Advertisement
ಪ್ರಮುಖ ವಾಣಿಜ್ಯ ಕೇಂದ್ರ, ಧಾರ್ಮಿಕ ಕೇಂದ್ರಗಳು, ಸಹಕಾರಿ ಸಂಸ್ಥೆಗಳು, ನೆಮ್ಮದಿ ಕೇಂದ್ರ, ಅಂಚೆ, ಕೃಷಿ ಇಲಾಖೆ ಸೇರಿದಂತೆ ಪ್ರಮುಖ ವ್ಯವಹಾರ ಕೇಂದ್ರಗಳು ವೇಣೂರಿನ ಮಹಾವೀರ ನಗರದಲ್ಲೇ ಇವೆ. ಸಿದ್ದಕಟ್ಟೆಯಿಂದ ವೇಣೂರಿಗೆ ಬರುವ ಬಸ್ಗಳಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ವೇಣೂರಿನ ಶಾಲಾ ಕಾಲೇಜಿಗೆ ಬರುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ಬೆಳಗ್ಗಿನ ಬಸ್ಸನ್ನು ಅವಲಂಬಿಸಿದ್ದು, ಮುಖ್ಯ ಪೇಟೆಗೆ ಬರುವ ಬಸ್ಗಳು ಕಾಲೇಜು ರಸ್ತೆಗೆ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಹೆದ್ದಾರಿಯಲ್ಲಿ ನಡೆದುಕೊಂಡೇ ಹೋಗಬೇಕಾಗಿದೆ. ಮಳೆಗಾಲದಲ್ಲಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಈ ಹಿಂದೆ ಸಾರ್ವಜನಿಕರು ಸರಕಾರಕ್ಕೆ, ಆಗಿನ ಶಾಸಕರಿಗೆ, ಪ್ರಾದೇಶಿಕ ಸಾರಿಗೆ ಇಲಾಖೆಗೆ ಹಾಗೂ ಕಾರ್ಕಳದ ಸಹಾಯಕ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದರು. ಇದರ ಫಲವಾಗಿ ಪುತ್ತೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಆವಶ್ಯಕತೆಯನ್ನು ಮನಗಂಡು ಬಿ.ಸಿ. ರೋಡ್-ಬಂಟ್ವಾಳದಿಂದ ವೇಣೂರಿಗೆ, ನಾರಾವಿ ಕಡೆಯಿಂದ ವೇಣೂರಿಗೆ ಬಂದು ಹೋಗುವ ಬಸ್ಗಳನ್ನು ವೇಣೂರಿನ ಮಹಾವೀರ ನಗರಕ್ಕೆ ಓಡಿಸುವಂತೆ 1995ರಲ್ಲಿ ಆದೇಶ ನೀಡಿದ್ದರು. ಆ ಬಳಿಕ ಕೆಲ ವರ್ಷ ಮಹಾವೀರ ನಗರಕ್ಕೆ ತೆರಳಿದ ಬಸ್ಗಳು ಅನಂತರ ಮಹಾವೀರನಗರಕ್ಕೆ ತೆರಳಲೇ ಇಲ್ಲ. ಆಗಾಗ ವೇಣೂರು ಪೊಲೀಸರು ಎಚ್ಚರಿಕೆ ನೀಡುತ್ತಿದ್ದ ಸಂದರ್ಭ ತೆರಳುವ ಬಸ್ಗಳು ಈಗ ಮತ್ತೆ ಕೈಕೊಟ್ಟಿವೆ.