Advertisement

ರಾಜ್ ಗಿಂತ ಮೊದಲು ನರಸಿಂಹರಾಜು ಕಾಲ್ ಶೀಟ್ ಗೆ ಹೆಚ್ಚು ಬೇಡಿಕೆ!

04:18 PM Sep 27, 2018 | Sharanya Alva |

ಜಾಗತಿಕ ಚಿತ್ರರಂಗದಲ್ಲಿ ಚಾರ್ಲಿ ಚಾಪ್ಲಿನ್ ಹೇಗೋ ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಚಕ್ರವರ್ತಿ ಎಂದೇ ಖ್ಯಾತರಾದವರು ನಟ ನರಸಿಂಹರಾಜು. ಕನ್ನಡ ಚಿತ್ರರಂಗದ ಜನಪ್ರಿಯ ನಟ. ಆ ಕಾಲದಲ್ಲಿಯೇ ಸ್ಟಾರ್ ಪಟ್ಟಗಿಟ್ಟಿಸಿಕೊಂಡಿದ್ದ ಹಾಸ್ಯ ನಟರಾಗಿದ್ದವರು. 50ರ ದಶಕದಿಂದ 79ರವರೆಗೆ ಸುಮಾರು 250 ಸಿನಿಮಾಗಳಲ್ಲಿ ತಿಪಟೂರು ರಾಮಾರಾಜು ನರಸಿಂಹರಾಜು ಅವರು ನಟಿಸಿ ಕನ್ನಡಿಗರ ಜನಮಾನಸದಲ್ಲಿ ಇಂದಿಗೂ ಹಾಸುಹೊಕ್ಕಾಗಿದ್ದಾರೆ.

Advertisement

ಬಾಲ ನಟನಾಗಿ ಮಿಂಚಿದ್ದ ನರಸಿಂಹ ರಾಜು ಹಾಸ್ಯ ಚಕ್ರವರ್ತಿಯಾಗಿ ಮೆರೆದಿದ್ದರು!

ಕೇವಲ 4 ವರ್ಷದ ಬಾಲಕನಾಗಿದ್ದಾಗಲೇ ನರಸಿಂಹರಾಜು ಅವರು ಬಾಲನಟರಾಗಿ ರಂಗಭೂಮಿ ಪ್ರವೇಶಿಸಿದ್ದರು.  ರಂಗಭೂಮಿಯಲ್ಲಿನ ಪೌರಾಣಿಕ ಪಾತ್ರಗಳಾದ ರಾಮ, ವಿಶ್ವಾಮಿತ್ರ, ರಾವಣ, ಭರತ ಸೇರಿದಂತೆ ಬೇಡರ ಕಣ್ಣಪ್ಪ ನಾಟಕದಲ್ಲಿ ಅರ್ಚಕನ ಪುತ್ರ ಕಾಶಿಯ ಪಾತ್ರದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ನರಸಿಂಹ ರಾಜು ಜನಪ್ರಿಯತೆ ಪಡೆದಿದ್ದರು. ಹೀಗೆ ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾ, ಎಡತೊರೆಯ ಕಂಪನಿ, ಹಿರಣ್ಣಯ್ಯನವರ ಮಿತ್ರಮಂಡಲಿ, ಭಾರತ ಲಲಿತ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪನಿ, ಗುಬ್ಬಿಯ ಚೆನ್ನಬಸವೇಶ್ವರ ನಾಟಕ ಕಂಪನಿಯ ನಾಟಕಗಳಲ್ಲಿ ಬಣ್ಣ ಹಚ್ಚುವ ಮೂಲಕ ಸುಮಾರು 27 ವರ್ಷಗಳಷ್ಟು ಕಾಲ ರಂಗಭೂಮಿಯಲ್ಲಿಯೇ ಕಳೆದಿದ್ದರು.

ನರಸಿಂಹರಾಜು ಅವರ ತಂದೆ ರಾಮರಾಜು ಅವರು ಪೊಲೀಸ್ ಇಲಾಖೆಯ ನೌಕರರಾಗಿದ್ದರು. ತಾಯಿ ವೆಂಕಟಲಕ್ಷ್ಮಮ್ಮ. ಒಂದು ಬಾರಿ ಚಿಕ್ಕಪ್ಪ ಲಕ್ಷ್ಮೀಪತಿರಾಜು ಅವರು ಬಾಲಕ ನರಸಿಂಹರಾಜು ಅವರನ್ನು ಚಂದ್ರಮೌಳೀಶ್ವರ ನಾಟಕ ಕಂಪನಿಯ ನಾಟಕಕ್ಕೆ ಕರೆದೊಯ್ದಿದ್ದರು. ಆಗ ನರಸಿಂಹ ರಾಜು ಅವರು ನಾಟಕ ನೋಡುವಲ್ಲಿ ತನ್ಮಯರಾಗಿರುವುದನ್ನು ಚಿಕ್ಕಪ್ಪ ಗಮನಿಸಿದ್ದರು. ತದನಂತರ ಚಿಕ್ಕಪ್ಪ ನರಸಿಂಹರಾಜು ಅವರನ್ನು ಮಲ್ಲಪ್ಪನವರ ನಾಟಕ ಕಂಪನಿಗೆ ಸೇರಿಸಿದ್ದರು. ಆದರೆ ಮಗನ ನಾಟಕದ ಹುಚ್ಚು ತಾಯಿಗೆ ಇಷ್ಟವಿರಲಿಲ್ಲವಾಗಿತ್ತು. ಅಂತೂ ಸಿನಿಮಾ ನಟರಾಗಿ ಖ್ಯಾತರಾದ ನಂತರವೂ ನರಸಿಂಹರಾಜು ಅವರು ರಂಗಭೂಮಿಯಲ್ಲಿ ನಟಿಸುವುದನ್ನು ಕಡೆಗಣಿಸಿರಲಿಲ್ಲವಾಗಿತ್ತು.

Advertisement

1954ರಲ್ಲಿ ರಾಜ್ ಕುಮಾರ್ ಅಭಿನಯದ ಬೇಡರ ಕಣ್ಣಪ್ಪ ಸಿನಿಮಾದಲ್ಲಿ ನರಸಿಂಹರಾಜು ಅವರು ನಟಿಸುವ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿದ್ದರು. ಡಾ.ರಾಜ್ ಹಾಗೂ ನರಸಿಂಹ ರಾಜು ಇಬ್ಬರೂ ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆಯಲ್ಲಿಯೇ ಆಪ್ತ ಸ್ನೇಹಿತರಾಗಿದ್ದರು. ನರಸಿಂಹರಾಜು ಅವರು ಶ್ರೇಷ್ಠ ನಟ ಚಾರ್ಲಿ ಚಾಪ್ಲಿನ್ ಅವರ ಅಭಿನಯದಿಂದ ಪ್ರಭಾವಿತರಾಗಿದ್ದರು. ಬೇಡರ ಕಣ್ಣಪ್ಪ ಚಿತ್ರದಲ್ಲಿ ಕಾಶಿ ಪಾತ್ರದಲ್ಲಿ ಕಾಣಿಸಿಕೊಂಡ ನರಸಿಂಹರಾಜು ಅವರು ಮತ್ತೆ ಕನ್ನಡ ಚಿತ್ರರಂಗದಲ್ಲಿ ಅವರು ಏರಿದ ಎತ್ತರ ಇಂದು ನಮ್ಮ ಕಣ್ಣ ಮುಂದಿದೆ.

ಮಕ್ಕಳ ರಾಜ್ಯ ಸಿನಿಮಾದಲ್ಲಿ ಎರಡನೇ ನಾಯಕನಾಗಿ ನಟಿಸಿದ್ದ ನರಸಿಂಹರಾಜು ಅವರು, ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ನಕ್ಷತ್ರಿಕನಾಗಿ ಮಾಡಿದ ಪಾತ್ರ ಇಂದಿಗೂ ಮರೆಯುಂತಿಲ್ಲ. ಹೀಗೆ ತಮ್ಮ ಉಬ್ಬು ಹಲ್ಲು, ಸಪೂರ ಶರೀರ, ಅದ್ಭುತ ಆಂಗಿಕ ಅಭಿನಯದ ಮೂಲಕವೇ ನೂರಾರು ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನ ರಂಜಿಸಿದ್ದರು.

ಶ್ರೀಕೃಷ್ಣದೇವರಾಯ ಚಿತ್ರದಲ್ಲಿನ ನರಸಿಂಹರಾಜು ಅವರ ತೆನಾಲಿ ರಾಮಕೃಷ್ಣ ಪಾತ್ರ, ವೀರಕೇಸರಿ, ನಕ್ಕರೆ ಅದೇ ಸ್ವರ್ಗ, ಪ್ರೀತಿ ಮಾಡು ತಮಾಷೆ ನೋಡು, ಸಾಕ್ಷಾತ್ಕಾರ, ಸಂಧ್ಯಾರಾಗ ಮುಂತಾದ ಸಿನಿಮಾಗಳು ಪ್ರಮುಖವಾದವುಗಳು.

ಡಾ.ರಾಜ್ ಗಿಂತ ಮೊದಲು ನರಸಿಂಹರಾಜು ಅವರಿಗೆ ಡಿಮ್ಯಾಂಡ್ ಹೆಚ್ಚಿತ್ತು!

ಹೌದು ಕನ್ನಡ ಚಿತ್ರರಂಗದಲ್ಲಿ ಪ್ರೊಫೆಸರ್ ಹುಚ್ಚೂರಾಯ ಸಿನಿಮಾದ ಮೂಲಕ ನಾಯಕ ನಟನಾಗಿ ನರಸಿಂಹರಾಜು ಅವರು ಅಭಿನಯಿಸಿದ್ದರು. ಅವೆಲ್ಲಕ್ಕಿಂತ ಹೆಚ್ಚಾಗಿ ಆ ಕಾಲಕ್ಕೆ ಡಾ.ರಾಜ್ ಕುಮಾರ್ ಗೆ ಚಿತ್ರವೊಂದಕ್ಕೆ ಮೂರು ಸಾವಿರ ರೂಪಾಯಿ ಸಂಭಾವನೆ ಸಿಕ್ಕುತ್ತಿದ್ದಂತೆ. ಆದರೆ ನರಸಿಂಹರಾಜು ಅವರ ಕಾಲ್ ಶೀಟ್ ಗೆ ಐದು ಸಾವಿರ ರೂಪಾಯಿ ಸಂಭಾವನೆ ಇತ್ತಂತೆ. ಎಲ್ಲ ನಟರಿಗಿಂತಲೂ ಮೊದಲು ನಿರ್ಮಾಪಕರು ನರಸಿಂಹರಾಜು ಅವರ ಮನೆ ಮುಂದೆ ಸಾಲುಗಟ್ಟಿ ನಿಂತು ಕಾಲ್ ಶೀಟ್ ತೆಗೆದುಕೊಳ್ಳುತ್ತಿದ್ದರಂತೆ. ಮೊದಲು ನಿರ್ಮಾಪಕ, ನಿರ್ದೇಶಕರು ನರಸಿಂಹ ರಾಜು ಅವರ ಕಾಲ್ ಶೀಟ್ ಅನ್ನು ತೆಗೆದುಕೊಂಡ ನಂತರವೇ ನಮ್ಮಂತಹ ಕಲಾವಿದರನ್ನು ಸಂಪರ್ಕಿಸುತ್ತಿದ್ದರು ಎಂದು ದೂರದರ್ಶನ ಕಾರ್ಯಕ್ರಮವೊಂದರಲ್ಲಿ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರು ಹೇಳಿದ ಮಾತು ನರಸಿಂಹರಾಜು ಅವರ ವ್ಯಕ್ತಿತ್ವಕ್ಕೆ ಹಿಡಿತ ಕನ್ನಡಿಯಾಗಿದೆ.

ಕನ್ನಡ ಸಿನಿಮಾರಂಗದಲ್ಲಿ ಮದ್ರಾಸ್ ಹಾಗೂ ಬೆಂಗಳೂರಿನಲ್ಲಿ ಮೊತ್ತ ಮೊದಲ ಮನೆ ನಿರ್ಮಿಸಿದ್ದ ಮೊದಲ ನಟ ಹಾಸ್ಯ ಚಕ್ರವರ್ತಿ ನರಸಿಂಹರಾಜು. ಕುಟುಂಬದವರೊಂದಿಗೆ ಅತ್ಯಂತ ನಿಕಟವಾಗಿ ಕಾಲ ಕಳೆಯುತ್ತಿದ್ದ ಸ್ನೇಹಿ ಜೀವಿ ಅವರಾಗಿದ್ದರು.

ಏತನ್ಮಧ್ಯೆ ಅವರ ಪ್ರೀತಿಯ ಪುತ್ರನ ಅಕಾಲಿಕ ನಿಧನದಿಂದ ನರಸಿಂಹರಾಜು ಅವರು ದೈಹಿಕವಾಗಿ ಕುಸಿದು ಹೋಗಿದ್ದರು. ಹೀಗೆ ಮಕ್ಕಳು, ಮೊಮ್ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದ ನರಸಿಂಹರಾಜು ಅವರು ತಮ್ಮ 56ನೇ(1979, ಜುಲೈ 20) ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು.

2 ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ನರಸಿಂಹರಾಜು ಬಾಲಿವುಡ್ ಆಹ್ವಾನ ತಿರಸ್ಕರಿಸಿದ್ದರು!

ನರಸಿಂಹರಾಜು ಅವರು ಹಿಂದಿಯ ಚೋರಿ ಚೋರಿ(1956) ಮತ್ತು ಮಿಸ್ ಮೇರಿ (1957) ಚಿತ್ರದಲ್ಲಿ ನಟಿಸಿದ್ದರು. ರಾಜ್ ಕಪೂರ್ ಮತ್ತು ನರ್ಗಿಸ್ ಜೋಡಿಯ ಸೂಪರ್ ಹಿಟ್ ಚೋರಿ, ಚೋರಿ ಹಿಂದಿ ಚಿತ್ರದ ಪುಟ್ಟ ಹಾಸ್ಯ ಪಾತ್ರದಲ್ಲಿ ನರಸಿಂಹರಾಜು ಕಾಣಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ರಾಜ್ ಕಪೂರ್ ಅವರು, ನೀವು ನಮ್ಮ ಜೊತೆ ಬನ್ನಿ. ಬಾಲಿವುಡ್ ನಲ್ಲಿ ದೊಡ್ಡ ಸ್ಟಾರ್ ಆಗುತ್ತೀರಿ ಎಂದು ಆಹ್ವಾನಿಸಿದ್ದರಂತೆ. ಆದರೆ ನರಸಿಂಹರಾಜು ಅವರು, ನಾನು ಕನ್ನಡ ಚಿತ್ರರಂಗದಲ್ಲಿ ಖಷಿಯಾಗಿದ್ದೇನೆ. ತಮ್ಮ ಆಹ್ವಾನಕ್ಕೆ ಧನ್ಯವಾದ ಎಂದು ಹೇಳಿದ್ದರಂತೆ. ಈ ವಿಷಯವನ್ನು ನರಸಿಂಹರಾಜು ಅವರ ಪತ್ನಿ ಶಾರದಮ್ಮ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.

1960 ಹಾಗೂ 70ರ ದಶಕದವರೆಗೆ ಜನಮನ ರಂಜಿಸಿ, ಹಾಸ್ಯ ಬ್ರಹ್ಮನಾಗಿ ಮಿಂಚಿದ್ದ ನರಸಿಂಹರಾಜು ಅವರಿಗೆ ರಾಜ್ಯ ಸರ್ಕಾರ ಒಮ್ಮೆಯೂ ಪ್ರಶಸ್ತಿ ಕೊಟ್ಟಿಲ್ಲ. ಆದರೆ ಇಂದಿಗೂ ಕೋಟ್ಯಂತರ ಕನ್ನಡಿಗರ ಮನದಾಳದಲ್ಲಿ ಅಜರಾಮರಾಗಿದ್ದಾರೆ. ಅದೇ ಅವರ ಶ್ರೇಷ್ಠ ನಟನೆಗೆ ಸಂದ ಗೌರವವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next