Advertisement

ದುಷ್ಟ ಶಕ್ತಿಗಳ ಮೇಲೆ ಶಿಷ್ಟ ಶಕ್ತಿಗಳ ವಿಜಯೋತ್ಸವ ವಿಜಯದಶಮಿ

09:33 PM Oct 06, 2019 | Sriram |

ಕುಂದಾಪುರ: ನವರಾತ್ರಿಯ ಪ್ರಮುಖ ಆಕರ್ಷಣೆಯೇ ವಿಜಯ ದಶಮಿ. ಭಾರತೀಯ ಸಂಸ್ಕೃತಿ ಯಲ್ಲಿ ಪ್ರಕೃತಿಯನ್ನು ದೇವರೆಂದು ಆರಾಧಿಸುತ್ತೇವೆ. ಅವುಗಳಲ್ಲಿ ಬಿಲ್ವವೃಕ್ಷ ಪರಶಿವನಿಗೆ ಪ್ರಿಯ. ತುಳಸೀ ಮಹಾವಿಷ್ಣುವಿಗೆ ಅತಿ ಪ್ರಿಯ. ಗರಿಕೆ ಗಣಪತಿಗೆ ಪ್ರಿಯ. ತುಂಬೆಗಿಡ ಶಿವನಿಗೆ ಪ್ರಿಯ. ಅಶ್ವತ್ಥ ವೃಕ್ಷ ತ್ರಿಮೂರ್ತಿಗಳಿಗೆ ಪ್ರಿಯ. ಪಾರಿಜಾತ ಆಂಜನೇಯ ಸ್ವಾಮಿಗೆ ಪ್ರಿಯ. ನವಗ್ರಹರಿಗೆ ಒಂದೊಂದು ಸಸ್ಯಗಳು ಪ್ರಿಯವಾಗಿವೆ. ಹಾಗೆಯೇ ಶಮೀವೃಕ್ಷ (ಬನ್ನಿವೃಕ್ಷ) ಕೂಡ ಬಹಳ ವಿಶೇಷತೆಗಳಿಂದ ಕೂಡಿದೆ. ಈ ವೃಕ್ಷದಲ್ಲಿ ಅಗ್ನಿಯು ದುರ್ಗಾ ರೂಪದಲ್ಲಿ ಸನ್ನಿಹಿತರಾಗಿರುತ್ತಾನೆ.

Advertisement

ನವರಾತ್ರಿಯ ವಿಜಯದಶಮಿಯಂದು ಶಮೀವೃಕ್ಷ ಪೂಜೆ ಮಾಡಿದರೆ “ಅತಿಶಯವಾದ’ ಪುಣ್ಯ ಪ್ರಾಪ್ತವಿದೆ. ಪೌರಾಣಿಕ ಹಿನ್ನೆಲೆಯ ಪ್ರಕಾರ ಪಾಂಡವರು ಅಜ್ಞಾತ ವಾಸಕ್ಕೆ ಹೋಗುವಾಗ ಈ ಶಮೀ ವೃಕ್ಷದ ಬುಡದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಇರಿಸಿದ್ದರಂತೆ. ಅನಂತರ ವಿಜಯದಶಮಿಯಂದು ಈ ಬನ್ನಿವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ದುರ್ಗಾ ಅನುಗ್ರಹ ಪಡೆದು ಶಸ್ತ್ರಾಸ್ತ್ರಗಳನ್ನು ಹೊರ ತೆಗೆದು ಕೌರವರ ಮೇಲೆ ವಿಜಯ ಸಾಧಿಸಿ “ವಿಜಯೋತ್ಸವ’ ಸಾಧಿಸಿದ ಈ ದಿನ ವಿಜಯದಶಮಿ. ಅಗ್ನಿ ಎನ್ನುವುದು ಪರಿಶುದ್ಧತೆಯ ಸಂಕೇತ. ಅಗ್ನಿ ಎಲ್ಲ ಪಾಪಗಳನ್ನು ಕಳೆಯುವಂಥದ್ದು. ಇಂತಹ ಅಗ್ನಿಯ ಸನ್ನಿಧಾನವಿರುವ ಶಮೀ ವೃಕ್ಷ ಪೂಜೆಯಿಂದ ಮಾನವನ ಪಾಪಗಳು ನಾಶವಾಗಿ ಪುಣ್ಯ ಲಭಿಸುತ್ತವೆ. ಹಾಗಾಗಿ ನವರಾತ್ರಿಯ ಈ ವಿಜಯ ದಶಮಿಯಂದು ಶಮೀಪೂಜೆ ಮಾಡುವುದಾಗಿದೆ.

ವಿಜಯದಶಮಿಯ ಪೌರಾಣಿಕ ಹಿನ್ನೆಲೆ
ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ದೇವರು ಲೋಕ ಕಂಟಕನಾದ ದಶಕಂಠ ರಾವಣನನ್ನು ವಧಿಸಿದ ದಿನ ವಿಜಯದಶಮಿ. ಈ ವಿಜಯಕ್ಕಾಗಿ ಒಂಬತ್ತು ದಿನಗಳ ಕಾಲ ದುಷ್ಟ ಸಂಹಾರಿಣಿ ಶ್ರೀ ದುರ್ಗಾಮಾತೆಯನ್ನು ಪೂಜಿಸಿ ಹತ್ತನೆಯ ದಿನ ಅಂದರೆ, ದಶಮಿಯಂದು ದೈತ್ಯ ರಾವಣನನ್ನು ವಧಿಸಿ ವಿಜಯೋತ್ಸವ ಆಚರಿಸಿದ ದಿನವೇ ವಿಜಯದಶಮಿ.

ಲೋಕಮಾತೆ ಜಗಜ್ಜನನಿ ಶ್ರೀ ಚಾಮುಂಡೇಶ್ವರೀ ದೈತ್ಯ ಭಯಂಕರ ಮಹಿಷಾಸುರನನ್ನು ಕೊಂದು ಮಹಿಷಾಸುರ ಮರ್ದಿನಿಯಾದ ದಿನವೂ ಈ ವಿಜಯ ದಶಮಿ. ಮನು ಕುಲದ ಉದ್ಧಾರಕ್ಕಾಗಿ ಉಡುಪಿಯ ಪುಣ್ಯಭೂಮಿ “ಪಾಜಕ ಕ್ಷೇತ್ರ’ದಲ್ಲಿ ಜಗದ್ಗುರುಗಳಾದ ಶ್ರೀ ಮಧ್ವಾ ಚಾರ್ಯರು ಅವತರಿಸಿದ (ಜನಿಸಿದ) ದಿನವೂ ಈ ವಿಜಯದಶಮಿಯಾಗಿರುವುದು ವಿಶೇಷ.

ಈ ವಿಜಯದಶಮಿ ದುಷ್ಟ ಶಕ್ತಿಗಳ ಮೇಲೆ ಶಿಷ್ಟ ಶಕ್ತಿಗಳ ವಿಜಯೋತ್ಸವದ ಸಂಕೇತವಾಗಿದೆ. ಈ ಪವಿತ್ರವಾದ ವಿಜಯದಶಮಿಯಂದು ಯಾವುದೇ ಹೊಸ ಹೊಸ ವ್ಯವಹಾರ ಆರಂಭಿಸಿದರೆ ಯಶಸ್ಸು ಖಚಿತವಾಗಿದ್ದು.ಈ ನವರಾತ್ರಿಯಲ್ಲಿ ನವ ವಿಧದಲ್ಲಿ ನವದುರ್ಗೆಯನ್ನು ಪೂಜಿಸಿ ಆರಾಧಿಸಿ ವಿಜಯದಶಮಿಯಂದು ವೈಭವದ ಪುರಮೆರವಣಿಗೆ ಮಾಡಿ ಸರೋವರದಲ್ಲಿ ವಿಸರ್ಜನೆ ಮಾಡಿ ಪ್ರತಿ ವರ್ಷ ಹೀಗೆ ಬಂದು ನಮ್ಮನ್ನು ಉದ್ಧರಿಸು ತಾಯಿಯೇ ಎಂದು ಪ್ರಾರ್ಥಿಸುವುದು ಬಹಳ ವಿಶೇಷತೆಯಾಗಿದೆ.

Advertisement

– ವೈ. ಎನ್‌. ವೆಂಕಟೇಶ ಮೂರ್ತಿ ಭಟ್‌
ಪ್ರಧಾನ ಅರ್ಚಕರು, ಶ್ರೀ ಮುಖ್ಯಪ್ರಾಣ ದೇವಸ್ಥಾನ ದೊಡ್ಮನೆಬೆಟ್ಟು , ಕೋಟೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next