Advertisement

Vijay Raghavendra; ನನ್ನ ಕಂಬನಿಯನ್ನು ಅವಳು ಸಹಿಸುತ್ತಿರಲಿಲ್ಲ: ಸ್ಪಂದನಾ ನೆನಪಲ್ಲಿ ರಾಘು

12:54 PM Aug 28, 2023 | Team Udayavani |

“ಇತ್ತೀಚೆಗೆ ನನ್ನ ಜೀವನದಲ್ಲಿ ನಡೆದ ಅನಿರೀಕ್ಷಿತ ಘಟನೆಗೆ ದೊಡ್ಡ ಆಘಾತವನ್ನೆ ತಂದಿದೆ. ಇಂಥ ಸಮಯದಲ್ಲಿ ನಮ್ಮ ಮನೆಯವರ ಥರ ತಾಯಿಯ ಸ್ಥಾನದಲ್ಲಿ ನಿಂತು ನನಗೆ ಧೈರ್ಯ ತುಂಬಿದ್ದೀರಿ. ನಮ್ಮ ಕುಟುಂಬದಲ್ಲಿ ನೀವು ಒಬ್ಬರಾಗಿರದಿದ್ದರೂ, ನಿಮ್ಮ ಕುಟುಂಬದಲ್ಲಿ ನನ್ನನ್ನು ಒಬ್ಬನಂತೆ ಕಂಡಿದ್ದೀರಿ. ಇಂಥದ್ದೊಂದು ಪ್ರೀತಿ, ಸಾಂತ್ವನ ಕೊಟ್ಟ ಎಲ್ಲರಿಗೂ ನನ್ನ ಹೃದಯಾಂತರಾಳದಿಂದ ಕೋಟಿ ಕೋಟಿ ನಮನಗಳು ಇದಕ್ಕಿಂತ ಹೆಚ್ಚಾಗಿ ಇನ್ನೇನು ಹೇಳಲಾರೆ’ ಹೀಗೆ ಹೇಳುತ್ತಾ ಮಾತಿಗಿಳಿದವರು ನಟ ವಿಜಯ ರಾಘವೇಂದ್ರ.

Advertisement

ಪತ್ನಿ ಸ್ಪಂದನಾ ಅಕಾಲಿಕ ನಿಧನದ ಬಳಿಕ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರದ ನಟ ವಿಜಯ ರಾಘವೇಂದ್ರ, ಇದೇ ಮೊದಲ ಬಾರಿಗೆ ತಮ್ಮ ಮುಂಬರುವ “ಕದ್ದ ಚಿತ್ರ’ ಸಿನಿಮಾದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಇದೇ ವೇಳೆ, ಕಂಬನಿ ತುಂಬಿದ ಕಣ್ಣುಗಳಲ್ಲೇ ಮಾತನಾಡಿದ ವಿಜಯ ರಾಘವೇಂದ್ರ, “ನನ್ನ ಕಣ್ಣುಗಳಲ್ಲಿ ನೀರು ಬರುವುದನ್ನು ಅವಳು (ಸ್ಪಂದನಾ) ಯಾವತ್ತೂ ಇಷ್ಟಪಡುತ್ತಿರಲಿಲ್ಲ. ಎಲ್ಲೂ ಇಂಥ ಘಟನೆ ನಡೆದಾಗ ನಮ್ಮೆಲ್ಲರ ಮನಸ್ಸು ಮಿಡಿಯುತ್ತದೆ. ಆದರೆ ನಮ್ಮ ಮನೆಯಲ್ಲೇ ಇಂಥ ಘಟನೆ ನಡೆದಾಗ ಅದನ್ನು ಎದುರಿಸುವುದು ತುಂಬಾ ಕಷ್ಟ. ಅಂಥ ಘಟನೆ ನಮ್ಮ ಮನೆಯಲ್ಲಿ, ನನ್ನ ಜೀವನದಲ್ಲಿ ನಡೆದು ಹೋಯಿತು. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬರು ನನಗೆ ಬೆಂಬಲವಾಗಿ ನಿಂತರು. ನನ್ನ ದುಃಖವನ್ನು ತಮ್ಮ ದುಃಖವೆಂದು ಹಂಚಿಕೊಂಡರು.

ನಿಮ್ಮೆಲ್ಲರ ಸಾಂತ್ವನ, ಬೆಂಬಲ, ಹಾರೈಕೆಯ ಮಾತುಗಳು ನನಗೂ, ನಮ್ಮ ಕುಟುಂಬಕ್ಕೂ ಒಂದಷ್ಟು ಶಕ್ತಿ ತುಂಬಿತು. ನನ್ನ ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಂತು, ನೋವು ಹಂಚಿಕೊಂಡ ಪ್ರತಿಯೊಬ್ಬರಿಗೂ ಮನಃಪೂರ್ವಕವಾಗಿ ಕೃತಜ್ಞತೆಗಳನ್ನ ಬಿಟ್ಟು ಬೇರೇನೂ ಹೇಳಲಾರೆ. ನಿಮ್ಮ ಪ್ರೀತಿ, ಅಭಿಮಾನಕ್ಕೆ ಎಂದಿಗೂ ಬೆಲೆ ಕಟ್ಟಲಾಗದು’ ಎಂದರು

Advertisement

Udayavani is now on Telegram. Click here to join our channel and stay updated with the latest news.

Next