Advertisement

Vidhana Soudha ವಾಸ್ತುದೋಷ: ಐದು ವರ್ಷಗಳಿಂದ ಮುಚ್ಚಿದ್ದ ಬಾಗಿಲು ಓಪನ್

08:18 PM Jun 24, 2023 | Team Udayavani |

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಕಳೆದ ಐದು ವರ್ಷಗಳಿಂದ ಮುಚ್ಚಲಾಗಿದ್ದ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ ಶನಿವಾರ ಒಳ ಪವೇಶಿಸಿ ಮೌಢ್ಯದ ವಿರುದ್ಧ ತಮ್ಮ ನಿಲುವನ್ನು ಮತ್ತೆ ಸಾಬೀತುಪಡಿಸಿದ್ದಾರೆ.

Advertisement

”ಜನರ ಬಗ್ಗೆ ಕಾಳಜಿ,ನಡತೆಯಲ್ಲಿ ಪ್ರಾಮಾಣಿಕತೆ, ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ದಿಕ್ಕು, ಘಳಿಗೆ, ಮುಹೂರ್ತ ಎಲ್ಲವೂ ನಗಣ್ಯ.ವಾಸ್ತುದೋಷದ ಕಾರಣಕ್ಕಾಗಿ ಕಳೆದ ಐದು ವರ್ಷಗಳಿಂದ ಮುಚ್ಚಲಾಗಿದ್ದ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ,ಅದೇ ಬಾಗಿಲಿನಿಂದ ಕಚೇರಿ ಪ್ರವೇಶ ಮಾಡಿದೆ.ಕೊಠಡಿಯೊಳಗೆ ಒಳ್ಳೆಯ ಗಾಳಿ, ಬೆಳಕು ಬರುವಂತಿದ್ದರೆ ಅದಕ್ಕಿಂತ ಉತ್ತಮ ವಾಸ್ತು ಬೇರಿಲ್ಲ.ನಡೆ – ನುಡಿ ಶುದ್ಧವಿದ್ದರೆ ಮತ್ತೆಲ್ಲವೂ ಶುಭದಾಯಕವಾಗಿರಲಿದೆ.ಜನತೆಯ ಆಶೀರ್ವಾದ ಇರಲಿ.” ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಅನ್ನಭಾಗ್ಯ ಯೋಜನೆ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ಸಭೆ ವೇಳೆ ಸಿಎಂ ಬಾಗಿಲು ತೆರೆಸುವ ನಿರ್ಧಾರ ಕೈಗೊಂಡಿದ್ದಾರೆ. ಲಿಫ್ಟ್ ನಲ್ಲಿ ವಿಧಾನಸೌಧದ ಮೂರನೇ ಮಹಡಿಗೆ ಬಂದ ಸಿಎಂ ದಕ್ಷಿಣ ದ್ವಾರ ಬಂದ್‌ ಆಗಿರುವುದನ್ನು ಗಮನಿಸಿ ಜತೆಗಿದ್ದ ಅಧಿಕಾರಿಗಳಿಗೆ ಬಾಗಿಲು ಏಕೆ ಮುಚ್ಚಿದೆ ಎಂದು ಪ್ರಶ್ನಿಸಿದ್ದಾರೆ. ಸಿಬಂದಿ ಪಶ್ಚಿಮ ದ್ವಾರ ಮುಖೇನ ಒಳ ಹೋಗಿ ದಕ್ಷಿಣ ಬಾಗಿಲು ತೆರೆದ ಬಳಿಕ ಸಿದ್ದರಾಮಯ್ಯ ಅದೇ ದಾರಿಯಲ್ಲಿ ಒಳ ಪ್ರವೇಶಿಸಿ ಸಭೆ ನಡೆಸಿದರು. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಮುಚ್ಚಿದ್ದ ದಕ್ಷಿಣ ದ್ವಾರವನ್ನು ಅಧಿಕಾರಿಗಳಿಗೆ ಸೂಚನೆ ನೀಡಿ ತೆರೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next