Advertisement

ವಂದೇ ಮಾತರಂ ಸ್ವತ್ಛ  ಮನಸ್ಕರ ಹಕ್ಕು: ಮೋದಿ

06:40 AM Sep 12, 2017 | Harsha Rao |

ಹೊಸದಿಲ್ಲಿ: ವಂದೇ ಮಾತರಂ. ಈ ಪದಗಳು ಕಿವಿಗೆ ಬೀಳುತ್ತಲೇ ಎದೆಯಾಳದಲ್ಲಿನ ದೇಶ ಭಕ್ತಿ ಒಮ್ಮೆ ಜಾಗೃತವಾಗುತ್ತದೆ. ಆದರೆ ಬಂಕಿಮ ಚಂದ್ರ ಚಟರ್ಜಿ ವಿರಚಿತ ಈ ಸಾಲುಗಳನ್ನು ಘೋಷಣೆಯಂತೆ ಕೂಗಲು ಅಥವಾ ವಂದೇ ಮಾತರಂ ಗೀತೆ ಹಾಡಲು ಯಾರು ಅರ್ಹರು? ಇಂಥದ್ದೊಂದು ಜಿಜ್ಞಾಸೆ ಮೂಡಲು ಕಾರಣ ಪ್ರಧಾನಿ ನರೇಂದ್ರ ಮೋದಿ.

Advertisement

ಪ್ರಧಾನಿ ಮೋದಿ ಅವರ ಪ್ರಕಾರ ವಂದೇ ಮಾತರಂ ಘೋಷಣೆ ಕೂಗುವ ಅಥವಾ ಗೀತೆ ಹಾಡುವ ಪ್ರಥಮ ಅರ್ಹತೆ ಇರುವುದು ದೇಶವನ್ನು ಸ್ವತ್ಛವಾಗಿರಿಸುವ ಶ್ರಮಜೀವಿಗಳಿಗೆ ಮಾತ್ರ!

ಸ್ವಾಮಿ ವಿವೇಕಾನಂದರು ಷಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಐತಿಹಾಸಿಕ ಭಾಷಣ ಮಾಡಿ 125 ವರ್ಷಗಳು ಸಂದ ಹಿನ್ನೆಲೆಯಲ್ಲಿ ಸೋಮವಾರ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. “ಪ್ರತಿದಿನ ದೇಶದ ರಸ್ತೆಗಳನ್ನು ಸ್ವತ್ಛಗೊಳಿಸುವ, ಭಾರತವನ್ನು ಸ್ವತ್ಛವಾಗಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಶ್ರಮಿಕರು “ವಂದೇ ಮಾತರಂ’ ಹಾಡುವ ಮೊದಲ ಹಕ್ಕುದಾರರು.

ಸುಶಿಕ್ಷಿತರಾಗಿದ್ದೂ ದೇಶದಲ್ಲಿ ಅನೈರ್ಮಲ್ಯ ಸೃಷ್ಟಿಸುವವರಿಗೆ ಈ ಗೀತೆಯನ್ನು ಹಾಡುವ ಅರ್ಹತೆ ಇಲ್ಲ,’ ಎಂದರು.
“ದೇಶದ ಪ್ರತಿ ಪ್ರಜೆಯೂ ತಮ್ಮ ಸುತ್ತಲ ಪರಿಸರವನ್ನು ಸ್ವತ್ಛವಾಗಿಟ್ಟು ಕೊಳ್ಳಬೇಕು ಎಂದು ಮನವಿ ಮಾಡಿದ ಪ್ರಧಾನಿ, ಜನ ತಮ್ಮ ಸುತ್ತಲ ಸ್ಥಳಗಳನ್ನು ಸ್ವತ್ಛವಾಗಿಟ್ಟುಕೊಳ್ಳುವರೋ ಇಲ್ಲವೋ ಅದು ಅವರ ವಿವೇಚನೆಗೆ ಬಿಟ್ಟ ವಿಚಾರ. ಆದರೆ ದೇಶವನ್ನು ಕೊಳಕಾಗಿಸುವ ಹಕ್ಕು ಯಾರಿಗೂ ಇಲ್ಲ’ ಎಂದರು.

ಭಾರತಾಂಬೆ ಮೇಲೆ ಪಾನ್‌ ಉಗಿಯುತ್ತೇವೆ!: “ನಾನು ಸಭಾಂಗಣ ಪ್ರವೇಶಿಸುವಾಗ ಸಾಕಷ್ಟು ಮಂದಿ “ವಂದೇ ಮಾತರಂ’ ಘೋಷಣೆ ಕೂಗಿ ಸ್ವಾಗತಿಸಿದರು. ಆಗ ನನ್ನ ಎದೆಯಲ್ಲಿ ದೇಶಭಕ್ತಿ ತುಂಬಿ ಬಂತು. ಆದರೆ ದೇಶದ ಪ್ರಜೆಗಳಿಗೆ ನನ್ನದೊಂದು ಪ್ರಶ್ನೆ ಏನೆಂದರೆ, ವಂದೇ ಮಾತರಂ ಹಾಡುವ ಅರ್ಹತೆ ನಮಗಿದೆಯೇ? ಈ ಪ್ರಶ್ನೆಯಿಂದ ಸಾಕಷ್ಟು ಜನರಿಗೆ ನೋವಾಗಿದೆ ಎಂದು ನನಗೆ ಗೊತ್ತು. ಆದರೆ ನಾವು ಪಾನ್‌ ಜಗಿದು “ಭಾರತ ಮಾತೆ ಮೇಲೆ ಉಗಿಯುತ್ತೇವೆ’. ಆಮೇಲೆ ವಂದೇ ಮಾತರಂ ಎಂದು ಹಾಡುತ್ತೇವೆ. ಇದು ನಮ್ಮ ದೇಶಭಕ್ತಿ. ಆದರೆ ಹೀಗೆ ಮಾಡುವವರು ವಂದೇ ಮಾತರಂ ಹಾಡಲು ಅನರ್ಹರು. ಆ ಅರ್ಹತೆ ಇರುವುದಾದರೆ ದೇಶವನ್ನು ಸ್ವತ್ಛವಾಗಿಡುವ ನಾಗರಿಕರಿಗೆ ಮಾತ್ರ’ ಎಂದು ಪ್ರಧಾನಿ ಮೋದಿ ಹೇಳಿದಾಗ ಸಭಿಕರೆಲ್ಲ ಪೆಚ್ಚಾದರು.

Advertisement

ಆಧುನಿಕ ಭಾರತಕ್ಕಾಗಿ ಶ್ರಮಿಸಿ
ಸಮಾರಂಭದಲ್ಲಿ ಪಾಲ್ಗೊಂಡಿದ್ದ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ನಾವಿನ್ಯತೆ ಹಾಗೂ ಕೌಶಲ್ಯ ವೃದ್ಧಿ ಮೂಲಕ ದೇಶದ ಪ್ರಗತಿಯ ಪಾಲುದಾರರಾಗುವಂತೆ ಯುವ ಸಮುದಾಯಕ್ಕೆ ಕರೆ ನೀಡಿದರು. “ನಾವು ಈಗ ಯಾವ ಸ್ಥಾನದಲ್ಲಿದ್ದೇವೆ ಎಂಬುದರ ಆಧಾರದಲ್ಲಿ ಪ್ರಪಂಚ ನಮ್ಮ ದೇಶವನ್ನು ಗುರುತಿಸುತ್ತದೆಯೇ ಹೊರತು, 5000 ವರ್ಷಗಳ ಹಿಂದೆ ಶ್ರೀರಾಮ, ಬುದ್ಧರ ಕಾಲದಲ್ಲಿ ಭಾರತ ಹೇಗಿತ್ತು ಎಂಬುದನ್ನು ನೋಡಿ ಅಲ್ಲ. ವಿವೇಕಾನಂದರು ಹಾಕಿಕೊಟ್ಟ ಪ್ರಯೋಗಶೀಲತೆ ಮತ್ತು ನಾವಿನ್ಯತೆಯ ತಳಹದಿಯ ಮೇಲೆ ನಮ್ಮ ಸರಕಾರ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಪೂರಕವಾಗಿ ಆಧುನಿಕ ಭಾರತ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಬೇಕು,’ ಎಂದು ಕರೆ ನೀಡಿದರು.

9/11 ಮತ್ತು ಷಿಕಾಗೋ ಸಮ್ಮೇಳನ
“9/11ರಂದು ಷಿಕಾಗೋ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಸಾರಿದ ಶಾಂತಿ, ಪ್ರೀತಿ, ಸಹೋದರತ್ವದ ಸಂದೇಶವನ್ನು ಅಂದು ಜಗತ್ತು ಕಿವಿಗೊಟ್ಟು ಕೇಳಿದ್ದರೆ, ಅದನ್ನು ನೆನಪಲ್ಲಿಟ್ಟುಕೊಂಡಿದ್ದರೆ 2001ರ ಸೆ.11ರ ಅಮೆರಿಕ ಅವಳಿ ಕಟ್ಟಡದ ಮೇಲಿನ ದಾಳಿ ಜರುಗುತ್ತಿರಲಿಲ್ಲವೇನೋ,’ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು. “2001ರ 9/11ರ ಘಟನೆಗೂ ಶತಮಾನ ಹಿಂದೆ ಕೂಡ, 9/11ರಂದೇ ಜಗತ್ತೇ ಭಾರತದತ್ತ ನೋಡುವಂತೆ ಮಾಡಿದ ಘಟನೆಯೊಂದು ನಡೆದಿತ್ತು (ಷಿಕಾಗೋ ಸಮ್ಮೇಳನ). ಅಂದಿನ ಘಟನೆಯ ಮಹತ್ವವನ್ನು ಸಾರುವಲ್ಲಿ ನಾವು ವಿಫ‌ಲರಾಗಿದ್ದರಿಂದಲೇ , ಇಂದು “9/11′ ಎಂದರೆ ಉಗ್ರರ ದಾಳಿ ನೆನಪಾಗುತ್ತಿದೆ,’ ಎಂದು ವಿಷಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next