Advertisement

ಮೂಲ ಹುಡುಕುತ್ತ ಹೊರಟ ಸಂತ್ರಸ್ತರು!

11:33 AM Aug 23, 2019 | Team Udayavani |

ಗದಗ: ಮನೆಗಳ ಕುಸಿತದಿಂದ ಬಿಕೋ ಎನ್ನುತ್ತಿದ್ದ ಓಣಿಗಳು…ಬಹು ದೂರದಿಂದ ಕುಡಿಯುವ ನೀರು ಹೊತ್ತು ತರುತ್ತಿರುವ ಮಹಿಳೆಯರು… ಮೂಲ ಗ್ರಾಮಗಳತ್ತ ಮರಳಲು ಟ್ರ್ಯಾಕ್ಟರ್‌ ಸಿದ್ಧಗೊಳಿಸುತ್ತಿದ್ದ ಸಂತ್ರಸ್ತರು…ಬೀಗ ಜಡಿದ ಪರಿಹಾರ ಕೇಂದ್ರಗಳು…

Advertisement

ಜಿಲ್ಲೆಯ ಮಲಪ್ರಭಾ ಮತ್ತು ಬೆಣ್ಣೆಹಳ್ಳ ಆರ್ಭಟಕ್ಕೆ ನಲುಗಿ, ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿರುವ ರೋಣ ತಾಲೂಕಿನ ನೆರೆ ಪೀಡಿತ ಗ್ರಾಮಗಳಲ್ಲಿ ಗುರುವಾರ ಕಂಡು ಬಂದ ಚಿತ್ರಣ ಇದು.

ಹೌದು. ಜಿಲ್ಲೆಯಲ್ಲಿ ಮಳೆ ಕೊರತೆಯಿದ್ದರೂ, ಮೇಲ್ಭಾಗದಲ್ಲಿ ಧಾರಾಕಾರ ಸುರಿದ ಮಳೆಯಿಂದ ಮಲಪ್ರಭೆ ರೌದ್ರಾವತಾರ ತಾಳಿತ್ತು. ಅದರೊಂದಿಗೆ ಬೆಣ್ಣೆಹಳ್ಳ ಉಕ್ಕಿ ಹರಿದು ರೋಣ ತಾಲೂಕಿನ 16 ಹಳ್ಳಿಗಳು ಜಲದಿಗ್ಬಂಧನಕ್ಕೆ ಒಳಗಾಗಿದ್ದವು. ಮೆಣಸಗಿ, ಹೊಳೆಆಲೂರು, ಗಾಡಗೋಳಿ, ಹೊಳೆಹಡಗಲಿ ಹಾಗೂ ಹೊಳೆಮಣ್ಣೂರು ಗ್ರಾಮಗಳ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿತ್ತು. ಇದರಿಂದ ಜನರು ತೀವ್ರ ಸಂಕಷ್ಟ ಅನುಭವಿಸಿದ್ದರು. ಈಗ ಎಲ್ಲವೂ ನಿರಾಳವಾಗಿದ್ದು, ನೆರೆ ಇಳಿದಿದೆ. ರಸ್ತೆ ತುಂಬಾ ತುಂಬಿದ್ದ ಕೆಸರು ಒಣಗಿ ತಮ್ಮ ತಮ್ಮ ಮನೆಗಳಿಗೆ ಹೋಗಲು ಅನುವು ಮಾಡಿಕೊಟ್ಟಿದ್ದರಿಂದ ಕೆಲವರು ಪಳಿಯುಳಿಕೆಗಳಂತಾದ ಮನೆಗಳತ್ತ ಹೆಜ್ಜೆ ಹಾಕಿದ್ದಾರೆ.

ಕೊಳೆತ ಆಹಾರ ಧಾನ್ಯ, ಪ್ರವಾಹದಲ್ಲಿ ಕೊಚ್ಚಿ ಬಂದ ಮೇವಿನ ರಾಶಿ, ಸತ್ತ ಪ್ರಾಣಿಗಳಿಂದಾಗಿ ಹಲವೆಡೆ ಗಬ್ಬು ನಾರುತ್ತಿದೆ. ಜನರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ಇದೆ. ಸ್ಥಳೀಯ ಗ್ರಾಪಂ ಸಿಬ್ಬಂದಿ ಬ್ಲೀಚಿಂಗ್‌ ಪೌಡರ್‌ ಸಿಂಪರಣೆಯಲ್ಲಿ ತೊಡಗಿದ್ದಾರೆ. ಇನ್ನುಳಿದಂತೆ ಕೆಲವರು ಮನೆಗಳ ಸ್ವಚ್ಛತೆಯಲ್ಲಿ ತೊಡಗಿದ್ದರೆ, ಇನ್ನೂ ಕೆಲವರು ಪ್ರವಾಹ ನೀರಿನಲ್ಲಿ ತೋಯ್ದ ಹಾಸಿಗೆ, ಬಟ್ಟೆ ಹಾಗೂ ದವಸ ಧಾನ್ಯ ಒಣಗಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಹೊಳೆಆಲೂರು, ಕುರುವಿನಕೊಪ್ಪ ಹಾಗೂ ಅಮರಗೋಳ ಗ್ರಾಮಸ್ಥರಿಗೆ ಹೊಳೆಆಲೂರು ಹೊರವಲಯದಲ್ಲಿ 2007ರಲ್ಲೇ ಆಸರೆ ಮನೆಗಳನ್ನು ನಿರ್ಮಿಸಲಾಗಿದೆ. ಹೊಳೆಆಲೂರಿನ ಸೇವಾಲಾಲ್ ಬಡಾವಣೆ ಹಾಗೂ ವಾರ್ಡ್‌ ನಂ.1 ರ ನಿವಾಸಿಗಳಿಗಾಗಿ ನವ ಗ್ರಾಮದಲ್ಲಿ ಸುಮಾರು 1000 ಮನೆ ನಿರ್ಮಿಸಲಾಗಿದೆ. ಆದರೆ, ಫಲಾನುಭವಿಗಳನ್ನು ಗುರುತಿಸಿ, ಹಕ್ಕುಪತ್ರ ವಿತರಿಸಿಲ್ಲ. ನೆರೆ ಸಂದರ್ಭದಲ್ಲಿ ಬಂದು ನೆಲೆಸಿದವರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳುತ್ತೇವೆಂದು ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ.

Advertisement

ನವ ಗ್ರಾಮದಲ್ಲಿ ಕುಡಿಯಲು ನೀರು ಕಲ್ಪಿಸುತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ ನೀರಿನ ಟ್ಯಾಂಕರ್‌ ಬಾರದ ಹಿನ್ನೆಲೆಯಲ್ಲಿ ನೆರೆ ಪೀಡಿತ ಪ್ರದೇಶದಲ್ಲಿ ಪರದಾಡುವಂತಾಗಿದೆ. ಕುಡಿಯಲು ಹಾಗೂ ದಿನ ಬಳಕೆಗಾಗಿ ಬಹುದೂರ ಪ್ರದೇಶದಿಂದ ನೀರು ಹೊತ್ತು ತರುವಂತಾಗಿದೆ. ನೆರೆ ಸಂತ್ರಸ್ತರನ್ನು ನವ ಗ್ರಾಮಗಳಿಗೆ ಸ್ಥಳಾಂತರಿಸಿದ ಬಳಿಕ ಒಂದೆರಡು ದಿನಗಳ ಕಾಲ ಎಲ್ಲವನ್ನೂ ಚೆನ್ನಾಗಿಯೇ ನೋಡಿಕೊಂಡ ಅಧಿಕಾರಿಗಳು, ಬಳಿಕ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆಂದು ಮಹಿಳೆಯರ ಅಳಲು ತೋಡಿಕೊಂಡರು.

ಪ್ರವಾಹ ಬರುತ್ತಿದ್ದಂತೆ ಆಪತ್ಭಾಂದವರಂತೆ ಧಾವಿಸುವ ಅಧಿಕಾರಿಗಳು, ಸುರಕ್ಷಿತವಾಗಿ ನವ ಗ್ರಾಮ ಹಾಗೂ ಪರಿಹಾರ ಕೇಂದ್ರಗಳಿಗೆ ತಲುಪಿಸಿ, ಕೈತೊಳೆದುಕೊಳ್ಳುತ್ತಿದ್ದಾರೆ. ನವ ಗ್ರಾಮದಲ್ಲಿ ನೀರು, ರಸ್ತೆ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳಿಲ್ಲ. ಹೀಗಾಗಿ ನೆರೆ ಇಳಿಯುತ್ತಿದ್ದಂತೆ ಮತ್ತೆ ಮೂಲ ಗ್ರಾಮಗಳಿಗೆ ತೆರಳುವುದು ಅನಿವಾರ್ಯವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಇದಕ್ಕೆ ಹೋಲಿಸಿದರೆ, ಹೊಳೆ ಮಣ್ಣೂರಿನ ನವ ಗ್ರಾಮದಲ್ಲಿ ನೀರಿನ ಸೌಕರ್ಯ ಉತ್ತಮವಾಗಿದೆ. ಆದರೆ, ರಸ್ತೆ ಮತ್ತಿತರೆ ಮೂಲ ಸೌಕರ್ಯಗಳ ಕೊರತೆಯಲ್ಲಿ ಭಿನ್ನವಾಗಿಲ್ಲ. ಹೊಳೆಆಲೂರು ಹಾಗೂ ಹೊಳೆಮಣ್ಣೂರು, ಮೆಣಸಗಿ ನವ ಗ್ರಾಮಗಳಲ್ಲಿ ಸಂತ್ರಸ್ತರಿಗಾಗಿ ಹೆಸ್ಕಾಂ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಅನೇಕರು ತಾವು ತಾತ್ಕಾಲಿಕವಾಗಿ ವಾಸವಿರುವ ಮನೆಗಳಿಗೆ ಇನ್ನೂ ವಿದ್ಯುತ್‌ ಸಂಪರ್ಕವನ್ನೇ ಪಡೆದಿಲ್ಲ. ಇಂದು ಇದ್ದು, ನಾಳೆ ಹೋಗುವುದಕ್ಕಾಗಿ ಯಾಕೆ ನೂರಾರು ರೂಪಾಯಿ ಖರ್ಚು ಮಾಡಬೇಕೆಂಬ ಮನಃಸ್ಥಿತಿಯಿಂದ ಕತ್ತಲೆಯಲ್ಲೇ ರಾತ್ರಿ ಕಳೆಯುತ್ತಿದ್ದಾರೆ.

 

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next