Advertisement

ಜಾಗ್ರತ ಗ್ರಾಹಕ –ಸುರಕ್ಷಿತ ಗ್ರಾಹಕ

11:33 PM Mar 14, 2021 | Team Udayavani |

1962ರ ಮಾರ್ಚ್‌ 15 ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕ ಆಂದೋಲನ ಒಂದು ನಿರ್ದಿಷ್ಟ ಸ್ವರೂಪ ಪಡೆಯಿತು. ಅದಕ್ಕೆ ಚಾಲನೆ ನೀಡಿದವರು ಅಮೆರಿಕದ ಅಂದಿನ ಅಧ್ಯಕ್ಷರಾಗಿದ್ದ ಜಾನ್‌ ಎಫ್. ಕೆನಡಿ ಅವರು. ಅವರು ಗ್ರಾಹಕ ಕಾಳಜಿಗೆ ನೀಡಿದ ನೈತಿಕ ಹಾಗೂ ರಾಜಕೀಯ ಬೆಂಬಲದಿಂದಾಗಿ ಅಮೆ ರಿಕದ ಕಾಂಗ್ರೆಸ್‌ ಆ ದಿನದಂದು ಒಂದು ಚರಿತ್ರಾರ್ಹ ಘೋಷಣೆಯನ್ನು ಅಂಗೀಕರಿಸಿತು. ಈ ಘೋಷಣೆಯು ಗ್ರಾಹಕನ ನಾಲ್ಕು ಮೂಲ ಹಕ್ಕುಗಳನ್ನು ಗುರುತಿಸಿ ಅವುಗಳಿಗೆ ಶಾಸನಾತ್ಮಕ ರಕ್ಷಣೆಯನ್ನು ನೀಡಿತು. ಅಂದು ಮನ್ನಣೆಗೆ ಪಾತ್ರವಾದ ನಾಲ್ಕು ಹಕ್ಕುಗಳೆಂದರೆ ವಸ್ತುವಿನ ಆಯ್ಕೆಯ ಹಕ್ಕು, ಮಾಹಿತಿ ಹಕ್ಕು, ಸುರಕ್ಷತೆಯ ಹಕ್ಕು ಮತ್ತು ಗ್ರಾಹಕ ನ್ಯಾಯದ ಹಕ್ಕು.

Advertisement

ಭಾರತದಲ್ಲಿ ಈಗಲೂ ಹಲವು ಪೂರೈಕೆದಾರರು ತಾವು ನೀಡುವ ರಸೀದಿಗಳ ಕೆಳಗಡೆ ಸಣ್ಣ ಅಕ್ಷರಗಳಲ್ಲಿ “ಒಮ್ಮೆ ಮಾರಿದ ವಸ್ತುವನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯಲಾಗುವುದಿಲ್ಲ’ ಎಂದು ಮುದ್ರಿಸು ತ್ತಾರೆ. ಆದರೆ ಅಮೆರಿಕದಲ್ಲಿ ಗ್ರಾಹಕ ರಕ್ಷಣ ಕಾನೂನು ಅನುಷ್ಠಾನಗೊಂಡೊಡನೆಯೇ ಈ ಧೋರಣೆಗೆ ಬ್ರೇಕ್‌ ಬಿದ್ದಿತ್ತು.

ಕಾಕತಾಳೀಯವೆಂಬಂತೆ ಈ ಕಾನೂನು ಜಾರಿ ಯಾದ ಸಮಯದಲ್ಲೇ ಅಮೆರಿಕದ ಪ್ರಖ್ಯಾತ ಕಾರು ಉತ್ಪಾದನ ಸಂಸ್ಥೆ “ಜನರಲ್‌ ಮೋಟರ್’ ತನ್ನ ಹೊಸ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಕಂಪೆನಿ ನೀಡಿದ ಜಾಹೀರಾತಿನ ಪ್ರಕಾರ ಈ ಕಾರುಗಳು ಎಂಜಿನ್‌ ಸಾಮರ್ಥ್ಯ, ಮೈಲೇಜ್‌ ಮಾತ್ರ ವಲ್ಲ ; ಸೇಫ್ ಎಟ್‌ ಎನಿ ಸ್ಪೀಡ್‌ (Safe at any speed) ಎಂಬ ಹೆಗ್ಗಳಿಕೆಗಳನ್ನು ಹೊಂದಿದ್ದವಾಗಿ ದ್ದವು. ಸರಿ, ನೂರಾರು ಗ್ರಾಹಕರು ಈ ಮಾದರಿಯ ವಾಹನಗಳನ್ನು ಖರೀದಿಸಿದರು. ಆದರೆ ಗ್ರಾಹಕರಿಗೆ ತಮ್ಮ ವಾಹನಗಳಲ್ಲಿ ಹಲವಾರು ನ್ಯೂನತೆಗಳು ಗೋಚ ರಿಸಿದವು. ಒಟ್ಟಾರೆ ಜನಾಭಿಪ್ರಾಯವನ್ನು ಮನ್ನಿಸಿ, ಜನರಲ್‌ ಮೋಟರ್ ಕಂಪೆನಿ ತಾನು ಗ್ರಾಹಕರಿಗೆ ಮಾರಿದ ಎಲ್ಲ ಕಾರುಗಳನ್ನು ವಾಪಸು ತರಿಸಿಕೊಂಡು ನ್ಯೂನತೆ ಸರಿಪಡಿಸಿ, ಕಾರುಗಳನ್ನು ಹಿಂದಿರುಗಿಸಿತು. ಕೆಲವರಿಗೆ ಸುಧಾರಿತ ಮಾಡೆಲ್‌ನ ಕಾರುಗಳನ್ನು ನೀಡಿ, ತನ್ನ ಉಚ್ಚ ಆದರ್ಶವನ್ನು ಮೆರೆಯಿತು. ಈ ಆಂದೋ ಲನದ ರೂವಾರಿಯಾಗಿದ್ದವರು ಬಳಕೆದಾರರ ಹೋರಾ ಟದಲ್ಲಿ ಮೇರು ಹೆಸರು ಗಳಿಸಿದ ರಾಲ್ಫ್ ನಾಡರ್‌ (Ralph Nader) ಅವರು. ಈ ಘಟನೆಯನ್ನೇ ಮುಖ್ಯ ವಸ್ತುವನ್ನಾಗಿಸಿ ಅವರು ಬರೆದ ಪುಸ್ತಕ “Unsafe at any speed’’- ಬಳಕೆದಾರರ ರಕ್ಷಣೆಯಲ್ಲಿ ಒಂದು ಇತಿಹಾಸವನ್ನು ನಿರ್ಮಿಸಿತು. “Goods once sold will not be taken back’ಎಂಬ ಶರತ್ತು ಇತಿಹಾಸ ಸೇರಿತು. ಹೀಗೆ ಮಾರ್ಚ್‌ 15ನ್ನು ಪ್ರಪಂಚದೆಲ್ಲೆಡೆ “ವಿಶ್ವ ಗ್ರಾಹಕ ದಿನ’ವನ್ನಾಗಿ ಗ್ರಾಹಕರು ಆಚರಿಸುತ್ತಿದ್ದಾರೆ. ನಮ್ಮ ದೇಶದಲ್ಲಿ 1986ರಲ್ಲಿ ಗ್ರಾಹಕ ರಕ್ಷಣ ಕಾನೂನು ಜಾರಿಗೆ ಬಂದು 2019ರಲ್ಲಿ ಇದಕ್ಕೆ “ಗ್ರಾಹಕ ಹಿತ ರಕ್ಷಣ ಕಾಯ್ದೆ’ಯ ಸುಧಾರಿತ ರೂಪವನ್ನು ನೀಡಲಾಯಿತು. “ಸಹ್ಯ ಪರಿಸರವನ್ನು ಪಡೆಯುವ ಹಕ್ಕು’ ಸಹಿತ ಇನ್ನೂ ನಾಲ್ಕು ಹಕ್ಕುಗಳನ್ನು ಇಲ್ಲಿ ಗ್ರಾಹಕನಿಗೆ ನೀಡ ಲಾಗಿದೆಯಾದರೂ ಅವು ಗಳನ್ನು ಪಾಲಿಸುವಲ್ಲಿ ನಾಗರಿ ಕರು ಅಸೀಮ ನಿಷ್ಕಾಳಜಿಯನ್ನು ತೋರುತ್ತಿದ್ದಾರೆ ಮಾತ್ರವಲ್ಲದೆ ಇವುಗಳ ಅನುಷ್ಠಾನಗೊಳಿಸುವಲ್ಲಿ ಸರಕಾರಗಳು ಸೋತಿವೆ ಎನ್ನುವುದು ಕಟು ಸತ್ಯ.

ಪರಿಸರ ಮಾಲಿನ್ಯದಲ್ಲಿ ಪ್ಲಾಸ್ಟಿಕ್‌ನ ಪಾತ್ರ ಎಷ್ಟು ಕುಪ್ರಸಿದ್ಧ ಎನ್ನುವುದು ಇಡೀ ಜಗತ್ತಿಗೆ ತಿಳಿದ ವಿಷಯ. ಇದು ಪರಿಸರವಾದಿಗಳನ್ನು ತಲ್ಲಣಗೊಳಿಸುತ್ತಿರುವ ವಿಷಯ. ಎಲ್ಲೆಲ್ಲಿಯೂ ಪ್ಲಾಸ್ಟಿಕ್‌ ಬಗ್ಗೆ ಕೇಳಿ ಬರುತ್ತಿರುವ ಘೋಷಣೆಗಳೆಂದರೆ “ಮಿತಗೊಳಿಸಿ, ಮರು ಬಳಸಿ, ಪುನರ್ಬಳಸಿ ಅಥವಾ ತಿರಸ್ಕರಿಸಿ'(Reduce, Rd-use, Recycle or Refuse Plastic). ಆದರೆ ಇವೆಲ್ಲ ಎಷ್ಟರಮಟ್ಟಿಗೆ ಕಾರ್ಯಗತವಾಗಿವೆ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಪ್ಲಾಸ್ಟಿಕ್‌ನಿಂದ ಹದಗೆಡುತ್ತಿರುವ ನೆಲ, ಜಲ, ವಾಯುಗಳನ್ನು ಗಮನಿಸಿಯೇ ಇರಬೇಕು – 2021ರ “ವಿಶ್ವ ಗ್ರಾಹಕರ ದಿನ’ದ ಧ್ಯೇಯ ವಾಕ್ಯ “ಪ್ಲಾಸ್ಟಿಕ್‌ ಮಾಲಿನ್ಯದ ನಿಯಂತ್ರಣ (Tackling plastic Pollution)’ ಎಂದಾಗಿದೆ.

ಅಲೆಕ್ಸಾಂಡರ್‌ ಪಾರ್ಕ್ಸ್ ಎಂಬ ವಿಜ್ಞಾನಿ ಪ್ಲಾಸ್ಟಿಕ್‌ ಎಂಬ ವಿಸ್ಮಯಕಾರಿ ಪದಾರ್ಥವನ್ನು 1985ರಲ್ಲಿ ಸಂಶೋಧಿಸಿದಾಗ ಮುಂದೊಂದು ದಿನ ಇದು ಮನು ಕುಲಕ್ಕೆ ಆಪತ್ತು ತಂದೀತೆಂಬ ಕಲ್ಪನೆಯನ್ನು ಸಹ ಆತ ಮಾಡಿರಲಿಕ್ಕಿಲ್ಲ . ಪ್ಲಾಸ್ಟಿಕ್‌ನ ಕಬಂಧ ಬಾಹು ಗಳು ಈಗ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಿಯಾಗಿದೆ. ತೋಡು, ಹಳ್ಳ, ಕೆರೆ, ಸರೋವರ, ಹೊಳೆ, ಸಮುದ್ರ ಎಲ್ಲ ಜಲ ಮೂಲಗಳು ಪ್ಲಾಸ್ಟಿಕ್‌ ತೊಟ್ಟೆಗಳ ತ್ಯಾಜ್ಯ ಸಂಗ್ರ ಹಾಲಯಗಳಾಗಿವೆ. ಜಲಚರಗಳು, ಜಾನು ವಾರುಗಳು, ಪಕ್ಷಿ ಸಂಕುಲಗಳೆಲ್ಲ ಪ್ಲಾಸ್ಟಿಕ್‌ ತೊಟ್ಟೆಗಳ ತುಣುಕುಗಳನ್ನು ನುಂಗಿ ತಮ್ಮ ಜೀವಕ್ಕೇ ಸಂಚಕಾರ ತಂದುಕೊಳ್ಳುತ್ತಿವೆ.

Advertisement

ಸ್ಥಳೀಯಾಡಳಿತ ಸಂಸ್ಥೆಗಳ ವತಿಯಿಂದ ಜನಜಾಗೃತಿ ಮೂಡಿಸಿ, ಹಸಿ ತ್ಯಾಜ್ಯಗಳಿಂದ ಪ್ರತ್ಯೇಕಿಸಲಾದ ಪ್ಲಾಸ್ಟಿಕ್‌ ಸಹಿತ ಒಣತ್ಯಾಜ್ಯಗಳನ್ನು ಸಂಗ್ರಹಿಸಿ ಕೊಂಡೊಯ್ಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ರಾಜ್ಯ ಸರಕಾರ ಎಲ್ಲ ನಗರಾಡಳಿತ ಸಂಸ್ಥೆಗಳಿಗೂ ಈ ಸಂಬಂಧ ಸೂಚನೆ ನೀಡಿದೆ. ಅದರಂತೆ ನಗರಾಡಳಿತ ಸಂಸ್ಥೆಗಳು ತ್ಯಾಜ್ಯ ಸಂಗ್ರಹದ ವ್ಯವಸ್ಥೆ ಮಾಡಿದ್ದರೂ ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನೆ ದೊರಕುತ್ತಿಲ್ಲ. ತ್ಯಾಜ್ಯಗಳನ್ನು ಪ್ಲಾಸ್ಟಿಕ್‌ ತೊಟ್ಟೆಗಳಲ್ಲಿ ತುಂಬಿ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವ ಜನರ ಚಾಳಿ ಇನ್ನೂ ಕಡಿಮೆಯಾಗಿಲ್ಲ. ಪ್ಲಾಸ್ಟಿಕ್‌ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ.

ತೆಳ್ಳಗಿನ ಪ್ಲಾಸ್ಟಿಕ್‌ ತೊಟ್ಟೆಗಳ ತಯಾರಿಕೆ, ಸರಬ ರಾಜು, ಬಳಕೆ ಇವೆಲ್ಲವುಗಳ ಮೇಲೂ ಕಟ್ಟುನಿಟ್ಟಿನ ನಿಷೇಧ ಹೇರಿದರೆ “ಪ್ಲಾಸ್ಟಿಕ್‌ ಮಾಲಿನ್ಯ ನಿಯಂತ್ರ ಣ’ವೆಂಬ ಧ್ಯೇಯಕ್ಕೆ ಮೊದಲ ಯಶಸ್ಸು ಸಿಕ್ಕಂತಾ ದೀತು. ಜನಸಾಮಾನ್ಯರಲ್ಲಿ ಈ ಕುರಿತಾದ ಜಾಗೃತಿ ಮನದಾಳದಿಂದ ಮೂಡಿಬರಬೇಕು. ಆಗಲೇ “ಜಾಗ್ರತ ಗ್ರಾಹಕ ಸುರಕ್ಷಿತ ಗ್ರಾಹಕ’ನಾಗಲು ಸಾಧ್ಯ.

– ಎಚ್‌. ಶಾಂತರಾಜ ಐತಾಳ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next