Advertisement

ಎರಡು ವರ್ಷಗಳಲ್ಲಿ ನಗರಕ್ಕೆ ವಾರಾಹಿ ನೀರು ಖಚಿತ

12:58 AM May 23, 2019 | sudhir |

ಉಡುಪಿ: ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ 2021 ರೊಳಗೆ ವಾರಾಹಿ ಕುಡಿಯುವ ನೀರು ಯೋಜನೆ ಜಾರಿಗೊಳಿಸುವುದು ಖಚಿತ ಎಂದು ಶಾಸಕ ಕೆ.ರಘುಪತಿ ಭಟ್‌ ತಿಳಿಸಿದ್ದಾರೆ.

Advertisement

– ಈ ಬೇಸಗೆಯಲ್ಲಿ ನಗರದಲ್ಲಿ ಉದ್ಭವಿಸಿದ ನೀರಿನ ಕೊರತೆ ಸಂಬಂಧ ಕೈಗೊಳ್ಳಬೇಕಾದ ಶಾಶ್ವತ ಪರಿಹಾರಗಳ ಕುರಿತು ಉದಯವಾಣಿ ನಡೆಸಿದ ಸಂದರ್ಶನದಲ್ಲಿ ಶಾಸಕರು ಈ ವಿಷಯವನ್ನು ಸ್ಪಷ್ಟಪಡಿಸಿದರು.
“ಈ ವರ್ಷ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಲು ಸ್ವರ್ಣಾ ನದಿಯ ಬಜೆ ಅಣೆಕಟ್ಟು ಪ್ರದೇಶ ಮತ್ತು ಒಳಹರಿವಿನ ಪ್ರದೇಶಗಳ ನಿರ್ವಹಣೆಯಲ್ಲಿ ವಿಫ‌ಲವಾಗಿರುವುದು. ಜತೆಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿಯೇ ಮಳೆ ನಿಂತಿರುವುದು ಕಾರಣ’ ಎಂದು ವಿವರಿಸಿದರು.

· ನೀರಿನ ಕೊರತೆ ಉಲ½ಣಿಸದಂತೆ ನೋಡಿಕೊಳ್ಳ ಬಹುದಿತ್ತೆ?
– ಸ್ವರ್ಣಾ ನದಿಯ ಬಜೆ ಡ್ಯಾಂ ಪ್ರದೇಶ ಸೇರಿದಂತೆ ಶೀರೂರು, ಮಾಣೈ ಮೊದಲಾದೆಡೆ ಅಪಾರ ಹೂಳು ತುಂಬಿದೆ. ಕೆಲವೆಡೆ ನದಿಯಲ್ಲಿ ದ್ವೀಪದಂಥ ಪ್ರದೇಶ ನಿರ್ಮಾಣವಾಗಿದೆ. ಇದನ್ನು ತೆರವುಗೊಳಿಸಬೇಕು. ಅಧಿಕಾರಿಗಳಿಗೆ ಇಚ್ಛಾಶಕ್ತಿಯೇ ಇಲ್ಲ. ಬಜೆ ಡ್ಯಾಂ ಬಳಿ ಹೂಳೆತ್ತಿದ್ದರೆ 3 ತಿಂಗಳು ಹೆಚ್ಚುವರಿ ಅವಧಿಗೆ ನೀರು ಸಂಗ್ರಹಿಸಬಹುದು. ಈ ವರ್ಷ ನಾನು ನನ್ನ ಸ್ವಯಂ ಆಸಕ್ತಿಯಿಂದ ಬಜೆ ಡ್ಯಾಂನ ಜಾಕ್‌ವೆಲ್‌ ಬಳಿ ಇದ್ದ ಸುಮಾರು 100 ಲಾರಿಯಷ್ಟು ಹೂಳನ್ನು ತೆರವು ಮಾಡಿಸಿದ್ದೇನೆ. ನೀರಿನ ಸಮಸ್ಯೆ ತಲೆದೋರುವ ಕುರಿತು ಜಿಲ್ಲಾಧಿಕಾರಿಗಳ ಗಮನೆ ಸೆಳೆದು ಸೂಕ್ತ ಕ್ರಮಕ್ಕೆ ಹಲವು ಬಾರಿ ಒತ್ತಾಯಿಸಿದರೂ ಸ್ಪಂದಿಸಲಿಲ್ಲ. ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತವೂ ಇಲ್ಲ. ಅಧಿಕಾರಿಗಳು ನೀತಿ ಸಂಹಿತೆಯ ನೆಪವೊಡ್ಡಿ ನಿರ್ಲಕ್ಷ್ಯ ತೋರಿದರು. ಕೊನೆಗೇ ನಾವೆಲ್ಲಾ ಕಾರ್ಯಕರ್ತರು ಶ್ರಮದಾನ, ಹಿಟಾಚಿ ಮೂಲಕ ಕಲ್ಲು, ತಡೆಗಳನ್ನು ತೆರವುಗೊಳಿಸಿ ನೀರು ಹರಿವಿಗೆ ಅವಕಾಶ ಕಲ್ಪಿಸಿದೆವು. ಹಾಗಾಗಿ ಸ್ಥಿತಿ ಸ್ವಲ್ಪ ಸುಧಾರಿಸಿತು. ಹಳ್ಳಗಳಲ್ಲಿ ತುಂಬಿದ ನೀರನ್ನು ಡ್ಯಾಂನತ್ತ ಪಂಪ್‌ ಮಾಡುವ ಕೆಲಸವನ್ನು ಕೊನೆಯ ಕ್ಷಣದಲ್ಲಿ ಕೈಗೆತ್ತಿಕೊಳ್ಳಲಾಯಿತು. ನದಿ ಒಣಗುವ ಮೊದಲೇ ಕ್ರಮ ಕೈಗೊಂಡಿದ್ದರೆ ಸಮಸ್ಯೆ ಬಿಗಡಾಯಿಸುತ್ತಿರಲಿಲ್ಲ.

· ಇನ್ನಾದರೂ ಡ್ರೆಜ್ಜಿಂಗ್‌ ನಡೆಯಬಹುದೆ?
– ಅಧಿಕಾರಿಗಳ ನಿರ್ಲಕ್ಷ್ಯ ಗಮನಿಸುವಾಗ ಡ್ರೆಜ್ಜಿಂಗ್‌ ಶೀಘ್ರ ಆರಂಭಗೊಳ್ಳುವಂತೆ ಕಾಣುತ್ತಿಲ್ಲ. ಪ್ರತಿ ದಿನವೂ ಅಧಿಕಾರಿಗಳನ್ನು ವಿಚಾರಿಸುತ್ತಿದ್ದೇನೆ. ಬಜೆ, ಪುತ್ತಿಗೆ, ಭಂಡಾರಿಬೆಟ್ಟು, ಮಾಣೈ, ಶೀರೂರಿನಲ್ಲಿ ಪ್ರತ್ಯೇಕ ಟೆಂಡರ್‌ ಕರೆದು ಹೂಳೆತ್ತಿ, ಅನಂತರ ಅದನ್ನು ಏಲಂ ಹಾಕಲಿ. ಈಗ ಹಳ್ಳಗಳಲ್ಲಿ ಡ್ರೆಜ್ಜಿಂಗ್‌  ನಡೆಸಬೇಕು. ಮಳೆಗಾಲದಲ್ಲಿ ನೀರಿನ ಹೊರಹರಿವು ಉಂಟಾ ದಾಗ ಪಂಪ್‌ ಬಳಸಿ ಡ್ರೆಜ್ಜಿಂಗ್‌ ಮಾಡಬೇಕಾದೀತು.

·ಸ್ವರ್ಣಾ 2ನೇ ಹಂತದಿಂದ ಎಷ್ಟು ಪ್ರಯೋಜನ ವಾಯಿತು?
-ಸ್ವರ್ಣಾ 2ನೇ ಹಂತ ವಿಫ‌ಲವಾಗಿಲ್ಲ. ಶೀರೂರಿನಲ್ಲಿ 2ನೇ ಹಂತದ ಅಣೆಕಟ್ಟು ಮಾಡಿದ ಪರಿಣಾಮ ಇದುವರೆಗೂ ನಗರಕ್ಕೆ ನೀರು ಲಭ್ಯವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಧಿಕಾರಿ ಗಳ ನಿರ್ಲಕ್ಷ್ಯದಿಂದಾಗಿ ನಿರ್ವಹಣೆ ಸರಿಯಾಗಿಲ್ಲ. ಸ್ವರ್ಣಾ 2ನೇ ಹಂತ ಮಾಡುವಾಗಲೇ ಮುಂದಿನ ದಿನಗಳಲ್ಲಿ ವಾರಾಹಿ ಯೋಜನೆ ಅನಿವಾರ್ಯ ಎಂದು ತೀರ್ಮಾನಿಸಲಾಗಿತ್ತು. ಆದರೆ ಆಗ ಬೇಕಾದಷ್ಟು ಹಣಕಾಸು ಇರಲಿಲ್ಲ.

Advertisement

·ವಾರಾಹಿಯಿಂದ ನೀರು ತರಲು ಏನು ಅಡ್ಡಿ?
-ವಾರಾಹಿಯಿಂದ ಉಡುಪಿಗೆ ನೀರು ತರುವ ಯೋಜನೆಗೆ ಈ ಹಿಂದೆ ಕರೆದ ಟೆಂಡರ್‌ನಲ್ಲಿ ಲೋಪವಿತ್ತು. ವಾರಾಹಿಯಿಂದ ಶುದ್ಧೀಕರಿಸದ ನೀರನ್ನು (ಕಚ್ಚಾ ನೀರು) ನಗರಕ್ಕೆ ತರುವ ಯೋಜನೆ ಇದಾಗಿತ್ತು. ಆದರೆ ಪೈಪ್‌ಲೈನ್‌ ಹಾದು ಹೋಗುವ ಗ್ರಾಮಗಳವರು ವಿರೋಧ ವ್ಯಕ್ತಪಡಿಸಿದ್ದರು. ಅವರಿಗೆ ಶುದ್ಧ ನೀರು ಕೊಡಬೇಕೆಂಬ ಬೇಡಿಕೆ ಇತ್ತು. ಹಾಗಾಗಿ ಪ್ರತಾಪಚಂದ್ರ ಶೆಟ್ಟಿ ಅವರು ವಿಧಾನಪರಿಷತ್‌ ಅರ್ಜಿ ಸಮಿತಿಗೆ ಆಕ್ಷೇಪ ಸಲ್ಲಿಸಿದ್ದರು. ನಾನು ಆ ಯೋಜನೆಯನ್ನು ಬದಲಿಸಿದ್ದು ವಾರಾಹಿ ಸಮೀಪದ ಭರತ್ಕಲ್‌ನಲ್ಲಿಯೇ 45 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ ಸ್ಥಾಪಿಸಿ ನೀರನ್ನು ಉಡುಪಿಗೆ ತರಲಾಗುವುದು. ಪೈಪ್‌ಲೈನ್‌ ಹಾದು ಹೋಗುವ ಗ್ರಾಮಗಳಿಗೆ ನೀರು ನೀಡಲಾಗುವುದು. ಬಲ್ಕ್ ಮೀಟರ್‌ ಕೂಡ ಅಳವಡಿಸಲಾಗುವುದು.

ಯೋಜನೆಯ ಸ್ವರೂಪ ಬದಲಾದ ಅನಂತರ ಪ್ರತಾಪಚಂದ್ರ ಶೆಟ್ಟಿ ಅವರು ಒಪ್ಪಿಗೆ ನೀಡಿದ್ದಾರೆ. ಅರ್ಜಿ ಸಮಿತಿ ಒಪ್ಪಿಗೆ ನೀಡಬೇಕಿದೆ. ಮೇ 31ಕ್ಕೆ ಅರ್ಜಿ ಸಮಿತಿ ಒಪ್ಪಿಗೆ ದೊರೆತು ಅನಂತರ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ.

· ಆಡಳಿತ ವರ್ಗ ನಿರ್ಲಕ್ಷಿಸಿದರೆ ಅದರ ವಿರುದ್ಧ ಕ್ರಮವೇನು?
-ಯಾವ ಅಧಿಕಾರಿ ನಿರ್ಲಕ್ಷ್ಯ, ತಪ್ಪು ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು ಈ ಹಂತದಲ್ಲಿ ಕಷ್ಟ. ನಾನೂ ವಿಚಾರಿಸಿದ್ದೇನೆ. ಎಲ್ಲಿ ಕಡತ ಬಾಕಿಯಾಗಿತ್ತು ಎಂಬುದು ತಿಳಿದರೆ ಕ್ರಮ ಕೈಗೊಳ್ಳಬಹುದು.

· ನೀರು ಪೋಲು ಮಾಡುವವರಿಗೆ ಎಚ್ಚರಿಕೆಯೂ ಇಲ್ಲವೆ?
-ನೀರಿನ ಜಾಗೃತಿ ಜನರಲ್ಲಿ ಸ್ವಯಂ ಆಗಿ ಮೂಡಬೇಕು. ಇಷ್ಟರವರೆಗೆ ದಿನದ ಹೆಚ್ಚಿನ ಅವಧಿ ನೀರು ಸಿಗುತ್ತಿತ್ತು. ಆಗ ಯಥೇತ್ಛವಾಗಿ ಬಳಸುತ್ತಿದ್ದವರು ಈಗ ಕಡಿಮೆ ನೀರು ಸಿಗುವಾಗ ಉಳಿತಾಯವನ್ನು ಕಲಿತಿದ್ದಾರೆ. ನೀರನ್ನು ಪೋಲು ಮಾಡಬಾರದು ಎಂಬುದು ಜನರಿಗೆ ಗೊತ್ತಾಗುತ್ತಿದೆ.

·ಉಪಕ್ರಮಗಳತ್ತ ಗಮನ ನೀಡುತ್ತಿಲ್ಲವೆ?
-ಪ್ರತಿ ಕಟ್ಟಡಗಳಲ್ಲೂ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಬೇಕು ಎಂಬ ಕಡ್ಡಾಯ ನಿಯಮವಿದೆ. ಆದರೆ ಅದು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ನಗರಸಭೆಯಲ್ಲಿ ನಮ್ಮ (ಬಿಜೆಪಿ) ಅಧಿಕಾರ ಬಂದ ಅನಂತರ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳುವೆ.

·ಒಳಚರಂಡಿ ಅವ್ಯವಸ್ಥೆಯಿಂದ ಬಾವಿಗಳು ಹಾಳಾಗಿವೆ…
-ಹೌದು. ಹಲವು ಬಾವಿಗಳು ಒಳಚರಂಡಿ ನೀರಿನಿಂದ ನಿರುಪಯೋಗ ವಾಗಿವೆ. ಒಳಚರಂಡಿ ವ್ಯವಸ್ಥೆ ಸರಿಪಡಿಸಲು 36 ಕೋ.ರೂ. ಮೀಸಲಿರಿಸಲಾಗಿದೆ. ಈ ಕಾಮಗಾರಿ ಕೂಡ ಕೈಗೆತ್ತಿಕೊಳ್ಳಲಾಗುವುದು.

-   ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next