Advertisement

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

12:33 AM Jul 31, 2023 | Team Udayavani |

ಕರ್ನಾಟಕದ ಬಳಿಕ ಈ ವರ್ಷದ ಕುತೂಹಲಭರಿತ ಹಾಗೂ ಅತೀ ನಿರೀಕ್ಷಿತ ಚುನಾವಣೆಗಳಲ್ಲಿ ರಾಜಸ್ಥಾನ ವಿಧಾನಸಭೆ ಸಮರವೂ ಒಂದು. ಕಳೆದ 5 ದಶಕಗಳಿಂದಲೂ ಪರ್ಯಾಯ ಸರಕಾರಗಳನ್ನೇ ಆಯ್ಕೆ ಮಾಡುತ್ತಾ ಬಂದಿರುವ ಪಶ್ಚಿಮದ ಈ ರಾಜ್ಯವು ವರ್ಷಾಂತ್ಯದಲ್ಲೇ ಚುನಾವಣೆ ಎದುರಿಸುತ್ತಿದೆ.

Advertisement

ನಾಲ್ಕೂವರೆ ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್‌ನ ಸ್ಥಿರ ಸರಕಾರವಿದ್ದರೂ, ರಾಜ್ಯ ರಾಜಕೀಯದಲ್ಲಿ ಹಲವು ಬಾರಿ ಚಂಡಮಾರುತಗಳು ಎದ್ದಿದ್ದನ್ನು ಕಾಣಬಹುದು. ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಸರಕಾರದ ಮೊದಲಾರ್ಧದಲ್ಲಿ ಅವರು ತಮ್ಮ ಡಿಸಿಎಂ, ರಾಜ್ಯಾಧ್ಯಕ್ಷರಾಗಿದ್ದ ಸಚಿನ್‌ ಪೈಲಟ್‌ ಅವರಿಂದಲೇ ಬಂಡಾಯದ ಬಿಸಿ ಅನುಭವಿಸಬೇಕಾಯಿತು. ಇನ್ನೇನು ಸರಕಾರ ಪತನಗೊಂಡಿತು ಎನ್ನುವಷ್ಟರಲ್ಲಿ ಕೊನೇ ಕ್ಷಣದ ಕಸರತ್ತುಗಳು ಸಫ‌ಲವಾಗಿ ಸರಕಾರ ಉಳಿಯಿತು. ಇನ್ನು, ದ್ವಿತೀಯಾರ್ಧದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆ ರದ್ದು, ಪ್ರತಿಭಟನೆಗಳು, ಪೈಲಟ್‌ರಿಂದ ಮತ್ತೂಂದು ಬಾರಿ ಬಂಡಾಯದ ಬಾವುಟ, ಹಿಂದಿನ ಬಿಜೆಪಿ ಸರಕಾರದಲ್ಲಿ ನಡೆದಿದೆಯೆನ್ನಲಾದ ವಸುಂಧರಾ ರಾಜೇ ನೇತೃತ್ವದ ಸರಕಾರದ ಭ್ರಷ್ಟಾಚಾರಗಳ ಬಗ್ಗೆ ಮೃದು ಧೋರಣೆ ಸೇರಿದಂತೆ ಹಲವು ಆರೋಪಗಳ ಕ್ಷಿಪಣಿಗಳು ಗೆಹೊÉàಟ್‌ರತ್ತ ತೂರಿಬಂದವು. ಈ ಎಲ್ಲ ಆರೋಪಗಳ ಮೂಟೆ ಹೊತ್ತೇ ಗೆಹ್ಲೋಟ್‌ ಚುನಾವಣೆಯತ್ತ ಹೆಜ್ಜೆ ಹಾಕಿದ್ದಾರೆ. ಅವರ ದಾರಿಗೆ ಈಗ ಅಡ್ಡಬಂದಿರುವ ಹೊಸ ತಲೆನೋವೇ ರೆಡ್‌ ಡೈರಿ.

ಕೆಂಪು ಡೈರಿಯ ಸುತ್ತ

ಇತ್ತೀಚೆಗೆ ವಿಧಾನಸಭೆಯಲ್ಲಿ ರಾಜ್ಯದಲ್ಲಿ ಹದಗೆಡುತ್ತಿರುವ ಮಹಿಳಾ ಸುರಕ್ಷತೆ ಬಗ್ಗೆ ಪ್ರಸ್ತಾಪಿಸಿ, “ಮಣಿಪುರ ವಿಚಾರದಲ್ಲಿ ಬಿಜೆಪಿಯನ್ನು ಪ್ರಶ್ನಿಸುವ ಮುನ್ನ ನಮ್ಮ ರಾಜ್ಯದಲ್ಲಿನ ಮಹಿಳೆಯರ ಸ್ಥಿತಿಗತಿ ಸುಧಾರಿಸಿ’ ಎಂದು ಹೇಳಿದ ತಮ್ಮದೇ ಸಂಪುಟದ ಸಚಿವ ರಾಜೇಂದ್ರ ಸಿಂಗ್‌ ಗುಢಾರನ್ನು ಗೆಹ್ಲೋಟ್‌ ಏಕಾಏಕಿ ವಜಾ ಮಾಡಿದ್ದರು. ಇದರಿಂದ ಆಕ್ರೋಶಗೊಂಡಿರುವ ರಾಜೇಂದ್ರ ಸಿಂಗ್‌, “ನನ್ನ ಬಳಿಯಿರುವ ನಿಮ್ಮ ಕೆಂಪು ಡೈರಿಯು ನಿಮ್ಮ ಸರಕಾರವನ್ನೇ ಪತನಗೊಳಿಸಲಿದೆ’ ಎಂಬ ದೊಡ್ಡ ಬಾಂಬ್‌ ಸಿಡಿಸಿದ್ದಾರೆ. ಅವರ ಈ ಹೇಳಿಕೆಯನ್ನೇ ಪ್ರಧಾನಿ ನರೇಂದ್ರ ಮೋದಿಯವರೂ ಸೇರಿದಂತೆ ಇಡೀ ಕೇಸರಿ ಪಡೆಯೇ ದಾಳವಾಗಿ ಬಳಸಿಕೊಳ್ಳಲಾರಂಭಿಸಿದೆ. ಇತ್ತೀಚೆಗೆ ರಾಜಸ್ಥಾನ ಭೇಟಿ ವೇಳೆ ಪ್ರಧಾನಿ ಮೋದಿಯವರೂ ಕೆಂಪು ಡೈರಿಯ ಅಸ್ತ್ರ ಪ್ರಯೋಗಿಸಿ¨ªಾರೆ. ವಾಸ್ತವದಲ್ಲಿ ಆ ಡೈರಿಯಲ್ಲಿ ಏನಿದೆಯೋ, ಇಲ್ಲವೋ? ಆದರೆ, ಚುನಾವಣ ಹೊಸ್ತಿಲಲ್ಲಿ ಅದು ಕಾಂಗ್ರೆಸ್‌ಗೆ ಇರುಸು ಮುರುಸು ಉಂಟುಮಾಡಿರುವುದಂತೂ ನಿಜ.

ಆದರೆ ಮತ್ತೂಂದು ವಿಶ್ಲೇಷಣೆಯ ಪ್ರಕಾರ, ರಾಜೇಂದ್ರ ಸಿಂಗ್‌ ಗುಢಾ ಅವರು ಹಿಂದಿನಿಂದಲೂ ಗಾಳಿಯಲ್ಲಿ ಗುಂಡು ಹೊಡೆಯುವುದರಲ್ಲಿ ನಿಸ್ಸೀಮರು. ಹಿಂದೊಮ್ಮೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧವೂ ಅವರು ಗಂಭೀರ ಆರೋಪವೊಂದನ್ನು ಮಾಡಿದ್ದರು. ಇದು ಗೊತ್ತಿರುವ ಕಾರಣಕ್ಕೇ ಕಾಂಗ್ರೆಸ್‌ ರಾಜೇಂದ್ರ ಅವರ ಹೇಳಿಕೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಸದ್ಯಕ್ಕೆ ಕಾಂಗ್ರೆಸ್‌ ಎದುರಿಸುತ್ತಿರುವ ದೊಡ್ಡ ಸವಾಲೆಂದರೆ, ಸರಕಾರ ಎದುರಿಸುತ್ತಿರುವ ಆರೋಪಗಳು ಹಾಗೂ ಸಚಿವರು, ಶಾಸಕರ ವಿರುದ್ಧವಿರುವ ಆಡಳಿತವಿರೋಧಿ ಅಲೆ. ಜನರ ವಿರೋಧ ತೀವ್ರ ಹೆಚ್ಚಿರುವಂಥ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಟಿಕೆಟ್‌ ನೀಡುವ ಮೂಲಕ ಕಾಂಗ್ರೆಸ್‌ ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಲೂಬಹುದು.

Advertisement

ಕೈ ಹಿಡಿಯುತ್ತಾ ಗ್ಯಾರಂಟಿ?
ಆಡಳಿತ ವಿರೋಧಿ ಅಲೆಯ ನಡುವೆಯೂ ರಾಜಸ್ಥಾನ ಕಾಂಗ್ರೆಸ್‌ ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮ ಹಾಕುತ್ತಲೇ ಇದೆ. ಗೆಹ್ಲೋಟ್‌ ಅವರು ಬೆಲೆಯೇರಿಕೆ ವಿರುದ್ಧ ಆರಂಭಿಸಿರುವ “ಮೆಹಂಗಾಯಿ ರಾಹತ್‌ ಕ್ಯಾಂಪ್‌’ಗೆ ಭಾರೀ ಜನಬೆಂಬಲ ವ್ಯಕ್ತವಾಗಿರುವುದು ಇದಕ್ಕೆ ಸಾಕ್ಷಿ. ಹಣದುಬ್ಬರದ ಹೊಡೆತದಿಂದ ರಕ್ಷಿಸಿಕೊಂಡು ರಾಜ್ಯ ಸರಕಾರದ ಕಲ್ಯಾಣ ಯೋಜನೆಗಳ ಲಾಭ ಪಡೆಯಲು ಲಕ್ಷಾಂತರ ಮಂದಿ ಇದರಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಅದರಂತೆ, ಅರ್ಹ ಫ‌ಲಾನುಭವಿಗಳಿಗೆ ಸ್ಥಳದಲ್ಲೇ ಮುಖ್ಯಮಂತ್ರಿ ಗ್ಯಾರಂಟಿ ಕಾರ್ಡ್‌ ವಿತರಣೆ ಮಾಡಿ, ಸರಕಾರದ 10 ಯೋಜನೆಗಳ ಅನುಕೂಲತೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. 500ರೂ.ಗೆ ಗ್ಯಾಸ್‌ ಸಿಲಿಂಡರ್‌, ತಿಂಗಳಿಗೆ 100 ಯುನಿಟ್‌ ವಿದ್ಯುತ್‌ ಉಚಿತ, ಕೃಷಿಕರಿಗೆ ಪ್ರತೀ ತಿಂಗಳು 2 ಸಾವಿರ ಯುನಿಟ್‌ವರೆಗೆ ಉಚಿತ ವಿದ್ಯುತ್‌ ಮತ್ತಿತರ ಯೋಜನೆಗಳು ಇದರಲ್ಲಿವೆ. ರಾಜಸ್ಥಾನದ ಮಹಿಳೆಯರು ಸಾಮಾನ್ಯವಾಗಿ ಬಿಜೆಪಿ ಪರ ಒಲವು ಹೊಂದಿದ್ದು, ಬೆಲೆಯೇರಿಕೆಯ ಅಸ್ತ್ರದ ಮೂಲಕ ಅವರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್‌ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಕರ್ನಾಟಕದ ಮಾದರಿಯಲ್ಲೇ ರಾಜಸ್ಥಾನದಲ್ಲೂ “ಗ್ಯಾರಂಟಿ’ಗಳು ನಮ್ಮ “ಕೈ’ ಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಕಾಂಗ್ರೆಸ್‌ ನಾಯಕರು. ಅಲ್ಲದೇ, ಈಗಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರವು ಚುನಾವಣೆಗೆ ಮುನ್ನ ನೀಡಿರುವ ಆಶ್ವಾಸನೆಯನ್ನು ಒಂದೊಂದಾಗಿ ಈಡೇರಿಸುತ್ತಿದ್ದು, ಜನರು ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯತೊಡಗಿದ್ದಾರೆ. ಇದು ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ಲಸ್‌ ಪಾಯಿಂಟ್‌ ಆಗುವ ಸಾಧ್ಯತೆಯಿದೆ.

ಗೆಹ್ಲೋಟ್‌ ವಿರುದ್ಧ ಇತ್ತೀಚೆಗಷ್ಟೇ ಮತ್ತೂಮ್ಮೆ ಬಂಡಾಯವೆದ್ದಿದ್ದ ಸಚಿನ್‌ ಪೈಲಟ್‌ರನ್ನು ತಣ್ಣಗಾಗಿಸುವಲ್ಲಿ ಸದ್ಯಕ್ಕಂತೂ ಕಾಂಗ್ರೆಸ್‌ ಹೈಕಮಾಂಡ್‌ ಯಶಸ್ವಿಯಾಗಿದೆ. ಉಭಯ ನಾಯಕರು ತಮ್ಮ ನಡುವೆ ಯಾವುದೇ ವೈಮನಸ್ಸು ಇಲ್ಲವೆಂದೂ, ಒಗ್ಗಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆಂದೂ ಘೋಷಿಸಿದ್ದಾರೆ. ಚುನಾವಣೆ ಮುಗಿಯುವವರೆಗೂ ಇದೇ ಒಗ್ಗಟ್ಟು ಮುಂದುವರಿದರಷ್ಟೇ ಪಕ್ಷ ಅಧಿಕಾರ ಉಳಿಸಿಕೊಳ್ಳಬಹುದು. ಇಲ್ಲವೆಂದಾದರೆ, ಇಬ್ಬರ ಜಗಳ ಮೂರನೆಯವರಿಗೆ ಲಾಭವಾಗಿ ಪರಿಣಮಿಸಬಹುದು.

ಈ ನಡುವೆ, ಸಿಎಂ ಅಶೋಕ್‌ ಗೆಹ್ಲೋಟ್‌ ಕಾಲುಜಾರಿ ಬಿದ್ದು, ಬೆರಳುಗಳಿಗೆ ಗಾಯ ಮಾಡಿಕೊಂಡಿದ್ದಾರೆ. ಆದರೂ, ಕಾಲುಗಳಿಗೆ ಪ್ಲಾಸ್ಟರ್‌ ಹಾಕಿಕೊಂಡು ಚುನಾವಣ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಬಾರಿ ಪಶ್ಚಿಮ ಬಂಗಾಲ ವಿಧಾನಸಭೆ ಚುನಾವಣೆ ವೇಳೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಕಾಲಿಗೂ ಗಾಯವಾಗಿ, ಆಗ ಅವರು ಕಾಲಿಗೆ ಪ್ಲಾಸ್ಟರ್‌ ಹಾಕಿಕೊಂಡೇ ಪ್ರಚಾರ ನಡೆಸಿ, ಅನುಕಂಪ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅದನ್ನೇ ಈಗ ಗೆಹ್ಲೋಟ್‌ ಅವರೂ ಅನುಸರಿಸುತ್ತಿದ್ದಾರಾ ಎಂದು ಬಿಜೆಪಿ ಪ್ರಶ್ನೆ ಮಾಡತೊಡಗಿದೆ.
ಜತೆಗೆ ವಿವಿಧ ಆರೋಪಗಳು, ಮಹಿಳಾ ದೌರ್ಜನ್ಯ, ಕಾನೂನು-ಸುವ್ಯವಸ್ಥೆ ಸಮಸ್ಯೆಯನ್ನು ಮುಂದಿಟ್ಟುಕೊಂಡು ಸರಕಾರದ ವಿರುದ್ಧ ಸಮರಕ್ಕೆ ಬಿಜೆಪಿ ಸಜ್ಜಾಗಿದೆ. ಈಗಾಗಲೇ “ನಹೀ ಸಹೇಗಾ ರಾಜಸ್ಥಾನ್‌’ ಎಂಬ ಅಭಿಯಾನ ಆರಂಭಿಸಿರುವ ಬಿಜೆಪಿ, ಕಾಂಗ್ರೆಸ್‌ ಕೈಯಿಂದ ರಾಜಸ್ಥಾನವನ್ನು ಕಿತ್ತುಕೊಳ್ಳಲು ಪಣ ತೊಟ್ಟಿದೆ.

ರಾಜೇಗೆ ಮಣೆಯೋ, ಸಾಮೂಹಿಕ ನಾಯಕತ್ವವೋ?: ಪಕ್ಷದೊಳಗಿನ ಆಂತರಿಕ ಕಚ್ಚಾಟಕ್ಕೆ ಅಂತ್ಯಹಾಡಿದರೆ, ರಾಜಸ್ಥಾನದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಈ ಬಾರಿ ಸಾಕಷ್ಟು ಅವಕಾಶಗಳಿವೆ. ರಾಜ್ಯ ಬಿಜೆಪಿಯ ಪ್ರಬಲ ನಾಯಕಿ, ಮಾಜಿ ಸಿಎಂ ವಸುಂಧರಾ ರಾಜೇ ಅವರು ಈಗಲೂ ಪಕ್ಷದ ಮೇಲೆ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ತಮ್ಮನ್ನೇ ಸಿಎಂ ಅಭ್ಯರ್ಥಿ ಎಂದು ಬಿಂಬಿಸಿ ಚುನಾವಣೆಗೆ ಹೋಗಬೇಕು ಎಂದು ರಾಜೇ ಪಟ್ಟು ಹಿಡಿದಿದ್ದಾರೆ. ಆದರೆ ಈ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಬಿಜೆಪಿ ಹೈಕಮಾಂಡ್‌ಗೆ ಸಾಧ್ಯವಾಗುತ್ತಿಲ್ಲ. ಸದ್ಯಕ್ಕಂತೂ ಪ್ರಧಾನಿ ಮೋದಿಯವರ ವರ್ಚಸ್ಸನ್ನು ಮುಂದಿಟ್ಟುಕೊಂಡು, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಹೇಳಿಕೊಂಡಿದೆ. ಬಿಜೆಪಿಯ ಈ ನಿರ್ಧಾರವನ್ನು ಮತದಾರರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದೇ ಈಗಿರುವ ದೊಡ್ಡ ಪ್ರಶ್ನೆ.

ಸಮೀಕ್ಷೆಗಳ ಭವಿಷ್ಯ

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಿದ್ದು, ಬೇರೆ ಯಾವ ಪಕ್ಷವೂ ಹೇಳಿಕೊಳ್ಳುವಷ್ಟು ಪ್ರಬಲವಾಗಿಲ್ಲ. ಎಬಿಪಿ-ಸಿವೋರ್ಸ್‌ ಇತ್ತೀಚೆಗೆ ನಡೆಸಿದ ಸಮೀಕ್ಷೆಯು ಬಿಜೆಪಿಗೆ ಸಿಹಿಸುದ್ದಿ ನೀಡಿದೆ. ಈ ಬಾರಿ ಬಿಜೆಪಿ 109-119 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಲಿದ್ದು, ಕಾಂಗ್ರೆಸ್‌ 78-88 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಚುನಾವಣೆಗೆ ಇನ್ನೂ 5-6 ತಿಂಗಳು ಬಾಕಿಯಿರುವ ಕಾರಣ ಈಗಲೇ ಏನನ್ನೂ ಹೇಳಲಾಗದು.

ಕೊನೇ ಹಂತದಲ್ಲಿ ಮತದಾರ ಯಾರ ಕೈ ಹಿಡಿಯುತ್ತಾನೆಂದು ಊಹಿಸಲು ಸಾಧ್ಯವಿಲ್ಲ. ಅದೇನೇ ಇದ್ದರೂ, ಕಾಂಗ್ರೆಸ್‌ನ ಹಳೆಯ ಯುದ್ಧಾಶ್ವ ಎಂದೇ ಕರೆಯಲ್ಪಡುವ ಗೆಹ್ಲೋಟ್‌ ಅವರಿಗೆ ಈ ಚುನಾವಣೆಯು ಅಗ್ನಿಪರೀಕ್ಷೆ ಮಾತ್ರವಲ್ಲ, ಇದು ಅವರ ರಾಜಕೀಯ ಅಸ್ತಿತ್ವದ ಪ್ರಶ್ನೆಯೂ ಹೌದು. ಹಾಗೆಯೇ, ಪ್ರತೀ 5 ವರ್ಷಕ್ಕೊಮ್ಮೆ ಸರಕಾರವನ್ನು ಬದಲಿಸುವ ಇಲ್ಲಿನ ಜನ ಈ ಬಾರಿ ಏನು ಮಾಡುತ್ತಾರೆ ಎಂಬುದನ್ನೂ ಕಾದು ನೋಡಬೇಕಾಗಿದೆ.

ಹಲೀಮತ್‌ ಸಅದಿಯಾ

Advertisement

Udayavani is now on Telegram. Click here to join our channel and stay updated with the latest news.

Next