Advertisement

ಹೊಸ ಸರ್ಕಾರ ಸ್ವಾಗತಿಸಲು ವಿಧಾನಸೌಧ ಸಜ್ಜು

10:18 PM May 19, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಹೊಸ ಸರ್ಕಾರ ಸ್ವಾಗತಿಸಲು ಶಕ್ತಿ ಕೇಂದ್ರ ವಿಧಾನಸೌಧ ಸಜ್ಜಾಗುತ್ತಿದೆ. ಶನಿವಾರ ಮುಖ್ಯಮಂತ್ರಿ-ಉಪ ಮುಖ್ಯಮಂತ್ರಿ ಸಹಿತ ಹಲವು ಸಚಿವರು ಪ್ರಮಾಣ ಸ್ವೀಕರಿಸುತ್ತಿದ್ದು, ವಿಧಾನಸೌಧದ ಸಂಪುಟ ಸಭೆ ಸಭಾಂಗಣ, ಮುಖ್ಯಮಂತ್ರಿ ಕಚೇರಿ, ಸಮ್ಮೇಳನ ಸಭಾಂಗಣ ಸ್ವತ್ಛಗೊಳಿಸಿ ಹೂವುಗಳಿಂದ ಆಲಂಕಾರ ಮಾಡಲಾಗಿದೆ.

Advertisement

ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿ ನಂತರ ಸಂಪುಟ ಸಭಾಂಗಣ, ಮುಖ್ಯಮಂತ್ರಿ ಹಾಗೂ ಸಚಿವರ ಕೊಠಡಿಗಳಿಗೆ ಬೀಗ ಹಾಕಲಾಗಿತ್ತು. ಇದೀಗ ಬೀಗ ತೆರೆದು ಸ್ವತ್ಛಗೊಳಿಸಲಾಗಿದೆ.

ಪ್ರಮುಖವಾಗಿ ಮುಖ್ಯಮಂತ್ರಿ ಕಚೇರಿ, ಸಂಪುಟ ಸಭೆ ಸಭಾಂಗಣದ ಪೀಠೊಪಕರಣಗಳಿಗೆ ಪಾಲಿಶ್‌, ಅಗತ್ಯ ಇರುವ ಕಡೆ ಬಣ್ಣ ಬಳಿಯುವ ಕೆಲಸವೂ ನಡೆಯುತ್ತಿದೆ.
ಶನಿವಾರ ಪ್ರಮಾಣ ವಚನದ ನಂತರ ಸಂಪುಟ ಸಭೆ ನಡೆಯಲಿದೆ. ಜತೆಗೆ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿ ಹಾಗೂ ನೂತನ ಸಚಿವರು ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಹೀಗಾಗಿ ವಿಧಾನಸೌಧ-ವಿಕಾಸಸೌಧ ಸಿಂಗರಿಸಿ ಸಜ್ಜುಗೊಳಿಸಲಾಗುತ್ತಿದೆ.

ಸಂಪುಟ ರಚನೆಯ ನಂತರ ಸಚಿವರಿಗೆ ಖಾತೆ ಹಂಚಿಕೆಯಾದ ಮೇಲೆ ವಿಧಾನಸೌಧ ಹಾಗೂ ವಿಕಾಸಸೌಧಲ್ಲಿ ಕೊಠಡಿಗಳ ಹಂಚಿಕೆಯಾಗಲಿದ್ದು, ಸೋಮವಾರ ಅಥವಾ ಮಂಗಳವಾರ ವೇಳೆಗೆ ಎಲ್ಲರಿಗೂ ಕೊಠಡಿ ಹಂಚಿಕೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ.
ಸಂಪುಟ ಅಜೆಂಡಾ ಸಿದ್ಧ
ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ಸಂಪುಟದಲ್ಲೇ ಕಾಂಗ್ರೆಸ್‌ ನೀಡಿರುವ ಐದು ಗ್ಯಾರಂಟಿಗಳ ಜಾರಿ ಮಾಡಲಾಗುವುದು ಎಂದು ಈಗಾಗಲೇ ಹೇಳಿರುವಂತೆ ಅಧಿಕೃತ ಘೋಷಣೆ ಮಾಡಲು ತಯಾರಿ ನಡೆದಿದ್ದು, ಅಧಿಕಾರಿಗಳಿಗೆ ಸಂಪುಟ ಅಜೆಂಡಾ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next