Advertisement

ಶ್ರಾವಣ ನಂತರ ವೀರಶೈವರ ಮಹಾ ಜಾಥಾ

07:10 AM Jul 31, 2017 | Team Udayavani |

ಬೀದರ: ಲಿಂಗಾಯತರ ಜಾಥಾ ಬಳಿಕ ವೀರಶೈವರು-ಲಿಂಗಾಯತರ ನಡುವಿನ ಜಟಾಪಟಿ ತಾರಕಕ್ಕೇರುತ್ತಿದೆ. ಕರ್ನಾಟಕದಲ್ಲಿ ವೀರಶೈವರೇ ಇಲ್ಲ. ಇಲ್ಲಿರುವವರೆಲ್ಲರೂ ಲಿಂಗಾಯತರೇ ಎಂಬ ಮಠಾಧೀಶರ ಹೇಳಿಕೆ ಹಿನ್ನೆಲೆಯಲ್ಲಿ ಈಗ ವೀರಶೈವರು ಶಕ್ತಿ ತೋರಿಸಲು ಶ್ರಾವಣ ಮಾಸದ ನಂತರ ಬೀದರ್‌ನಲ್ಲಿ ಮಹಾ ಜಾಥಾ ಆಯೋಜಿಸಿದ್ದಾರೆ.

Advertisement

ಜಿಲ್ಲೆಯ ಮಠಾಧೀಶರ ಒಕ್ಕೂಟದ ಸುದ್ದಿಗೋಷ್ಠಿಯಲ್ಲಿ ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು ಈ ಕುರಿತು ಮಾಹಿತಿ ನೀಡಿದರು. “ರಾಜ್ಯದಲ್ಲಿ ವೀರಶೈವರಿದ್ದಾರೆ ಎಂದು ಸಮಾಜಕ್ಕೆ ತೋರಿಸಲು ಜಾಥಾ ನಡೆಸಲಾಗುತ್ತಿದೆ. ಇದು ಶಕ್ತಿ ಪ್ರದರ್ಶನ ಅಲ್ಲ, ಸಾಮರಸ್ಯ ಪ್ರದರ್ಶನ. ವೀರಶೈವ ಹಾಗೂ ಲಿಂಗಾಯತ ಒಂದೇ ಆಗಿದ್ದು, ಇದರಲ್ಲಿ ಗೊಂದಲ ಬೇಡ. ಸ್ವಾರ್ಥ ಸಾಧನೆಗಾಗಿ ಸಮಾಜ ಒಡೆಯುವ ಕೆಲಸ ಬಿಡಬೇಕು’ ಎಂದರು.

“ಬೀದರ್‌ನಲ್ಲಿ ನಡೆದ ಮಹಾ ರ್ಯಾಲಿ ಪೂರ್ವಭಾವಿ ಸಭೆಯಲ್ಲಿ ಭಾಲ್ಕಿಯ ಡಾ|ಬಸವಲಿಂಗ ಪಟ್ಟದೇವರು, “ವೀರಶೈವ ಮತ್ತು ಲಿಂಗಾಯತ ಬೇರೆಯಲ್ಲ’ ಎಂದು ಹೇಳಿದ್ದರು. ಇದನ್ನು ನಾವೂ ಸ್ವೀಕರಿಸಿ ಸಮಾಜದ ಸಂಘಟನೆ ಬಲಿಷ್ಠಗೊಳ್ಳುವ ಉದ್ದೇಶದಿಂದ ಭಕ್ತರಿಗೆ ಮಹಾರ್ಯಾಲಿಗೆ ಹೋಗಲು ಹೇಳಿದ್ದೆವು. ಆದರೆ, 19ರ ರ್ಯಾಲಿ ನಂತರ ಬೆಳವಣಿಗೆಗಳೇ ಬೇರೆ ನಡೆಯುತ್ತಿವೆ. ಇದು ಸುಧಾರಣೆ ಆಗಬಹುದು ಎಂದು ನಂಬಿದ್ದೇವೆ. ಆದರೆ, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ.  ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸ್ವಾಮೀಜಿಗಳೂ ಹೇಳಿಕೆ ನೀಡುವಂಥ ಸ್ಥಿತಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

“ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಸಂದೇಶವನ್ನು ಮಾತ್ರ ರಂಭಾಪುರಿ ಶ್ರೀಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಕೆಲವರು ಇದನ್ನು ತಪ್ಪಾಗಿ ತಿಳಿದು ಶ್ರೀಗಳನ್ನು ಕನಿಷ್ಠ ಶಬ್ದಗಳಿಂದ ಟೀಕಿಸುವ ಮೂಲಕ ವೀರಶೈವ ಲಿಂಗಾಯತ ಧರ್ಮಕ್ಕೆ ಅಪಮಾನ ಮಾಡಲಾಗಿದೆ. ಮಾತೆ ಮಹಾದೇವಿ ಅವರು ವೀರಶೈವ ಮಹಾಸಭಾದ ಸಂಸ್ಥಾಪಕರಾದ ಹಾನಗಲ್‌ ಶ್ರೀ ಗುರು ಕುಮಾರ ಸ್ವಾಮಿಗಳ ಬಗ್ಗೆ ಹಾಗೂ ವಿವಿಧ ಮಠಾಧಿಧೀಶರ ಕುರಿತು ಹಗುರವಾಗಿ ಮಾತನಾಡುವುದು ಶೋಭೆ ತರವಂತಹದಲ್ಲ. ಈ ಕುರಿತು ಕಾನೂನು ಕ್ರಮಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು’ ಎಂದರು.

“ವೀರಶೈವ’ ತೆಗೆದರೆ ಹೋರಾಟ: ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿ ಸಿದಂತೆ ಅಖೀಲ ಭಾರತ ವೀರಶೈವ ಮಹಾಸಭೆ ಆ.2ರಂದು ಸಭೆ ಕರೆದಿದ್ದು, ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಎಂದು ಶ್ರೀ ರಾಜೇಶ್ವರ ಶಿವಾಚಾರ್ಯರು ಹೇಳಿದರು. ಸ್ವತಂತ್ರ ಧರ್ಮ ಸ್ಥಾನಮಾನ ವಿಚಾರದಲ್ಲಿ  “ವೀರಶೈವ’ ಪದ ಹೊರತು ಪಡಿಸಿದರೆ ಹೋರಾಟ
ಅನಿವಾರ್ಯ. ಈ ಸಂಬಂಧ ಕಲಬುರಗಿ, ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ ಸಮಾವೇಶ ನಡೆಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Advertisement

ಹೋರಾಟದ ನೇತೃತ್ವಕ್ಕೆ ತೋಂಟದ ಶ್ರೀಗೆ ಮನವಿ
ಬೀದರ:
ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟದ ನೇತೃತ್ವ ವಹಿಸಿಕೊಳ್ಳುವಂತೆ ಗದಗ ತೋಂಟದಾರ್ಯ ಮಠದ ಡಾ|ಸಿದ್ಧಲಿಂಗ ಸ್ವಾಮೀಜಿ ಅವರಿಗೆ ಜಿಲ್ಲಾ ಸ್ವತಂತ್ರ ಧರ್ಮ ಸಮನ್ವಯ ಸಮಿತಿ ಕೋರಿದೆ. ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರ ನೇತೃತ್ವದ ಪ್ರಮುಖ ನಿಯೋಗ ಕಲಬುರಗಿ ಜಿಲ್ಲೆಯ ಅಫ್ಜಲಪುರದಲ್ಲಿ ಗದಗ ಶ್ರೀಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಜು.19ರಂದು ಬೀದರ್‌ನಲ್ಲಿ ನಡೆದ ಮಹಾ ರ್ಯಾಲಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದು, ಸ್ವತಂತ್ರ ಧರ್ಮದ ಮಾನ್ಯತೆಗಾಗಿ ನಡೆಯಲಿರುವ ಮುಂದಿನ ಹೋರಾಟಗಳ ನೇತೃತ್ವವನ್ನು ತಾವೇ ವಹಿಸಿಕೊಳ್ಳಬೇಕು ಎಂದು ನಿಯೋಗ ಶ್ರೀಗಳಲ್ಲಿ ಮನವಿ ಮಾಡಿದೆ.

ನಿಯೋಗದ ಆಮಂತ್ರಣಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶ್ರೀಗಳು, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ
ಮಾನ್ಯತೆಗೆ ಇದೀಗ ಕಾಲ ಕೂಡಿ ಬಂದಿದೆ. ಶೀಘ್ರ ಸಿಎಂ ಬಳಿ ಪ್ರಮುಖರ ನಿಯೋಗ ತೆರಳುವ ಆಶ್ವಾಸನೆ ನೀಡಿದರು ಎಂದು ಸಮಿತಿ ತಿಳಿಸಿದೆ.

ಲಿಂಗಾಯತ ಪ್ರತ್ಯೇಕ ಧರ್ಮವಾಗಲಿ: ಚಂಪಾ
ಮೈಸೂರು
: “ಲಿಂಗಾಯತ ಧರ್ಮ ಬಂಡಾಯ ಧರ್ಮವಾಗಿದ್ದು, ಅವರಿಗೆ ಪ್ರತ್ಯೇಕ ಧರ್ಮ ಬೇಕಿದೆ. ಆದರೆ, ವೀರಶೈವರು ತಾವು ಹಿಂದೂಗಳೆಂದ ಮೇಲೆ ಅವರಿಗೆ ಪ್ರತ್ಯೇಕ ಧರ್ಮದ ಅವಶ್ಯಕತೆಯಿಲ್ಲ’ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಭಾನುವಾರ ಮಾತನಾಡಿ, ಲಿಂಗಾಯತ ಧರ್ಮ ಸ್ಥಾಪನೆ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹುಟ್ಟಿದ್ದಲ್ಲ. ಹಲವು ವರ್ಷಗಳ ಹಿಂದೆ ಹಿಂದೂ ಧರ್ಮದಲ್ಲಿನ ಲೋಪಗಳನ್ನು ತಿದ್ದಿದ ಬಸವಣ್ಣ ಲಿಂಗಾಯತ ಧರ್ಮದ ಜನಕರಾಗಿದ್ದಾರೆ. ಆದರೆ, ವೀರಶೈವರು ಹಿಂದೂಗಳೆನ್ನುವುದರಿಂದ ಅವರು ಮಾತೃ ಧರ್ಮದಲ್ಲೇ ಇರಬೇಕಿದೆ. ಇದರಿಂದ ಯಾವುದೇ ಸ್ಥಾನ, ಮಾನ ಹೋಗುವುದಿಲ್ಲ. ಆದರೆ, ಬಂಡಾಯ ಧರ್ಮವಾಗಿರುವ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ವೀರಶೈವ-ಲಿಂಗಾಯತ ಬೇರೆ- ಬೇರೆಯಲ್ಲ, ಒಂದೇ ನಾಣ್ಯದ ಎರಡು ಮುಖಗಳು. ವೀರಶೈವ ಹಾಗೂ ಲಿಂಗಾಯತ ಎಂಬುದು ಪರ್ಯಾಯ ಪದಗಳಾಗಿವೆ. ಸೌಲಭ್ಯ ದೊರೆಯುತ್ತದೆ ಎನ್ನುವ ನಿಟ್ಟಿನಲ್ಲಿ ಧರ್ಮ ಬೇರ್ಪಡೆ ಆಗುವುದು ಬೇಡ. ವೀರಶೈವ-ಲಿಂಗಾಯತ ವ್ಯಕ್ತಿ ಆಧಾರಿತ ಧರ್ಮವಲ್ಲ.
– ಡಾ| ಶರಣಬಸವಪ್ಪ ಅಪ್ಪ,ಶರಣಬಸವೇಶ್ವರ ಮಹಾದಾಸೋಹಿ
ಸಂಸ್ಥಾನದ ಎಂಟನೇ ಪೀಠಾಧಿಪತಿ

ನೂರಾರು ವರ್ಷಗಳಿಂದ ಸಮಾಜದಲ್ಲಿ ಸಾಮರಸ್ಯ ಕಾಯ್ದುಕೊಂಡು ಬಂದ ವೀರಶೈವ ಲಿಂಗಾಯತ ಸಮಾಜದಲ್ಲಿ ಕೆಲವರು ಪ್ರತ್ಯೇಕ ಧರ್ಮ ಕುರಿತು ರಾಜಕೀಯ ಹುಳಿ ಹಿಂಡಲು ಹೊರಟಿದ್ದಾರೆ. 
– ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು, ತೊಸನನಳ್ಳಿ(ಎಸ್‌)ನ ಸಂಗಮೇಶ್ವರ ಸಂಸ್ಥಾನಮಠದ ಪೀಠಾಧಿ ಪತಿ

ಪಂಚಪೀಠಗಳಲ್ಲಿ ಕೂಡ ಕೆಲವು ನ್ಯೂನತೆಗಳಿರುವುದು ನಿಜ. ಹಾಗಂತ ವೀರಶೈವವು ಶೈವ ಧರ್ಮದ ಶಾಖೆಯಲ್ಲ.  ಬಸವಣ್ಣನನ್ನು ಮಹಾ ಮಾನವ ತಾವಾದಿಯನ್ನಾಗಿಸಿದ್ದೇ ವೀರಶೈವರು. ಬಸವಣ್ಣನನ್ನು ವೀರಶೈವರು ಗುರುವಾಗಿ  ಸ್ವೀಕರಿಸಿಲ್ಲ ಎಂಬ ಕೆಲವರ ವಾದ ಪೂರ್ವಾಗ್ರಹ ಪೀಡಿತವಾದದ್ದು. ಲಿಂಗಾಯತ-ವೀರಶೈವ ಧರ್ಮದ ಬಗ್ಗೆ ಉಂಟಾಗಿರುವ ವಿವಾದ ಕುರಿತು ಚರ್ಚಿಸಲು ಆ.5ರಂದು ಬಾದಾಮಿ ತಾಲೂ ಕಿನ ಶಿವಯೋಗ ಮಂದಿರದಲ್ಲಿ  ವೀರಶೈವ ಮಠಾಧಿಧೀಶರ ಸಭೆ ನಡೆಯಲಿದೆ.
– ಡಾ|ಅಭಿನವ ಅನ್ನದಾನ
ಸ್ವಾಮೀಜಿ, ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠ

ಪ್ರತ್ಯೇಕ ಧರ್ಮಕ್ಕಾಗಿ ವೀರಶೈವರು  ಲಿಂಗಾಯತರು ಶತಮಾನದಿಂದ ಬೇಡಿಕೆ ಇಟ್ಟಿದ್ದಾರೆ. ಈಗ ಇದೇ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ಇಟ್ಟಿದ್ದು, ಆ ಮನವಿಯನ್ನು ಮುಖ್ಯಮಂತ್ರಿಗಳು
ಸ್ವೀಕರಿಸಿದ್ದಾರೆ. 

– ಎಚ್‌.ಆಂಜನೇಯ
ಸಮಾಜಕಲ್ಯಾಣ ಇಲಾಖೆ ಸಚಿವ

ಲಿಂಗಾಯತ-ವೀರಶೈವಧರ್ಮದ ಹೆಸರಿನಲ್ಲಿ ಜಾತಿ ಒಡೆಯುವ ಅಥವಾ ಗೊಂದಲ ಸೃಷ್ಟಿಸುವ ಯಾವ ಕೆಲಸವನ್ನೂ ಕಾಂಗ್ರೆಸ್‌ ಮಾಡುತ್ತಿಲ್ಲ. ಒಡೆದು ಆಳುವ ನೀತಿ ಕಾಂಗ್ರೆಸ್‌ನಲ್ಲಿಲ್ಲ. 
– ಬಿ.ಕೆ.ಹರಿಪ್ರಸಾದ್‌
ರಾಜ್ಯಸಭಾ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next