Advertisement

Venur; ಮೈಸೂರು ಸಂಸ್ಥಾನಕ್ಕಿತ್ತು ಜೈನರ ಮಾರ್ಗದರ್ಶನ: ಒಡೆಯರ್‌

12:56 AM Feb 27, 2024 | Team Udayavani |

ಬೆಳ್ತಂಗಡಿ: ದಕ್ಷಿಣ ಭಾರತದಲ್ಲಿ ಜೈನ ಪರಂಪರೆಯ ಪ್ರಭಾವ ಚಂದ್ರಗುಪ್ತ ಮೌರ್ಯನ ಕಾಲದಿಂದಲೂ ಅನೇಕ ಕೊಡುಗೆಗಳ ಮೂಲಕ ಬೆಳೆದುಬಂದಿತ್ತು. ಮೈಸೂರು ಸಂಸ್ಥಾನಕ್ಕೂ ಜೈನ ಪರಂಪರೆಯ ಮಾರ್ಗದರ್ಶನವಿದ್ದು, ಸಂಸ್ಥಾನದಿಂದಲೂ ಜೈನ ಪರಂಪರೆಗೆ ದೊಡ್ಡ ಕೊಡುಗೆ ನೀಡಿದೆ ಎಂದು ಮೈಸೂರು ಮಹಾಸಂಸ್ಥಾನದ ಮಹಾರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

Advertisement

ವೇಣೂರು ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಐದನೇ ದಿನವಾದ ಸೋಮವಾರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುನಿಶ್ರೀ ಅಮೋಘಕೀರ್ತಿ ಮಹಾರಾಜರು ಪ್ರವಚನ ನೀಡಿ, ವ್ಯಕ್ತಿಯ ಸುಖ-ಭೋಗ, ವೈಭವ, ಆಡಂಬರ ನೋಡಿ ಗೌರವಿಸುವುದಲ್ಲ. ಮಹಾಮಸ್ತಕಾಭಿಷೇಕದಿಂದ ಮಾನಸಿಕ ಪರಿವರ್ತನೆಯೊಂದಿಗೆ ಸಾಮಾಜಿಕ ಸುಧಾರಣೆಯಾಗಬೇಕು. ಜ್ಞಾನವೇ ಶಕ್ತಿಯಾಗಿದ್ದು ಇಂದು ಜ್ಞಾನದ ಪ್ರಕಾಶ ಕಡಿಮೆಯಾಗುತ್ತಿದೆ. ಎಲ್ಲ ಮಾನಸಿಕ ಕಷಾಯಗಳನ್ನು ತ್ಯಜಿಸಿ ಜಿತೇಂದ್ರಿಯರಾದರೆ ಮಾತ್ರ ಎಲ್ಲರೂ ಜಿನೇಂದ್ರರಾಗಲು ಸಾಧ್ಯ ಎಂದರು.

ಮುನಿಶ್ರೀ ಪೂಜ್ಯ ಅಮರಕೀರ್ತಿ ಮುನಿಮಹಾರಾಜರು ಆಶೀರ್ವಚನ ನೀಡಿ, ಪರಿಶುದ್ಧವಾದ ಅಚಲ ಭಕ್ತಿ
ಯಿಂದ ಮಾನವನೇ ಮಾಧವನಾಗ ಬಲ್ಲ. ಆತ್ಮನೇ ಪರಮಾತ್ಮನಾಗುತ್ತಾನೆ. ಅದಕ್ಕಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಎಂದರು.

ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ಆಶೀರ್ವ ಚನ ನೀಡಿದರು. ಜಮ ಖಂಡಿಯ ಸಾಹಿತಿ ಬಿ.ಪಿ.ನ್ಯಾಮಗೌಡ ವಿಶೇಷ ಉಪನ್ಯಾಸ ನೀಡಿದರು.

Advertisement

ಅಂಚೆಕಾರ್ಡ್‌ ಬಿಡುಗಡೆ
ಕರ್ನಾಟಕದ ಮುಖ್ಯ ಅಂಚೆ ಮಹಾಪ್ರಬಂಧಕ ಶಿರ್ತಾಡಿ ರಾಜೇಂದ್ರ ಕುಮಾರ್‌, ಅಂಚೆ ಇಲಾಖೆ ಮೂಲಕ ರೂಪಿಸಿದ ಬಾಹುಬಲಿ ಸ್ವಾಮಿಯ ಸಚಿತ್ರ ಅಂಚೆಕಾರ್ಡನ್ನು ಮೈಸೂರು ಮಹಾರಾಜರು ಬಿಡುಗಡೆಗೊಳಿಸಿದರು. ಮೌಲ್ಯ ಅವರ ಬಾಹುಬಲಿ ಗೀತಾಮೃತ ಗಾನಲಹರಿ ಬಿಡುಗಡೆಗೊಳಸಿ ಅವರನ್ನು ಗೌರವಿಸಲಾಯಿತು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ, ವಿ. ಪ್ರವೀಣಕುಮಾರ್‌ ಇಂದ್ರ,ಜಯರಾಜ ಕಂಬಳಿ ಮತ್ತು ಹುಬ್ಬಳ್ಳಿಯ ಮಹಾವಿರ ಕುಂದೂರು ಉಪಸ್ಥಿತರಿದ್ದರು. ಎಕ್ಸಲೆಂಟ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸೇವಾಕರ್ತರಾದ ಯುವರಾಜ ಜೈನ್‌ ಸ್ವಾಗತಿಸಿದರು. ಕಾರ್ಯದರ್ಶಿ ರಶ್ಮಿತಾ ಜೈನ್‌ ವಂದಿಸಿದರು. ಆಡಳಿತಾಧಿಕಾರಿ ಬಿ.ಪಿ. ಸಂಪತ್‌ ಕುಮಾರ್‌ ಕಾರ್ಯಕ್ರಮ ನಿರ್ವಹಿಸಿದರು.

ವಿಶೇಷ ಮಜ್ಜನ
ಸೇವಾಕರ್ತರಾದ ಮೂಡುಬಿದಿರೆ ಎಕ್ಸಲೆಂಟ್‌ ವಿದ್ಯಾಸಂಸ್ಥೆಯ ಕಲ್ಲಬೆಟ್ಟು ಮೂಡುಬಿದಿರೆಯ ಯುವರಾಜ ಜೈನ್‌ ಮತ್ತು ರಶ್ಮಿತಾ ಜೈನ್‌ ಹಾಗೂ ಕುಟುಂಬಸ್ಥರು ಸೇವಾಕರ್ತರಿಂದ ಗರ್ಭಾವತರಣ ಕಲ್ಯಾಣದ ಧಾರ್ಮಿಕ ವಿಧಿ, 216 ಕಲಶಗಳಿಂದ ಬಾಹುಬಲಿ ಸ್ವಾಮಿಯ ಮಹಾನಜ್ಜನದೊಂದಿಗೆ ಪೂಜೆ ನೆರವೇರಿತು. ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌, ಕಮಿಷನರ್‌ ಅನುಪಮ ಅಗರ್‌ವಾಲ್‌, ಐಜಿಪಿ ಬೋರಲಿಂಗಯ್ಯ ಭಾಗವಹಿಸಿದರು.

ಅರಸದ್ವಯರ ಸಂಗಮ
ಮಹಾ ಮಸ್ತಕಾಭಿಷೇಕವು ಸೋಮವಾರ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು. 1610ರಿಂದ ಜೈನ ಪರಂಪರೆಯನ್ನು ಪೋಷಿಸುತ್ತಾ ತ್ಯಾಗಿ ಬಾಹುಬಲಿಯ ಸಂದೇಶ ಅನು ಪಾಲಿಸಿದ ವಂಶಜರಾದ ಮೈಸೂರು ಮಹಾಸಂಸ್ಥಾನದ ಮಹಾರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಬಾಹುಬಲಿ ಮೂರ್ತಿ ಸ್ಥಾಪಿಸಿದ ಅಜಿಲ ಸೀಮೆಯ ವಂಶಸ್ಥರಾದ ತಿಮ್ಮಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರ ನಿವಾಸಕ್ಕೆ ಭೇಟಿ ನೀಡಿದರು. ಅಜಿಲ ದರ್ಶನ ಕಾವ್ಯ ಸಂಕಲನ ಬಿಡುಗಡೆಗೊಳಿಸಿದರು. ಇದಕ್ಕೂ ಮುನ್ನ ಮೈಸೂರು ಒಡೆಯರು ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಿಯ ದರ್ಶನ ಪಡೆದರು. ಸತ್ಯದೇವತಾ ಆಡಳಿತೆದಾರ ಶಿವಪ್ರಸಾದ ಅಜಿಲ ಉಪಸ್ಥಿತರಿದ್ದರು.

ಇಂದಿನ ಕಾರ್ಯಕ್ರಮ
ಫೆ. 27ರಂದು ಆರನೇ ದಿನದ ಸೇವಾರ್ಥಿಗಳಾದ ಎಂ. ಅನಂತಕುಮಾರ್‌ ಸಹೋದರರು ಮತ್ತು ಸಹೋದರಿಯರು ಹಾಗೂ ಕೆ. ಹೇಮರಾಜ್‌ ಬೆಳ್ಳಿಬೀಡು ಅವರಿಂದ ಬೆಳಗ್ಗೆ 9.30ಕ್ಕೆ ಕಲ್ಲುಬಸದಿಯ ಪಾಂಡುಶಿಲೆಯಲ್ಲಿ ಜನ್ಮಾಭಿಷೇಕ ಕಲ್ಯಾಣ ನೆರವೇರಲಿದ್ದು ನಿತ್ಯವಿಧಿ ಸಹಿತ ಬೆಳಗ್ಗೆ 9.35 ಮೇಷ ಲಗ್ನದಲ್ಲಿ ಶ್ರೀ ಜಿನ ಬಾಲಕನ ಜನ್ಮಕಲ್ಯಾಣ, ಅಷ್ಟದಿಕ್ಷು ಧಾಮ ಸಂಪ್ರೋಕ್ಷಣೆ, ಚತುರ್ದಿಕ್ಷು ಹೋಮ, ಪಾಂಡುಕಾಶಿಲೋಪರಿ ಜನ್ಮಾಭಿಷೇಕ ಕಲ್ಯಾಣ, ಅಗ್ರೋದಕ ಮೆರವಣಿಗೆ ನಡೆದು ಸಂಜೆ 6ಕ್ಕೆ ನಾಮಕರಣ ಹಾಗೂ ಬಾಲಲೀಲೋತ್ಸವದ ಬಳಿಕ ಭಗವಾನ್‌ ಬಾಹುಬಲಿ ಸ್ವಾಮಿಗೆ 216 ಕಲಶಗಳಿಂದ ಮಹಾಮಸ್ತಕಾಭಿಷೇಕ ಜರಗಲಿದೆ.

ಧಾರ್ಮಿಕ ಕಾರ್ಯಕ್ರಮ
ಅಪರಾಹ್ನ 3ಕ್ಕೆ ಯುಗಳ ಮುನಿಗಳು, ಮೂಡುಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಮಹಾಸ್ವಾಮೀಜಿ, ಕಾರ್ಕಳ ಜೈನ ಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಶ್ರೀ ಕ್ಷೇತ್ರ ನಾಂದಣಿಯ ಶ್ರೀ ಜಿನಸೇನ ಭಟ್ಟಾರಕ ಮಹಾ ಸ್ವಾಮೀಜಿ ಸಾನಿಧ್ಯದಲ್ಲಿ ಧಾರ್ಮಿಕ ಸಭೆ ಜರಗಲಿದ್ದು ಮಾಜಿ ಮುಖ್ಯಮಂತ್ರಿ ಡಾ| ಎಂ.ವೀರಪ್ಪ ಮೊಯ್ಲಿ ಅಧ್ಯಕ್ಷತೆ ವಹಿಸಲಿರುವರು.

ಮುಖ್ಯ ವೇದಿಕೆಯಲ್ಲಿ ವಿರಾಗಿ ಬಾಹುಬಲಿ ನೃತ್ಯ ರೂಪಕ, ವಸ್ತುಪ್ರದರ್ಶನ ವೇದಿಕೆಯಲ್ಲಿ ಭಕ್ತಿ ಸಂಗೀತ ಬಳಿಕ ರಾತ್ರಿ ಮುತ್ತು ಮನಿಪುಜೆ ತುಳು ನಾಟಕ ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next