Advertisement

ವೇದಾಂತ್‌ಗೆ ಕೊಹ್ಲಿ, ಧೋನಿಯಂತೆ ಆಗುವ ಹಂಬಲ

02:11 PM Oct 14, 2017 | |

ಅದು 2011ರ ಏಕದಿನ ವಿಶ್ವಕಪ್‌ ಪಂದ್ಯ. ತಂದೆ ಮಗ ಇಬ್ಬರಿಗೂ ಕ್ರಿಕೆಟ್‌ ಫೀವರ್‌! ಇಬ್ಬರೂ ಯಾವ ಪಂದ್ಯವನ್ನೂ ಬಿಡುತ್ತಿರಲಿಲ್ಲ.  ಅದರಲ್ಲಿಯೂ ಭಾರತದ ಪಂದ್ಯಗಳಂತೂ ಮಿಸ್ಸೇ ಇಲ್ಲ. ಹೀಗೆ ಅಪ್ಪನ ಜತೆ ಕುಳಿತು ಕ್ರಿಕೆಟ್‌ ನೋಡುತ್ತಿದ್ದ 9ರ ಬಾಲಕನಿಗೆ ತಾನು  ಎಂ.ಎಸ್‌.ಧೋನಿ, ವಿರಾಟ್‌ ಕೊಹ್ಲಿ ಆಗಬೇಕು ಅನ್ನುವ  ಭಾವನೆ ಜೊತೆಗೊಳ್ಳುತ್ತದೆ. ದಿನದಿಂದ ದಿನಕ್ಕೆ ತಾನು ಕ್ರಿಕೆಟ್‌ ಆಟಗಾರನಾಗಬೇಕು ಎಂಬ ಆಸೆ ಮತ್ತು ಹಟವನ್ನು ಅಪ್ಪನ ಮುಂದಿಡುತ್ತಾನೆ.

Advertisement

ಮಗನ  ಬಯಕೆಯಂತೆ ತಂದೆ ಸ್ವಲ್ಪದಿನದಲ್ಲಿಯೇ “ಎಸಿಇ’ ಕ್ರಿಕೆಟ್‌ ಅಕಾಡೆಮಿಗೆ ಸೇರಿಸುತ್ತಾರೆ. ಆ ಬಾಲಕನೇ ಇದೀಗ ಅಂತರ ಪ್ರೌಢಶಾಲೆ, ಕೆಎಸ್‌ಸಿಎ ಜೂನಿಯರ್‌  ಪಂದ್ಯಗಳಲ್ಲಿ ಮಿಂಚುತ್ತಿರುವ ಆಲ್‌ ರೌಂಡರ್‌ ವೇದಾಂತ್‌ ಕಾಟೇಕರ್‌! ಕೆಎಸ್‌ಸಿಎ ಜೂನಿಯರ್‌ 14 ಮತ್ತು 16 ತಂಡದಲ್ಲಿ ವೇದಾಂತ್‌ ನೀಡಿರುವ ಪ್ರದರ್ಶನ  ನೋಡಿದರೆ ಮುಂದೂಂದು  ದಿನ ಈತ ಭಾರತ ತಂಡದಲ್ಲಿ ಆಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇದೇ ಹಟ, ಛಲದಿಂದ ಫಾರ್ಮ್ ಕಾಯ್ದುಕೊಳ್ಳಬೇಕು  ಅಷ್ಟೇ. ಒಮ್ಮೆ ವೇದಾಂತ್‌ ತಮ್ಮ ಪ್ರತಿಭೆಯಿಂದ ಮುಂದೊಂದು ದಿನ ಭಾರತ ತಂಡದಲ್ಲಿ ಸ್ಥಾನ ಪಡೆದರೆ ಆ ಹೆಮ್ಮೆಯ ಗರಿ ರಾಜ್ಯಕ್ಕೆ, ವಿಶೇಷವಾಗಿ ಉತ್ತರ ಕರ್ನಾಟಕಕ್ಕೆ ಸಿಗುತ್ತದೆ. ಧಾರವಾಡದ ಕಿರಣ್‌ ಕಾಟೇಕರ್‌ ಮತ್ತು  ಪುಷ್ಪಾ ಕಾಟೇಕರ್‌ ದಂಪತಿಯ ಮಗನೇ ವೇದಾಂತ್‌. ಸದ್ಯ ಬೆಂಗಳೂರಿನ ಆಂಥೋನಿ  ಕ್ಲಾರೆಟ್‌ ಐಸಿಎಸ್‌ಇ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾನೆ. 

ಪ್ರತಿದಿನ ಅಭ್ಯಾಸಕ್ಕೆ ತಪ್ಪದೇ ಹಾಜರ್‌
ವೇದಾಂತ್‌ಗೆ ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್‌ ಅನ್ನುವುದು ಫ್ಯಾಷನ್‌ ಆಗಿದೆ. ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು, ಸ್ವಲ್ಪ ಸಮಯ ಪಠ್ಯ ಪುಸ್ತಕ ಅಭ್ಯಾಸ ಮಾಡಿ, ಆ  ನಂತರ 6 ರಿಂದ 8 ಗಂಟೆಯ ವರೆಗೆ ಕ್ರಿಕೆಟ್‌ ಅಭ್ಯಾಸ ನಡೆಸುತ್ತಾರೆ. ಆರಂಭದಲ್ಲಿ ತಾನು ಧೋನಿ, ಕೊಹ್ಲಿಯಂತೆ ಆಗಬೇಕು ಅನ್ನುವ ಬಯಕೆಯಲ್ಲಿ  ಕೇವಲ  ಬ್ಯಾಟಿಂಗ್‌ಗೆ ಮಾತ್ರ ಹೆಚ್ಚಿನ ಒತ್ತು ನೀಡುತ್ತಿದ್ದರು. 

ನಂತರದ ಹಂತದಲ್ಲಿ ಬೌಲಿಂಗ್‌ನಲ್ಲಿಯೂ ಯಶಸ್ಸು ಸಿಗುತ್ತಿದೆ ಅನ್ನುವುದನ್ನು ಅರಿತ್ತಿದ್ದಾರೆ. ಹೀಗಾಗಿ  ಬ್ಯಾಟಿಂಗ್‌ ಅಭ್ಯಾಸಕ್ಕೆ ಕೊಟ್ಟಷ್ಟೇ ಮಹತ್ವವನ್ನು ಬೌಲಿಂಗ್‌ ಅಭ್ಯಾಸಕ್ಕೂ ನೀಡುತ್ತಿದ್ದಾರೆ. ಇದರಿಂದಾಗಿ ಕೆಎಸ್‌ಸಿಎ ಜೂನಿಯರ್‌ ಮತ್ತು ಪ್ರೌಢಶಾಲಾ ವಿಭಾಗದ  ಕ್ರಿಕೆಟ್‌ ಟೂರ್ನಿಗಳಲ್ಲಿ ಆಲ್‌ರೌಂಡರ್‌ ಆಗಿ ಮಿಂಚುತ್ತಿದ್ದಾರೆ. ಕ್ರಿಕೆಟ್‌ ಜತೆಗೆ ಅಭ್ಯಾಸಕ್ಕೂ ಮಹತ್ವ ನೀಡುತ್ತಿದ್ದಾರೆ ಅನ್ನುವುದಕ್ಕೆ ಶೇ.85ಕ್ಕೂ ಅಧಿಕ ಫ‌ಲಿತಾಂಶ  ಪಡೆದಿರುವುದೇ ಸಾಕ್ಷಿ. 

Advertisement

ಧೋನಿ, ಕೊಹ್ಲಿ ಸ್ಫೂರ್ತಿ
ಈ ಹಿಂದೆ ಕ್ರಿಕೆಟ್‌ ಅಭ್ಯಾಸ ಮಾಡುವ ಬಾಲಕರಿಗೆ ಕಪಿಲ್‌ ದೇವ್‌, ಸುನಿಲ್‌ ಗಾವಸ್ಕರ್‌, ಆನಂತರ ಸಚಿನ್‌ ತೆಂಡುಲ್ಕರ್‌, ರಾಹುಲ್‌ ದ್ರಾವಿಡ್‌, ಸೌರವ್‌ ಗಂಗೂಲಿ, ವೀರೇಂದ್ರ ಸೆಹವಾಗ್‌ ಸ್ಫೂರ್ತಿಯಾಗುತ್ತಿದ್ದರು. ನಾವೂ ಅವರಂತೆ ಆಗಬೇಕು ಅನ್ನುವ ಕನಸನ್ನು ಕಟ್ಟಿಕೊಂಡೇ ಅಂದಿನ ಯುವಕರು  ಅಕಾಡೆಮಿಗಳಲ್ಲಿ, ಶಾಲಾ ತಂಡದಲ್ಲಿ ಅಭ್ಯಾಸಕ್ಕೆ ದುಮುಕುತ್ತಿದ್ದರು.

ಆದರೆ ಇದೀಗ ಭಾರತ ರಾಷ್ಟ್ರೀಯ  ತಂಡದಲ್ಲಿ ಮಿಂಚುತ್ತಿರುವವರು ಎಂ.ಎಸ್‌.ಧೋನಿ, ವಿರಾಟ್‌ ಕೊಹ್ಲಿ. ಹೀಗಾಗಿ ಇಂದಿನ ಯುವಪಡೆಗೆ ಇವರೇ ಸ್ಫೂರ್ತಿಯಾಗಿದ್ದಾರೆ. ಅದೇ ರೀತಿ ವೇದಾಂತ್‌ಗೂ ಧೋನಿ, ಕೊಹ್ಲಿ ಅಂದರೆ ಅಚ್ಚು ಮೆಚ್ಚು. ಅವರೇ ಇವನಿಗೆ ಹೀರೋಗಳು. ಅವರಂತೆ ಬ್ಯಾಟಿಂಗ್‌ ಮಾಡಬೇಕು ಎಂಬ ಕನಸನ್ನು ಕಾಣುತ್ತಾ ಅಭ್ಯಾಸ ನಡೆಸುತ್ತಾನೆ ವೇದಾಂತ್‌. 

ಜೂನಿಯರ್‌ ವಿಭಾಗದಲ್ಲೇ  ಪ್ರತಿಭೆಯ ಪ್ರದರ್ಶನ ಅಂತರ ಪ್ರೌಢಶಾಲಾ ವಿಭಾಗದ ಟೂರ್ನಿ ಮತ್ತು ಕೆಎಸ್‌ಸಿಎ ಜೂನಿಯರ್‌ ತಂಡದಲ್ಲಿ ವೇದಾಂತ್‌ ಆಡುತ್ತಿದ್ದಾನೆ. ಬ್ಯಾಟಿಂಗ್‌, ಬೌಲಿಂಗ್‌  ಎರಡೂ ವಿಭಾಗದಲ್ಲಿಯೂ ಪ್ರೌಢಿಮೆ ಸಾಧಿಸಿರುವುದರಿಂದ ತಮ್ಮ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸುತ್ತಿದ್ದಾನೆ.

ಇತ್ತೀಚೆಗೆ ನಡೆದ ಕೆಎಸ್‌ ಸಿಎ ಕಪ್‌ನಲ್ಲಿ  ನಡೆದ ಎಸಿ ಸ್ಕೂಲ್‌ ಮತ್ತು ಹೋಲಿ ಚೈಲ್ಡ್‌ ಇಂಗ್ಲಿಷ್‌ ಸ್ಕೂಲ್‌ ನಡುವೆ ಭಾರೀ ಪೈಪೋಟಿ ಇತ್ತು. ಈ ಪಂದ್ಯದಲ್ಲಿ ಎಸಿ ಸ್ಕೂಲ್‌ ತಂಡದ ವೇದಾಂತ್‌ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಗೆ ಇಳಿದು 38 ರನ್‌ ಚಚ್ಚಿದ್ದಾರೆ. ಇದರಿಂದಾಗಿ ಎಸಿ ತಂಡ 42 ಓವರ್‌ನಲ್ಲಿ 225 ರನ್‌ ಸೇರಿಸಲು ಸಾಧ್ಯವಾಗಿತ್ತು. ನಂತರ ಇನಿಂಗ್ಸ್‌  ಆರಂಭಿಸಿದ ಹೋಲಿ ಚೈಲ್ಡ್‌ ಇಂಗ್ಲಿಷ್‌ ಸ್ಕೂಲ್‌ ತಂಡ ವೇದಾಂತ್‌ ವೇಗದ ದಾಳಿಗೆ ಸಿಲುಕಿ 44 ರನ್‌ಗೆ ಆಲೌಟ್‌ ಆಗಿತ್ತು. ಆವತ್ತು ವೇದಾಂತ್‌ 11 ರನ್‌ಗೆ ಪ್ರಮುಖ  3 ವಿಕೆಟ್‌ ಉರುಳಿಸಿದ್ದರು.

ರಾಷ್ಟ್ರೀಯ ತಂಡ, ಐಪಿಎಲ್‌ ಟಾರ್ಗೆಟ್‌
ಸಾಮಾನ್ಯವಾಗಿ ಎಲ್ಲಾ ಯುವ ಪ್ರತಿಭೆಗಳಿಗೂ ಇರುವಂತೆ ವೇದಾಂತ್‌ಗೂ ಕೂಡ ಭಾರತ ತಂಡದಲ್ಲಿ ಆಡಬೇಕು ಅನ್ನುವ ದೊಡ್ಡ ಆಸೆ ಇದೆ. ಮತ್ತೂಂದು ಗುರಿ  ಡಿಯನ್‌ ಪ್ರೀಮಿಯರ್‌  ಲೀಗ್‌(ಐಪಿಎಲ್‌). ಈ ಗುರಿಯನ್ನು ಇಟ್ಟುಕೊಂಡು ಪ್ರತಿದಿನ ಕೋಚ್‌ ನಜೀರ್‌ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸುತ್ತಾರೆ. ಅಕಾಡೆಮಿಯಲ್ಲಿ ಬೆಳಿಗ್ಗೆ ಅಭ್ಯಾಸ ನಡೆಸಿದರೆ, ಸ್ಕೂಲ್‌ನಲ್ಲಿ ಮಧ್ಯಾಹ್ನದ ವೇಳೆ ಅಭ್ಯಾಸ ನಡೆಸುತ್ತಾರೆ. ಫಿಟ್ನೆಸ್‌ಗಾಗಿ ವ್ಯಾಯಾಮ ಮಾಡುತ್ತಾರೆ. 

ವೇದಾಂತ್‌ ಆಟದ ಬಗ್ಗೆ ತುಂಬಾ ಹೆಮ್ಮೆ ಇದೆ. ಈತ ಮುಂದೊಂದು ದಿನ ರಾಷ್ಟ್ರೀಯ ತಂಡದಲ್ಲಿ, ಐಪಿಎಲ್‌ನಲ್ಲಿ ಆಡುತ್ತಾನೆ ಅನ್ನುವ ನಂಬಿಕೆ ನನಗಿದೆ. ಕ್ರಿಕೆಟ್‌ಗೆ ಸಂಬಂಧಿಸಿದಂತಾಗಲಿ,  ಅಭ್ಯಾಸಕ್ಕೆ ಸಂಬಂಧಿಸಿದಂತಾಗಲಿ ಆತನ ಮೇಲೆ ಯಾವುದೇ ಒತ್ತಡ ಹಾಕಲ್ಲ. ಕ್ರಿಕೆಟ್‌ ಆಯ್ಕೆ ಕೂಡ ಅವನದೇ. ಅವನಿಗೆ ಪ್ರೊತ್ಸಾಹ ನೀಡುವುದು ಮಾತ್ರ ನನ್ನ ಕೆಲಸ. 
-ಕಿರಣ್‌ ಕಾಟೇಕರ್‌, ವೇದಾಂತ್‌ ತಂದೆ 

* ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next