ನವದೆಹಲಿ: ಹಿರಿಯ ಗಾಯಕಿ ಅನುರಾಧಾ ಪೌಡವಾಲ್ ಪುತ್ರ ಆದಿತ್ಯ ಪೌಡ್ವಾಲ್ (35) ಮುಂಬೈನಲ್ಲಿ ತೀವ್ರ ಅನಾರೋಗ್ಯದಿಂದ ಶನಿವಾರ ನಿಧನರಾಗಿರುವುದಾಗಿ ವರದಿ ತಿಳಿಸಿದೆ.
ಖ್ಯಾತ ಗಾಯಕ ಶಂಕರ್ ಮಹದೇವನ್ ಅವರ ಜತೆ ಹಲವಾರು ಪ್ರಾಜೆಕ್ಟ್ ಗಳಲ್ಲಿ ಸಂಗೀತ ಸಂಯೋಜಕರಾಗಿ ಆದಿತ್ಯ ಪೌಡ್ವಾಲ್ ಅವರು ಕೆಲಸ ಮಾಡಿದ್ದರು. ಆದಿತ್ಯ ಸಾವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವು ಅವರು, ಕಿಡ್ನಿ ವೈಫಲ್ಯದಿಂದ ಆದಿತ್ಯನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆದಿತ್ಯ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ನಮ್ಮ ಪ್ರೀತಿಯ ಆದಿತ್ಯ ಪೌಡ್ವಾಲ್ ಇನ್ನಿಲ್ಲ. ಎಂತಹ ಅದ್ಭುತ ಹಾಡುಗಾರ, ತುಂಬಾ ಉತ್ತಮವಾದ ಪ್ರೀತಿಯನ್ನು ಹಾಗೂ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದ ಎಂದು ಶಂಕರ್ ಮಹದೇವನ್ ಪ್ರತಿಕ್ರಿಯೆ ನೀಡಿದ್ದಾರೆ.
ಆದಿತ್ಯ ಹಲವು ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ. ಕೆಲವೊಂದು ದೈಹಿಕ ಕಾಯಿಲೆ ಹಾಗೂ ವಿಪರೀತ ಒತ್ತಡಕ್ಕೆ ಒಳಗಾಗಿದ್ದ. ಆದರೆ ಆತ ನಿಧಾನಕ್ಕೆ ಚೇತರಿಸಿಕೊಂಡಿದ್ದ. ಕೊನೆಗೆ ಆತನ ಕಿಡ್ನಿ ವೈಫಲ್ಯದಿಂದಾಗಿ ಸಾವನ್ನಪ್ಪಿರುವುದಾಗಿ ಶಂಕರ್ ಮಹದೇವನ್ ತಿಳಿಸಿದ್ದಾರೆ.
ಆದಿತ್ಯ ನಿಧನಕ್ಕೆ ಸಂಗೀತ ಸಂಯೋಜಕ ತೌಸೀಫ್, ಅರ್ಮಾನ್ ಮಲಿಕ್ ಸೇರಿದಂತೆ ಬಾಲಿವುಡ್ ನ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.