Advertisement

ವಾಹನ ಕಾಯ್ದೆ: ಹೊಂದಿಕೊಳ್ಳಲು ಸ್ವಲ್ಪ ದಿನ ಬೇಕು

12:58 PM Sep 14, 2019 | Suhan S |

ಕೋಲಾರ: ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ಹೊಂದಿಕೊಳ್ಳಲು ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿ ಸಜ್ಜಾಗುತ್ತಿದೆ. ಹೊಸ ಕಾಯ್ದೆಯ ಪ್ರಕಾರ ಇಲಾಖೆಯ ಆನ್‌ಲೈನ್‌ ವ್ಯವಸ್ಥೆ ಆಪ್‌ಡೇಟ್ ಆಗುತ್ತಿದ್ದು, ಅಧಿಕಾರಿ ಸಿಬ್ಬಂದಿ ಹೊಸ ಕಾಯ್ದೆ ಅಧ್ಯಯನ ಮಾಡುತ್ತಾ ಕಾರ್ಯನಿರ್ವಹಿಸಲು ಸಿದ್ಧತೆ ನಡೆಸುತ್ತಿದ್ದಾರೆ.

Advertisement

ಹೊಸ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಲ್ಲಿ ಕೇವಲ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದವರಿಗೆ ದೊಡ್ಡ ಮೊತ್ತದ ದಂಡ ವಿಧಿಸುವುದಲ್ಲದೇ, ಸಾರ್ವಜನಿಕರಿಗೆ ಅನುಕೂಲವಾಗುವ ವಿಷಯಗಳೂ ಇದ್ದು, ಇವುಗಳು ಸಾರ್ವಜನಿಕರಿಗೆ ತಿಳಿಯಲು ಕೆಲವು ದಿನಗಳ ಕಾಯಬೇಕಷ್ಟೆ ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿ.

ಈ ಹಿಂದಿನ ಕಾಯ್ದೆಯಡಿ ಚಾಲನಾ ಪರವಾನಗಿ ನವೀಕರಿಸುವ ದಿನಾಂಕ ಮುಗಿದರೆ ಪ್ರತಿ ತಿಂಗಳು ಕಳೆದರೂ ಇಂತಿಷ್ಟು ಸಾವಿರ ರೂ. ದಂಡ ಪಾವತಿಸಬೇಕಾಗಿತ್ತು. ಆದರೆ, ಹೊಸ ಕಾಯ್ದೆಯ ಪ್ರಕಾರ ನವೀಕರಣಕ್ಕೆ ಒಂದು ವರ್ಷಕ್ಕೆ ಮೊದಲು ಅಥವಾ ಒಂದು ವರ್ಷದ ನಂತರವೂ ಯಾವುದೇ ದಂಡ ಪಾವತಿ ಇಲ್ಲದೆ ನವೀಕರಿಸಬಹುದಾಗಿದೆ.

ಕಾಯ್ದೆಯ ಈ ನಿಯಮದ ಪ್ರಕಾರ ಚಾಲನಾ ಪರವಾನಗಿ ನವೀಕರಿಸಲು ದೊಡ್ಡ ಸಂಖ್ಯೆಯಲ್ಲಿ ಚಾಲಕರು ಆರ್‌ಟಿಒ ಕಚೇರಿಗೆ ಮುಗಿ ಬಿದ್ದಿದ್ದು, ಕಚೇರಿಯ ಸಾಫ್ಟ್ವೇರ್‌ ಹೊಸ ಕಾಯ್ದೆಯ ಪ್ರಕಾರ ಅಪ್‌ಡೇಟ್ ಆಗದೆ ನೂಕುನುಗ್ಗಲು ಏರ್ಪಡುತ್ತಿದೆ.

ಆದಾಯ ನಿಗದಿ: ಕೋಲಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಗೆ ಹಿಂದಿನ ವರ್ಷ 37.22 ಕೋಟಿ ರೂ. ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿತ್ತು. ಕೋಲಾರ ಕಚೇರಿಯು 40.36 ಕೋಟಿ ರೂ. ಅನ್ನು ಸಂಗ್ರಹಿಸಿ ಗುರಿ ಮೀರಿ ಅಂದರೆ ಶೇ.108 ಸಾಧನೆ ಮಾಡಿದೆ. ಪ್ರಸಕ್ತ ಸಾಲಿನಲ್ಲಿ 42.88 ಕೋಟಿ ರೂ. ಸಂಗ್ರಹಿಸುವ ಗುರಿ ನೀಡಲಾಗಿದ್ದು, ಮಾರ್ಚ್‌ ನಂತರದ ಪ್ರತಿ ತಿಂಗಳು ಶೇ.100 ಸಾಧನೆ ಮಾಡುತ್ತಾ ಈ ಬಾರಿಯೂ ಗುರಿ ಮೀರಿ ಸಾಧನೆ ಮಾಡುವತ್ತ ದಾಪುಗಾಲು ಹಾಕುತ್ತಿದೆ.

Advertisement

ತಪಾಸಣಾ ಕೇಂದ್ರ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಮತ್ತು ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡ್‌ಗಳಲ್ಲಿ ಎರಡು ಆರ್‌ಟಿಒ ತಪಾಸಣಾ ಕೇಂದ್ರಗಳಿವೆ. ಈ ಎರಡೂ ಕೇಂದ್ರಗಳು ಕೇಂದ್ರ ಕಚೇರಿ ವ್ಯಾಪ್ತಿಗೊಳಪಟ್ಟಿದ್ದು, ಈ ಕೇಂದ್ರಗಳ ನಿರ್ವಹಣೆಯನ್ನು ಎಆರ್‌ಟಿಒಗಳು ನಿರ್ವಹಿಸುತ್ತಾರೆ. ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳು ಅಧಿಕೃತ ವಾಗಿ ಕೇಂದ್ರ ಕಚೇರಿಯಿಂದ ಪರವಾನಗಿ ಪಡೆದು ಜಿಲ್ಲೆಯಲ್ಲಿ ನಿರ್ವಹಿಸುತ್ತಿದ್ದು, ಇವುಗಳ ಮೇಲ್ವಿಚಾರಣೆಯೂ ಕೇಂದ್ರ ಕಚೇರಿಗೆ ಒಳಪಟ್ಟಿದೆ.

ಹಿಂದಿನ ವರ್ಷ 2018-19 ನೇ ಸಾಲಿನಲ್ಲಿ ಕೋಲಾರ ಜಿಲ್ಲೆಯಲ್ಲಿ 3984 ಆರ್‌ಟಿಒ ತಪಾಸಣೆಗಳು ನಡೆದಿದ್ದು, ಈ ಪೈಕಿ 138 ಪ್ರಕರಣಗಳಲ್ಲಿ ಕೇಸುಗಳನ್ನು ದಾಖಲಿಸಿ, 1.38 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ.

ಪ್ರಸಕ್ತ ಸಾಲಿನ ಏಪ್ರಿಲ್ 1 ರಿಂದ ಜೂನ್‌ ಅಂತ್ಯದವರೆಗೂ ವಾಯು ಮಾಲಿನ್ಯದ 505 ತಪಾಸಣಾ ಪ್ರಕರಣಗಳು ನಡೆದಿದ್ದು, 82 ಪ್ರಕರಣಗಳಲ್ಲಿ ಕೇಸು ದಾಖಲಿಸಲಾಗಿ, 82 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಈ ಅವಧಿಯಲ್ಲಿ 505 ಶಬ್ದಮಾಲಿನ್ಯ ಪ್ರಕರಣಗಳ ತಪಾಸಣೆ ನಡೆಸಿದ್ದು, 30 ಪ್ರಕರಣಗಳಲ್ಲಿ ಕೇಸು ದಾಖಲಿಸಿ, 30 ಸಾವಿರ ರೂ. ದಂಡ ವಸೂಲು ಮಾಡಲಾಗಿದೆ. ಹಿಂದಿನ ವರ್ಷದ ಆಡಿಟ್ ಆಕ್ಷೇ ಪಣೆಯ 84,357 ರೂ. ಅನ್ನು ಪ್ರಸಕ್ತ ಸಾಲಿನಲ್ಲಿ ವಸೂಲಿ ಮಾಡಲಾಗಿದೆ.

ಸರಕು ಸಾಗಾಣಿಕೆಯಲ್ಲಿ ಪ್ರಯಾಣಿಕರ ಸಾಗಾಣಿಕೆ: ಸರಕು ಸಾಗಾಣಿಕೆ ವಾಹನ ಪರವಾನಗಿ ಪಡೆದು ಅವುಗಳಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ವಾಹನಗಳ ತಪಾಸಣೆಗೆ ಕೋಲಾರ ಆರ್‌ಟಿಒದಿಂದ ವಿಶೇಷ ಆಂದೋಲನ ಮಾಡಲಾಗಿದೆ. 30 ಕೇಸುಗಳನ್ನು ದಾಖಲಿಸಿ, ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ ನಿಗದಿತ ಅವಧಿಗೆ ದಂಡ ರೂಪದಲ್ಲಿ ವಾಹನದ ಆರ್‌ಸಿ ಮತ್ತು ಚಾಲಕರ ಪರವಾನಗಿಗಳನ್ನು ಅಮಾನತ್ತಲ್ಲಿ ಇಡಲು ಸೂಚಿಸಲಾಗಿದೆ. ಈ ಅಮಾನತಿನ ಅವಧಿಯಲ್ಲಿ ಸಂಬಂಧಪಟ್ಟ ವಾಹನವನ್ನು ತೆಗೆಯು ವಂತಿಲ್ಲ, ಚಾಲಕರು ವಾಹನ ಓಡಿಸುವಂತಿಲ್ಲ.

ನೋಂದಣಿ ಶೇ.50 ಕಡಿತ: ಆರ್ಥಿಕ ಹಿಂಜರಿತ ಮತ್ತು ವಿವಿಧ ಕಾರಣಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ವಾಹನ ನೋಂದಣಿ ಶೇ.50 ಕಡಿಮೆಯಾಗಿದೆ. ಪ್ರತಿ ನಿತ್ಯ ಕೋಲಾರ ಕಚೇರಿಯಲ್ಲಿ 80 ರಿಂದ 100 ದ್ವಿಚಕ್ರವಾಹನ ಗಳು ಮತ್ತು ನಾಲ್ಕೈದು ಕಾರುಗಳು ಮಾತ್ರವೇ ನೋಂದ ಣಿಗೆ ಬರುತ್ತಿವೆ. ಈ ಹಿಂದೆ ಇದರ ದುಪ್ಪಟ್ಟು ಸಂಖ್ಯೆಯ ವಾಹನಗಳು ನೋಂದಣಿಗೆ ಆಗಮಿಸುತ್ತಿತ್ತು.

ಚೈಲ್ಡ್ ಲಾಕ್‌ ತೆರವು: ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಟ್ಯಾಕ್ಸಿ ಗಾಡಿಗಳಲ್ಲಿ ವಾಹನ ಚಲಾವಣೆಯಾಗುತ್ತಿದ್ದಂತೆಯೇ ವಾಹನದ ಬಾಗಿಲುಗಳು ಸ್ವಯಂ ಚಾಲಿತವಾಗಿ ಲಾಕ್‌ ಆಗುವುದನ್ನು ತಡೆಯುವ ಚೈಲ್ಡ್ ಲಾಕ್‌ ವ್ಯವಸ್ಥೆಯನ್ನು ಹೈಕೋರ್ಟ್‌ ಆದೇಶದ ಮೇರೆಗೆ ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಇದರಿಂದ ಮಹಿಳೆಯರ ಶೋಷಣೆ, ಕಿಡ್ನಾಪ್‌ನಂತ ಘಟನೆಗಳನ್ನು ನಿಗ್ರಹಿಸಲು ಸಾಧ್ಯವಿದೆ.

ರಸ್ತೆ ಸುರಕ್ಷತೆ: ಸರ್ಕಾರಗಳು ರಸ್ತೆ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಅನುದಾನವು ಬಿಡುಗಡೆ ಯಾಗಿದೆ. ರಸ್ತೆ ಸುರಕ್ಷತಾ ಕಾರ್ಯಕ್ರಮ ಗ ಳಲ್ಲಿಯೇ ಈಗ ಹೊಸದಾಗಿ ತಿದ್ದುಪಡಿಯಾಗಿರುವ ಮೋಟಾರು ವಾಹನ ಕಾಯ್ದೆಯ ಕುರಿತು ಜನ ಜಾಗೃತಿ ಮೂಡಿಸಲು ಆರ್‌ಟಿಒ ಕಚೇರಿಯಿಂದ ನಿರ್ಧರಿಸಲಾಗಿದೆ.

ಚಾಲನಾ ಪರವಾನಗಿ: ಕೋಲಾರ ಆರ್‌ಟಿಒ ಕಚೇರಿ ಯಿಂದ ಪ್ರತಿ ನಿತ್ಯವೂ ಸರಾಸರಿ 100 ಮಂದಿ ತರಬೇತಿ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಪೈಕಿ ಕನಿಷ್ಠ 50 ಮಂದಿ ಚಾಲನಾ ಪರವಾನಗಿ ಪಡೆಯುತ್ತಿದ್ದಾರೆ. ಹೊಸ ಮೋಟಾರು ಕಾಯ್ದೆ ತಿದ್ದುಪಡಿ ಅನುಷ್ಠಾನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಲ್ಎಲ್ಆರ್‌ ಪಡೆದವರೆಲ್ಲರೂ ಡಿಎಲ್ ಪಡೆದುಕೊಳ್ಳಲು ಆಗಮಿಸುತ್ತಾರೆ. ಚಾಲನಾ ಪರವಾನಗಿ ಯನ್ನು ಸಕಾಲದ ಮೂಲಕ ಸಾರ್ವಜನಿಕರು ಅರ್ಜಿ ಸಲ್ಲಿಸುತ್ತಿದ್ದು, ಹೀಗೆ ಅರ್ಜಿ ಸಲ್ಲಿಸಿದ 27 ದಿನಗಳಲ್ಲಿ ಚಾಲನಾ ಪರವಾನಗಿ ನೀಡಬೇಕಾಗಿದ್ದು, ಬಹುತೇಕ ಯಾವುದೇ ಬಾಕಿ ಇಲ್ಲದಂತೆ ಚಾಲನಾ ಪರವಾನಗಿ ಯನ್ನು ಮಂಜೂರು ಮಾಡಲಾಗುತ್ತಿದೆ. ಸಿಬ್ಬಂದಿ ಕೊರತೆ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಬಾಕಿ ಇರುವ ಪ್ರಕರಣಗಳನ್ನು ಮರುದಿನವೇ ಇತ್ಯರ್ಥ ಪಡಿಸಲು ಅಗತ್ಯಕ್ರಮವಹಿಸಲಾಗಿದೆ.

 

● ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next