ಲರ್ ಪೈಪುಗಳೇ ಕಣ್ಣೆದುರಿಗೆ ಸಾಕ್ಷಿ ಇದ್ದು, ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ವರ್ಷಪೂರ್ತಿ ಸ್ಪಿಂಕ್ಲರ್ ಪೈಪ್ ಪೂರೈಕೆಗೆ ಅವಕಾಶ ಇದ್ದರೂ ಕೇವಲ ಮೂರು ತಿಂಗಳು ಮಾತ್ರ ವಿತರಿಸಲಾಗುತ್ತದೆ. ಒಬ್ಬ ರೈತನಿಗೆ ಒಂದುಬಾರಿ ಸ್ಪಿಂಕ್ಲರ್ ಪೈಪ್ ಸೌಲಭ್ಯ ನೀಡಿದ ಬಳಿಕ ಮತ್ತೆ 7 ವರ್ಷಗಳ ವರೆಗೆ ಪೈಪ್ ಸೌಲಭ್ಯ ಸಿಗುವುದಿಲ್ಲ. ಒಂದೆಡೆ ರೈತರಿಗೆ ಅನ್ಯಾಯವಾಗುತ್ತಿದ್ದು, ತೊಂದರೆ ಅನುಭವಿಸುವಂತಾಗಿದೆ. ರಿಯಾಯಿತಿ ಹಣ ನೀಡುವ ಕಾರಣ ಸರ್ಕಾರಕ್ಕೂ ಆರ್ಥಿಕ ವಂಚನೆ ಆಗಿದೆ ಎಂದು ದೂರಿದರು.

ಕಳಪೆ ಮಟ್ಟದ ಸ್ಪಿಂಕ್ಲರ್ ಪೈಪ್ ತಯಾರಿಸಿ ರೈತರು, ಸರ್ಕಾರವನ್ನು ವಂಚಿಸಿದ ನೋಂದಾಯಿತ ಕಂಪನಿಗಳ ವಿರುದ್ಧ ಕೂಡಲೇ ಸರ್ಕಾರ ಹಾಗೂ ಲೋಕಾಯುಕ್ತರು ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಕಳಪೆ ಗುಣಮಟ್ಟದ ಸಾಮಗ್ರಿ ಪೂರೈಸಿದ ಕಂಪನಿಯ ನೋಂದಣಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next