Advertisement

Vande Bharat Express: ಜೂನ್‌ನಲ್ಲಿ ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್‌

11:57 AM Mar 13, 2024 | Team Udayavani |

ಮಂಗಳೂರು: ಮಂಗಳೂರು ಸೆಂಟ್ರಲ್‌ – ತಿರುವನಂತಪುರ ನಡುವಿನ ವಿಸ್ತರಿತ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಗುಜರಾತ್‌ನ ಅಹಮ ದಾಬಾದ್‌ನಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಬೆಳಗ್ಗೆ ವೀಡಿ ಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದರು.

Advertisement

ಮಂಗಳೂರು ಸೆಂಟ್ರಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಕಾಸರ ಗೋಡು-ತಿರುವನಂತಪುರ ನಡುವಿನ ರೈಲನ್ನು ಮಂಗಳೂರಿಗೆ ವಿಸ್ತರಿಸುವಂತೆ ರೈಲ್ವೇ ಸಚಿವರಿಗೆ ಕೋರಿದ್ದೆ. ಸಚಿವರು ಮಡಗಾಂವ್‌- ಮಂಗಳೂರು ರೈಲು ಆರಂಭಿಸಿ, ವಿಸ್ತರಿತ ರೈಲು ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಇದೀಗ ಎರಡನೇ ವಂದೇ ಭಾರತ್‌ ರೈಲು ಮಂಗಳೂರಿಗೆ ಲಭಿಸಿದೆ ಎಂದರು.

ಈ ರೈಲಿನಿಂದ ಕೇರಳ – ಮಂಗ ಳೂರು ನಡುವಿನ ಪ್ರವಾಸಿ ಅಭಿವೃದ್ಧಿಯೂ ಸೇರಿದಂತೆ ಸಾಕಷ್ಟು ಅನು ಕೂಲವಾಗಲಿದೆ ಎಂದರು.

ಬೆಂಗಳೂರಿಗೆ ವಂದೇ ಭಾರತ್‌ ಆರಂಭಿಸಬೇಕು ಎನ್ನುವ ಬೇಡಿಕೆ ಇದೆ. ಈ ರೈಲು ಮಾರ್ಗದ ವಿದ್ಯುದೀಕರಣ ನಡೆಯುತ್ತಿದ್ದು, ಶಿರಾಡಿಯಲ್ಲಿನ 22 ಕಿ.ಮೀ. ಕಾಮಗಾರಿ ಮೇ ಅಂತ್ಯ ದೊಳಗೆ ಮುಗಿಯಲಿದ್ದು, ಜೂನ್‌ನಲ್ಲಿ ಈ ಬೇಡಿಕೆಯೂ ಈಡೇರಲಿದೆ ಎಂದು ಹೇಳಿದರು.

ಜಿಲ್ಲೆಗೆ 2,650 ಕೋ.ರೂ.

Advertisement

ಈ ಸಾಲಿನ ರೈಲ್ವೇ ಬಜೆಟ್‌ ನಲ್ಲಿ 7,524 ಕೋ.ರೂ. ಮೊತ್ತ ವನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಲಾಗಿದೆ. 59 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಜಿಲ್ಲೆ ಯಲ್ಲಿ ಮಂಗಳೂರು ಜಂಕ್ಷನ್‌ 65 ಕೋ.ರೂ., ಸೆಂಟ್ರಲ್‌ಗೆ 350 ಕೋ. ರೂ., ಸುಬ್ರಹ್ಮಣ್ಯ ರೋಡ್‌ ನಿಲ್ದಾಣಕ್ಕೆ 26 ಕೊ.ರೂ., ಬಂಟ್ವಾಳ ರೈಲು ನಿಲ್ದಾ ಣಕ್ಕೆ 28 ಕೋ.ರೂ. ಸೇರಿದಂತೆ ಅತೀ ಹೆಚ್ಚು ಯೋಜನೆಗಳನ್ನು ಜಿಲ್ಲೆಗೆ ರೈಲ್ವೇ ಸಚಿವರು ಕೊಟ್ಟಿದ್ದಾರೆ. 2019-24ರ ವರೆಗೆ 2,650 ಕೋ.ರೂ. ಮೊತ್ತವನ್ನು ಕೇವಲ ರೈಲ್ವೇ ಇಲಾಖೆಗೆ ಸಂಬಂಧಿಸಿ ಕೇಂದ್ರ ಸರಕಾರ ಒದಗಿಸಿದೆ ಎಂದರು.

ನೆರೆಯ ಜಿಲ್ಲೆಗಳಿಗಿಂತ ಶೇ. 20ರಷ್ಟು ಹೆಚ್ಚು ಅಭಿವೃದ್ಧಿ

ಹೆದ್ದಾರಿಗಳ ಅಭಿವೃದ್ಧಿಯಾಗುತ್ತಿದೆ. ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ಬಂದರು ಅಭಿವೃದ್ಧಿಯಾಗಿದೆ. ಜೆಜೆಎಂ ಮೂ ಲಕ ಮನೆ ಮನೆಗೆ ನೀರು ನೀಡಲಾ ಗುತ್ತಿದೆ. ದೇಶದ ಏಕೈಕ ಪ್ಲಾಸ್ಟಿಕ್‌ ಪಾರ್ಕ್‌ ಕಾಮಗಾರಿ ಶೇ. 80ರಷ್ಟು ಪೂರ್ಣಗೊಂಡಿದೆ ಎಂದು ವಿವರಿಸಿದರು.

ದೇಶದ ಮೊದಲ ಕೋಸ್ಟ್‌ ಗಾರ್ಡ್‌ ಟ್ರೈನಿಂಗ್‌ ಸೆಂಟರ್‌ ಕಾಮಗಾರಿ ಆರಂಭವಾಗಿದೆ. ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ಕೊಡಗು, ಕಾಸರಗೋಡು ಜಿಲ್ಲೆಗಳಿಗಿಂತ ಶೇ. 20ರಷ್ಟು ಹೆಚ್ಚು ಅಭಿವೃದ್ಧಿ ಆಗಿದೆ ಎಂದರು.

ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲು ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಡಿ ಮಂಗ ಳೂರು ಸೆಂಟ್ರಲ್‌ ಮತ್ತು ಜಂಕ್ಷನ್‌ ನಿಲ್ದಾಣದ ಮಳಿಗೆಗಳನ್ನು ಇದೇ ವೇಳೆ ಉದ್ಘಾಟಿಸಲಾಯಿತು.

ಅಯೋಧ್ಯೆಗೆ ರೈಲು, ವಿಮಾನ

ಮಂಗಳೂರಿನಿಂದ ಅಯೋಧ್ಯೆಗೆ ರೈಲು ಆರಂಭಿಸುವ ಬೇಡಿಕೆಯಿದೆ, ಈಗಾಗಲೇ ರೈಲ್ವೇ ಸಚಿವರಿಗೆ ಈ ಬಗ್ಗೆ ಮನವಿ ಮಾಡಿದ್ದೇನೆ. ವೇಳಾಪಟ್ಟಿ ಸಿದ್ಧವಾಗುತ್ತಿದ್ದು, ಶೀಘ್ರ ಅಯೋಧ್ಯೆಗೆ ರೈಲು ಆರಂಭವಾಗಲಿದೆ. ಈ ಮಧ್ಯೆ ವಿಮಾನ ಬೇಕು ಎನ್ನುವ ಬೇಡಿಕೆಯೂ ಇದೆ. ವಿಮಾನಯಾನ ಸಚಿವರಿಗೆ ಹಾಗೂ ಇಲಾಖೆ ಕಾರ್ಯದರ್ಶಿಯವರಿಗೂ ಪತ್ರ ಬರೆಯಲಾಗಿದೆ. ವಯಾ ಬೆಂಗಳೂರು ಅಥವಾ ಮುಂಬಯಿ ಮೂಲಕ ವಿಮಾನ ಆರಂಭಿಸುವಂತ ಕೋರಲಾಗಿದೆ ಎಂದರು.

ವಿಧಾನ ಪರಿಪತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಪಾಲಾ^ಟ್‌ ವಿಭಾಗದ ಡಿಆರ್‌ಎಂ ಆರುಣ್‌ ಕುಮಾರ್‌ ಚತುರ್ವೇದಿ, ಎಡಿಆರ್‌ ಎಂ.ಎಸ್‌. ಜಯಕೃಷ್ಣನ್‌, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಮನಪಾ ಸದ್ಯರು, ರೈಲ್ವೇ ಬಳಕೆದಾರರು, ಹೋರಾಟಗಾರರು ಉಪಸ್ಥಿತರಿದ್ದರು.

ಪ್ರಯಾಣ ಅವಧಿ ಕೇವಲ 8.45 ಗಂಟೆ

ಮಂಗಳೂರು – ತಿರುವನಂತಪುರ ನಡುವೆ ಸಂಚಾರಕ್ಕೆ ಇತರ ರೈಲುಗಳು 17 ಗಂಟೆ ತೆಗೆದುಕೊಂಡರೆ ಈ ರೈಲು 8 ಗಂಟೆ 45 ನಿಮಿಷ ಅವಧಿಯಲ್ಲಿ ತಲುಪಲಿದೆ. ಮಂಗಳೂರಿನಿಂದ ಬೆಳಗ್ಗೆ 6.25ಕ್ಕೆ ಹೊರಟು 3.05ಕ್ಕೆ ತಿರುವನಂತಪುರಕ್ಕೆ, ಸಂಜೆ 4.05ಕ್ಕೆ ಅಲ್ಲಿಂದ ಹೊರಟು ಮಧ್ಯರಾತ್ರಿ 12.40ಕ್ಕೆ ಮಂಗಳೂರಿಗೆ ತಲುಪಲಿದೆ.

ಮಂಗಳೂರು – ತಿರುವನಂತಪುರ ಪ್ರಯಾಣ ದರ

ಎಸಿ ಚೇರ್‌ಕಾರ್‌ – 1,615 ರೂ., ಎಕ್ಸಿಕ್ಯೂಟಿವ್‌ ಚೇರ್‌ಕಾರ್‌ 2,945 ರೂ.

ಮಂಗಳೂರು – ಕಾಸರಗೋಡು ಪ್ರಯಾಣ ದರ

ಎಸಿ ಚೇರ್‌ಕಾರ್‌ – 380 ರೂ.. ಎಕ್ಸಿಕ್ಯೂಟಿವ್‌ ಚೇರ್‌ಕಾರ್‌ – 705 ರೂ.

ಮಂಗಳೂರು – ಕಾಸರಗೋಡು ವೇಳಾಪಟ್ಟಿ

ಬೆಳಗ್ಗೆ 6.25ಕ್ಕೆ ಮಂಗಳೂರಿನಿಂದ ಹೊರಟು 6.57ಕ್ಕೆ ಕಾಸರಗೋಡಿಗೆ; ರಾತ್ರಿ 11.48ಕ್ಕೆ ಕಾಸರಗೋಡಿನಿಂದ ಹೊರಟು ಮಧ್ಯರಾತ್ರಿ 12.40ಕ್ಕೆ ಮಂಗಳೂರಿಗೆ ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next