– ಇದು “ಜೀವನ ಯಜ್ಞ’ ಚಿತ್ರದ ಅಡಿಬರಹ. ಇಲ್ಲಿ ಧೂಮ ಅಂದರೆ, ಕಂಪು ಎಂದರ್ಥ. ಕಂಪು ಅಂದರೆ ಮನಸ್ಸಿಗೆ ಹಿತವೆನಿಸುವ ಚಿತ್ರವೆಂದರ್ಥ. ಅಂಥದ್ದೊಂದು ಚಿತ್ರ ಕಟ್ಟಿಕೊಟ್ಟ ಖುಷಿ ನಿರ್ದೇಶಕ ಶಿವು ಸರಳೇಬೆಟ್ಟು ಅವರದು. ಇದು ಮಂಗಳೂರು ಮಂದಿ ಸೇರಿ ಮಾಡಿರುವ ಅಪ್ಪಟ ಶುದ್ಧ ಕನ್ನಡ ಚಿತ್ರ. ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಚಿತ್ರ ಪೂರ್ಣಗೊಂಡಿದ್ದು, ನವೆಂಬರ್ 2 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಚಿತ್ರದ ಬಗ್ಗೆ ಮಾಹಿತಿ ಕೊಡಲೆಂದೇ ತಂಡದೊಂದಿಗೆ ಬಂದಿದ್ದರು ನಿರ್ದೇಶಕ ಶಿವು ಸರಳೇಬೆಟ್ಟು. ಅಂದು ಮಾತಿಗಿಳಿದ ಅವರು “ಜೀವನ ಯಜ್ಞ’ ಕುರಿತು ಹೇಳುತ್ತಾ ಹೋದರು. “ಇಲ್ಲಿ ಪ್ರತಿಯೊಬ್ಬರ ಲೈಫಲ್ಲೂ ನಡೆಯುವ ಕಥೆಯನ್ನೇ ಇಟ್ಟುಕೊಂಡು ಚಿತ್ರ ಮಾಡಲಾಗಿದೆ’ ನಾಲ್ವರು ಅನಾಥ ಮಕ್ಕಳ ಸುತ್ತ ನಡೆಯುವ ಕಥೆ. ತಮ್ಮ ಬಾಲ್ಯದಲ್ಲಿ ಎಲ್ಲವನ್ನೂ ಕಳೆದುಕೊಂಡು ಅನಾಥಾಶ್ರಮದಲ್ಲಿರುವ ನಾಲ್ವರು ಮಕ್ಕಳನ್ನು ಉಳ್ಳವರು ಕರೆದುಕೊಂಡು ಹೋಗಿ ಅವರನ್ನು ಸಾಕಿ ಸಲಹುತ್ತಾರೆ. ಅವರ ಹಸಿವು ನೀಗಿಸುತ್ತಾರೆ. ಕಾಣದ ಪ್ರೀತಿ ತುಂಬುತ್ತಾರೆ. ಹಾಗೆ, ಆ ಅನಾಥರ ಬದುಕಿನ ಚಿತ್ರಣ ಚಿತ್ರದುದ್ದಕ್ಕೂ ಸಾಗುತ್ತದೆ. ಇಲ್ಲಿ ಮುಖ್ಯವಾಗಿ ನಾಲ್ಕು ಅಂಶಗಳು ಸಿನಿಮಾವನ್ನು ಆವರಿಸಿಕೊಂಡಿವೆ. ಅದೇನೆಂಬುದನ್ನು ಚಿತ್ರದಲ್ಲೇ ನೋಡಬೇಕು. ಕನ್ನಡದ ಮಟ್ಟಿಗೆ ಇದು ಹೊಸ ಪ್ರಯತ್ನ. ಆಧ್ಯಾತ್ಮ, ಮನರಂಜನೆ ಜೊತೆಗೆ ಎಮೋಷನಲ್ ಕೂಡ ಚಿತ್ರದಲ್ಲಿದೆ. ಚಿತ್ರವನ್ನು 30 ದಿನಗಳ ಕಾಲ ಮಂಗಳೂರಲ್ಲಿ ಚಿತ್ರೀಕರಿಸಲಾಗಿದ್ದು, ಒಂದೇ ಏರಿಯಾದಲ್ಲಿ ಚಿತ್ರೀಕರಿಸಿರುವುದು ಇನ್ನೊಂದು ವಿಶೇಷ. ಒಂದೇ ಮಾತಲ್ಲಿ ಹೇಳುವುದಾದರೆ, ಪಾಲೇìಜಿಯಿಂದ ಗೂಗಲ್ಜಿವರೆಗೆ ಹೇಳಲಾಗಿದೆ. ಪಂಚಭೂತಗಳಿಂದ ಹಿಡಿದು ಹಿಂದಿನ ಕಾಲದ ಮೌಲ್ಯ, ಆದರ್ಶ, ಬದಲಾಗುತ್ತಿರುವ ಪ್ರವೃತ್ತಿ ಸೇರಿದಂತೆ ಅನೇಕ ವಿಚಾರಗಳು ಚಿತ್ರದ ಪ್ರಮುಖ ಅಂಶಗಳು’ ಎಂದು ವಿವರ ಕೊಟ್ಟರು ನಿರ್ದೇಶಕರು.
Advertisement
ನಿರ್ಮಾಪಕ ಕಿರಣ್ ರೈ ಅವರಿಗೆ ಒಳ್ಳೆಯ ಚಿತ್ರ ನಿರ್ಮಿಸಿರುವ ಖುಷಿ ಇದೆಯಂತೆ. “ಈಗಾಗಲೇ ಟ್ರೇಲರ್, ಟೀಸರ್ಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಸಿನಿಮಾ ಮಾಡಿದ್ದೇವೆ. ಇಲ್ಲಿ ಎಲ್ಲರಿಗೂ ಇದು ಮೊದಲ ಅನುಭವ. ಹಿರಿಯ ನಟರಾದ ರಮೇಶ್ ಭಟ್ ಅವರೊಬ್ಬರೇ ಅನುಭವಿಗಳು. ಅವರ ಸಲಹೆ, ಸೂಚನೆಗಳಿಂದ ಚಿತ್ರ ಕೂಡ ಚೆನ್ನಾಗಿ ಮೂಡಿಬಂದಿದೆ’ ಎಂದರು ಕಿರಣ್ ರೈ.
Related Articles
Advertisement
ನಾಯಕಿ ಆದ್ಯಾ ಆರಾಧನಾ ಅವರಿಗೆ ಇಲ್ಲೊಂದು ಹೊಸ ಇಮೇಜ್ ಸಿಗುವ ನಂಬಿಕೆ ಇದೆಯಂತೆ. ಜಯಶ್ರೀ, ಶೈನ್ಶೆಟ್ಟಿ, ಅನ್ವಿತಾ ಸಾಗರ್ ಸೇರಿದಂತೆ ತುಳು ಸಿನಿಮಾರಂಗದ ಅನೇಕರು ಇಲ್ಲಿ ನಟಿಸಿದ್ದಾರೆ. ಸುರೇಂದ್ರ ಅವರು ಚಿತ್ರಕ್ಕೆ ಛಾಯಾಗ್ರಹಣ ಮಾಡಿದರೆ, ಆಶೆ ಮೈಕೆಲ್ ಅವರ ಸಂಗೀತವಿದೆ.