Advertisement

ಬದಲಾವಣೆ ಪರ್ವ- ನಾಳೆಯಿಂದ ಗೃಹಜ್ಯೋತಿ ಉಚಿತ ಬಿಲ್‌ ಜಾರಿ, ಹಾಲು ತುಟ್ಟಿ

08:56 PM Jul 30, 2023 | Team Udayavani |

ಬೆಂಗಳೂರು: ಗೃಹ ಜ್ಯೋತಿ ಉಚಿತ ಬಿಲ್‌ ಜಾರಿ, ಪ್ರತೀ ಲೀಟರ್‌ ಹಾಲಿಗೆ 3 ರೂ. ಹೆಚ್ಚಳ, ಹೋಟೆಲ್‌ಗಳಲ್ಲಿ ಕಾಫಿ, ಚಹಾ ದರದಲ್ಲೂ ಹೆಚ್ಚಳ ಸಾಧ್ಯತೆ…

Advertisement

ಆಗಸ್ಟ್‌ 1ರಿಂದ ರಾಜ್ಯದ ಜನತೆಯ ಮೇಲೆ ಉಂಟಾಗಲಿರುವ ಪರಿಣಾಮಗಳಿವು. ಪ್ರಸಕ್ತ ಆರ್ಥಿಕ ಸಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್‌ ಮಂಗಳವಾರದಿಂದ ಅಧಿಕೃತವಾಗಿ ಅನುಷ್ಠಾನಕ್ಕೆ ಬರಲಿದ್ದು, ಕೆಲವು ಪರಿಷ್ಕೃತ ದರಗಳೂ ಜಾರಿಗೆ ಬರಲಿವೆ.

2023-24ನೇ ಸಾಲಿಗೆ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು 3.09 ಲಕ್ಷ ಕೋಟಿ ರೂ.ಗಳ ಬಜೆಟ್‌ ಮಂಡಿಸಿ, ಚುನಾವಣೆ ಹಿನ್ನೆಲೆಯಲ್ಲಿ ಎ. 1ರಿಂದ ಜು. 31ರ ವರೆಗಿನ ಖರ್ಚು-ವೆಚ್ಚಗಳಿಗಾಗಿ 1.07 ಲಕ್ಷ ಕೋಟಿ ರೂ.ಗಳಿಗೆ ಲೇಖಾನುದಾನ ಪಡೆದುಕೊಂಡಿದ್ದರು. ಈ ಅವಧಿಯು ಸೋಮವಾರಕ್ಕೆ ಅಂತ್ಯಗೊಳ್ಳಲಿದ್ದು, ಆ. 1ರಿಂದ 2024ರ ಮಾ. 31ರ ವರೆಗೆ ಸಿಎಂ ಸಿದ್ದರಾಮಯ್ಯ ಬಜೆಟ್‌ಗೆ ಲೇಖಾನುದಾನ ದೊರೆತಿದೆ. ಆರಂಭದಲ್ಲಿ 3.27 ಲಕ್ಷ ಕೋಟಿ ರೂ.ಗಳ ಬಜೆಟ್‌ ಮಂಡಿಸಿದ್ದ ಸಿಎಂ, ಬಳಿಕ ಅದನ್ನು 13,573 ಕೋಟಿ ರೂ. ಏರಿಸುವ ಮೂಲಕ ಬಜೆಟ್‌ ಗಾತ್ರವನ್ನು 3.41 ಲಕ್ಷ ಕೋಟಿ ರೂ.ಗಳಿಗೆ ಹಿಗ್ಗಿಸಿಕೊಂಡಿದ್ದಾರೆ. ಆಯವ್ಯಯ ಸರಿದೂಗಿಸುವ ನಿಟ್ಟಿನಲ್ಲಿ ಸರಕಾರದ ಕೆಲವು ಸಂಸ್ಥೆಗಳು ತಮ್ಮ ಉತ್ಪನ್ನಗಳ ದರಗಳನ್ನು ಪರಿಷ್ಕರಣೆ ಮಾಡಿದ್ದು, ಅವೆಲ್ಲವೂ ಆ. 1ರಿಂದ ಜಾರಿಗೆ ಬರಲಿವೆ.

ಐದರಲ್ಲಿ 3 ಗ್ಯಾರಂಟಿ ಜಾರಿ

ಐದು ಗ್ಯಾರಂಟಿಗಳ ಪೈಕಿ ಶಕ್ತಿ, ಅನ್ನಭಾಗ್ಯ ಗೃಹಜ್ಯೋತಿ ಕಾರ್ಯಕ್ರಮಗಳು ಜಾರಿಗೆ ಬಂದಿದ್ದು, ಶಕ್ತಿ ಯೋಜನೆಯಿಂದ ಈವರೆಗೆ 28.87 ಕೋಟಿ ಮಹಿಳೆಯರು 674 ಕೋಟಿ ರೂ. ಮೌಲ್ಯದ ಪ್ರಯೋಜನ ಪಡೆದಿದ್ದಾರೆ. ಇನ್ನು ಅನ್ನಭಾಗ್ಯ ಯೋಜನೆಯಡಿ 97.27 ಲಕ್ಷ ಪಡಿತರ ಚೀಟಿಗಳ 3.45 ಕೋಟಿ ಫ‌ಲಾನುಭವಿಗಳ ಖಾತೆಗೆ 566 ಕೋಟಿ ರೂ. ಜಮೆ ಆಗಿದೆ.

Advertisement

ಶೂನ್ಯದರದ ಗೃಹಜ್ಯೋತಿ ಬಿಲ್‌

ಜುಲೈ ತಿಂಗಳಿನಲ್ಲಿ ಬಳಕೆ ಮಾಡಿರುವ ವಿದ್ಯುತ್‌ ಬಿಲ್‌ ಆಗಸ್ಟ್‌ನಲ್ಲಿ ಬರಲಿದ್ದು, ಕಳೆದ ವರ್ಷ ಬಳಕೆ ಮಾಡಿದ್ದ ಸರಾಸರಿ ವಿದ್ಯುತ್‌ಗಿಂತ ಶೇ. 10ರ ವರೆಗೆ ಹಾಗೂ 200 ಯುನಿಟ್‌ ಒಳಗೆ ವಿದ್ಯುತ್‌ ಬಳಸಿದ್ದವರಿಗೆ ಶೂನ್ಯ ದರದ ಬಿಲ್‌ ಸಿಗಲಿದೆ. ಇದಕ್ಕಾಗಿ ಬೆಸ್ಕಾಂ ಸಹಿತ ರಾಜ್ಯದ ಆರು ಎಸ್ಕಾಂಗಳಿಂದ 1.16 ಕೋಟಿ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.

ಗೃಹಲಕ್ಷ್ಮೀ, ಯುವನಿಧಿಗೆ ನೋಂದಣಿ

ಮನೆಯೊಡತಿಗೆ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಇದುವರೆಗೆ 80.90 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಸಿದ್ದು, ಆಗಸ್ಟ್‌ ತಿಂಗಳಿಂದಲೇ ನೋಂದಾಯಿತ ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗಲಿದೆ. ಸುಮಾರು 1.28 ಕೋಟಿ ಮಹಿಳೆಯರಿಗೆ ಇದರಿಂದ ಪ್ರಯೋಜನ ಸಿಗುವ ಅಂದಾಜಿದೆ. ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ. ಮತ್ತು ಡಿಪ್ಲೊಮಾ ಪಡೆದು ನಿರುದ್ಯೋಗಿಗಳಾಗಿರುವವರಿಗೆ ತಿಂಗಳಿಗೆ 1,500 ರೂ. ನೀಡುವ ಯುವನಿಧಿ ಯೋಜನೆಯು ವರ್ಷಾಂತ್ಯದೊಳಗೆ ಅನುಷ್ಠಾನಕ್ಕೆ ಬರಲಿದೆ.

ಹಾಲಿನ ದರದಲ್ಲಿ ಏರಿಕೆ

ಚುನಾವಣೆ ಹಿನ್ನೆಲೆಯಲ್ಲಿ ತಡೆ ಹಿಡಿದಿದ್ದ ಪರಿಷ್ಕೃತ ವಿದ್ಯುತ್‌ ದರವು ಈಗಾಗಲೇ ಜಾರಿಗೊಂಡಿದ್ದು, ಕೆಇಆರ್‌ಸಿ ಆದೇಶದಿಂದಾಗಿ ವಿದ್ಯುತ್‌ ದರ ಹೆಚ್ಚಳವಾಗಿದೆ. ಈಗ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ ಕೆಎಂಎಫ್ ಹಾಲಿನ ದರ ಹೆಚ್ಚಿಸಲು ನಿರ್ಧರಿಸಿದ್ದು, ಆ. 1ರಿಂದ ಪ್ರತೀ ಲೀಟರ್‌ ಹಾಲಿನ ದರವು 3 ರೂ. ಏರಿಕೆ ಆಗಲಿದೆ. ಕೆಎಂಎಫ್ನ ಇತರ ಯಾವುದೇ ಉತ್ಪನ್ನಗಳ ಮೇಲಿನ ದರವನ್ನು ಹೆಚ್ಚಳ ಮಾಡಿಲ್ಲ. ಆದರೆ ಹಾಲಿನ ದರ ಹೆಚ್ಚಳ ಆಗಿರುವುದರಿಂದ ಕಾಫಿ, ಚಹಾದಂತಹ ಹಾಲು ಅವಲಂಬಿತ ಪೇಯಗಳ ದರ ಹೆಚ್ಚಳ ಆಗುವ ಸಾಧ್ಯತೆಗಳಿವೆ.

 “ಒಪ್ಪಂದದ ಮೇರೆಗೆ” ಬಸ್‌ ದರ ಪರಿಷ್ಕರಣೆ

ಶಕ್ತಿ ಯೋಜನೆಯಿಂದಾಗಿ ಸಾಮಾನ್ಯ, ವೇಗದೂತ ಹಾಗೂ ನಗರ ಸಾರಿಗೆ ವಾಹನಗಳ ಬೇಡಿಕೆ ಹೆಚ್ಚಾಗಿದ್ದು, ನಿಗಮದ ವಾಹನಗಳ ಕಾರ್ಯಾಚರಣ ವೆಚ್ಚವೂ ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಾರಿಗೆ, ರಾಜಹಂಸ ಎಕ್ಸಿಕ್ಯುಟಿವ್‌, ರಾಜಹಂಸ, ಮೈಸೂರು ನಗರ ಸಾರಿಗೆ ಸೆಮಿ ಲೋಫ್ಲೋರ್‌, ಮಿಡಿ ಬಸ್‌, ನಾನ್‌-ಎಸಿ ಸ್ಲಿàಪರ್‌ ಬಸ್‌ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಪಡೆಯಬೇಕಿದ್ದರೆ ಹಿಂದಿಗಿಂತ ಸರಾಸರಿ 3 ರೂ.ಗಳರೆಗೆ ಹೆಚ್ಚುವರಿ ಹಣ ಪಾವತಿಸಬೇಕು.

ಫೈಲಿಂಗ್‌ ಗಡುವು ಅಂತ್ಯ

ಆದಾಯ ತೆರಿಗೆ ರಿಟರ್ನ್ಸ್ ಫೈಲ್‌ ಮಾಡಲು ಇದ್ದ ಜು. 31ರ ಗಡುವು ಸೋಮವಾರ ಅಂತ್ಯವಾಗಲಿದೆ. ಹೀಗಾಗಿ ಆ. 1ರ ಅನಂತರ ರಿಟರ್ನ್Õ ಫೈಲ್‌ ಮಾಡುವುದಿದ್ದರೆ ದಂಡ ಪಾವತಿಸಬೇಕಾಗುತ್ತದೆ. ವರ್ಷಕ್ಕೆ 5 ಲಕ್ಷರೂ.ಗಿಂತ ಹೆಚ್ಚು ಆದಾಯ ಇರುವವರಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ದೇಶಾದ್ಯಂತ ಆ. 30ರ ವರೆಗಿನ ಅವಧಿಯಲ್ಲಿ 6 ಕೋಟಿಗೂ ಅಧಿಕ ಮಂದಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್‌ ಮಾಡಿದ್ದಾರೆ.

ಜಿಎಸ್‌ಟಿ

5 ಕೋಟಿ ರೂ. ಗಳಿಗಿಂತ ಹೆಚ್ಚಿನ ವಹಿವಾಟು ಇರುವ ಉದ್ದಿಮೆ ಸಂಸ್ಥೆಗಳು ಆ. 1ರಿಂದ ಎಲೆಕ್ಟ್ರಾನಿಕ್‌ ಇನ್‌ವಾಯ್ಸ ಸಲ್ಲಿಸುವುದು ಕಡ್ಡಾಯವಾಗಲಿದೆ.

ಎಲ್‌ಪಿಜಿ ದರ ಪರಿಷ್ಕರಣೆ

ಪ್ರತೀ ತಿಂಗಳ ಮೊದಲ ದಿನದಂದು ಅಡುಗೆ ಅನಿಲ ಸಿಲಿಂಡರ್‌ ದರ ಪರಿಷ್ಕರಣೆಯಾಗುತ್ತದೆ. ಮಂಗಳವಾರ ಎಲ್‌ಪಿಜಿ ದರ ಏರಿಕೆಯಾಗಲೂಬಹುದು, ಇಳಿಕೆಯಾಗಲೂಬಹುದು. ಪಿಎನ್‌ಸಿ, ಸಿಎನ್‌ಜಿ ದರದಲ್ಲೂ ಪರಿಷ್ಕರಣೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next